ಭೂಕಂಪನ ಮಹಾಮಳೆಯ ಮುನ್ಸೂಚನೆಯಾ?... ಅವತ್ತು ಹಾಗೆಯೇ ಆಗಿತ್ತು!
ಮಡಿಕೇರಿ ಜೂನ್ 25: : ಕೊಡಗು ಸೇರಿದಂತೆ ಜಿಲ್ಲೆಗೆ ಹೊಂದಿಕೊಂಡಂತಿರುವ ಹಾಸನ, ದಕ್ಷಿಣಕನ್ನಡ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಕೊಡಗು-ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗವಾದ ಮಡಿಕೇರಿ ತಾಲೂಕಿನ ಚೆಂಬು, ಕರಿಕೆ ಸಂಪಾಜೆ ವ್ಯಾಪ್ತಿಯಲ್ಲಿ ಹಾಗೂ ಗಡಿಭಾಗವಾದ ದ.ಕ ಜಿಲ್ಲೆಯ ಕಲ್ಲುಗುಂಡಿ, ಗೂನಡ್ಕ ಭಾಗದಲ್ಲಿ (ಜೂ.25) ಶನಿವಾರ ಬೆಳಗ್ಗೆ 9.10 ಸುಮಾರು 3 ರಿಂದ 4 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದ್ದು, ಕಂಪನದಿಂದ ಮನೆಯಲ್ಲಿದ್ದ ಪಾತ್ರೆಗಳು ಅಲುಗಾಡಿವೆ. ಜತೆಗೆ ಭೂಮಿಯೊಳಗಿನಿಂದ ವಿಚಿತ್ರ ಶಬ್ಧ ಕೇಳಿರುವುದಾಗಿ ಜನ ಹೇಳುತ್ತಿದ್ದಾರೆ. ಹಾಗಾದರೆ ಇದು ಮಹಾಮಳೆಯ ಮುನ್ಸೂಚನೆಯಾ? ಎಂಬ ಪ್ರಶ್ನೆ ಇದೀಗ ಜನರನ್ನು ಕಾಡತೊಡಗಿದೆ.
2018ರಲ್ಲಿ ಕೊಡಗಿನಲ್ಲಿ ಇಂತಹದ್ದೇ ಅನುಭವವಾಗಿತ್ತು. ಭೂಕುಸಿತವಾದ ಪ್ರದೇಶದಲ್ಲಿ ಭೂಮಿಯೊಳಗೆ ನೀರು ಹರಿವ ಸದ್ದು ಕೇಳಿಸಿತ್ತು. ಜತೆಗೆ ಭಾರಿ ಸದ್ದು ಕೇಳಿ ಬಂದಿತ್ತು. ಅದಾದ ನಂತರ ಸುರಿದಿದ್ದೇ ಮಹಾಮಳೆ ಜತೆಗೆ ಭಾರಿ ಪ್ರಮಾಣದ ಭೂಕುಸಿತ. ಆ ನಂತರ ಮೂರು ವರ್ಷಗಳ ಕಾಲ ಜಿಲ್ಲೆಯಲ್ಲಿ ಎಡೆಬಿಡದೆ ಭೂಕುಸಿತ ಸಂಭವಿಸಿದೆಯಲ್ಲದೆ, ಒಂದಷ್ಟು ಜನರ ಬಲಿ ಪಡೆದಿದೆ.
ಇನ್ನು ಗುರುವಾರ ಹಾಸನದ ಹೊಳೆ ನರಸೀಪುರ, ಅರಕಲಗೂಡು ಸೇರಿದಂತೆ ಒಂದಷ್ಟು ಊರು ಹಾಗೂ ಕೊಡಗಿನ ಸೋಮವಾರಪೇಟೆ, ಮಡಿಕೇರಿ ತಾಲೂಕಿನ ಕೆಲವೆಡೆ ಕೂಡ ಭೂಮಿ ಕಂಪಿಸಿತ್ತು. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳಲ್ಲಿ ಈಗಾಗಲೆ ಭೂಕಂಪ ಸಂಭವಿಸಿ ಸಾವಿರಕ್ಕೂ ಹೆಚ್ಚು ಜನರ ಸಾವಾಗಿದೆ. ಈ ಕಾರಣದಿಂದ ಕಳೆದ ಎರಡು ದಿನಗಳ ಈ ಭೂಕಂಪ ಕರುನಾಡಿನ ಕೆಲುವ ಭಾಗದಲ್ಲಿನ ಜನತೆಯಲ್ಲಿ ಆತಂಕವನ್ನು ಉಂಟುಮಾಡಿದೆ.

ಹಿಂದೆ ಭೂ ಕುಸಿತವಾಗಿದ್ದ ಸ್ಥಳದಲ್ಲೇ ಭೂ ಕಂಪನ
ಕಳೆದ ನಾಲ್ಕು ವರ್ಷಗಳಲ್ಲಿ ಉತ್ತಮ ಮಳೆಯಾಗಿದೆ. 2018, 19 ಮತ್ತು 20ರಲ್ಲಿ ಮಹಾಮಳೆಯೊಂದಿಗೆ ಭೂಕುಸಿತ ಸಂಭವಿಸಿ ಜನ ಭಯಪಡುವಂತೆ ಮಾಡಿತ್ತು. ಆದರೆ ಕಳೆದ ವರ್ಷ ಕೊಡಗಿನಲ್ಲಿ ಮುಂಗಾರು ಮಳೆ ಸುರಿದಿತ್ತಾದರೂ ಅಷ್ಟೊಂದು ಭಯಾನಕವಾಗಿರಲಿಲ್ಲ. ಈ ಬಾರಿ ಮುಂಗಾರು ನಿಧಾನವಾಗಿ ಆರಂಭಗೊಂಡಿದ್ದು, ಜಿಟಿಜಿಟಿ ಮಳೆಯೊಂದಿಗೆ ಮುನ್ನುಡಿ ಬರೆಯಲಾರಂಭಿಸಿದೆ. ಇದೇ ವೇಳೆಗೆ ಈ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿರುವುದು ಆತಂಕಕಾರಿಯಾಗಿದೆ. ಈಗಾಗಲೇ ಭೂಮಿ ಕಂಪಿಸಿರುವ ಸ್ಥಳವು ಈ ಹಿಂದೆ ಭೂಕುಸಿತಕ್ಕೊಳಗಾದ ಪ್ರದೇಶಗಳಾಗಿದ್ದು, ಮತ್ತೇನಾದರೂ ಈ ವ್ಯಾಪ್ತಿಯಲ್ಲಿ ದುರ್ಘಟನೆಗಳು ನಡೆದರೆ ಹೇಗಪ್ಪಾ ಎಂಬ ಚಿಂತೆಯೂ ಜನರನ್ನು ಕಾಡುತ್ತಿದೆ.

ಹಿಂದೆ ಕಂಪನದ ಬೆನ್ನಲ್ಲೇ ಜಲಪ್ರಳಯ
2018ರಲ್ಲಿ ನಡೆದ ಆ ಮಹಾ ದುರಂತ ಇನ್ನೂ ಜನರ ಕಣ್ಣಮುಂದೆ ಹಸಿರಾಗಿಯೇ ಉಳಿದಿದೆ. ಮನೆ, ಆಸ್ತಿ ಕಳೆದುಕೊಂಡ ಜನ ಅದೆಲ್ಲವನ್ನು ನೆನಪಿಸಿಕೊಂಡು ಈಗಲೂ ಕಣ್ಣೀರಿಡುತ್ತಿದ್ದಾರೆ. ಅವತ್ತು ಕೂಡ ಈಗ ಆದಂತೆಯೇ ಆಗಿತ್ತು. ಭೂಮಿ ಕಂಪಿಸಿತ್ತು. ಭೂಮಿಯೊಳಗೆ ಭಾರೀ ಸದ್ದುಗಳು ಕೇಳಿ ಬಂದಿದ್ದವು. ಸಿಡಿಲು ಗುಡುಗಿನ ಆರ್ಭಟಗಳು ಜೋರಾಗಿದ್ದವು. ಸಿಡಿಲ ಅಬ್ಬರ ಕೇಳಿದ ಹಿರಿಯರು ಇಂತಹದೊಂದು ಗುಡುಗು, ಸಿಡಿಲಿನ ಸದ್ದನ್ನು ತಮ್ಮ ಜೀವನಾವಧಿಯಲ್ಲೇ ಕೇಳಿರಲಿಲ್ಲ ಎಂದಿದ್ದರು. ಬಹುಶಃ ಅವತ್ತು ನಡೆದ ಒಂದೆರಡು ಘಟನೆಗಳು ಜಲಪ್ರಳಯದ ಮುನ್ಸೂಚನೆಯಾಗಿತ್ತು.
ಅದಾದ ನಂತರ ವರುಣ ಅಬ್ಬರಿಸಿದ್ದ. ಭೂತಾಯಿ ಕಂಪಿಸಿದ್ದಳು. ಕಾವೇರಿ ರೌದ್ರಾವತಾರ ತಾಳಿದ್ದಳು. ಪರಿಣಾಮ ಗುಡ್ಡಗಳು ಕುಸಿದವು. ಮನೆಗಳು ನೆಲಕ್ಕುರುಳಿದವು. ನೋಡ ನೋಡುತ್ತಿದ್ದಂತೆಯೇ ಎಲ್ಲವೂ ನೆಲಸಮವಾಗಿ ಹೋಯಿತು. ಕೆಲವು ಊರುಗಳ ಸುತ್ತಲೂ ನೀರು ಆವರಿಸಿ, ರಸ್ತೆ ಕುಸಿದು, ಹೊರ ಪ್ರಪಂಚದೊಂದಿಗೆ ಸಂಪರ್ಕವೇ ಕಳೆದುಹೋಯಿತು. ಎಲ್ಲವನ್ನು ಕಳೆದುಕೊಂಡವರು ಗಂಜಿ ಕೇಂದ್ರ ಸೇರಿದ್ದರು.

ಕಳೆದ ವರ್ಷ ಸಾಮಾನ್ಯ ಮುಂಗಾರು
ಆ ಭೀಕರ ದೃಶ್ಯ ನೋಡಿದರವರಿಗೆ ಕಾಣಿಸುತ್ತಿದ್ದದ್ದು, ಕುಸಿದ ಗುಡ್ಡ, ಕಾಫಿ ತೋಟಗಳು, ಧರೆಗುರುಳಿದ ಮನೆಗಳು, ಭೂಮಂಡಲನ್ನೇ ಒಂದು ಮಾಡಿದ ಜಲರಾಶಿ, ಕುಸಿದ, ಬಿರುಕುಬಿಟ್ಟ ರಸ್ತೆಗಳು, ಅಡ್ಡದಿಡ್ಡಿ ನೆಲಕ್ಕುರಳಿದ ಮರಗಳು, ವಿದ್ಯುತ್ ಕಂಬಗಳು, ನೀರಿನಲ್ಲಿ ಮುಳುಗಡೆಯಾದ ವಸತಿ ಪ್ರದೇಶಗಳು, ಅಸಹಾಯಕತೆಯಿಂದ ಕಣ್ಣೀರಿಡುತ್ತಿದ್ದ ಜನರು ಕಂಡು ಬಂದಿದ್ದರು. ಇದಾದ ಬಳಿಕ ಎರಡು ವರ್ಷಗಳ ಕಾಲವೂ ಜಿಲ್ಲೆಯಲ್ಲಿ ಭೂಕುಸಿತವಾಗಿದೆ, ಸಾವು ನೋವುಗಳು ಆಗಿವೆ. 2021ರಲ್ಲಿ ಜನ ನೆಮ್ಮದಿಯುಸಿರು ಬಿಟ್ಟಿದ್ದರು.

ಸುರಕ್ಷಿತ ಪ್ರದೇಶಗಳತ್ತ ಮುಖ ಮಾಡಬೇಕಾಗಿದೆ
ಕಳೆದ ವರ್ಷ ಮುಂಗಾರು ನಿಧಾನಗತಿಯಲ್ಲಿ ಸಾಗಿತ್ತು. ಅಷ್ಟೊಂದಾಗಿ ಪ್ರವಾಹ ಪರಿಸ್ಥಿತಿಯೂ ಬಂದಿರಲಿಲ್ಲ. ಸಾಮಾನ್ಯವಾಗಿ ಆಗಸ್ಟ್ ನಲ್ಲಿ ಅಬ್ಬರಿಸುತ್ತಿದ್ದ ಮಳೆ ಅಬ್ಬರಿಸಿರಲಿಲ್ಲ.ಆದರೆ ಮಳೆ ಮಾತ್ರ ಬಿಡುವು ಕೊಡದೆ ನವೆಂಬರ್ ಕೊನೆಯ ತನಕವೂ ಸುರಿದಿತ್ತು. ಆದರೆ ಈ ಬಾರಿ ವರುಣ ಅದೇನು ಮಾಡುತ್ತಾನೋ ಎಂಬ ಭಯ ಈಗಿನಿಂದಲೇ ಕಾಡುತ್ತಿದೆ. ಹಾಗಾಗಿ ಗುಡ್ಡಪ್ರದೇಶದಲ್ಲಿ ವಾಸಿಸುವವರು, ನದಿ ಪಾತ್ರದಲ್ಲಿರುವವರು, ಪ್ರವಾಹದ ಸಂದರ್ಭ ಮುಳುಗಡೆಯಾಗುವ ಪ್ರದೇಶಗಳಲ್ಲಿ ಇರುವವರನ್ನೆಲ್ಲ ಬೇರೆಡೆ ಸ್ಥಳಾಂತರಿಸುವ ಮತ್ತು ಜನರೇ ಎಚ್ಚೆತ್ತುಕೊಂಡು ಸುರಕ್ಷಿತ ಪ್ರದೇಶಗಳತ್ತ ಮುಖ ಮಾಡಬೇಕಾಗಿದೆ. ಇಲ್ಲದೆ ಹೋದರೆ ಅಪಾಯ ತಪ್ಪಿದಲ್ಲ. ಇದೆಲ್ಲದಕ್ಕಿಂತ ಹೆಚ್ಚಾಗಿ ಯಾವುದೇ ಅನಾಹುತವಾಗುವಂತಹ ಮಳೆ ಸುರಿಯದಿರಲಿ ಎಂಬುದೇ ಎಲ್ಲರ ಪ್ರಾರ್ಥನೆಯಾಗಿದೆ.












Click it and Unblock the Notifications