ಕೆಮ್ಮದ ಜನರಿಲ್ಲ, ಶೀತಜ್ವರವಿಲ್ಲದ ಮನೆಯಿಲ್ಲ: ಊರೆಲ್ಲಾ ಅನಾರೋಗ್ಯದ ವಾತಾವರಣ
ಯಾವುದೇ ಕ್ಲಿನಿಕ್ ಮುಂದೆ ಹೋಗಿ, ಸ್ವೆಟ್ಟರ್ ಹಾಕಿಕೊಂಡು ಸಾಲು ಕಟ್ಟಿಕೊಂಡು ನಿಂತಿರುವ ಜನ. ಮೆಡಿಕಲ್ ಶಾಪ್ ನಲ್ಲಂತೂ ಜಾತ್ರೆ, ಜನರ ಮುಖದಲ್ಲಿ ನಗುವಿಲ್ಲ, ಉತ್ಸಾಹವಂತೂ ಇಲ್ಲವೇ ಇಲ್ಲ. ಇದು ರಾಜಧಾನಿ ಬೆಂಗಳೂರಿನ ಸದ್ಯದ ಪರಿಸ್ಥಿತಿ.
ಬೆಳಗ್ಗೆ ಚಳಿ, ಸೂರ್ಯ ನೆತ್ತಿಗೇರಿದ ಮೇಲೆ ಸೆಖೆ, ಸಂಜೆ ಮತ್ತೆ ಚಳಿ. ಮೂರ್ನಾಲ್ಕು ತಿಂಗಳಿಗೊಮ್ಮೆ ವಾತಾವರಣದಲ್ಲಿನ ಬದಲಾವಣೆಯಿಂದಾಗಿ ಈ ರೀತಿಯ ಪರಿಸ್ಥಿತಿ, ಯಾರೂ ಧೈರ್ಯ ಕಳೆದುಕೊಳ್ಳಬೇಕಾಗಿಲ್ಲ ಎನ್ನುವ ವೈದ್ಯರ ವಿಶ್ವಾಸ ತುಂಬುವ ಮಾತು.
ಕೊರೊನಾ ಹಾವಳಿ ಆರಂಭದ ನಂತರ ಸಾಮಾಜಿಕ ಜಾಲತಾಣದಲ್ಲಿ ಮೀಮ್ಸ್ ಗಳಿಗೆ ಬರವಿಲ್ಲ. ಇಂತಹ ಸಮಯದಲ್ಲಿ ಯಾವ ಬ್ಯುಸಿನೆಸ್ ಆರಂಭಿಸಿದರೆ ಸೂಕ್ತ ಎಂದಾಗ, ಒಂದೋ ಮೆಡಿಕಲ್ ಶಾಪ್, ಇಲ್ಲವೇ ಪ್ರಾವಿಷನ್ ಅಂಗಡಿ, ಅದೂ ಇಲ್ಲದಿದ್ದರೆ ಹೂವು, ಹಣ್ಣು ತರಕಾರಿ ಅಂಗಡಿ. ಸ್ವಲ್ಪ ದುಡ್ಡು ಜಾಸ್ತಿಯಿದ್ದರೆ ಮದ್ಯದ ಮಳಿಗೆಗಳನ್ನು ತೆರೆಯುವುದು.
ಪ್ರಕೃತಿಯ ಆಟ ಹೇಗೆದೆ ಅಂದರೆ ಎಸಿ ಮಳಿಗೆಗಳು ತಳ್ಳುಗಾಡಿಯವರು ಮಾಡುವಷ್ಟು ವ್ಯಾಪಾರ ನೋಡದಂತಹ ದಿನಗಳಿವೆ. ಅದೆಷ್ಟೋ ವ್ಯಾಪಾರ ಮಳಿಗೆಗಳು ಬಂದ್ ಆಗಿವೆ, ಕಂಪೆನಿಗಳು ಶೆಟರ್ ಎಳೆದಿವೆ. ಚಿತ್ರಮಂದಿರಗಳು ಎಲ್ಲೋ ಕೆಲವೊಮ್ಮೆ ಹೌಸ್ ಫುಲ್ ಆಗುತ್ತಿವೆ. ಈ ಎರಡು ವರ್ಷ ಜನ ಪಟ್ಟ ಪಾಡು ಅಷ್ಟಿಷ್ಟಲ್ಲ. ಇವೆಲ್ಲದರ ನಡುವೆ ಕೊರೊನಾ ಮೂರನೇ ಅಲೆ/ಓಮಿಕ್ರಾನ್ ಕಾಟ.

ಎರಡನೇ ಅಲೆ ಆಕ್ಸಿಜನ್, ಬೆಡ್ ಕೊರತೆ
ಕೊರೊನಾ ಮೊದಲನೇ ಅನನುಭವ ಪಾಠವನ್ನು ಕಲಿಯುವಂತೆ ಮಾಡಿತು, ಎರಡನೇ ಅಲೆ ಆಕ್ಸಿಜನ್, ಬೆಡ್ ಕೊರತೆಯಿಂದಾಗಿ ಜಗತ್ತು ಬೆಚ್ಚಿಬೀಳುವಂತೆ ಜನರು ಸಾವನ್ನಪ್ಪಿದರು. ಸ್ಮಶಾನದಲ್ಲಿ ಜಾಗದ ಕೊರತೆಯಿಂದಾಗಿ ಸಾಮೂಹಿಕವಾಗಿ ಹೆಣ ಸುಟ್ಟ ಉದಾಹರಣೆಗಳು ನಮ್ಮ ಮುಂದಿವೆ. ಈಗ ಮೂರನೇ ಅಲೆ ಎದುರಾಗಿದೆ, ಪಾಸಿಟಿವಿಟಿ ರೇಟ್ ಒಂದೇ ಸಮನೆ ಏರುತ್ತಿದೆ. ಆದರೆ, ತುಸು ನೆಮ್ಮದಿ ಪಡುವ ವಿಚಾರವೇನಂದರೆ, ಮರಣದ ಪ್ರಮಾಣ ನಿಯಂತ್ರಣದಲ್ಲಿರುವುದು.ಹೊರ ರೋಗಿ ವಿಭಾಗದಿಂದಲೇ ಈ ವೈರಸಿಗೆ ಮದ್ದು ಕಂಡುಕೊಳ್ಳಬಹುದು ಎಂದು ವೈದ್ಯರು ಧೈರ್ಯ ತುಂಬಿದ್ದಾರೆ.

ಈ ವೈರಸ್ ಎಲ್ಲರ ಮನೆಯೊಳಗೆ ನುಸುಳಿಯಾಗಿದೆ
ಆದರೆ ಈ ವೈರಸ್ ಎಲ್ಲರ ಮನೆಯೊಳಗೆ, ಮನದೊಳಗೆ ನುಸುಳಿಯಾಗಿದೆ ಎನ್ನುವಂತೆ, ಅಕ್ಕಪಕ್ಕದ ಮನೆಯಿಂದ ಕೇಳಿಸುವುದು ಒಂದೋ ಕೆಮ್ಮುವ, ಇಲ್ಲವೇ ಶೀನುವ, ಅದೂ ಇಲ್ಲದಿದ್ದರೆ ಗಂಟಲು ಕೊರೆಯುವ ಶಬ್ದ. ಯಾರ ಬಾಯಲ್ಲಿ ಕೇಳಿದರೂ ಅಮ್ಮನಿಗೆ, ಅಪ್ಪನಿಗೆ, ಮನೆಯವರಿಗೆ, ಮಕ್ಕಳಿಗೆ ಹುಷಾರ್ ಇಲ್ಲ ಎನ್ನುವ ಮಾತೇ.. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಸಾಮೂಹಿಕ ಅನಾರೋಗ್ಯದ ವಾತಾವರಣ ಕಂಡು ಕೇಳಿದ್ದಂತಿಲ್ಲ.

ಈ ಅನಾರೋಗ್ಯದ ಪರಿಸ್ಥಿತಿಗೂ, ಕೋವಿಡ್ ಲಕ್ಷಣಗಳಿಗೂ ಸಾಮ್ಯತೆ
ಹವಾಮಾನ ಬದಲಾವಣೆಯಿಂದಾಗಿ ಆಗಿರುವ ಈ ಅನಾರೋಗ್ಯದ ಪರಿಸ್ಥಿತಿಗೂ, ಕೋವಿಡ್ ಲಕ್ಷಣಗಳಿಗೂ ಸಾಮ್ಯತೆ ಇರುವುದರಿಂದ, ಜನರು ಆತಂಕದಲ್ಲೇ ದಿನದೂಡುತ್ತಿದ್ದಾರೆ. ಇದೊಂದು ಸಾಮಾನ್ಯ ಶೀತ, ಜ್ವರ, ನೆಗಡಿ, ಫ್ಲೂ ರೀತಿಯಲ್ಲಿ ಬರುವ ಸಮಸ್ಯೆ ಎಂದು ವೈದ್ಯರು ಹೇಳುತ್ತಿದ್ದರೂ, ಪರೀಕ್ಷೆ ಮಾಡಿಸಲು ಹೋದರೆ ಬಹುತೇಕ ಕೊರೊನಾ ಎಂದು ಟ್ಯಾಗ್ ಆಗುತ್ತಿರುವುದು ಇನ್ನೊಂದು ಭಯದ ವಾತಾವರಣಕ್ಕೆ ಕಾರಣವಾಗಿದೆ.

ಖ್ಯಾತ ವೈದ್ಯ ಡಾ. ರಾಜು ಕೃಷ್ಣಮೂರ್ತಿ ಅಭಿಪ್ರಾಯ
ಜನರು ಮತ್ತೆ ಮನೆಮದ್ದು, ಕಷಾಯದ ಮೊರೆ ಹೋಗುತ್ತಿದ್ದಾರೆ. "ಇದೊಂದು ಸಾಮಾನ್ಯವಾಗಿ ಹವಾಮಾನದ ಬದಲಾವಣೆಯಿಂದಾಗಿ ಎದುರಾಗುತ್ತಿರುವ ಸಮಸ್ಯೆ. ಜನರು ಭಯಭೀತರಾಗುವುದು ಬೇಡ. ವೈದ್ಯರನ್ನೊಮ್ಮೆ ಸಂಪರ್ಕಿಸಿ, ಈಗಿನ ಸಮಸ್ಯೆಗೂ ಕೊರೊನಾ ಸಿಂಪ್ಟಂಪ್ಸಿಗೂ ಹೊಂದಾಣಿಕೆಯಾಗುತ್ತಿದೆ. ಹಾಗಾಗಿ, ಪರೀಕ್ಷೆಗೆ ಹೋದರೆ, ಕೊರೊನಾ ಪಾಸಿಟೀವ್ ಎಂದು ಹೇಳುತ್ತಾರೆ. ಇದೊಂದು ದಂಧೆ"ಎಂದು ಖ್ಯಾತ ವೈದ್ಯ ಡಾ. ರಾಜು ಕೃಷ್ಣಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ. ಆದಷ್ಟು ಬೇಗ ಇದರಿಂದ ಹೊರಬಂದು, ನೆಮ್ಮದಿಯ ಜೀವನ ನಡೆಸುವಂತಾಗಲಿ ಎನ್ನುವುದು ಆಶಯ.












Click it and Unblock the Notifications