ವಂದೇ ಭಾರತ್ ರೈಲಿನಲ್ಲಿ ಹಾಳಾದ ಆಹಾರ ವಿತರಣೆ: ವಿಡಿಯೋ ವೈರಲ್!
ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಪ್ರಯಾಣಿಕರ ಸುಖಕರ ಪ್ರಯಾಣಕ್ಕಾಗಿ ಸಹಕಾರಿಯಾಗಿದೆ. ತ್ವರಿತವಾಗಿ ಗಮ್ಯ ಸ್ಥಳಕ್ಕೆ ತಲುಪಿಸುವಲ್ಲಿ ವಂದೇ ಭಾರತ್ ರೈಲು ಜನರಿಗೆ ಹೆಚ್ಚು ಪ್ರಯೋಜನವಾಗಿದೆ. ಆದರೆ ದೂರದೂರಿಗೆ ಪ್ರಯಾಣಿಸುವ ಪ್ರಯಾಣಿಕರಿಂದ ಇಲ್ಲಿ ಸಿಗುವ ಆಹಾರದ ಗುಣಮಟ್ಟ ಕಳಪೆಯಾಗಿದೆ ಎನ್ನುವ ದೂರುಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಇದಕ್ಕೆ ಪುಷ್ಠಿ ನೀಡುವಂತೆ ಮತ್ತೊಂದು ಘಟನೆ ನಡೆದಿದೆ.
ಹೌದು... ವಂದೇ ಭಾರತ್ ರೈಲಿನ ಪ್ರಯಾಣಿಕರು ಆರ್ಡರ್ ಮಾಡಿದ ಆಹಾರ ಕಳಪೆ ಮಟ್ಟದ್ದಾಗಿರುವುದು ಕಂಡು ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಆಕಾಶ್ ಕೇಶಾರಿ ಎಂಬ ಹೆಸರಿನ ಪ್ರಯಾಣಿಕರು ವಂದೇ ಭಾರತ್ ರೈಲಿನಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗಿದೆ ಎಂದು ದೂರಿದ್ದಾರೆ. ಪ್ರೀಮಿಯಂ ರೈಲಿನಲ್ಲಿ ನೀಡಿದ ಆಹಾರ ಹಳಸಿ ಹೋಗಿತ್ತು ಎಂದು ಅವರು X (ಹಿಂದೆ Twitter)ನಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ವಂದೇ ಭಾರತ್ ಪ್ರಯಾಣಿಕ ಆಕಾಶ್ ತಾವು ಆರ್ಡರ್ ಮಾಡಿದ ಆಹಾರವನ್ನು ಹಿಂಪಡೆಯಲು ರೈಲು ಸಿಬ್ಬಂದಿಗೆ ಹೇಳುವ ವೀಡಿಯೊ ಅಂತರ್ಜಾಲದಲ್ಲಿ ಹರಿದಾಡುತ್ತಿವೆ. ಆಕಾಶ್ ಕೇಶಾರಿ ಪ್ರೀಮಿಯಂ ರೈಲಿನಲ್ಲಿ ನೀಡಿದ ಆಹಾರ ಹಾಳಾಗಿದೆ ಎಂದು X (ಹಿಂದೆ Twitter) ನಲ್ಲಿ ಹಂಚಿಕೊಂಡಿದ್ದಾರೆ.
@indianrailway__ @AshwiniVaishnaw @VandeBharatExp Hi sir I am in journey with 22416 from NDLS to BSB. Food that was served now is smelling and very dirty food quality. Kindly refund my all the money.. These vendor are spoiling the brand name of Vande Bharat express . pic.twitter.com/QFPWYIkk2k
— Akash Keshari (@akash24188) January 6, 2024
ವೀಡಿಯೊದಲ್ಲಿ ಪ್ರಯಾಣಿಕ ಆಹಾರದ ಪ್ಲೇಟ್ಗಳನ್ನು ತೆಗೆದುಕೊಂಡು ಹೋಗುವಂತೆ ರೈಲು ಸಿಬ್ಬಂದಿಗೆ ವಿನಂತಿಸುತ್ತಿರುವುದನ್ನು ಕಾಣಬಹುದು. ಮತ್ತೊಂದು ಕ್ಲಿಪ್ನಲ್ಲಿ ಊಟವನ್ನು ಕ್ಲೋಸ್-ಅಪ್ ನಲ್ಲಿ ತೋರಿಸಲಾಗಿದೆ. ಪೋಸ್ಟ್ನಲ್ಲಿ ಪ್ರಯಾಣಿಕ ಆರ್ಡರ್ ಮಾಡಿದ ಆಹಾರದ ಬಗ್ಗೆ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಭಾರತೀಯ ರೈಲ್ವೇಸ್, ವಂದೇ ಭಾರತ್ ಎಕ್ಸ್ಪ್ರೆಸ್ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಟ್ಯಾಗ್ ಮಾಡಿ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
"ಹಾಯ್ ಸರ್ ನಾನು NDLS ನಿಂದ BSB ಗೆ 22416 ರೈಲಿನ ಪ್ರಯಾಣದಲ್ಲಿದ್ದೇನೆ. ಈಗ ಬಡಿಸಿದ ಆಹಾರವು ವಾಸನೆ ಮತ್ತು ಅತ್ಯಂತ ಕೊಳಕು ಗುಣಮಟ್ಟದ್ದಾಗಿದೆ. ದಯವಿಟ್ಟು ನನ್ನ ಎಲ್ಲಾ ಹಣವನ್ನು ಮರುಪಾವತಿ ಮಾಡಿ. ಈ ಮಾರಾಟಗಾರರು ವಂದೇ ಭಾರತ್ ಎಕ್ಸ್ಪ್ರೆಸ್ನ ಬ್ರಾಂಡ್ ಹೆಸರನ್ನು ಹಾಳು ಮಾಡುತ್ತಿದ್ದಾರೆ" ಎಂದು ಕೇಶರಿ ಪೋಸ್ಟ್ನ ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಪೋಸ್ಟ್ ಅನ್ನು ಹಂಚಿಕೊಂಡಾಗಿನಿಂದ 3,000 ವೀಕ್ಷಣೆಗಳು ಮತ್ತು ಹಲವಾರು ಕಾಮೆಂಟ್ಗಳನ್ನು ಗಳಿಸಿದೆ. ಜೊತೆಗೆ ಈ ಕ್ಲಿಪ್ ರೈಲ್ವೇಸ್ ಸೇವೆಯ ಗಮನವನ್ನು ಸೆಳೆದಿದೆ. ಅವರು ದೂರು ದಾಖಲಿಸಲಾಗಿದೆ ಎಂದು ಪ್ರಯಾಣಿಕನಿಗೆ ಭರವಸೆ ನೀಡಿದ್ದಾರೆ. "ನಿಮ್ಮ ದೂರನ್ನು ರೈಲ್ಮದದ್ನಲ್ಲಿ ದಾಖಲಿಸಲಾಗಿದೆ. ದೂರು ಸಂಖ್ಯೆಯನ್ನು ನಿಮ್ಮ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ಕಳುಹಿಸಲಾಗಿದೆ'' ಎಂದು ರೈಲ್ವೆ ಅಧಿಕಾರಿಗಳು ಬರೆದಿದ್ದಾರೆ. ಹೆಚ್ಚಿನ ಸಹಾಯಕ್ಕಾಗಿ ಅವರು ತಮ್ಮ PNR ಅನ್ನು ನೇರ ಸಂದೇಶ (DM) ಮೂಲಕ ಹಂಚಿಕೊಳ್ಳಲು ಪ್ರಯಾಣಿಕನಿಗೆ ವಿನಂತಿಸಿದ್ದಾರೆ.
ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) ಕೂಡ ಪೋಸ್ಟ್ಗೆ ಪ್ರತಿಕ್ರಿಯಿಸಿ ಅನಾನುಕೂಲತೆಗಾಗಿ ಕ್ಷಮೆಯಾಚಿಸಿದೆ. "ಸರ್, ನೀವು ಅನುಭವಿಸಿದ ಅನುಭವಕ್ಕಾಗಿ ನಾವು ಪ್ರಾಮಾಣಿಕ ಕ್ಷಮೆಯಾಚಿಸುತ್ತೇವೆ. ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸೇವೆ ಒದಗಿಸುವವರಿಗೆ ಸೂಕ್ತ ದಂಡ ವಿಧಿಸಲಾಗಿದೆ. ಇದಲ್ಲದೆ ಅಜವಾಬ್ದಾರಿಯುತ ಸೇವಾ ಪೂರೈಕೆದಾರ ಸಿಬ್ಬಂದಿಯನ್ನು ತೆಗೆದುಹಾಕಲಾಗಿದೆ ಮತ್ತು ಪರವಾನಗಿದಾರರಿಗೆ ಸೂಚನೆ ನೀಡಲಾಗಿದೆ. ಆನ್-ಬೋರ್ಡ್ ಸೇವೆಗಳ ಮೇಲ್ವಿಚಾರಣೆಯನ್ನು ಮತ್ತಷ್ಟು ಬಲಪಡಿಸಲಾಗಿದೆ"ಎಂದು ಬರೆದಿದ್ದಾರೆ.
ಊಟದ ಕಳಪೆ ಗುಣಮಟ್ಟಕ್ಕಾಗಿ ಪರವಾನಗಿ ಪಡೆದ ಅಡುಗೆದಾರರಿಗೆ 25,000 ರೂ ದಂಡವನ್ನು ವಿಧಿಸಲಾಗಿದೆ ಎಂದು IRCTC ತಿಳಿಸಿದೆ. ಜೊತೆಗೆ "ಪರವಾನಗಿದಾರರಿಗೆ ಅವರ ಊಟ/ಮಿನಿ ಊಟದ ಗುಣಮಟ್ಟವನ್ನು ಸುಧಾರಿಸಲು ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಲಾಗಿದೆ" ಎಂದು IRCTC ಹೇಳಿದೆ.












Click it and Unblock the Notifications