Explainer: ಕೊರೊನಾವೈರಸ್ ಅಲೆಗಳ ಆಯುಷ್ಯದ ಮೇಲೆ ಭಾರತದ ಭವಿಷ್ಯ!?
ನವದೆಹಲಿ, ಏಪ್ರಿಲ್ 16: ಕೊರೊನಾವೈರಸ್ ನಿಯಂತ್ರಣಕ್ಕೆ ಬಂತು. ಜಗತ್ತು ಇನ್ನೇನು ನಿರಾಳವಾಯಿತು. ಜನರು ಹೀಗೆ ಅಂದುಕೊಳ್ಳುವುದರಲ್ಲೇ ಅಲೆಗಳ ಆತಂಕ ಶುರುವಾಗಿದೆ. ಅಮೆರಿಕಾ, ಬ್ರೆಜಿಲ್, ಇಂಗ್ಲೆಂಡ್ ಸೇರಿದಂತೆ ದೈತ್ಯರಾಷ್ಟ್ರಗಳಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿದ ಕೊರೊನಾವೈರಸ್ ಅಲೆ ಭಾರತದಲ್ಲಿ ಭಯ ಹುಟ್ಟಿಸುತ್ತಿದೆ.
2020ರ ಮಾರ್ಚ್ ತಿಂಗಳಿನಲ್ಲಿ ಕೊರೊನಾವೈರಸ್ ಸೋಂಕಿನ ಭೀತಿಯಲ್ಲಿ ಇಡೀ ಭಾರತವೇ ಲಾಕ್ ಆಗಿತ್ತು. ಅದೇ ಮಾರ್ಚ್ ತಿಂಗಳು ಮರುಕಳಿಸಿದೆ. ಏಪ್ರಿಲ್ ವೇಳೆಗೆ ಕೊರೊನಾವೈರಸ್ 2ನೇ ಅಲೆಯಿಂದ ಭಾರತದಲ್ಲಿ ಪರಿಸ್ಥಿತಿ ಮೊದಲಿಗಿಂತಲೂ ಬಿಗಡಾಯಿಸಿದೆ.
ಭಾರತದಲ್ಲಿ ರಾಜಕೀಯ ನಾಯಕರ ಬೆನ್ನೇರಿದ ಕೊರೊನಾವೈರಸ್
ಈ ಹಿಂದೆಂದೂ ಪತ್ತೆಯಾಗಷ್ಟು ದಾಖಲೆ ಪ್ರಮಾಣದಲ್ಲಿ ಕೊರೊನಾವೈರಸ್ ಹೊಸ ಪ್ರಕರಣಗಳು ವರದಿಯಾಗುತ್ತಿವೆ. ವೈದ್ಯಕೀಯ ಸೌಲಭ್ಯಗಳಿವೆ, ಲಸಿಕೆಯೂ ಇದೆ ಎನ್ನುತ್ತಿರುವ ಕೇಂದ್ರ ಸರ್ಕಾರ ಈ ಬಾರಿ ಲಾಕ್ಡೌನ್ ಜಾರಿಗೊಳಿಸಲ್ಲ ಎಂದು ಹೇಳುತ್ತಿದೆ. ಇದರ ಮಧ್ಯೆ ಎರಡನೇ ಅಲೆ, ಮೂರನೇ ಅಲೆಗಳು ಮೊದಲಿಗಿಂತಲೂ ಅಪಾಯಕಾರಿ ಎಂದು ಹೇಳಲಾಗುತ್ತಿದೆ. ಈ ಕೊರೊನಾ ಅಲೆಗಳ ಬಗ್ಗೆ ತಜ್ಞರು ಹೇಳುವುದೇನು. ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಭಾರತದ ಮುಂದಿರುವ ಮಾರ್ಗವೇನು. ಆರ್ಥಿಕತೆಗೆ ಹೊಡೆತ ನೀಡದೇ ಲಾಕ್ಡೌನ್ ಜಾರಿಗೊಳಿಸುವುದಕ್ಕೆ ಸಾಧ್ಯವೇ. ಭಾರತೀಯರನ್ನು ಈ ಅಲೆಗಳ ಹೊಡೆತದಿಂದ ಕಾಪಾಡುವುದು ಹೇಗೆ. ಈ ಕುರಿತು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿಯ ನಿರ್ದೇಶಕ ಡಾ. ಶೇಖರ್ ಮಂಡೆ ಅವರು ನೀಡಿರುವ ಉತ್ತರಗಳ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.
ಲಾಕ್ಡೌನ್ ಜಾರಿಗೊಳಿಸಿದರೆ ಕೊರೊನಾ ನಿಯಂತ್ರಿಸಬಹುದೇ?
ಪ್ರಶ್ನೆ: ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಸಾರ್ವಜನಿಕರು ಲಾಕ್ಡೌನ್ ಜಾರಿಗೊಳಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಲಾಕ್ಡೌನ್ ಜಾರಿಗೊಳಿಸಿದರೆ ಕೊರೊನಾವೈರಸ್ ನಿಯಂತ್ರಿಸುವುದಕ್ಕೆ ಸಾಧ್ಯ ಎಂದು ಎನಿಸುತ್ತದೆಯೇ?.
ತಜ್ಞರ ಉತ್ತರ: ಅದು ಸಾಕ್ಷಿ ಸಮೇತವಾಗಿ ಸಾಬೀತಾಗಿದೆ. ಲಾಕ್ಡೌನ್ ಸಾರ್ವಜನಿಕರನ್ನು ಮನೆಯಲ್ಲೇ ಇರುವಂತೆ ಮಾಡುತ್ತದೆ ಎಂಬುದನ್ನು ನೀವು ಕಳೆದ ವರ್ಷ ಭಾರತ ಲಾಕ್ಡೌನ್ ಸಂದರ್ಭದಲ್ಲಿ ನೋಡಿದ್ದೀರ. ಆದರೆ ಈ ಲಾಕ್ಡೌನ್ ಜಾರಿಗೊಳಿಸಿದ ದೇಶದ ಆರ್ಥಿಕತೆಗೆ ಭಾರೀ ಹೊಡೆತ ಬೀಳಲಿದೆ. ಅದನ್ನು ಗಮನದಲ್ಲಿ ಇಟ್ಟುಕೊಂಡು ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳಬೇಕಾಗುತ್ತದೆ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಈ ಪರಿಸ್ಥಿತಿಯನ್ನು ನಾವು ನೋಡಿದ್ದೇನೆ. ಆ ರಾಷ್ಟ್ರಗಳಲ್ಲಿ ಕೊರೊನಾವೈರಸ್ ನಿಯಂತ್ರಣ ಮತ್ತು ಆರ್ಥಕತೆಯನ್ನು ಸರಿದೂಗಿಸುವ ಪ್ರಯತ್ನದಲ್ಲಿ ತೊಡಗಿವೆ. ಆದ್ದರಿಂದ ಅತಿಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾದ ಪ್ರದೇಶಗಳಲ್ಲಿ ಜನರು ಸ್ವಯಂಪ್ರೇರಿತರಾಗಿ ಐಸೋಲೇಟ್ ಆಗುವುದು ಉತ್ತಮ.
ದೇಶದಲ್ಲಿ ಲಾಕ್ಡೌನ್ ಜಾರಿಗೊಳಿಸುವ ಸಾಧ್ಯತೆಯಿದೆಯೇ?
ಪ್ರಶ್ನೆ: ಕಳೆದ ವರ್ಷದ ಲಾಕ್ಡೌನ್ ದೇಶದ ಆರ್ಥಿಕತೆ ಸಂಪೂರ್ಣ ಹೊಡೆತ ಕೊಟ್ಟಿತ್ತು. ಸಣ್ಣ ಉದ್ಯಮಗಳು ಸರ್ವನಾಶವಾಗಿ ಸಾವಿರಾರು ಮಂದಿ ಉದ್ಯೋಗ ಕಳೆದುಕೊಂಡಿದ್ದರು. ಹೀಗಿರುವಾಗ ಭಾರತದಲ್ಲಿ ಮತ್ತೊಮ್ಮೆ ಲಾಕ್ಡೌನ್ ಜಾರಿಗೊಳಿಸಲಾಗುತ್ತದೆಯೇ?.
ತಜ್ಞರ ಉತ್ತರ: ಯಾವುದೇ ರೀತಿ ಲಾಕ್ಡೌನ್ ಜಾರಿಗೊಳಿಸಿದರೂ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ ಮುಂಬೈನಂತಾ ನಗರವನ್ನು ಲಾಕ್ಡೌನ್ ಮಾಡಿದರೆ ಅದು ಇಡೀ ದೇಶದ ಆರ್ಥಿಕತೆ ಮೇಲೆ ಪ್ರಭಾವ ಬೀರುತ್ತದೆ. ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಆಧಾರದ ಮೇಲೆ ಇಡೀ ದೇಶ ಅಥವಾ ಇಡೀ ರಾಜ್ಯದಲ್ಲಿ ಲಾಕ್ಡೌನ್ ಜಾರಿಗೊಳಿಸುವ ಅಗತ್ಯವಿಲ್ಲ. ಬದಲಿಗೆ ಆಯಾ ಪ್ರದೇಶಗಳಲ್ಲಿ ಕಠಿಣ ನಿಯಮ ಮತ್ತು ನಿರ್ಬಂಧಗಳನ್ನು ಹೇರಬೇಕಿದೆ.
Important News: ಕೊರೊನಾವೈರಸ್ ಲಸಿಕೆ ಶಕ್ತಿ ಎಷ್ಟು ದಿನ ಇರುತ್ತೆ?
ಲಾಕ್ಡೌನ್ ಜಾರಿಯಿಂದ ಸೋಂಕು ಹರಡುವಿಕೆಯಲ್ಲಿ ವಿಳಂಬ
ಪ್ರಶ್ನೆ: ಅಸಲಿಗೆ ಲಾಕ್ಡೌನ್ ಜಾರಿಗೊಳಿಸಿದರೆ ಕೊರೊನಾವೈರಸ್ ಎಲ್ಲಿಯೂ ಹೋಗುವುದಿಲ್ಲ. ಆದ್ದರಿಂದ ಲಾಕ್ಡೌನ್ ಜಾರಿಗೊಳಿಸಿದರೆ ನಾವು ಸೋಂಕು ಹರಡುವಿಕೆ ವಿಳಂಬಗೊಳಿಸಬಹುದಲ್ಲವೇ?
ತಜ್ಞರ ಉತ್ತರ: ಕೊರೊನಾವೈರಸ್ ಸೋಂಕು ಹರಡುವಿಕೆಯ ಸರಪಳಿಯನ್ನು ತುಂಡರಿಸುವುದೇ ಲಾಕ್ಡೌನ್ ಹಿಂದಿನ ಉದ್ದೇಶವಾಗಿದೆ. ಲಾಕ್ಡೌನ್ ಜಾರಿಗೊಳಿಸುವುದರಿಂದ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತಿರುವ ಸೋಂಕಿನ ಸರಪಳಿಯನ್ನು ಕತ್ತರಿಸಲು ಸಾಧ್ಯವಾಗುತ್ತದೆ. ಒಂದು ಹಂತದಲ್ಲಿ ನಾವು ಸೋಂಕು ಹರಡುವಿಕೆ ಮೇಲೆ ಲಾಕ್ಡೌನ್ ಜಾರಿಯಿಂದ ಹಿಡಿತವನ್ನು ಸಾಧಿಸಬಹುದು.
ಎಲ್ಲಿ ನಿಮಗೆ ಕೊವಿಡ್-19 ಪ್ರಕರಣ ಪತ್ತೆಯಾಗುತ್ತದೆಯೋ ತಕ್ಷಣ ಅಲ್ಲಿ ತಪಾಸಣೆ, ಪ್ರಾಥಮಿಕ ಸಂಪರ್ಕಿತರ ಪತ್ತೆ ಮತ್ತು ಐಸೋಲೇಟ್ ಪ್ರಕ್ರಿಯೆ ನಡೆಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸೋಂಕು ಹರಡುವಿಯನ್ನು ನಿಯಂತ್ರಿಸಲು ಸಾಧ್ಯವಾಯಿತು. ಈಗ ಸೋಂಕಿನ ಸರಪಳಿಯನ್ನು ಕತ್ತರಿಸಲು ಸಂಯೋಜಿತ ಲೆಕ್ಕಾಚಾರ ಮತ್ತು ಲಸಿಕೆ ವಿತರಣೆಯ ಅಗತ್ಯವಿದೆ.
ನೈಟ್ ಕರ್ಫ್ಯೂ ಹಿಂದಿನ ತಾರ್ಕಿಕತೆಯೇನು?
ಪ್ರಶ್ನೆ: ರಾತ್ರಿ ನಿಷೇಧಾಜ್ಞೆ ಜಾರಿಗೊಳಿಸಿರುವುದರ ಹಿಂದಿನ ತಾರ್ಕಿಕತೆಯೇನು?
ತಜ್ಞರ ಉತ್ತರ: ಕೊರೊನಾವೈರಸ್ ಸೋಂಕು ಉಸಿರಾಟದ ಹನಿಗಳಿಂದ ಹರಡುತ್ತದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಮುಚ್ಚಿದ ಪ್ರದೇಶ ಮತ್ತು ಗಾಳಿ ಇಲ್ಲದ ಸ್ಥಳಗಳಲ್ಲಿ ಹೆಚ್ಚು ಕಾಲದವರೆಗೂ ಈ ಉಸಿರಾಟದ ಹನಿಯು ಇರುತ್ತದೆ. ಅದೇ ತೆರೆದ ಪ್ರದೇಶಗಳಲ್ಲಿ ಹಗಲು ಹೊತ್ತಿನಲ್ಲಿ ಬಿಸಿಲು ಮತ್ತು ಗಾಳಿಯ ಇರುವುದರಿಂದ ಉಸಿರಾಟದ ಹನಿಗಳು ಬೇಗನೇ ಕರಗಿ ಹೋಗುತ್ತವೆ. ರಾತ್ರಿ ಹೊತ್ತಿನಲ್ಲಿ ಅದು ಹೀಗೆ ಆಗುವುದಿಲ್ಲ.
ಕಳೆದ ಡಿಸೆಂಬರ್-ಜನವರಿ ವೇಳೆಗೆ ಕೊರೊನಾವೈರಸ್ ಒಂದು ಹಂತದಲ್ಲಿ ನಿಯಂತ್ರಣಕ್ಕೆ ಬಂದಿತ್ತು. ಆದರೆ ಈ ಸಮಯದಲ್ಲಿ ಬಾರ್, ರೆಸ್ಟೋರೆಂಟ್, ಪಬ್ ಹಾಗೂ ಹೋಟೆಲ್ ರೀತಿಯ ಮುಚ್ಚಿದ ಪ್ರದೇಶಗಳಲ್ಲಿ ಪಾರ್ಟಿ ಮಾಡುವುದಕ್ಕೆ ಅನುಮತಿ ನೀಡಲಾಗಿತ್ತು. ಅದರಿಂದಾಗಿ ಒಬ್ಬರಿಂದ ಒಬ್ಬರಿಗೆ ಸೋಂಕು ಕ್ಷಿಪ್ರಗತಿಯಲ್ಲಿ ಹರಡುವುದಕ್ಕೆ ಸಾಧ್ಯವಾಯಿತು. ಅಂದರೆ ಮುಚ್ಚಿದ ಮತ್ತು ಬಿಸಿಲು ಇಲ್ಲದ (ಕತ್ತಲು ಸಮಯದಲ್ಲಿ) ಪ್ರದೇಶದಲ್ಲಿ ಸೋಂಕು ಹೆಚ್ಚಾಗಿ ಹರಡುವ ಅಪಾಯವಿರುತ್ತದೆ. ಹೀಗಾಗಿ ಸಂಜೆ ಅಥವಾ ರಾತ್ರಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗುತ್ತದೆ.
ಬೆಚ್ಚಿ ಬೀಳಿಸುವ ಸುದ್ದಿ: ಭಾರತದಲ್ಲಿ ಕೊರೊನಾವೈರಸ್ ಕಥೆ ಹೀಗ್ಯಾಕಾಯ್ತು?
ಕೊರೊನಾ ಮೊದಲಿಗಿಂತ ವೇಗವಾಗಿ ಹರಡುತ್ತಿರುವುದೇಕೆ?
ಪ್ರಶ್ನೆ: ಎರಡನೇ ಅಲೆಯಲ್ಲಿ ನಾವು ಕೊರೊನಾವೈರಸ್ ಸೋಂಕು ವೇಗವಾಗಿ ಹರಡುತ್ತಿದ್ದು, ಮೊದಲ ಅಲೆಗೆ ಹೋಲಿಸಿದರೆ ಈಗ ಪ್ರಕರಣಗಳ ಸಂಖ್ಯೆ ಕಡಿಮೆ ಅವಧಿಯಲ್ಲೇ ಡಬಲ್ ಆಗುತ್ತಿದೆ. ಇದಕ್ಕೆ ರೂಪಾಂತರಗೊಂಡ ವೈರಸ್ ಕಾರಣವೇ?
ತಜ್ಞರ ಉತ್ತರ: ಕೊರೊನಾವೈರಸ್ ಮೊದಲ ಅಲೆಗಿಂತ ಎರಡು ಮತ್ತು ಮೂರನೇ ಅಲೆಗಳು ತೀವ್ರವಾಗಿದೆ. 1919ರಲ್ಲಿ ಕಾಣಿಸಿಕೊಂಡ ಸ್ಪ್ಯಾನಿಷ್ ಜ್ವರ ಕೂಡಾ ಹಲವು ಅಲೆಗಳನ್ನು ಸೃಷ್ಟಿಸಿತ್ತು. ಪ್ರತಿಯೊಂದು ಅಲೆಯು ಒಂದಕ್ಕಿಂತ ಒಂದು ಹೆಚ್ಚು ತೀವ್ರತೆಯನ್ನು ಹೊಂದಿದ್ದವು. ಸಾಂಕ್ರಾಮಿಕ ಪಿಡುಗು ಹಲವು ಅಲೆಗಳನ್ನು ಸೃಷ್ಟಿಸುವುದರ ಹಿಂದೆ ಹಲವು ಕಾರಣಗಳಿವೆ.
ಅಲೆಗಳ ಸೃಷ್ಟಿಗೆ ಕಾರಣ:
ಒಂದು ಸೋಂಕಿನ ಅಲೆ ತಗ್ಗುತ್ತಿದ್ದಂತೆ ಜನರು ಸುರಕ್ಷತೆಯನ್ನು ಮರೆಯುತ್ತಾರೆ. ಸೋಂಕಿನ ಹರಡುವಿಕೆಯು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವ ಮೊದಲೇ ಕಾರ್ಯ ಚಟುವಟಿಕೆಗಳನ್ನು ಆರಂಭಿಸಿ ಬಿಡುತ್ತಾರೆ. ಎರಡನೇದಾಗಿ ಸಾರ್ವಜನಿಕರು ಮೊದಲಿನಂತೆ ಸಾಮಾಜಿಕವಾಗಿ ಬೆರೆಯುವುದಕ್ಕೆ ಆರಂಭಿಸುತ್ತಾರೆ. ಮೂರನೇದಾಗಿ ರೋಗಾಣುಗಳು ರೂಪಾಂತರವಾಗಿ ಹೊಸ ರೂಪ ಪಡೆದುಕೊಳ್ಳುತ್ತವೆ. ಇಂಗ್ಲೆಂಡಿನ ರೂಪಾಂತರ ವೈರಸ್ B.1.1.7 ರೋಗಾಣು ವೇಗವಾಗಿ ಹರಡುತ್ತದೆಯೇ ಇಲ್ಲವೇ ಎಂಬುದರ ಬಗ್ಗೆ ಪ್ರಯೋಗ ನಡೆಸಿದ್ದು ಇನ್ನೆರೆಡು ವಾರಗಳಲ್ಲಿ ಫಲಿತಾಂಶ ಹೊರ ಬೀಳಲಿದೆ. ಆದರೆ ಸೋಂಕು ಹರಡುವಿಕೆ ವೇಗ ಹೆಚ್ಚಿಸುವಲ್ಲಿ ರೂಪಾಂತರ ರೋಗಾಣುಗಳ ಪಾತ್ರವಂತೂ ಇದ್ದೇ ಇರುತ್ತದೆ. ಈ ಎಲ್ಲ ಕಾರಣಗಳಿಂದಾಗಿ ರೋಗದ ಹರಡುವಿಕೆ ವೇಗ ಮೊದಲಿಗಿಂತಲೂ ಹೆಚ್ಚಾಗಿರುತ್ತದೆ.
ಕೊವಿಡ್-19 ಸೋಂಕಿತರ ಸಾವಿನ ಸಂಖ್ಯೆ ತಗ್ಗುವುದಕ್ಕೆ ಕಾರಣ?
ಪ್ರಶ್ನೆ: ಎರಡನೇ ಅಲೆಯಲ್ಲಿ ಸೋಂಕಿತರ ಸಾವಿನ ಪ್ರಮಾಣ ಮೊದಲಿಗಿಂತ ಕಡಿಮೆಯಾಗಿದೆ. ಸ್ವಯಂಪ್ರೇರಿತರಾಗಿ ಲಸಿಕೆ ಪಡೆದುಕೊಂಡಿರುವುದೇ ಇದಕ್ಕೆಲ್ಲ ಕಾರಣವೇ?
ತಜ್ಞರ ಉತ್ತರ: ಹೌದು, ಮೊದಲ ಅಲೆಯಲ್ಲಿ 65 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹೆಚ್ಚು ಸೋಂಕು ಕಾಣಿಸಿಕೊಂಡಿತ್ತು. ಆದ್ದರಿಂದ ಸಾವಿನ ಪ್ರಮಾಣ ಹೆಚ್ಚಾಗಿತ್ತು. ಆದರೆ ಇದೀಗ ವೃದ್ಧರಿಗೆ ಲಸಿಕೆ ವಿತರಣೆ ಮಾಡಿರುವುದರಿಂದ ಸಾವಿನ ಪ್ರಮಾಣದಲ್ಲಿ ಶೇಕಡಾವಾರು ಇಳಿಕೆಯಾಗಿದೆ.
ರೋಗ ನಿರೋಧಕ ಶಕ್ತಿ ವೃದ್ಧಿಸಲು ಅಗತ್ಯ ಕ್ರಮ
ಪ್ರಶ್ನೆ: ಯಾವುದೇ ಗಂಭೀರ ಸಮಸ್ಯೆಗಳಿಲ್ಲದ ಸೋಂಕಿನ ಲಕ್ಷಣಗಳೇ ಇಲ್ಲದ ಯುವಕರಲ್ಲಿ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡರೆ ಅವರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವುದಕ್ಕೆ ಪ್ರತಿರಕ್ಷಣೆ ಪಡೆದುಕೊಳ್ಳಬೇಕೇ?
ತಜ್ಞರ ಉತ್ತರ: ಯಾವುದೇ ಅಪಾಯವಿಲ್ಲದೇ ಪ್ರತಿರಕ್ಷೆ ಪಡೆದುಕೊಳ್ಳುವ ಬಗ್ಗೆ ಯೋಚನೆಯನ್ನೂ ಮಾಡಬಾರದು. ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಹೆಚ್ಚಾಗುತ್ತಾ ಹೋದಂತೆ ಅದರ ರೂಪಾಂತರ ಪ್ರಮಾಣ ಹೆಚ್ಚಾಗುತ್ತದೆ. ಸೋಂಕು ಹರಡುವಿಕೆ ಸರಪಳಿ ಕತ್ತರಿಸಲು ಲಸಿಕೆ ಪಡೆದುಕೊಳ್ಳುವುದೊಂದೇ ಉತ್ತಮ ಮಾರ್ಗ. ಇದರ ಜೊತೆಗೆ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಲಕ್ಷ್ಯ ವಹಿಸಬೇಕು. ಇನ್ನು, ಲಸಿಕೆ ಪಡೆದ ಮಾತ್ರಕ್ಕೆ ಸೋಂಕಿನಿಂದ ತಪ್ಪಿಸಿಕೊಂಡೆವು ಎಂದು ಭಾವಿಸುವಂತಿಲ್ಲ. ಕೊವಿಡ್-19 ಲಸಿಕೆಯು ನಿಮ್ಮನ್ನು ಶೇ.70, ಶೇ.80 ಅಥವಾ ಶೇ.90ರಷ್ಟು ರಕ್ಷಿಸಬಹುದೇ ವಿನಃ ಶೇ.100ರಷ್ಟು ರಕ್ಷಿಸುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಲಸಿಕೆ ಪಡೆದ ನಂತರದಲ್ಲೂ ಮುನ್ನೆಚ್ಚರಿಕೆ ಕ್ರಮಗಳನ್ನು ಮಾರ್ಗಸೂಚಿಗಳನ್ನು ಪಾಲನೆ ಮಾಡುವುದು ಬಹಳ ಅವಶ್ಯಕವಾಗಿರುತ್ತದೆ.
ವಿಶ್ವಸಂಸ್ಥೆಯ ಎಚ್ಚರಿಕೆ ನಿರ್ಲಕ್ಷಿಸಿದ್ದೇ ಅಪಾಯಕ್ಕೆ ಕಾರಣ?
ಪ್ರಶ್ನೆ: ಕಳೆದ ವರ್ಷ ವಿಶ್ವಸಂಸ್ಥೆಯ ನೋಬೆಲ್ ಏಜೆನ್ಸಿಯು 2020ಕ್ಕಿಂತ 2021ರಲ್ಲಿ ಪರಿಸ್ಥಿತಿ ಕೆಟ್ಟದಾಗಿರುತ್ತದೆ ಎಂದು ಎಚ್ಚರಿಕೆ ನೀಡಿತ್ತು. ಆದರೆ ಜನರು 2021ರಲ್ಲಿ ಕೊರೊನಾವೈರಸ್ ಹೊರಟು ಹೋಗುತ್ತದೆ ಎಂದು ಭಾವಿಸಿದ್ದರು. ನೋಬೆಲ್ ಏಜೆನ್ಸಿಯ ಅಂದಾಜು ಈಗ ಸರಿಯಾಗಿದೆ ಅಲ್ಲವೇ?
ತಜ್ಞರ ಉತ್ತರ: ಎಲ್ಲ ಸಾಂಕ್ರಾಮಿಕ ಪಿಡುಗುಗಳು ಅಲೆಗಳಲ್ಲಿ ಬರುತ್ತವೆ. ಮೊದಲಿಗಿಂತ ಎರಡು ಮತ್ತು ಮೂರನೇ ಅಲೆಗಳಲ್ಲಿ ತೀವ್ರತೆ ಹೆಚ್ಚಾಗಿರುತ್ತದೆ. ಎರಡನೇ ಅಲೆಯು ಇನ್ನೇನು ಇಷ್ಟರಲ್ಲೇ ಅಂತ್ಯವಾಗುತ್ತದೆ ಎಂದ ವಿಶ್ವಾಸವಿದೆ. ಯಾವಾಗ ಎರಡನೇ ಅಲೆಯು ಕಡಿಮೆಯಾಗುತ್ತದೆಯೋ ಅದರ ಹಿಂದೆಯೇ ಮೂರನೇ ಅಲೆ ಕಾಣಿಸಿಕೊಳ್ಳುತ್ತದೆ. ಆಗ ಎರಡನೇ ಅಲೆಯ ತೀವ್ರತೆ ಬಗ್ಗೆ ಹೋಲಿಕೆ ಮಾಡಿ ನೋಡುವುದಕ್ಕೆ ಆರಂಭಿಸುತ್ತೇವೆ. ಆದ್ದರಿಂದ ಎಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗಿರುವುದು ಒಂದೇ. ಸಾಂಕ್ರಾಮಿಕ ಪಿಡುಗು ಅಲೆಗಳ ರೂಪದಲ್ಲಿ ಒಂದ ಹಿಂದೆ ಒಂದರಂತೆ ಬರುತ್ತವೆ. ನಾವು ಲಸಿಕೆ ಪಡೆದುಕೊಳ್ಳುವುದು ಮತ್ತು ಸಾಮಾಜಿಕ ನಡುವಳಿಕೆ ಮೇಲೆ ಹೆಚ್ಚು ನಿಗಾ ವಹಿಸಬೇಕು.
ದೇಶದಲ್ಲಿ ಸಾಂಕ್ರಾಮಿಕ ಪಿಡುಗು ಅಂತ್ಯವಾಗುವುದು ಯಾವಾಗ?
ಪ್ರಶ್ನೆ: ಕೊರೊನಾವೈರಸ್ ಸೋಂಕು ಮುಕ್ತಾಯವಾಗುವುದಕ್ಕೆ ಎಷ್ಟು ಸಮಯ ತೆಗೆದುಕೊಳ್ಳಬಹುದು?
ತಜ್ಞರ ಉತ್ತರ: ರೂಪಾಂತರಗಳಿಗೆ ಅಂತ್ಯವೇ ಇರುವುದಿಲ್ಲ. ಇದೊಂದು ನಿರಂತರ ಪ್ರಕ್ರಿಯ ಆಗಿರುತ್ತದೆ. ರೂಪಾಂತರ ಪ್ರಕ್ರಿಯೆಯನ್ನು ಯಾರಿಂದಲೂ ತಡೆಯುವುದಕ್ಕೆ ಸಾಧ್ಯವಿಲ್ಲ, ಸಾಮಾನ್ಯವಾಗಿ ಇದು ನಡೆಯುತ್ತಲೇ ಇರುತ್ತದೆ. ಮುಂದುವರಿದ ಕಾಲದಲ್ಲಿ ರೂಪಾಂತರಗಳಲ್ಲಿ ರೋಗಾಣುವಿನ ಪ್ರಮಾಣ ಮತ್ತು ಶಕ್ತಿಯು ಕಡಿಮೆಯಾಗುತ್ತಾ ಹೋಗುತ್ತದೆ. ಅಲ್ಲಿಗೆ ದೀರ್ಘಾವಧಿಯಲ್ಲಿ ರೋಗಾಣು ಅಂತ್ಯವಾಗುತ್ತದೆ. ಅದಕ್ಕೆ ಹಲವು ವರ್ಷಗಳೇ ಬೇಕಾಗುತ್ತವೆ.
ಕೊರೊನಾವೈರಸ್ ಸೋಂಕಿನ ಎರಡನೇ ಅಲೆ ಹೇಗಿದೆ?
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,17,353 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಖಾತ್ರಿಯಾಗಿದೆ. ಒಂದು ದಿನದಲ್ಲಿ 1185 ಮಂದಿ ಕೊವಿಡ್-19 ಸೋಂಕಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 1,74,308ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ 1,18,302 ಸೋಂಕಿತರು ಗುಣಮುಖರಾಗಿದ್ದು, ಈವರೆಗೂ 1,25,47,866 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಒಟ್ಟು 1,42,91,917 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಪ್ರಸ್ತುತ 15,69,743 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.