ಫುಲ್ ಗೊಂದಲ: ಸಿ.ಎಂ.ಇಬ್ರಾಹಿಂ, ಕಾಂಗ್ರೆಸ್ಸಿನಲ್ಲಿದ್ದಾರೋ, ಜೆಡಿಎಸ್ ನಲ್ಲೋ?
ಕಾಂಗ್ರೆಸ್ಸಿನ ವಿಧಾನ ಪರಿಷತ್ ಸದಸ್ಯ ಮತ್ತು ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಅವರು ಯಾವ ಪಕ್ಷದಲ್ಲಿದ್ದಾರೆ, ಕಾಂಗ್ರೆಸ್ಸಿನಲ್ಲೋ ಅಥವಾ ಜೆಡಿಎಸ್ ನಲ್ಲೋ? ಈ ರೀತಿಯ ಗೊಂದಲ ಕಾಡುತ್ತಿರುವುದಕ್ಕೆ ಅವರ ರಾಜಕೀಯ ನಡೆಗಳೇ ಕಾರಣ. ಆದರೆ, ಒಂದಂತೂ ನಿಜ ಅವರು ಬಿಜೆಪಿಯಲ್ಲಂತೂ ಇಲ್ಲ..
ಸಿದ್ದರಾಮಯ್ಯನವರ ಆಪ್ತ ಬಣದಲ್ಲಿದ್ದ ಇಬ್ರಾಹಿಂ ಅಲ್ಲಿಂದ ದೂರವಾಗುತ್ತಾ ಬಂದರು. ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಆಯಕಟ್ಟಿನ ಹುದ್ದೆಗೆ ಅಲ್ಪಸಂಖ್ಯಾತರ ನೇಮಕವಾಗುವುದೇ ಇಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆಯನ್ನು ನೀಡಿ, ಪಕ್ಷದ ಮೇಲೆ ತಮಗಿರುವ ಮುನಿಸನ್ನು ಹೊರಹಾಕಿದ್ದರು.
ಒಂದು ಕಡೆ ಕಾಂಗ್ರೆಸ್ ಪಕ್ಷದ ಕಾರ್ಯವೈಖರಿಯನ್ನು ಟೀಕಿಸುತ್ತಾ, ಇನ್ನೊಂದು ಕಡೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರನ್ನು ಹೊಗಳಲು ಆರಂಭಿಸಿದ ಇಬ್ರಾಹಿಂ ಅವರು ಬಹುತೇಕ ಜೆಡಿಎಸ್ ಸೇರಲಿದ್ದಾರೆ ಎನ್ನುವ ಸುದ್ದಿ ಇತ್ತೀಚಿನ ದಿನಗಳಲ್ಲಿ ತಣ್ಣಗಾಗುತ್ತಾ ಬಂದಿತ್ತು.
ಈ ನಡುವೆ, ಅವರು ಕಾಂಗ್ರೆಸ್ ಬಿಟ್ಟು ಹೋಗದಂತೆ ಹಲವು ವಿದ್ಯಮಾನಗಳು ನಡೆದವು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಕೂಡ ಇಬ್ರಾಹಿಂ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದರು. ಈ ನಡುವೆ, ಇಂದು (ಸೆ 22) ಇಬ್ರಾಹಿಂ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿಯಾಗಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಯನ್ನು ತಮಗೆ ನೀಡಬೇಕು ಎನ್ನುವ ಡಿಮಾಂಡ್
ಕಳೆದ ಆರೇಳು ತಿಂಗಳಲ್ಲಿ ಎರಡ್ಮೂರು ಬಾರಿ ದೇವೇಗೌಡ್ರು ಮತ್ತು ಕುಮಾರಸ್ವಾಮಿಯವರನ್ನು ಭೇಟಿಯಾಗಿರುವ ಇಬ್ರಾಹಿಂ, ಜೆಡಿಎಸ್ ಪಕ್ಷಕ್ಕೆ ಹತ್ತಿರವಾಗುತ್ತಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಯನ್ನು ತಮಗೆ ನೀಡಬೇಕು ಎನ್ನುವ ಡಿಮಾಂಡ್ ಅನ್ನು ಇಬ್ರಾಹಿಂ ಅವರು ಗೌಡ್ರ ಮುಂದಿಟ್ಟಿದ್ದರು ಎನ್ನುವ ಸುದ್ದಿಗಳು ಹರಿದಾಡುತ್ತಿದ್ದವು. ಇದಕ್ಕೆ ಯಾವ ರೀತಿಯ ಪ್ರತಿಕ್ರಿಯೆ ದಳಪತಿಗಳಿಂದ ಬಂದಿತ್ತು ಎನ್ನುವುದು ಬಹಿರಂಗವಾಗಿರಲಿಲ್ಲ.

ದೇವೇಗೌಡ್ರು ಒಕ್ಕಲಿಗರ ಜಾತಿಯಲ್ಲಿ ಹುಟ್ಟಿದರು, ಇಲ್ಲದಿದ್ದರೆ ಪ್ರತಿಮೆ ಅನಾವರಣವಾಗುತ್ತಿತ್ತು
ಒಂದು ದಿನದ ಹಿಂದೆ ಭದ್ರಾವತಿಯಲ್ಲಿ ಮಾತನಾಡುತ್ತಿದ್ದ ಸಿ.ಎಂ.ಇಬ್ರಾಹಿಂ, "ಅಪ್ಪಿತಪ್ಪಿ ದೇವೇಗೌಡ್ರು ಒಕ್ಕಲಿಗರ ಜಾತಿಯಲ್ಲಿ ಹುಟ್ಟಿದರು. ಬೇರೆ ಜಾತಿಯಲ್ಲಿ ಹುಟ್ಟಿದ್ದರೆ ಅವರ ಪ್ರತಿಮೆ ಅನಾವರಣವಾಗುತ್ತಿತ್ತು. ಹಳ್ಳಿಹಳ್ಳಿಗಳಲ್ಲಿ ಜನರು ಅವರ ಪ್ರತಿಮೆ ಇರಿಸುತ್ತಿದ್ದರು. ಹನ್ನೊಂದು ತಿಂಗಳು ಪ್ರಧಾನಿಯಾಗಿ ಗೌಡ್ರು ಉತ್ತಮ ಕೆಲಸವನ್ನು ಮಾಡಿದ್ದರು" ಎಂದು ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಇಬ್ರಾಹಿಂ ಹಾಡಿ ಹೊಗಳಿದ್ದರು.

ಕುಮಾರಸ್ವಾಮಿಯ ಬಿಡದಿಯ ತೋಟದ ಮನೆಯಲ್ಲಿ ಇಬ್ರಾಹಿಂ ಭೇಟಿ
ಬುಧವಾರದಂದು ಇಬ್ರಾಹಿಂ ಅವರು ಕುಮಾರಸ್ವಾಮಿಯವರನ್ನು ಭೇಟಿಯಾಗಿದ್ದಾರೆ. "ಇಂದು ಮಾಜಿ ಕೇಂದ್ರ ಸಚಿವ ಮತ್ತು ಶಾಸಕ ಸಿ.ಎಂ ಇಬ್ರಾಹಿಂ ಅವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರನ್ನು ತಮ್ಮ ಬಿಡದಿಯ ತೋಟದ ಮನೆಯಲ್ಲಿ ಭೇಟಿ ಮಾಡಿ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದರು"ಎಂದು ಜೆಡಿಎಸ್ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಕುಮಾರಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ರಚಿಸಿದ್ದರೂ, ಬದಲಾದ ರಾಜಕೀಯದಲ್ಲಿ ಎರಡು ಪಕ್ಷಗಳ ಸಂಬಂಧ ಹಳಸಿದೆ. ಸಿದ್ದರಾಮಯ್ಯನವರಂತೂ ದಳಪತಿಗಳ ವಿರುದ್ದ ಸಿಕ್ಕಸಿಕ್ಕಲೆಲ್ಲಾ ಕಿಡಿಕಾರುತ್ತಿದ್ದಾರೆ. ಹಾಗಾಗಿ, ಇಬ್ರಾಹಿಂ-ಎಚ್ಡಿಕೆ ಭೇಟಿ ಮಹತ್ವವನ್ನು ಪಡೆದುಕೊಂಡಿದೆ.

ಕಾಂಗ್ರೆಸ್ಸಿನಲ್ಲಿದ್ದಾರೋ ಅಥವಾ ಜೆಡಿಎಸ್ ನಲ್ಲಿದ್ದಾರೋ ಎನ್ನುವ ಗೊಂದಲ
ಜೆಡಿಎಸ್ ಪಕ್ಷದವರನ್ನು ಕಾಂಗ್ರೆಸ್ ತನ್ನತ್ತ ಸೆಳೆಯುವ ಕೆಲಸವನ್ನು ಮಾಡುತ್ತಿದೆ, ಜೊತೆಗೆ, ಮುರ್ನಾಲ್ಕು ಹಾಲೀ ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗುವುದರ ಬಗ್ಗೆ ಸುದ್ದಿಗಳು ಹೊರಬೀಳುತ್ತಿವೆ. ಇಂತಹ ಸಂದರ್ಭದಲ್ಲಿ ಉತ್ತಮ ಭಾಷಣಕಾರರಾಗಿರುವ ಇಬ್ರಾಹಿಂ ಅವರು ಜೆಡಿಎಸ್ಸಿಗೆ ಹತ್ತಿರವಾಗುತ್ತಿರುವುದು ಕಾಂಗ್ರೆಸ್ಸಿಗೆ ತಲೆನೋವಾಗಿ ಪರಿಣಮಿಸಿದೆ. ಸದ್ಯದ ಮಟ್ಟಿಗಂತೂ, ಇಬ್ರಾಹಿಂ ಅವರು ಕಾಂಗ್ರೆಸ್ಸಿನಲ್ಲಿದ್ದಾರೋ ಅಥವಾ ಜೆಡಿಎಸ್ ನಲ್ಲಿದ್ದಾರೋ ಎನ್ನುವ ಗೊಂದಲ ಮುಂದುವರಿದಿದೆ.












Click it and Unblock the Notifications