ಅಗಸ್ಟಾ ವೆಸ್ಟ್ ಲ್ಯಾಂಡ್ ದಲ್ಲಾಳಿ ಹಸ್ತಾಂತರದ ಹಿಂದೆ ಮಾಸ್ಟರ್ ಮೈಂಡ್ ಅಜಿತ್ ದೋವಲ್

ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದ ಬಗ್ಗೆ ನಿಮಗೆ ನೆನಪಿದೆಯಾ? ಅದು 3,600 ಕೋಟಿ ರುಪಾಯಿ ಮೊತ್ತದ ಹಗರಣ. ಅದರ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಕ್ರಿಶ್ಚಿಯನ್ ಮೈಖೆಲ್ ನನ್ನು ದುಬೈನಿಂದ ಭಾರತಕ್ಕೆ ಕರೆತರಲಾಗಿದೆ. ಈ ಪ್ರಕ್ರಿಯೆಯನ್ನು ಭಾರತದ ರಾಜತಾಂತ್ರಿಕ ಗೆಲುವು ಅಂತಲೇ ಬಿಂಬಿಸಲಾಗುತ್ತಿದೆ.

ಡಿಸೆಂಬರ್ ನಾಲ್ಕನೇ ತಾರೀಕಿನ ರಾತ್ರಿ ದುಬೈನಿಂದ ವಿಮಾನದಲ್ಲಿ ಭಾರತಕ್ಕೆ ಬಂದಿಳಿದಿದ್ದಾನೆ ಮೈಖೆಲ್. ಯುಎಇ ವಿದೇಶಾಂಗ ಸಚಿವ ಅಬ್ದುಲ್ಲಾ ಬಿನ್ ಝಾಯೇದ್ ಅಲ್ ನಹ್ಯಾನ್ ಜತೆ ಸಚಿವೆ ಸುಷ್ಮಾ ಸ್ವರಾಜ್ ಮಾತುಕತೆ ನಡೆಸಿ, ಕ್ರಿಶ್ಚಿಯನ್ ಮೈಖೆಲ್ ಹಸ್ತಾಂತರವನ್ನು ಸಾಧ್ಯ ಮಾಡಲಾಗಿದೆ. ಆರ್ಥಿಕ ಅಪರಾಧಿಯೊಬ್ಬನನ್ನು ಹೀಗೆ ವಶಕ್ಕೆ ಪಡೆಯುವಲ್ಲಿ ಸಿಕ್ಕ ಮೊದಲ ಯಶಸ್ಸು ಇದಾಗಿದೆ.

ಐವತ್ತೇಳು ವರ್ಷದ ಬ್ರಿಟಿಷ್ ಪ್ರಜೆ ಮೈಖೆಲ್ ನನ್ನು ಗುರುವಾರ ಭಾರತದ ಕೋರ್ಟ್ ಮುಂದೆ ಹಾಜರು ಪಡಿಸುವ ಸಾಧ್ಯತೆ ಇದೆ. ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸುವ ಸಲುವಾಗಿ ಸಿಬಿಐನ ಜಂಟಿ ನಿರ್ದೇಶಕ ಎ.ಸಾಯಿ ಮನೋಹರ್ ನೇತೃತ್ವದ ತಂಡ ದುಬೈಗೆ ತೆರಳಿತ್ತು. "ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಾರ್ಗದರ್ಶನದಲ್ಲಿ ಸಿಬಿಐನ ಉಸ್ತುವಾರಿ ನಾಗೇಶ್ವರ್ ರಾವ್ ಸಮನ್ವಯದಲ್ಲಿ ಇಡೀ ಕಾರ್ಯಾಚರಣೆ ನಡೆದಿದೆ" ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.

ಅಂದಹಾಗೆ ಈ ಕ್ರಿಶ್ಚಿಯನ್ ಮೈಖೆಲ್ ಒಬ್ಬ ದಲ್ಲಾಳಿ. ಅಗಸ್ಟಾ ವೆಸ್ಟ್ ಲ್ಯಾಂಡ್ ನಿಂದ ಭಾರತವು ವಿವಿಐಪಿ ಹೆಲಿಕಾಪ್ಟರ್ ಖರೀದಿ ಮಾಡುವ ವ್ಯವಹಾರ ನಡೆಸುವುದರಲ್ಲಿ ಈತನ ಪಾತ್ರ ಪ್ರಮುಖವಾದದ್ದು ಎಂಬುದು ಆರೋಪ. ಅಗಸ್ಟಾ ವೆಸ್ಟ್ ಲ್ಯಾಂಡ್ ಪರವಾಗಿಯೇ ವ್ಯವಹಾರ ಕುದುರಿಸುವ ಸಲುವಾಗಿ ಭಾರತದ ಅಧಿಕಾರಿಗಳು, ರಾಜಕಾರಣಿಗಳಿಗೆ ಲಂಚ ನೀಡಲಾಗಿದೆ ಎಂಬುದು ತನಿಖಾ ಸಂಸ್ಥೆಗಳ ಆರೋಪ.

42.27 ಮಿಲಿಯನ್ ಯುರೋ ಲಂಚ ಪಾವತಿ

42.27 ಮಿಲಿಯನ್ ಯುರೋ ಲಂಚ ಪಾವತಿ

42.27 ಮಿಲಿಯನ್ ಯುರೋ ಮೊತ್ತವನ್ನು ಫಿನ್ ಮೆಕ್ಯಾನಿಕಾ ಸಮೂಹವು ಕ್ರಿಶ್ಚಿಯನ್ ಮೈಖೆಲ್ ಜೇಮ್ಸ್ ಗೆ ಲಂಚದ ರೂಪದಲ್ಲಿ ನೀಡಿದೆ. ಅಷ್ಟು ದೊಡ್ಡ ಮೊತ್ತ ತೆಗೆದುಕೊಂಡಿದ್ದಕ್ಕೆ ಪ್ರತಿಯಾಗಿ ಆತ ಯಾವುದೇ ಕೆಲಸ ಮಾಡಿಲ್ಲ. ಆ ಕಾರಣಕ್ಕೆ ಅಗಸ್ಟಾ ವೆಸ್ಟ್ ಲ್ಯಾಂಡ್ ಪ್ರಕರಣದಲ್ಲಿ ಆತನ ಪಾತ್ರವೇನು ಎಂಬ ಬಗ್ಗೆ ಸ್ವಿಸ್ ಅಧಿಕಾರಿಗಳು ವಶಪಡಿಸಿಕೊಂಡ ದಾಖಲೆಗಳು ಮತ್ತು ಸಿಬಿಐನವರಿಗೆ ಸಿಕ್ಕ ಮಾಹಿತಿ ಆಧಾರದಲ್ಲಿ ತನಿಖೆ ನಡೆದಿದೆ. ಅದರಲ್ಲಿ ಮೈಖೆಲ್ ನಿಂದ ಭಾರತೀಯ ಅಧಿಕಾರಿಗಳಿಗೆ ಪಾವತಿ ಆಗಿರುವ ಮೊತ್ತದ ವಿವರಗಳಿವೆ. ಗಣ್ಯರ ಹೆಲಿಕಾಪ್ಟರ್ ಖರೀದಿ ವ್ಯವಹಾರವನ್ನು ಅಗಸ್ಟಾ ವೆಸ್ಟ್ ಲ್ಯಾಂಡ್ ಗೆ ಅಂತಿಮಗೊಳಿಸಲು ಆತ ಲಾಬಿ ಮಾಡಿರುವ ಬಗ್ಗೆ ದಾಖಲೆಗಳಿವೆ ಎಂದು ಸಿಬಿಐ ಹೇಳಿದೆ.

12 ವಿವಿಐಪಿ ಹೆಲಿಕಾಪ್ಟರ್ ಖರೀದಿಗೆ ಪ್ರಸ್ತಾವ

12 ವಿವಿಐಪಿ ಹೆಲಿಕಾಪ್ಟರ್ ಖರೀದಿಗೆ ಪ್ರಸ್ತಾವ

1999ರಲ್ಲಿ ಭಾರತೀಯ ವಾಯು ಸೇನೆಯು ಒಂದು ಪ್ರಸ್ತಾವ ಮುಂದಿಟ್ಟಿತ್ತು. ಸರಕಾರದ ಅತ್ಯುನ್ನತ ಸ್ಥಾನದಲ್ಲಿರುವವರ ಸಂಚಾರಕ್ಕಾಗಿ 12 ವಿವಿಐಪಿ (ಅತಿ ಗಣ್ಯ ವ್ಯಕ್ತಿಗಳು) ಹೆಲಿಕಾಪ್ಟರ್ ಖರೀದಿ ಮಾಡಬೇಕು ಎಂದಿತ್ತು. 2010ರಲ್ಲಿ ಆ ವ್ಯವಹಾರವು 3600 ಕೋಟಿ ರುಪಾಯಿಗಳಿಗೆ ಅಗಸ್ಟಾ ವೆಸ್ಟ್ ಲ್ಯಾಂಡ್ ಗೆ ದೊರೆತಿತ್ತು. ಆದರೆ ಆ ವ್ಯವಹಾರದಲ್ಲಿ ಕೆಲವು ತಾಂತ್ರಿಕ ಅಂಶಗಳನ್ನು ಮಾರ್ಪಾಡು ಮಾಡಲಾಗಿತ್ತು. ಅಗಸ್ಟಾ ವೆಸ್ಟ್ ಲ್ಯಾಂಡ್ ಗೆ ಸಹಾಯ ಆಗಲಿ ಎಂಬ ಕಾರಣಕ್ಕಾಗಿಯೇ ಹೆಲಿಕಾಪ್ಟರ್ ನ ಸೇವಾ ಮಿತಿಯನ್ನು 6000 ಮೀಟರ್ ನಿಂದ 4500 ಮೀಟರ್ ಗೆ ಇಳಿಸಲಾಗಿತ್ತು. ಈ ರೀತಿಯ ಅನುಕೂಲ ಮಾಡಿಕೊಡುವ ಸಲುವಾಗಿ ಲಂಚ ಪಾವತಿಸಲಾಗುತ್ತಿದೆ ಎಂಬುದು ಈಗ ಕೇಳಿಬರುತ್ತಿರುವ ಆರೋಪ.

ಸಿಬಿಐನಿಂದ ಎಫ್ ಐಆರ್ ದಾಖಲು

ಸಿಬಿಐನಿಂದ ಎಫ್ ಐಆರ್ ದಾಖಲು

ಮಾರ್ಚ್ 14, 2013ರಲ್ಲಿ ಪ್ರಾಥಮಿಕ ತನಿಖೆ ನಂತರ ಸಿಬಿಐ ಎಫ್ ಐಆರ್ ದಾಖಲಿಸಿತು. ಅದರಲ್ಲಿ ಭಾರತೀಯ ವಾಯು ಸೇನೆಯ ಮಾಜಿ ಮುಖ್ಯಸ್ಥ ಎಸ್.ಪಿ.ತ್ಯಾಗಿ ಸೇರಿದಂತೆ 12 ಇತರ ವ್ಯಕ್ತಿಗಳನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಜತೆಗೆ ನಾಲ್ಜು ಕಂಪನಿಗಳ ಹೆಸರಿದ್ದವು. ಅದರಲ್ಲಿ ತ್ಯಾಗಿ ಕುಟುಂಬದ ಸದಸ್ಯರು, ಮೂವರು ಮಧ್ಯವರ್ತಿಗಳಿದ್ದರು. ಆ ಮಧ್ಯವರ್ತಿಗಳೇ ಮೈಖೆಲ್, ಕಾರ್ಲೊ ಜೆರೋಸಾ ಮತ್ತು ಗೈಡೋ ಹಶ್ಕೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಜಾರಿ ನಿರ್ದೇಶನಾಲಯದಿಂದ ಕೂಡ ತನಿಖೆ ಶುರುವಾಯಿತು. ಜೆರೋಸಾ, ಹಶ್ಕೆ ಇಬ್ಬರಿಂದ ತ್ಯಾಗಿ ಅವರ ಕುಟುಂಬ ಸದಸ್ಯರಿಗೆ ಹಣ ಪಾವತಿಸಲಾಗಿದೆ. ರಕ್ಷಣಾ ಸಚಿವಾಲಯದ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಜತೆ ಮೈಖೆಲ್ ವ್ಯವಹಾರ ನಡೆಸಿದ್ದಾರೆ ಎಂಬುದು ಆರೋಪ.

ಚುನಾವಣೆ ಹತ್ತಿರ ಇರುವಾಗ ರಾಜಕೀಯ ಕಲ್ಲೋಲ

ಚುನಾವಣೆ ಹತ್ತಿರ ಇರುವಾಗ ರಾಜಕೀಯ ಕಲ್ಲೋಲ

ಮೈಖೆಲ್ ನ ಬೆನ್ನು ಬಿದ್ದಿದ್ದವು ತನಿಖಾ ಸಂಸ್ಥೆಗಳು. ಅದರಲ್ಲೂ ಲೋಕಸಭೆ ಚುನಾವಣೆ ಹತ್ತಿರ ಇರುವ ಈ ಸನ್ನಿವೇಶದಲ್ಲಿ ಆತನನ್ನು ಭಾರತಕ್ಕೆ ಕರೆ ತಂದಿರುವುದು ಇಲ್ಲಿನ ರಾಜಕೀಯದಲ್ಲಿ ಭಾರೀ ತಲ್ಲಣ ಎಬ್ಬಿಸಲಿದೆ. ಇನ್ನು ಇಟಲಿಯ ತನಿಖಾಧಿಕಾರಿಗಳ ಪ್ರಕಾರ, ಕೈಯಲ್ಲೇ ಬರೆದ ಕೆಲವು ಮಾಹಿತಿಗಳು ದೊರಕಿವೆ. ಅದರಲ್ಲೂ ಯಾರ್ಯಾರಿಗೆ ಹಣ ಪಾವತಿಸಲಾಗಿದೆ ಎಂಬ ಮಾಹಿತಿಯನ್ನು ಸಂಕೇತಾಕ್ಷರಗಳಲ್ಲಿ ನೀಡಲಾಗಿದೆ. 'pol', "Bur" "Family" ಎಂಬ ಸಂಕೇತಾಕ್ಷರಗಳು ಅಲ್ಲಿವೆ. ಅವೆಲ್ಲ ಸುಳ್ಳು ಹಾಗೂ ಅದನ್ನು ಸಿದ್ಧಪಡಿಸಿದ್ದು ಹಶ್ಕೆ ಎಂಬುದು ಮೈಖೆಲ್ ವಾದ. ಅದೇನೇ ಇರಲಿ, ಆರು ವರ್ಷಗಳ ಸತತ ಪ್ರಯತ್ನದ ನಂತರ ಮೈಖೆಲ್ ನನ್ನು ಭಾರತಕ್ಕೆ ಕರೆತರಲು ಸಾಧ್ಯವಾಗಿದೆ.

ಅಜಿತ್ ದೋವಲ್ ಶ್ರಮ ಇದೆ

ಅಜಿತ್ ದೋವಲ್ ಶ್ರಮ ಇದೆ

ಆದರೆ, ಆ ಕೆಲಸ ಅಷ್ಟು ಸಲೀಸಿರಲಿಲ್ಲ. ಏಕೆಂದರೆ, ಮೈಖೆಲ್ ಬ್ರಿಟಿಷ್ ಪ್ರಜೆ. ಅಂದರೆ ಬೇರೊಂದು ದೇಶದ ಪ್ರಜೆ. ಆತನನ್ನು ಭಾರತಕ್ಕೆ ಹಸ್ತಾಂತರಿಸಿ ಅಂತ ಕೇಳುವುದು ಮತ್ತು ಅದನ್ನು ದುಬೈ ಯುಎಇ ಕೋರ್ಟ್ ಸಮ್ಮತಿಸಿಸುವುದು ಅಸಾಧ್ಯವಿತ್ತು. ಮೊದಲಿಗೆ ಭಾರತ ಒದಗಿಸಿದ ಸಾಕ್ಷ್ಯಾಧಾರಗಳನ್ನು ಅಲ್ಲಿನ ಕೋರ್ಟ್ ಮಾನ್ಯ ಮಾಡಲಿಲ್ಲ. ಆಗ ಒಂದು ತಂಡವನ್ನು ರಚಿಸಿದರು ದೋವಲ್. ಅದರಲ್ಲಿ ಸಿಬಿಐ ಹಾಗೂ ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ನ ಸದದ್ಯರಿದ್ದರು. ಜತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಎಲ್ಲೆಲ್ಲಿ ಒತ್ತಡ ಹಾಕಿಸಲು ಸಾಧ್ಯವೋ ಅಲ್ಲೆಲ್ಲ ಒತ್ತಡ ಹಾಕಿಸಲಾಯಿತು. ಈ ಮಧ್ಯೆ ಮೈಖೆಲ್ ದುಬೈನಿಂದ ತಪ್ಪಿಸಿಕೊಳ್ಳಲು ಸಹ ಪ್ರಯತ್ನಿಸಿದ್ದ. ಆದರೆ ಆ ಯತ್ನ ವಿಫಲವಾಯಿತು. ಅಂತೂ ಅಜಿತ್ ದೋವಲ್ ಪಟ್ಟ ಶ್ರಮ ಫಲ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+