ಅಲುಗಾಡುತ್ತಿದ್ದ ಕುಮಾರಸ್ವಾಮಿ ಸರ್ಕಾರಕ್ಕೆ ಟಾನಿಕ್ ಆದ ದೇವೇಗೌಡರ ಟೆಕ್ನಿಕ್
Recommended Video
ಮಾಜಿ ಪ್ರಧಾನಿ, ಜಾತ್ಯತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಅವರು ಮಾಡಿದ ಒಂದು ಬ್ಯೂಟಿಫುಲ್ ಟೆಕ್ನಿಕ್ಕು ಅಲುಗಾಡುತ್ತಿದ್ದ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಸ್ಥಿರವಾಗುವಂತೆ ಮಾಡಿದೆ.
ವಾಸ್ತವವಾಗಿ ಇಪ್ಪತ್ತು ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿದ್ದ ಜೆ. ಎಚ್. ಪಟೇಲರೂ ಈ ಟೆಕ್ನಿಕ್ಕನ್ನು ಅನುಸರಿಸಿದ್ದರು. ಆದರೆ ಅವರ ಟೆಕ್ನಿಕ್ಕು ನೇರವಾಗಿ ಜನತಾ ದಳವನ್ನೇ ಬಡಿದು ಹಾಕುತ್ತಿತ್ತು. ಆದರೆ ದೇವೇಗೌಡರು ಅನುಸರಿಸಿದ ಟೆಕ್ನಿಕ್ಕು ಇಂಪ್ಲಿಮೆಂಟ್ ಆಗಿದ್ದರೆ, ಕೈ ಪಾಳೆಯವೇ ಮುಳುಗಿಬಿಡುತ್ತಿತ್ತು.
ಸಿದ್ದರಾಮಯ್ಯ ವಿರುದ್ಧ ದೇವೇಗೌಡರ ಈ ಕಾರ್ಯತಂತ್ರ ಕೈಗೂಡುವುದೆ?
ಅಂದ ಹಾಗೆ ಅಲುಗಾಡುತ್ತಿದ್ದ ಕುಮಾರಸ್ವಾಮಿ ಸರ್ಕಾರಕ್ಕೆ ಟಾನಿಕ್ ಆದ ಆ ಟೆಕ್ನಿಕ್ ಏನು? ಅನ್ನುವ ಕುತೂಹಲ ಸಹಜ. ಅದೆಂದರೆ, ಪ್ರಸಕ್ತ ಬೆಳವಣಿಗೆಗಳ ಹಿಂದಿರುವುದು ಕಾಂಗ್ರೆಸ್ ನಾಯಕರೇ ಎಂಬುದು ಸ್ಪಷ್ಟವಾದ ಮೇಲೆ ದೇವೇಗೌಡರು ನೇರವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸಂಪರ್ಕಿಸಿದರು.
ರಾಜಕೀಯ ಬಿಕ್ಕಟ್ಟಿಗೆ ದೇವೇಗೌಡರು ಬಳಸಿದ ಪಾಶುಪತಾಸ್ತ್ರ ಯಶಸ್ವಿಯಾಯಿತೆ?
"ರಾಹುಲ್ ಜೀ, ನಾವು ಜಾತ್ಯತೀತ ಶಕ್ತಿಗಳು ಒಗ್ಗೂಡಲಿ. ಮುಂದಿನ ದಿನಗಳಲ್ಲಿ ನೀವು ಪ್ರಧಾನಿಯಾಗಲು ದಾರಿ ಮಾಡಿಕೊಡಲಿ ಎಂದು ಕಾಂಗ್ರೆಸ್ ಜತೆ ಕೈ ಜೋಡಿಸಿ ಕರ್ನಾಟಕದಲ್ಲಿ ಸರ್ಕಾರ ರಚಿಸಿದೆವು. ಆದರೆ ನಿಮ್ಮ ಪಕ್ಷದ ನಾಯಕರೇ ನಮ್ಮನ್ನು ಮುಗಿಸಲು ಹೊರಟಿದ್ದಾರೆ. ಹೀಗಾಗಿ ಒಂದು ಕೆಲಸ ಮಾಡೋಣ. ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಹೋಗಿ ಬಿಡೋಣ" ಎಂದರು.
ಗೌಡರ ಮಾತು ಕೇಳಿ ಕಂಗಾಲಾದ ರಾಹುಲ್
ದೇವೇಗೌಡರ ಮಾತು ಕೇಳಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಂಗಾಲಾಗಿದ್ದು ಅಸಹಜವೇನಲ್ಲ. ಯಾಕೆಂದರೆ ಒಂದು ಪಕ್ಷ ಸ್ವಯಂಬಲದ ಮೇಲೆ ಸರ್ಕಾರ ರಚಿಸಿದ್ದರೆ, ಮತ್ತದು ಸಚಿವ ಸಂಪುಟದಲ್ಲಿ ನಿರ್ಣಯ ಅಂಗೀಕರಿಸಿ, ವಿಧಾನಸಭೆಯನ್ನು ವಿಸರ್ಜಿಸುವ ತೀರ್ಮಾನಕ್ಕೆ ಬಂದರೆ ರಾಜ್ಯಪಾಲರು ಅದನ್ನು ಜಾರಿಗೆ ತರುವುದು ಅನಿವಾರ್ಯ.
ಆದರೆ ಇಲ್ಲಿರುವುದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ. ಹೀಗಾಗಿ ವಿಧಾನಸಭೆಯನ್ನು ವಿಸರ್ಜಿಸುವುದಾಗಿ ಸಚಿವ ಸಂಪುಟ ನಿರ್ಣಯ ಕೈಗೊಂಡರೂ ರಾಜ್ಯಪಾಲರು ಅದನ್ನು ಇಂಪ್ಲಿಮೆಂಟ್ ಮಾಡಬೇಕು ಎಂದೇನಿಲ್ಲ.
ನೀವು ಈ ನಿರ್ಣಯ ಕೈಗೊಂಡಿದ್ದರೂ ರಾಜ್ಯದಲ್ಲಿ ಬಹುದೊಡ್ಡ ಶಕ್ತಿಯಾಗಿ ರೂಪುಗೊಂಡ ಬಿಜೆಪಿ ಇದೆ. ಹೀಗಾಗಿ ಸರ್ಕಾರ ರಚಿಸಲು ಅದಕ್ಕೊಂದು ಆಪ್ಷನ್ ಕೊಡೋಣ ಎಂದವರು ಹೇಳಬಹುದು. ಬಹುದೇನು? ಖಂಡಿತ ಹೇಳಿಯೇ ಹೇಳುತ್ತಾರೆ.
ಅಮಾನತಾದರೆ ಬಿಜೆಪಿ ಮತ್ತೊಂದು ಅವಕಾಶ
ಇಂತಹ ಸಂದರ್ಭದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ಅವರು ಅವಕಾಶ ನೀಡಿ ನಿರ್ದಿಷ್ಟ ಅವಧಿಯೊಳಗೆ ಬಹುಮತ ಸಾಬೀತುಪಡಿಸಿ ಎಂದು ಹೇಳಿದರೆ ಸಹಜವಾಗಿಯೇ ಆ ಸಂದರ್ಭದಲ್ಲಿ ಆಪರೇಷನ್ ಕಮಲ ಕಾರ್ಯಾಚರಣೆ ಮಾಡಲು ಯಡಿಯೂರಪ್ಪ ಅವರಿಗೆ ಅವಕಾಶ ಸಿಗುತ್ತದೆ.
ಅಂತಹ ಅವಕಾಶವನ್ನು ಕಾಂಗ್ರೆಸ್ಸೇ ಮಾಡಿಕೊಟ್ಟಂತಾಗುತ್ತದೆ. ಮತ್ತು ವಿಧಾನಸಭೆ ವಿಸರ್ಜನೆಯಾದರೆ ಮಧ್ಯಂತರ ಚುನಾವಣೆಗೆ ಹೋಗುವುದು ಹೇಗೆ? ಎಂಬ ಆತಂಕದಲ್ಲಿರುವ ಇನ್ನಿತರ ಪಕ್ಷಗಳ ಹಲ ಶಾಸಕರು ಬಿಜೆಪಿಯ ಗಾಳಕ್ಕೆ ನಿರಾಯಾಸವಾಗಿ ಸಿಲುಕಿಕೊಳ್ಳುತ್ತಾರೆ.
ಈ ಸಂದರ್ಭದಲ್ಲಿ ಅವರು ಮಾಡಬಹುದಾದ ಕೆಲಸಗಳು ಎರಡು. ಒಂದು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಬಹುಮತ ಸಾಬೀತುಪಡಿಸುವ ಸಂದರ್ಭದಲ್ಲಿ ಶಾಸನ ಸಭೆಗೆ ಗೈರು ಹಾಜರಾಗಬಹುದು. ಇಲ್ಲವೇ ಚುನಾವಣೆಯನ್ನು ಎದುರಿಸುವುದೇ ಆದರೆ ಅದಕ್ಕೆ ಅಗತ್ಯವಾದ ಶಸ್ತ್ರಾಸ್ತ್ರಗಳನ್ನು ನಮಗೆ ಒದಗಿಸಿ ಎಂಬ ಡೀಲಿನೊಂದಿಗೆ ಶಾಸಕ ಸ್ಥಾನಕ್ಕೇ ರಾಜೀನಾಮೆ ಕೊಡಬಹುದು.
ಲೋಕಸಭೆ ಚುನಾವಣೆ ನಂತರ ಯಡಿಯೂರಪ್ಪ ಮೂಲೆಗುಂಪಾಗಲಿದ್ದಾರಾ?
ಜೆಡಿಎಸ್ ಪವರ್ ಹೆಚ್ಚಾಗಿದೆ, ಕಾಂಗ್ರೆಸ್ಸಿನದು ಕುಗ್ಗಿದೆ
ಈ ಪೈಕಿ ಮೊದಲನೆಯ ಬೆಳವಣಿಗೆ ನಡೆದರೆ ಯಡಿಯೂರಪ್ಪ ನೇತೃತ್ವದಲ್ಲಿ ಅಲ್ಪಮತದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಬಹುದು. ಮತ್ತದನ್ನು ತಡೆಯಲು ಕಾಂಗ್ರೆಸ್ ಹೈಕಮಾಂಡ್ ಕೂಡಾ ಹಿಂಜರಿಯುತ್ತದೆ. ಯಾಕೆಂದರೆ ಬಹುಮತಕ್ಕೆ ಹಾಜರಾಗಿ ಎಂದು ವಿಪ್ ಜಾರಿಗೊಳಿಸಿದರೆ ಶಾಸಕರನೇಕರು ರಾಜೀನಾಮೆ ನೀಡಿ ಕೈ ಪಾಳೆಯವೇ ಛಿದ್ರವಾಗಬಹುದು.
ಹೀಗಾಗಿ ಪಕ್ಷ ಛಿದ್ರವಾಗುವುದಕ್ಕಿಂತ ಬಹುಮತ ಯಾಚನೆಯ ಸಂದರ್ಭದಲ್ಲಿ ಶಾಸಕರು ಗೈರು ಹಾಜರಾದರೂ ನೋಡಿಕೊಂಡು ಮೌನವಾಗಿರಲು ಕಾಂಗ್ರೆಸ್ ನಿರ್ಧರಿಸುವುದು ಅನಿವಾರ್ಯ. ಆದರೆ ಈ ರೀತಿ ಬಿಜೆಪಿ ಅಲ್ಪಮತದ ಸರ್ಕಾರ ರಚಿಸಿದರೆ ಹಾನಿಯಾಗುವುದು ಕಾಂಗ್ರೆಸ್ ಪಕ್ಷಕ್ಕೇ ವಿನಃ ಜೆಡಿಎಸ್ ಗಲ್ಲ.
ಯಾಕೆಂದರೆ ಅಸ್ತಿತ್ವಕ್ಕೆ ಬಂದ ಕೆಲವು ತಿಂಗಳಲ್ಲಿ ಕುಮಾರಸ್ವಾಮಿ ಸರ್ಕಾರ ರೈತರ, ಬಡವರ ಪರವಾಗಿ ಹಲ ನಿರ್ಣಯಗಳನ್ನು ಕೈಗೊಂಡಿದೆ. ಹೀಗಾಗಿ ಸದ್ಯದ ಸ್ಥಿತಿಯಲ್ಲಿ ಅದರ ಪವರ್ ಸ್ವಲ್ಪ ಮಟ್ಟಿಗಾದರೂ ಹೆಚ್ಚಾಗಿದೆ. ಆದರೆ ಕಾಂಗ್ರೆಸ್ ಪಕ್ಷದ ಸ್ಥಿತಿ ಹಾಗಿಲ್ಲ.
ಸಿದ್ದರಾಮಯ್ಯ ವಿರುದ್ಧ ನಿಂತಿದ್ದಾರೆ ಧುರೀಣರು
ಯಾಕೆಂದರೆ ವಿಧಾನಸಭೆ ಚುನಾವಣೆ ನಡೆಯುವ ಕಾಲದಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದರು. ಹೀಗಾಗಿ ಪಕ್ಷವನ್ನು ಮುನ್ನಡೆಸುವ ಶಸ್ತ್ರಾಸ್ತ್ರಗಳೂ ಅವರ ಕೈಲಿದ್ದವು. ಆದರೆ ಈಗ ರಾಜ್ಯ ಕಾಂಗ್ರೆಸ್ ಒಡೆದ ಮನೆ. ಅಲ್ಲೀಗ ಸಿದ್ದರಾಮಯ್ಯ ಅವರ ಪಾಳೆಯದ ವಿರುದ್ದ ಡಿಸಿಎಂ ಡಾ. ಜಿ ಪರಮೇಶ್ವರ, ಐಟಿ ಮತ್ತು ಇಡಿ ದಾಳಿಗೆ ತುತ್ತಾಗಿರುವ ಡಿಕೆ ಶಿವಕುಮಾರ್, ಸಂಪುಟದಲ್ಲಿ ಸ್ಥಾನ ಸಿಗದೆ ವಿಲಿವಿಲಿ ಒದ್ದಾಡುತ್ತಿರುವ ಎಂ.ಬಿ. ಪಾಟೀಲ ಸೇರಿದಂತೆ ಹಲ ನಾಯಕರು ಇರುವ ಪಾಳೆಯ ರೆಡಿಯಾಗಿ ಕುಳಿತಿದೆ. ಹೀಗಾಗಿ ಈ ಪಾಳೆಯಗಳು ಪರಸ್ಪರ ಬಡಿದಾಟಕ್ಕಿಳಿದರೂ ಸಾಕು, ಅದರ ಹಾನಿ ಕಾಂಗ್ರೆಸ್ ಪಕ್ಷಕ್ಕಾಗುತ್ತದೆ.
ಒಂದು ಬೆಳವಣಿಗೆ ಹೀಗೆ ನಡೆಯಬಹುದಾದರೆ, ಮತ್ತೊಂದು ಬೆಳವಣಿಗೆ ಹೀಗೂ ನಡೆಯಬಹುದು. ತಾವು ಸಮ್ಮಿಶ್ರ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ವಾಪಸ್ ಪಡೆಯುವುದಾಗಿ ಜೆಡಿಎಸ್ ಹೇಳಿದರೂ, ಅಥವಾ ಕಾಂಗ್ರೆಸ್ ಹೇಳಿದರೂ ರಾಜ್ಯಪಾಲ ವಾಜೂಭಾಯಿ ವಾಲಾ ಅವರು ವಿಧಾನಸಭೆಯನ್ನು ಅಮಾನತಿನಲ್ಲಿಡುತ್ತಾರೆ.
ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಿಎಂ ಮೇಲೆ ದೂರುಗಳ ಸುರಿಮಳೆ
ದೇವೇಗೌಡ ವಿಥ್ ನರೇಂದ್ರ ಮೋದಿ
ಹೀಗೆ ವಿಧಾನಸಭೆಯನ್ನು ಅಮಾನತಿನಲ್ಲಿಡುವ ಮೂಲಕ ಯಥಾ ಪ್ರಕಾರ ಸರ್ಕಾರ ರಚಿಸಲು ಅತ್ಯಂತ ದೊಡ್ಡ ಪಕ್ಷವಾದ ಬಿಜೆಪಿಯನ್ನೇ ಆಹ್ವಾನಿಸುತ್ತಾರೆ. ಹೀಗೆ ಮಾಡಿದರೂ ಕಷ್ಟ ಕಾಂಗ್ರೆಸ್ ಪಕ್ಷಕ್ಕೇ ಹೊರತು ಜೆಡಿಎಸ್ ಗಲ್ಲ. ಯಾಕೆಂದರೆ ಹೀಗೆ ತನಗೆ ಸರ್ಕಾರ ರಚಿಸಲು ಅನುವು ಮಾಡಿಕೊಟ್ಟ ಜೆಡಿಎಸ್ ಬಗ್ಗೆ ಬಿಜೆಪಿಯ ನಾಯಕರಿಗಿರುವ ವಿಶ್ವಾಸ ಹೆಚ್ಚಾಗುತ್ತದೆಯೇ ಹೊರತು, ಅದನ್ನು ನಿರ್ನಾಮ ಮಾಡಬೇಕು ಎಂಬ ಕಾಂಕ್ಷೆ ಹುಟ್ಟುವುದಿಲ್ಲ.
ಯಾಕೆಂದರೆ ಅಂತಿಮವಾಗಿ ಅದಕ್ಕೆ ಕಾಂಗ್ರೆಸ್ ಪಕ್ಷವನ್ನು ಮೂಲೋತ್ಪಾಟನೆ ಮಾಡುವ ಗುರಿ ಇದೆಯೇ ಹೊರತು ಜೆಡಿಎಸ್ ಪಕ್ಷವನ್ನಲ್ಲ. ಕರ್ನಾಟಕದಲ್ಲಿ ಯಡಿಯೂರಪ್ಪ ವರ್ಸಸ್ ದೇವೇಗೌಡ ಫ್ಯಾಮಿಲಿ ಎಂಬ ಸ್ಟೋರಿ ಇರಬಹುದು. ಆದರೆ ಮೇಲ್ಮಟ್ಟದಲ್ಲಿ ದೇವೇಗೌಡ ವಿಥ್ ನರೇಂದ್ರ ಮೋದಿ ಸ್ಟೋರಿ ಇನ್ನೂ ಜೀವಂತವಾಗಿಯೇ ಇದೆ.
ಬೇಡಾ ಗೌಡಾಜೀ ಹಾಗೆ ಮಾಡಬೇಡಿ
ಈ ಎಲ್ಲ ಅಂಶಗಳು ರಾಹುಲ್ ಗಾಂಧಿ ಅವರಿಗೆ ಗೊತ್ತು. ಹೀಗಾಗಿ ಅವರು, "ಬೇಡ ಗೌಡಾಜಿ, ನೀವು ಹಿರಿಯರು. ಮುಂದಿನ ಸಂಸತ್ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟದ ವಿರುದ್ದ ಜಾತ್ಯತೀತ ಶಕ್ತಿಗಳು ಗೆಲ್ಲಬೇಕೆಂದರೆ ನಿಮ್ಮ ಆಶೀರ್ವಾದವೂ ಇರಬೇಕು" ಎಂದು ಬಿಟ್ಟರು.
ಅಷ್ಟೇ ಅಲ್ಲ, ಈ ಹೊತ್ತಿಗಾಗಲೇ ಕುಮಾರಸ್ವಾಮಿ ಸರ್ಕಾರವನ್ನು ಅಲುಗಾಡಿಸುತ್ತಿದ್ದ ಶಕ್ತಿಗಳ ಜತೆ ಮಾತನಾಡಿ, ಐದು ವರ್ಷಗಳ ಕಾಲ ನೀವು ಅಧಿಕಾರದಿಂದ ಅಲುಗಾಡದಂತೆ ಮಾಡಿದ್ದೆ. ಅದಕ್ಕಾದರೂ ಸದ್ಯದ ಪರಿಸ್ಥಿತಿಯಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗಿ. ಇಲ್ಲದಿದ್ದರೆ ನಿಮ್ಮ ಪ್ರತಿಷ್ಠೆ, ನಿಮಗೇ ಅಧಿಕಾರ ನೀಡಿದ್ದ ಪಕ್ಷದ ಪ್ರತಿಷ್ಠೆಯನ್ನು ಮಣ್ಣು ಪಾಲು ಮಾಡುತ್ತದೆ ಎಂದು ಮನ ಕಲಕುವಂತೆ ವಿವರಿಸಿದರು.
ಅಲ್ಲಿಗೆ ಸತತವಾಗಿ ಅಲುಗಾಡುತ್ತಿದ್ದ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಏಕಾಏಕಿ ಸ್ಥಿರವಾಯಿತು. ಅಂದ ಹಾಗೆ ರಾಜಕೀಯದಲ್ಲಿ ಸ್ಥಿರತೆ ಎಂಬುದು ಶಾಶ್ವತವೇನಲ್ಲ. ಆದರೆ ದೇವೇಗೌಡರ ಚಾಣಾಕ್ಷ ನಡೆ ಸರ್ಕಾರಕ್ಕೆ ತಾತ್ಕಾಲಿಕ ಸ್ಥಿರತೆಯನ್ನಾದರೂ ತಂದುಕೊಟ್ಟಿದ್ದು ನಿಜ.
ಪಟೇಲರ ವಿರುದ್ಧ ಪಾಟೀಲರನ್ನು ಎತ್ತಿಕಟ್ಟಿದ್ದ ಗೌಡ, ಸಿದ್ದು
ಬರೋಬ್ಬರಿ ಇಪ್ಪತ್ತು ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿದ್ದ ಜೆಎಚ್ ಪಟೇಲರು ಕೂಡಾ, ಇಂತಹದೇ ಟೆಕ್ನಿಕ್ಕು ಅನುಸರಿಸಿದ್ದರು. ಆ ಸಂದರ್ಭದಲ್ಲಿ ಜನತಾ ದಳ ಸರ್ಕಾರದಲ್ಲಿನ ಸಂಘರ್ಷಕ್ಕೆ ಕಾರಣರಾಗಿದ್ದವರು ಇದೇ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.
ಅವತ್ತು ಇವರಿಬ್ಬರೂ ಸೇರಿ ಪಕ್ಷದ ಹಿರಿಯ ನಾಯಕ ವೈಜನಾಥ ಪಾಟೀಲರನ್ನು ಎತ್ತಿ ಕಟ್ಟಿ ಜನತಾದಳ ಶಾಸಕಾಂಗ ಸಭೆಯಲ್ಲಿ ಪಟೇಲರ ವಿರುದ್ದ ದ್ವನಿ ಏಳುವಂತೆ ಮಾಡಿದರು. ಹೇಗಿದ್ದರೂ ದೇವೇಗೌಡ ಮತ್ತು ಸಿದ್ದರಾಮಯ್ಯ ಅವರ ಬೆಂಬಲವಿತ್ತಲ್ಲ? ಹಾಗಂತಲೇ ಅವತ್ತು ಪಕ್ಷದ ಶಾಸಕಾಂಗ ಸಭೆ ಆರಂಭವಾಗುತ್ತಿದ್ದಂತೆಯೇ ವೈಜನಾಥ ಪಾಟೀಲರು ಮುಖ್ಯಮಂತ್ರಿಗಳ ವಿರುದ್ದ ತಿರುಗಿ ಬಿದ್ದರು.
ಈ ಪಟೇಲರು ಮುಖ್ಯಮಂತ್ರಿ ಸ್ಥಾನದಲ್ಲಿರಬಾರದು. ಇವರು ಮದ್ಯ-ಮಾನಿನಿಯರ ಕುರಿತಂತೆ ಆಡಿದ ಮಾತು ರಾಜ್ಯದ ಜನರ ಮುಂದೆ ನಾವು ತಲೆ ತಗ್ಗಿಸುವಂತೆ ಮಾಡಿದೆ. ಹೀಗಾಗಿ ತಕ್ಷಣವೇ ಅವರು ತಮ್ಮ ಸ್ಥಾನ ತೊರೆಯಬೇಕು ಎಂದು ವೈಜನಾಥ್ ಪಾಟೀಲ್ ಅಬ್ಬರಿಸಿದರು.
ಇದೇ ಟೆಕ್ನಿಕ್ ಬಳಸಿದ್ದ ಜೆಎಚ್ ಪಟೇಲರು
ಆದರೆ ವೈಜನಾಥ್ ಪಾಟೀಲರ ಆರ್ಭಟಕ್ಕೆ ಪಟೇಲರು ಸ್ವಲ್ಪವೂ ಹೆದರಲಿಲ್ಲ. ಬದಲಿಗೆ, ರೀ ವೈಜನಾಥ್, ಒಂದು ಕೆಲಸ ಮಾಡೋಣ, ಹೇಗಿದ್ದರೂ ಮಂತ್ರಿಗಳೆಲ್ಲ ಇಲ್ಲೇ ಇದ್ದಾರೆ. ಇವತ್ತೇ ಒಂದು ಸಚಿವ ಸಂಪುಟ ಸಭೆ ಸೇರಿ ವಿಧಾನಸಭೆಯನ್ನು ವಿಸರ್ಜಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡುತ್ತೇವೆ. ಮಧ್ಯಂತರ ಚುನಾವಣೆಗೆ ಅಣಿಯಾಗಿ ಎಂದು ಬಿಟ್ಟರು.
ಯಾವಾಗ ಪಟೇಲರು ಈ ಲೆವೆಲ್ಲಿನಲ್ಲಿ ತಿರುಗೇಟು ಹೊಡೆದರೋ? ಆಗ ಇದೇ ದೇವೇಗೌಡ ಮತ್ತಿತರ ನಾಯಕರೆಲ್ಲ ಸೇರಿ, ಅಯ್ಯೋ, ವೈಜನಾಥ್ ಪಾಟೀಲರು ಹಾಗೆ ಹೇಳಿದರು ಎಂದು ವಿಧಾನಸಭೆಯನ್ನು ವಿಸರ್ಜನೆ ಮಾಡುವ ಮಟ್ಟಕ್ಕೆ ಹೋಗುವುದೇ? ಏನೋ ಒಂದು ಮಾತು ಬರುತ್ತದೆ, ಹೋಗುತ್ತದೆ ಎಂದು ಹೇಳಿದರು. ಅಲ್ಲಿಗೆ ಇಡೀ ಎಪಿಸೋಡು ತಣ್ಣಗಾಯಿತು.
ಇವತ್ತು ದೇವೇಗೌಡ ಕೂಡಾ ಖುದ್ದಾಗಿ ಪಟೇಲರ ಮಾದರಿಯಲ್ಲೇ ಕೈ ಪಾಳೆಯಕ್ಕೆ ಗುನ್ನ ಇಟ್ಟಿದ್ದಾರೆ. ಗುನ್ನ ಇಟ್ಟ ರೀತಿಯಲ್ಲಿ ವ್ಯತ್ಯಾಸವಿದೆಯಾದರೂ ಈಗ ಕಾಂಗ್ರೆಸ್ ಪಕ್ಷಕ್ಕೇ ಹೆಚ್ಚಿನ ಆತಂಕ ಇರುವುದು. ಪರಿಣಾಮ? ರಾಜ್ಯ ರಾಜಕೀಯದಲ್ಲಿ ಕಾಣಿಸಿಕೊಂಡಿದ್ದ ಸಂಘರ್ಷ ತಣ್ಣಗಾಗಿದೆ. ಉಭಯ ಪಕ್ಷಗಳ ಸಂಘರ್ಷದ ಮಧ್ಯೆ ಲಾಭ ಪಡೆಯಲು ಹವಣಿಸಿದ್ದ ಬಿಜೆಪಿಯ ಯಡಿಯೂರಪ್ಪ ಕೂಡಾ ಮೌನಕ್ಕೆ ಶರಣಾಗಿದ್ದಾರೆ.