ಬಿಜೆಪಿಯೊಳಗೆ 'ಸಾಮ್ರಾಟ್' ಅಶೋಕ ಸಾಮ್ರಾಜ್ಯದ ಅಂತ್ಯ ಕಾಲ ಸನ್ನಿಹಿತವೇ?!
Recommended Video
ಬಿಜೆಪಿಯೊಳಗೆ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ರ ಪ್ರಾಬಲ್ಯ ಕಡಿಮೆ ಆಗುತ್ತಿದೆಯಾ? ಅಶೋಕ್ ಗೆ ಪರ್ಯಾಯವಾಗಿ ಮತ್ತೊಬ್ಬ ಒಕ್ಕಲಿಗ ನಾಯಕನನ್ನು ಬೆಳೆಸಲು ಕೇಂದ್ರದ ವರಿಷ್ಠರಿಂದಲೇ ಸೂಚನೆ ಬಂದಿದೆಯಾ? ತಮ್ಮ ಮಾತು-ನಡವಳಿಕೆಯಿಂದಲೇ ಇಂಥ ಪರಿಸ್ಥಿತಿ ತಂದುಕೊಂಡರಾ ಎಂದರೆ, ಎಲ್ಲಕ್ಕೂ ಉತ್ತರ ಹೌದು ಅಂತಲೇ ಸಿಗುತ್ತದೆ.
ಪಕ್ಷದ ಉನ್ನತ ಮೂಲಗಳ ಪ್ರಕಾರ, ಬಿಬಿಎಂಪಿ ಚುನಾವಣೆ ಫಲಿತಾಂಶದಿಂದ ಆಚೆಗೆ ಒಂದಲ್ಲಾ ಒಂದು ರೀತಿಯಲ್ಲಿ ಅಶೋಕ್ ಬಗ್ಗೆ ಅಸಮಾಧಾನ ಹೆಚ್ಚುತ್ತಲೇ ಇದೆ. ಬಿಬಿಎಂಪಿ ಚುನಾವಣೆಯಲ್ಲಿ ಅಂಥ ದೊಡ್ಡ ಗೆಲುವು ಸಾಧಿಸಿದರೂ, ಕೆಲವು ಸ್ಥಾನಗಳ ಕೊರತೆ ಇತ್ತು. ಆಗ ಆರಂಭದಲ್ಲಿ ಪಕ್ಷದ ಕೆಲವು ಬಂಡಾಯ ಅಭ್ಯರ್ಥಿಗಳು ತಾವಾಗಿಯೇ ಬಿಜೆಪಿಯನ್ನು ಬೆಂಬಲಿಸಲು ಮುಂದಾಗಿದ್ದರು.
ಕಾಂಗ್ರೆಸ್-ಜೆಡಿಎಸ್ ದುರಾಡಳಿತಕ್ಕೆ ಪೌರ ಕಾರ್ಮಿಕರು ಬಲಿ: ಅಶೋಕ್ ಆಕ್ರೋಶ
ಅವರದಾದರೂ ಇದ್ದ ಬೇಡಿಕೆ ಏನೆಂದರೆ, ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ. ಅದು ಕೂಡ ಕೆಲವೇ ವರ್ಷದ್ದಾಗಿತ್ತು. ಆಗ ಅಶೋಕ್ ನಡೆದುಕೊಂಡ ರೀತಿ ಬಗ್ಗೆ ಬೆಂಗಳೂರು ವ್ಯಾಪ್ತಿಯೊಳಗಿನ ಕಾರ್ಪೊರೇಟರ್ ಗಳಿಗೇ ಅಸಮಾಧಾನ ಇದೆ. ಆ ಕಾರ್ಪೊರೇಟರ್ ಗಳನ್ನು ರಾಮಲಿಂಗಾರೆಡ್ಡಿ ಅವರು ಅನಾಮತ್ತಾಗಿ ಕಾಂಗ್ರೆಸ್ ಗೆ ಎಳೆದುಕೊಂಡು ಹೋದರು. ಆ ನಂತರ ಜೆಡಿಎಸ್- ಕಾಂಗ್ರೆಸ್ ದೋಸ್ತಿಯಾಗಿ ಬಿಬಿಎಂಪಿಯಲ್ಲಿ ಆಡಳಿತ ಚುಕ್ಕಾಣಿ ಹಿಡಿದವು.
ಪರಿವರ್ತನಾ ಯಾತ್ರೆ ಉದ್ಘಾಟನೆ ಸಮಾರಂಭದ ವೈಫಲ್ಯ
ಆ ನಂತರ ನಡೆದದ್ದು ಬಿಜೆಪಿಯ ಪರಿವರ್ತನಾ ಯಾತ್ರೆಯ ಉದ್ಘಾಟನಾ ಸಮಾರಂಭದ ಮುಖಭಂಗ. ಸ್ವತಃ ಅಮಿತ್ ಶಾ ಬಂದರೂ ಜನರನ್ನು ಸೇರಿಸುವಲ್ಲಿ ಬಿಜೆಪಿ ವಿಫಲವಾಯಿತು. ಅಂದ ಹಾಗೆ ಆ ಕಾರ್ಯಕ್ರಮದ ಮಹತ್ವದ ಜವಾಬ್ದಾರಿ ಇದ್ದದ್ದು ಇದೇ ಅಶೋಕ್ ಗೆ. ಅಂಥ ದೊಡ್ಡ ಮಟ್ಟದ ಸಂಘಟನೆ ಎಂದು ಕರೆಸಿಕೊಳ್ಳುವ ಬಿಜೆಪಿಯ ಮಹತ್ವಾಕಾಂಕ್ಷಿ ಕಾರ್ಯಕ್ರಮಕ್ಕೆ ಜನರೇ ಇಲ್ಲ ಎಂಬಂತಾಯಿತು. ಈ ಬಗ್ಗೆ ಮಾಧ್ಯಮಗಳಲ್ಲಿ 'ಬಿಜೆಪಿಯ ವೈಫಲ್ಯ' ಅಂತಲೇ ಬಿಂಬಿಸಲಾಯಿತು. ಕಾಂಗ್ರೆಸ್ ಪಕ್ಷವಂತೂ ಭಾರೀ ಗೇಲಿ ಮಾಡಿತು. ಬೆಂಗಳೂರು ವ್ಯಾಪ್ತಿಯ ಪಕ್ಷದ ವಿಚಾರಗಳ ಜವಾಬ್ದಾರಿ ತನ್ನದೇ ಎಂದು ಹೇಳಿಕೊಳ್ಳುವ ಅಶೋಕ್ ಬಗ್ಗೆ ಕೇಂದ್ರ ನಾಯಕರಿಗೆ ಮತ್ತೊಂದು ನಕಾರಾತ್ಮಕ ಸಂದೇಶ ಹೋಯಿತು.
ದೋಸ್ತಿ ಕುದುರಿಸುವ ಜವಾಬ್ದಾರಿಯನ್ನೂ ನಿರ್ವಹಿಸಲಿಲ್ಲ
ಇನ್ನು ವಿಧಾನಸಭೆ ಚುನಾವಣೆಗೆ ಮುಂಚೆಯೇ ಜೆಡಿಎಸ್ ಜತೆಗೆ ಒಂದು ಸುತ್ತಿನ ಮಾತುಕತೆ ನಡೆಸಿರುವಂತೆ, ಒಂದು ವೇಳೆ ಬಿಜೆಪಿಗೆ ಪೂರ್ಣ ಬಹುಮತ ಸಿಗದಿದ್ದ ಪಕ್ಷದಲ್ಲಿ ಹೊಂದಾಣಿಕೆಗೆ ಅನುಕೂಲ ವಾತಾವರಣ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ವಹಿಸಿದ್ದು ಕೂಡ ಇದೇ ಅಶೋಕ್ ಗೆ ಎನ್ನುತ್ತವೆ ಮೂಲಗಳು. ಆ ಕಾರಣಕ್ಕೆ ಬಿಜೆಪಿಯಿಂದ ಜೆಡಿಎಸ್ ವಿರುದ್ಧ ಯಾವುದೇ ಆರೋಪವಾಗಲೀ ಮಾಡಲಿಲ್ಲ. ಜತೆಗೆ ಜೆಡಿಎಸ್ ಗೆ ಎಲ್ಲಿ ಅನುಕೂಲ ಆಗಬಹುದೋ ಅಂಥ ಕಡೆ ಬಿಜೆಪಿ ಯಾವುದೇ ಅಹಂ ತೋರಿಸದೆ ಸಹಕಾರ ನೀಡಿತು. ಅಂದರೆ ಜೆಡಿಎಸ್ ಗೆ ಎಲ್ಲೆಲ್ಲಿ ಗೆಲ್ಲುವ ಸಾಧ್ಯತೆ ಇದ್ದು, ತಾನು ಅಭ್ಯರ್ಥಿ ಹಾಕಿದರೆ ಮತ ವಿಭಜನೆ ಆಗಬಹುದಿತ್ತೋ ಅಲ್ಲೆಲ್ಲ ನಾಮ್ ಕೇ ವಾಸ್ತೆ ಅಭ್ಯರ್ಥಿಯನ್ನು ಹಾಕಿತು ಬಿಜೆಪಿ. ಇಷ್ಟಾದರೂ ದೋಸ್ತಿ ಕುದುರಿಸುವ ಜವಾಬ್ದಾರಿ ಹೊತ್ತಿದ್ದ ಅಶೋಕ್ ಅಲ್ಲೂ ವಿಫಲರಾದರು.
ಜಯನಗರದ ಬಗ್ಗೆ ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ?
ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯ ಉಸ್ತುವಾರಿಯನ್ನು ವಹಿಸಿದ್ದು ಕೇಂದ್ರ ಸಚಿವ ಅನಂತಕುಮಾರ್ ಗೆ. ಆ ಕ್ಷೇತ್ರದ ಪಕ್ಕದಲ್ಲೇ ಇರುವ ಪದ್ಮನಾಭನಗರ ಕ್ಷೇತ್ರದಿಂದ ಆರ್.ಅಶೋಕ್ ಸ್ಪರ್ಧೆ ಮಾಡುತ್ತಾರೆ. ಜತೆಗೆ ಬೆಂಗಳೂರು ವ್ಯಾಪ್ತಿಯಲ್ಲಿ ತನ್ನದೇ ಮಾತು ನಡೆಯಬೇಕು ಎಂಬ ಉಮ್ಮೇದು ಅಶೋಕ್ ದು. ಆದರೆ ಯಾವಾಗ ಅನಂತ್ ಗೆ ಚುನಾವಣೆ ಉಸ್ತುವಾರಿ ವಹಿಸಿದರೋ ಆಗ ಅಶೋಕ್ ಉತ್ಸಾಹದಿಂದ ಓಡಾಡಲೇ ಇಲ್ಲ. ಜತೆಗೆ, ನನ್ನ ಉಸ್ತುವಾರಿಯಲ್ಲಿ ಆಗಿದ್ದರೆ ಜಯನಗರದಲ್ಲಿ ಗೆಲ್ಲಿಸುತ್ತಿದ್ದೆ. ಆದರೆ ಅನಂತ್ ಗೆ ಜವಾಬ್ದಾರಿ ಕೊಟ್ಟರಲ್ಲವಾ, ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ ಎಂದು ತಮ್ಮದೇ ವಲಯದಲ್ಲಿ ಹೇಳಿಕೊಂಡಿದ್ದು ಕೇಂದ್ರ ನಾಯಕರ ತನಕ ಮುಟ್ಟಿದೆ. ಆ ಕಾರಣಕ್ಕೆ ಇತ್ತೀಚೆಗೆ ರಾಜ್ಯ ಪ್ರವಾಸ ಕೈಗೊಳ್ಳುತ್ತಿರುವ ಪಟ್ಟಿಯಿಂದಲೂ ಅಶೋಕ್ ರನ್ನು ಕೈ ಬಿಡಲಾಯಿತು. ಆದರೆ ಪಕ್ಷದೊಳಗೆ ಇನ್ನೆಲ್ಲಿ ಬೇರೆ ಸಂದೇಶ ಹೋಗುತ್ತದೋ ಎಂಬ ಆತಂಕದಲ್ಲಿ ಕೊನೆ ಕ್ಷಣದಲ್ಲಿ ಹೆಸರು ಸೇರಿಸುವಲ್ಲಿ ಸಫಲರಾಗಿದ್ದರು ಅಶೋಕ್.
ಮತ್ತೊಬ್ಬ ಒಕ್ಕಲಿಗ ನಾಯಕನನ್ನು ಬೆಳೆಸಲು ಸೂಚನೆ
ಈಗಲೂ ವಿಧಾನಪರಿಷತ್ ನಲ್ಲಿ ಬಿಜೆಪಿಗೆ ಸಿಗಬಹುದಾದ ಒಂದು ಸ್ಥಾನಕ್ಕೆ ತಮ್ಮ ಅಭ್ಯರ್ಥಿ ಶಿಲ್ಪಾ ಗಣೇಶ್ ರನ್ನು ನಿಲ್ಲಿಸಿ, ಗೆಲ್ಲಿಸುವ ಉದ್ದೇಶ ಅಶೋಕ್ ಗಿದೆ. ಆದರೆ ಸದ್ಯದ ಸ್ಥಿತಿಯಲ್ಲಿ ಅಶೋಕ್ ಬೆಂಬಲಿಸುವ ಅಭ್ಯರ್ಥಿಯನ್ನು ರಾಜ್ಯ ನಾಯಕರ ಮಟ್ಟದಲ್ಲೇ ತಿರಸ್ಕರಿಸುವ ಸಾಧ್ಯತೆ ದಟ್ಟವಾಗಿದೆ. ಇನ್ನು ಅಶೋಕ್ ಗೆ ಪರ್ಯಾಯವಾಗಿ ಮತ್ತೊಬ್ಬ ಒಕ್ಕಲಿಗ ನಾಯಕರನ್ನು ಬೆಳೆಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಕೇಂದ್ರದ ವರಿಷ್ಠರಿಂದಲೇ ಇಂಥದ್ದೊಂದು ಸೂಚನೆ ಸಿಕ್ಕ ನಂತರ, ಆರೆಸ್ಸೆಸ್ ಒಳಗಿನ ಸಂಪರ್ಕ ಇರುವವರಿಗೆ ಅಶೋಕ್ ಅಂದರೆ ಯಾಕಪ್ಪಾ ಸಹವಾಸ ಎನ್ನುವಂತಾಗಿದೆ. ಸಾಲುಸಾಲಾಗಿ ತಪ್ಪುಗಳನ್ನು ಮಾಡಿದ ನಂತರ ಅಶೋಕ್ ರನ್ನು ಇನ್ನು ಮುಂದೆ ಮೂಲೆಗುಂಪು ಮಾಡಲಾಗುತ್ತದೆಯಾ ಅನ್ನೋದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗುತ್ತದೆ.