Deepavali 2024: ದೀಪಾವಳಿ ಜಾತ್ರೆಗೆ ಕೊಂಗಳ್ಳಿ ಬೆಟ್ಟ ಸಜ್ಜು: ಇಲ್ಲಿನ ವಿಶೇಷತೆ ಏನು?
ಚಾಮರಾಜನಗರ, ಅಕ್ಟೋಬರ್ 29: ದೀಪಾವಳಿ ಹಬ್ಬ ಆಚರಣೆ ಮನೆ, ಮನೆಗಳಲ್ಲಿ ದೀಪಬೆಳಗುವ ಮೂಲಕ ನಡೆಸುವುದು ಎಲ್ಲೆಡೆ ನಡೆಯುತ್ತದೆ. ಆದರೆ ಇದೇ ಸಂದರ್ಭಗಳಲ್ಲಿ ವಿವಿಧ ದೇಗುಲಗಳಲ್ಲಿ ಜಾತ್ರೆಯೂ ನಡೆಯುತ್ತದೆ. ಅದರಂತೆ ಪ್ರತಿವರ್ಷವೂ ಇತಿಹಾಸ ಪ್ರಸಿದ್ಧ ಗುಂಡ್ಲುಪೇಟೆ ತಾಲೂಕಿನ ಗಡಿಭಾಗದ ತಾಳವಾಡಿ ಸಮೀಪದ ಶ್ರೀ ಕೊಂಗಳ್ಳಿ ಬೆಟ್ಟದ ಮಲ್ಲಿಕಾರ್ಜುನ ದೇವಾಲಯದಲ್ಲಿ ಜಾತ್ರಾ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಾ ಬರುತ್ತಿದ್ದು ಈ ಸಂದರ್ಭ ಮಲ್ಲಿಕಾರ್ಜುನ ಅರ್ಥಾತ್ ಮಲ್ಲಪ್ಪನಿಗೆ ಹುಲಿವಾಹನ ಸೇವೆ ನಡೆಯುವುದು ವಿಶೇಷವಾಗಿದೆ.
ತಮಿಳುನಾಡಿನ ತಾಳವಾಡಿ ಪಿರ್ಕಾದಲ್ಲಿರುವ ಕೊಂಗಳ್ಳಿ ಬೆಟ್ಟವು ಮೈಸೂರಿನಿಂದ ಸುಮಾರು ನೂರು ಕಿ.ಮೀ, ಚಾಮರಾಜನಗರದಿಂದ ನಲುವತ್ತು ಕಿ.ಮೀ. ಹಾಗೂ ಗುಂಡ್ಲುಪೇಟೆಯಿಂದ ಸುಮಾರು ಮೂವತ್ತೆರಡು ಕಿಮೀ ದೂರದಲ್ಲಿದೆ. ಇಲ್ಲಿಗೆ ತೆರಳಲು ಚಾಮರಾಜನಗರದಿಂದ ಬಸ್ ಸೌಕರ್ಯವಿದ್ದು, ತಾಳವಾಡಿ ಹಾಗೂ ಎತ್ತಗಟ್ಟಿ ಬೆಟ್ಟದ ಮಾರ್ಗದಲ್ಲಿ ತೆರಳಬಹುದಾಗಿದೆ. ಆದರೆ ಇಲ್ಲಿನ ಮಲ್ಲಿಕಾರ್ಜುನ ದೇಗುಲ ಬೆಟ್ಟದ ಮೇಲಿದ್ದು, ಕಾಡಿನಿಂದ ಸುತ್ತುವರೆದಿರುವುದರಿಂದ, ಅರಣ್ಯ ಸಂರಕ್ಷಣಾವಲಯಕ್ಕೆ ಸೇರಿರುವುದರಿಂದ ನಡೆದೇ ಹೋಗಬೇಕಾಗುತ್ತದೆ.

ನಿಸರ್ಗ ರಮಣೀಯ ತಾಣದಲ್ಲಿರುವ ಕೊಂಗಾಕಾರದ ಬೆಟ್ಟಗಳ ನಡುವೆ ಇರುವ ಕೊಂಗಳ್ಳಿ ಮಲ್ಲಿಕಾರ್ಜುನಮ ಸನ್ನಿಧಿಗೆ ಹೋಗುವವರು ಹೆಚ್ಚಿನವರು ಕರ್ನಾಟಕದವರೇ ಆಗಿದ್ದು, ವರ್ಷದ ಕಾರ್ತಿಕ ಮಾಸದಲ್ಲಿ ತಪ್ಪದೆ ಭೇಟಿ ನೀಡಿ ತಮ್ಮ ಕುಟುಂಬದ ಹಾಗೂ ಜಾನುವಾರುಗಳ ರಕ್ಷಣೆಗೆ ಮೊರೆಯಿಟ್ಟು ಹರಕೆ ಸಲ್ಲಿಸಿ ಬರುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ದೀಪಾವಳಿ ಅಮವಾಸ್ಯೆಯಂದು ಭಕ್ತರು ಕೊಂಗಳ್ಳಿ ಮಲ್ಲಪ್ಪನ ಬೆಟ್ಟಕ್ಕೆ ತೆರಳಿ ಪೂಜಾ ಕೈಂಕರ್ಯಗಳನ್ನು ನೆರವೇರಿಸುವಂತೆ ಬೇಡಿಕೊಳ್ಳುತ್ತಾರೆ.
ನಿಸರ್ಗ ಸುಂದರ ತಾಣ ಕೊಂಗಳ್ಳಿ
ಕೊಂಗಳ್ಳಿ ಬೆಟ್ಟ ತಮಿಳುನಾಡು ಅರಣ್ಯ ಸಂರಕ್ಷಣಾವಲಯಕ್ಕೆ ಸೇರಿರುವುದರಿಂದ ಅಲ್ಲಿಗೆ ಎಲ್ಲ ಸಮಯದಲ್ಲಿ ತೆರಳಲು ಅವಕಾಶವಿಲ್ಲ. ನಿಗದಿತ ಸಮಯದಲ್ಲಿ ತೆರಳಿ ಪೂಜಾ ಕೈಂಕರ್ಯಗಳನ್ನು ಮುಗಿಸಿಕೊಂಡು ಬರಬೇಕಾಗುತ್ತದೆ. ದೀಪಾವಳಿ ಸಮಯದಲ್ಲಿ ಕೆಲವೊಂದು ನಿಬಂಧನೆಗಳನ್ನು ವಿಧಿಸಲಾಗುತ್ತಿದ್ದು, ಅದರಂತೆ ಭಕ್ತರು ತೆರಳಿ ಪೂಜಾ ಕೈಂಕರ್ಯ ನೆರವೇರಿಸಬೇಕಾಗುತ್ತದೆ.

ದೈವಕ್ಷೇತ್ರವಾಗಿರುವ ಕೊಂಗಳ್ಳಿ ಬೆಟ್ಟ ನಿಸರ್ಗ ಚೆಲುವನ್ನು ಹೊದ್ದು ಕುಳಿತ ಭವ್ಯ ತಾಣವಾಗಿದ್ದು, ಇದು ಕೇವಲ ಭಕ್ತರನ್ನು ಮಾತ್ರವಲ್ಲದೆ, ಪ್ರವಾಸಿಗರನ್ನು ಕೂಡ ತನ್ನತ್ತ ಸೆಳೆಯುತ್ತದೆ. ಚಾರಣಪ್ರಿಯರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಹೀಗಾಗಿಯೇ ಇಲ್ಲಿನ ಸುಂದರ ನಿಸರ್ಗವನ್ನು ಸವಿದು ಒಂದಷ್ಟು ಸಮಯವನ್ನು ಪ್ರಕೃತಿಯ ನಡುವೆ ಕಳೆಯಲೆಂದೇ ಭಕ್ತರು ಮಾತ್ರವಲ್ಲದೆ, ಪ್ರವಾಸಿಗರು ಕೂಡ ಇಲ್ಲಿಗೆ ದಂಡು ದಂಡಾಗಿ ಬರುತ್ತಾರೆ.
ರಾತ್ರಿ 6 ಗಂಟೆ ನಂತರ ಪ್ರವೇಶವಿಲ್ಲ
ಈ ತಾಣವು ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಂತಿದ್ದರೂ ತಮಿಳುನಾಡಿಗೆ ಸೇರಿದ್ದು, ತಾಳವಾಡಿ ಪಿರ್ಕಾಕ್ಕೆ ಒಳಪಟ್ಟಿದೆ. ಆದರೆ ಇಲ್ಲಿಗೆ ಕರ್ನಾಟಕದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುವುದು ವಿಶೇಷವಾಗಿದೆ. ಮೊದಲೆಲ್ಲ ದೇಗುಲಕ್ಕೆ ತೆರಳಿದರೆ ಅಲ್ಲಿ ತಂಗಿದ್ದು, ಮಾರನೆಯ ದಿನ ಹಿಂತಿರುಗುವ ಅವಕಾಶವಿತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಇಲ್ಲಿ ಹುಲಿ, ಕರಡಿ, ಕಾಡಾನೆ ಸೇರಿದಂತೆ ಹಲವು ಪ್ರಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ರಾತ್ರಿ ತಂಗುವುದಕ್ಕೆ ಹಾಗೂ ರಾತ್ರಿ 6 ಗಂಟೆಯ ನಂತರದ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಸಾಮಾನ್ಯ ದಿನಗಳಲ್ಲಿ ಇಲ್ಲಿಗೆ ಭಕ್ತರು ಆಗಮಿಸಿ ಪೂಜಾ ಕೈಂಕರ್ಯ, ಸೇವೆಗಳನ್ನು ಮಾಡಿ ಹೋಗುತ್ತಾರೆಯಾದರೂ ದೀಪಾವಳಿ ಸಮಯದಲ್ಲಿ ಹೊರ ಊರುಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹರಕೆ ಸಲ್ಲಿಸಿ, ಹುಲಿವಾಹನ ಸೇವೆ ಮಾಡಿ, ಸಾಮೂಹಿಕ ಬೋಜನ ಮಾಡಿ ಹಿಂತಿರುಗುತ್ತಾರೆ. ಕೊಂಗಳ್ಳಿ ಮಲ್ಲಪ್ಪನ ಬೆಟ್ಟದ ಬಗ್ಗೆ ಹೇಳಬೇಕೆಂದರೆ ಇದು ಮಲ್ಲಿಕಾರ್ಜುನ ನೆಲೆನಿಂತ ತಾಣವಾಗಿದೆ. ಆದರೆ ಇಲ್ಲಿಗೆ ಮಲ್ಲಿಕಾರ್ಜುನ ಬಂದಿದ್ದು ಹೇಗೆ ಎಂಬುದನ್ನು ನೋಡಿದ್ದೇ ಆದರೆ ಜನವಲಯದಲ್ಲಿರುವ ಕಥೆಯೊಂದು ತೆರೆದುಕೊಳ್ಳುತ್ತದೆ.
ಕೊಂಗಳ್ಳಿ ಬೆಟ್ಟ ಹೆಸರು ಬಂದಿದ್ದೇಗೆ?
ಈ ಸ್ಠಳವು ಅಂದು ದಟ್ಟಕಾಡಿನಿಂದ ಕೂಡಿದ ಪ್ರದೇಶವಾಗಿತ್ತು. ಎಂಟನೇ ಶತಮಾನದಲ್ಲಿ ಶ್ರೀಶೈಲದಿಂದ ಚನ್ನಮಲ್ಲಿಕಾರ್ಜುನ ಸ್ವಾಮಿ, ಬಸಪ್ಪ ಎತ್ತಗಟ್ಟಿ ಈ ಮಾರ್ಗವಾಗಿ ಬಂದ ಸಂದರ್ಭ ಇಲ್ಲಿನ ಪ್ರಕೃತಿ ಸೌಂದರ್ಯ ಮತ್ತು ಪ್ರಶಾಂತ ವಾತಾವರಣ ಕಂಡು ಮುಂದೆ ತೆರಳದೆ ಇಲ್ಲಿಯೇ ನೆಲೆನಿಂತರಂತೆ. ಹೀಗಾಗಿ ಪವಿತ್ರತಾಣವಾಗಿದೆ. ಈ ಬೆಟ್ಟ ದೂರದಿಂದ ನಿಂತು ನೋಡಿದರೆ ಮಲ್ಲಿಕಾರ್ಜುನ ಸ್ವಾಮಿ ನೆಲೆನಿಂತ ಬೆಟ್ಟವು ರೈತರು ಒಕ್ಕಣೆ ಸಮಯದಲ್ಲಿ ಬಳಸುವ ಸಾಧನವಾದ ಕೊಂಗದ ಆಕಾರದಲ್ಲಿರುವುದರಿಂದ ಜನವಲಯದಲ್ಲಿ ಕೊಂಗಳ್ಳಿ ಬೆಟ್ಟವಾಗಿಯೇ ಉಳಿದುಕೊಂಡಿದೆ.
ಇಲ್ಲಿನ ಇನ್ನೊಂದು ವಿಶೇಷತೆ ಎಂದರೆ ಪುರುಷರಷ್ಟೇ ಇಲ್ಲಿಗೆ ತೆರಳುತ್ತಾರೆ. ಸುಮಾರು ಐನೂರು ವರ್ಷಕ್ಕೂ ಹಿಂದೆ ಇಲ್ಲಿಗೆ ಭೇಟಿ ನೀಡಿದ ಗಾಣಗಿತ್ತಿ ಮಹಿಳೆಯೊಬ್ಬರು ಕಲ್ಲಾದಳು ಎಂಬ ದಂತ ಕತೆ ಪ್ರಚಲಿತದಲ್ಲಿದೆ. ಹೀಗಾಗಿ ಮಹಿಳೆಯರು ಕೊಂಗಳ್ಳಿ ಮಲ್ಲಪ್ಪನ ಬೆಟ್ಟಕ್ಕೆ ತೆರಳದೆ ಎತ್ತಗಟ್ಟಿ ಬಸಪ್ಪ ಮತ್ತು ಹನುಮಂತರಾಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿಕೊಂಡು ಬರುತ್ತಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಕೊಂಗಳ್ಳಿ ಮಲ್ಲಪ್ಪನ ಬೆಟ್ಟವು, ಸುಂದರ ಪ್ರಾಕೃತಿಕ ಮತ್ತು ದೈವತಾಣವಾಗಿರುವುದರಿಂದ ಎಲ್ಲರನ್ನು ತನ್ನತ್ತ ಸೆಳೆಯುತ್ತದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications