ಹರಿಯಾಣ ಸಂಪುಟ ವಿಸ್ತರಣೆಗೆ ಕಾರಣವಾಗಿದೆ ಈ ಅಂಶಗಳು..
ನವದೆಹಲಿ, ಡಿಸೆಂಬರ್ 28: ಕೇಂದ್ರ ಸರ್ಕಾರವು ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದ ಹಿನ್ನೆಲೆ ರೈತರ ಪ್ರತಿಭಟನೆಯು ಅಂತ್ಯವಾಗುತ್ತಿದ್ದಂತೆ ಈಗ ಹರಿಯಾಣ ಸರ್ಕಾರವು ಸಂಪುಟ ವಿಸ್ತರಣೆ ಮಾಡಲು ಮುಂದಾಗಿದೆ. ಸೋಮವಾರ ಈ ಬಗ್ಗೆ ಹರಿಯಾಣ ಸರ್ಕಾರ ಈ ಬಗ್ಗೆ ಘೋಷಣೆ ಮಾಡಿದೆ. ಮಂಗಳವಾರ ಮಧ್ಯಾಹ್ನದ ಬಳಿಕ ಛತ್ತೀಸ್ಗಢದ ಹರಿಯಾಣ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭವು ನಡೆಯಲಿದೆ ಎಂದು ಮುಖ್ಯಮಂತ್ರಿ ಕಚೇರಿಯು ಸೋಮವಾರ ಹೇಳಿದೆ.
ಬಿಜೆಪಿಯ ಮೂಲಗಳ ಪ್ರಕಾರ ಈ ಸಂಪುಟ ವಿಸ್ತರಣೆಗಯು ಮುಖ್ಯವಾಗಿ ಎರಡು ವಿಚಾರಗಳನ್ನು ಕೇಂದ್ರೀಕರಿಸಿ ಮಾಡಲಾಗುತ್ತಿದೆ. ದುಷ್ಯಂತ್ ಚೌಟಾಲ ನಾಯಕತ್ವದ ಬಿಜೆಪಿಯ ಮೈತ್ರಿ ಪಕ್ಷ ಜನನಾಯಕ ಜನತಾ ಪಕ್ಷ (ಜೆಜೆಪಿ)ಯ ನಾಯಕರುಗಳನ್ನು ಸಮಾಧಾನ ಪಡಿಸುವ ನಿಟ್ಟಿನಲ್ಲಿ ಹಾಗೂ 2024 ರ ಹರಿಯಾಣ ವಿಧಾನಸಭೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯ ಹಿನ್ನೆಲೆಯಿಂದಾಗಿ ಜಾತಿ ಲೆಕ್ಕಾಚಾರದ ಹಿನ್ನೆಲೆಯಿಂದಾಗಿ ಈ ಸಂಪುಟ ವಿಸ್ತರಣೆಯನ್ನು ಮಾಡಲಾಗುತ್ತಿದೆ.
ರೈತರ ಮೇಲಿನ ಪ್ರಕರಣ ಕೈಬಿಡಲು ಹರಿಯಾಣ ಸಿಎಂಗೆ ಆಗ್ರಹ
ಈ ಬಗ್ಗೆ ಮಾಹಿತಿ ನೀಡಿದ ಸೋನೆಪತ್ನ ಬಿಜೆಪಿ ಸಂಸದ ರಮೇಶ್ ಚಂದರ್ ಕೌಶಿಕ್, "ಸಂಪುಟ ವಿಸ್ತರಣೆಯನ್ನು ಬಹಳ ವಿಳಂಬವಾಗಿ ಮಾಡಲಾಗುತ್ತಿದೆ. ಆದರೆ ಈ ಹಿಂದೆ ರೈತರ ಪ್ರತಿಭಟನೆಯ ಹಿನ್ನೆಲೆಯಿಂದಾಗಿ ಸಂಪುಟ ವಿಸ್ತರಣೆಯನ್ನು ಮಾಡಲು ಸಾಧ್ಯವಾಗಿಲ್ಲ. ಈಗ ರಾಜ್ಯ ಸರ್ಕಾರಕ್ಕೆ ಸಂಪುಟ ವಿಸ್ತರಣೆ ಮಾಡುವ ಹಾಗೂ ಹೊಸಬರನ್ನು ಸೇರಿಸಿಕೊಳ್ಳುವ ಅವಕಾಶವಿದೆ. ಆದರೆ ಇದು ಸಣ್ಣದಾದ ಮರು ಸಂಪುಟ ರಚನೆ ಆಗಲಿದೆ. 2024 ರ ಹರಿಯಾಣ ವಿಧಾನಸಭೆ ಚುನಾವಣೆಗೆ ಪಕ್ಷದ ತಯಾರಿಯ ಬಗ್ಗೆಯೂ ಪಕ್ಷವು ಗಮನ ಹರಿಸಬೇಕಾಗಿದೆ," ಎಂದು ತಿಳಿಸಿದ್ದಾರೆ.
ಇಬ್ಬರು ಸಚಿವರು ಸೇರ್ಪಡೆ: ಅಧಿಕ ಬದಲಾವಣೆ ಆಗುತ್ತಾ?
ಹರಿಯಾಣ ರಾಜ್ಯದಲ್ಲಿ ಪ್ರಸ್ತುತ ಹನ್ನೆರಡು ಮಂದಿ ಸಚಿವರುಗಳು ಇದ್ದಾರೆ. ಮುಖ್ಯಮಂತ್ರ ಮನೋಹರ್ ಲಾಲ್ ಖಟ್ಟರ್ ಹಾಗೂ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಾಲ ಸೇರಿದಂತೆ ಹರಿಯಾಣದಲ್ಲಿ ಒಟ್ಟು ಹನ್ನೆರಡು ಸಚಿವರುಗಳು ಪ್ರಸ್ತುತ ಇದ್ದಾರೆ. ಆದರೆ ಹರಿಯಾಣ ಸಚಿವ ಸಂಪುಟದ ಮಿತಿಯು 14 ಆಗಿರುವ ಕಾರಣದಿಂದಾಗಿ ಹರಿಯಾಣ ಸಚಿವ ಸಂಪುಟಕ್ಕೆ ಇನ್ನೂ ಇಬ್ಬರು ಸಚಿವರುಗಳನ್ನು ಸೇರ್ಪಡೆ ಮಾಡುವ ಅವಕಾಶವಿದೆ. ಪ್ರಸ್ತುತ ಮುಖ್ಯಮಂತ್ರಿ ಹಾಗೂ ಎಂಟು ಸಚಿವರುಗಳು ಬಿಜೆಪಿ ಪಕ್ಷದವರು ಆಗಿದ್ದಾರೆ. ಇನ್ನು ಇಬ್ಬರು ಜೆಜೆಪಿ ಪಕ್ಷದವರು ಆಗಿದ್ದಾರೆ. ಓರ್ವರು ಸ್ವತಂತ್ರ ಅಭ್ಯರ್ಥಿ ಆಗಿದ್ದಾರೆ. ಸಂಪುಟ ವಿಸ್ತರಣೆ ಆಗಿ, ಬಿಜೆಪಿ ಹಾಗೂ ಜೆಜೆಪಿಯಿಂದ ತಲಾ ಒಬ್ಬರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ನಾಯಕರು ಇನ್ನೂ ಹಲವಾರು ಬದಲಾವಣೆಗಳು ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. "ಸಚಿವರುಗಳ ಕಾರ್ಯ ವೈಖರಿಯನ್ನು ನೋಡಿಕೊಂಡು ಕೆಲವು ಸಚಿವರುಗಳನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ," ಎಂದು ಕೂಡಾ ವರದಿ ಆಗಿದೆ. "ಸೋನೆಪಟ್ ಹಾಗೂ ರೋಹ್ತಕ್ ಪ್ರದೇಶದಿಂದ ಹೊಸ ಸಚಿವರುಗಳನ್ನು ಸೇರ್ಪಡೆ ಮಾಡುವ ಸಾಧ್ಯತೆ ಇದೆ. ಬನಿಯಾ ಸಮುದಾಯದಲ್ಲಿಯೂ ಯಾರೂ ಕೂಡಾ ಸಚಿವರುಗಳು ಇಲ್ಲ. ಈ ನಿಟ್ಟಿನಲ್ಲಿ ಸಚಿವ ಸಂಪುಟ ಬದಲಾವಣೆ ನಡೆಯಬಹುದು," ಎಂದು ತಿಳಿಸಿದ್ದಾರೆ.
ಜೆಜೆಪಿಯ ಒತ್ತಡ
ವಿಧಾನಸಭೆ ಕ್ಷೇತ್ರದಲ್ಲಿ ಜೆಜೆಪಿಯ ಹತ್ತು ಶಾಸಕರುಗಳು ಇದ್ದು, ಹಲವಾರು ವಿಚಾರದಲ್ಲಿ ಮೈತ್ರಿ ಪಕ್ಷ ಬಿಜೆಪಿಯ ನಿಲುವಿಗೆ ವಿರುದ್ಧವಾಗಿದ್ದಾರೆ. ಮುಖ್ಯವಾಗಿ ರೈತರ ಪ್ರತಿಭಟನೆ ವಿಚಾರದಲ್ಲಿ ಬಿಜೆಪಿ, ಜೆಜೆಪಿ ನಿಲುವು ಬೇರೆ ಬೇರೆಯೇ ಆಗಿತ್ತು. ಕೃಷಿ ಕಾಯ್ದೆಯನ್ನು ಹಿಂಪಡೆಯುವ ಮುನ್ನ ಜೆಜೆಪಿ ಶಾಸಕರುಗಳು ಕೃಷಿ ಕಾಯ್ದೆಯನ್ನು ಹಿಂಪಡೆಯಬೇಕು, ರೈತರ ಮೇಲಿನ ಪ್ರಕರಣಗಳನ್ನು ಕೂಡಾ ಹಿಂದಕ್ಕೆ ಪಡೆಯಬೇಕು ಎಂಬ ಆಗ್ರಹವನ್ನು ಮಾಡಿದ್ದರು. ಆದರೆ ದುಷ್ಯಂತ್ ಚೌಟಾಲ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿದ್ದರು. ಹರಿಯಾಣ ಸರ್ಕಾರಕ್ಕೆ ರೈತರ ಮೇಲೆ ಯಾವುದೇ ಹಿತಾಸಕ್ತಿ ಇಲ್ಲ ಎಂಬ ಬಗ್ಗೆ ಜೆಜೆಪಿ ನಾಯಕರುಗಳಲ್ಲಿ ಅಸಮಾಧಾನವಿತ್ತು. ಜೆಜೆಪಿ ನಾಯಕರುಗಳ ಪ್ರಕಾರ, "ದುಷ್ಯಂತ್ ತನ್ನ ಅಧಿಕಾರವನ್ನು ಆನಂದಿಸುತ್ತಿದ್ದಾರೆ. ಆದರೆ ರೈತರನ್ನು ಚಳಿಯಲ್ಲಿ ಪ್ರತಿಭಟನೆ ಮಾಡಲು ಬಿಟ್ಟುಬಿಟ್ಟಿದ್ದಾರೆ."
ಸಂಪುಟಕ್ಕೆ ಯಾರೆಲ್ಲಾ ಹೆಸರು ಪ್ರಸ್ತಾಪ
ಸಂಪುಟದಲ್ಲಿ ಯಾರ ಹೆಸರುಗಳು ಸೇರ್ಪಡೆ ಆಗಲಿದೆ ಎಂಬ ಬಗ್ಗೆ ಹಲವಾರು ವರದಿಗಳು ಹರಿದಾಡುತ್ತಿದೆ. ಶಹಬಾದ್ನ ಶಾಸಕ ರಾಮ್ ಕರಣ ಹಾಗೂ ತೋಹಣದ ಶಾಸಕ ದೇವೆಂದರ್ ಸಿಂಗ್ ಬಬ್ಲಿ ಹೆಸರು ಕೂಡಾ ಸಂಪುಟ ವಿಸ್ತರಣೆ ಬಳಿಕ ಸಂಪುಟಕ್ಕೆ ಸೇರ್ಪಡೆ ಆಗುವ ಶಾಸಕರುಗಳ ಪಟ್ಟಿಯಲ್ಲಿ ಇದೆ ಎಂದು ಹೇಳಲಾಗಿದೆ. ಪ್ರಮುಖ ಜಠ ನಾಯಕ ದೇವೆಂದರ್ ಸಿಂಗ್ ಬಬ್ಲಿ 2019 ರಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಸುಭಾಶ್ ಬರಾಲರನ್ನು ಸೋಲಿಸಿದ್ದರು. ಮಾರ್ಚ್ನಲ್ಲಿ ಪಕ್ಷದ ವಿರುದ್ಧವಾಗಿ ನಿಂತ ಶಾಸಕರುಗಳ ಪೈಕಿ ತೋಹಣದ ಶಾಸಕ ದೇವೆಂದರ್ ಸಿಂಗ್ ಬಬ್ಲಿ ಕೂಡಾ ಒಬ್ಬರಾಗಿದ್ದಾರೆ. ಬಿಜೆಪಿ ಸರ್ಕಾರದೊಂದಿಗಿನ ಮೈತ್ರಿಯನ್ನು ಜೆಜೆಪಿ ಪಕ್ಷವು ಹಿಂದಕ್ಕೆ ಪಡೆಯಬೇಕು ಎಂಬುವುದು ಅವರ ಆಗ್ರಹ ಆಗಿತ್ತು. ರೈತರ ವಿಚಾರದಲ್ಲಿ ಬಿಜೆಪಿ ವಿರುದ್ಧ ಜೆಜೆಪಿ ಶಾಸಕ ದೇವೆಂದರ್ ಸಿಂಗ್ ಬಬ್ಲಿ ವಾಗ್ದಾಳಿ ನಡೆಸಿದ್ದರು. ಆದರೆ ಕಳೆದ ಕೆಲವು ತಿಂಗಳುಗಳ ಹಿಂದೆ ದೇವೆಂದರ್ ಸಿಂಗ್ ಬಬ್ಲಿ ಮೇಲೆ ರೈತರು ದಾಳಿ ನಡೆಸಿದ್ದಾರೆ ಎಂದು ಆರೋಪ ಮಾಡಲಾಗಿದೆ. ಈ ವಿಚಾರದಲ್ಲಿ ದೇವೆಂದರ್ ಸಿಂಗ್ ಬಬ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಬಳಿಕ ತನ್ನ ಪ್ರತಿಕ್ರಿಯೆಗೆ ಕ್ಷಮೆ ಕೇಳಿದ್ದರು.
2024 ರ ಚುನಾವಣೆಯ ಮೇಲೆ ಕಣ್ಣು
ಇನ್ನು ಮೂಲಗಳ ಪ್ರಕಾರ ಹರಿಯಾಣ ಸಂಪುಟದಲ್ಲಿ ಪ್ರಸ್ತುತ ಇರುವ ಸಚಿವರುಗಳನ್ನು ಈ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕೈ ಬಿಡಲಾಗುತ್ತದೆ. ಸರಿಯಾದ ರೀತಿಯಲ್ಲಿ ತಮ್ಮ ಖಾತೆಯನ್ನು ನಿರ್ವಹಣೆ ಮಾಡಿಲ್ಲ ಎಂಬ ಕಾರಣದಿಂದಾಗಿ ಈ ಸಚಿವರುಗಳನ್ನು ಕೈಬಿಡಲಾಗುತ್ತದೆ. ಇನ್ನು 2024 ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಬಿಜೆಪಿಯು ಬನಿಯಾ ನಾಯಕರನ್ನು ಸಂಪುಟಕ್ಕೆ ಸೇರ್ಪಡೆ ಮಾಡುವ ಸಾಧ್ಯತೆ ಇದೆ. ರಾಜ್ಯ ವಿಧಾನಸಭೆಯಲ್ಲಿ ಪ್ರಸ್ತುತ ಸ್ಪೀಕರ್ ಆಗಿರುವ ಗ್ಯಾನ್ ಚಂದ್ ಗುಪ್ತಾ, ಹಿಸಾರ್ನ ಶಾಸಕ ಕಮಲ್ ಗುಪ್ತಾ, ಪಾಲ್ವಾಲ ಶಾಸಕ ದೀಪಕ್ ಸಿಂಗ್ ಹೆಸರುಗಳು ಕೇಳಿ ಬಂದಿದೆ. (ಒನ್ಇಂಡಿಯಾ ಸುದ್ದಿ)
Recommended Video