ಒಂದು ಬಾವಿಯ ಕಥೆ: ನೀರಿಗಾಗಿ ಬಾವಿ ತೋಡಿದ ಚಿಕ್ಕಮಗಳೂರಿನ ಆಧುನಿಕ ಭಗೀರಥ ದಂಪತಿ

ಚಿಕ್ಕಮಗಳೂರು, ಮಾರ್ಚ್ 12: ಮನುಷ್ಯನಿಗೆ ಕಷ್ಟಗಳು ಎದುರಾದಗಲೇ, ಅವಮಾನ ಎದುರಿಸಿದಾಗಲೇ ಏನನಾದರೂ ಸಾಧಿಸಬೇಕು ಅನ್ನುವ ಛಲ ಹುಟ್ಟುವುದು. ಸ್ಥಳೀಯರಿಂದ ಅವಮಾನಕ್ಕೆ ಒಳಗಾದ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಆಧುನಿಕ ಭಗೀರಥ ದಂಪತಿಯೊಂದು ಸಂಕ್ರಾಂತಿಯಂದು ಅಯ್ಯಪ್ಪನಿಗೆ ಪೂಜೆ ಮಾಡಿ ಬಾವಿ ತೋಡುವುದಕ್ಕೆ ಶುರು ಮಾಡಿದರು.

ದಿನಕ್ಕೆ ನಾಲ್ಕೇ ಗಂಟೆ ಕೆಲಸ ಮಾಡಿ 55 ದಿನದಲ್ಲಿ 60 ಅಡಿ ಬಾವಿ ತೋಡಿರುವ ಅಪರೂಪದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಅಣಜೂರಿನಲ್ಲಿ ನಡೆದಿದೆ.

ಮೂಡಿಗೆರೆ ತಾಲೂಕಿನ ಅಣಜೂರಿನ ಈ ದಂಪತಿ ಹೆಸರು ರಾಜು-ಶಾರದಾ. 30*40 ಸೈಟಿನಲ್ಲಿ ಗುಡಿಸಲು ಹಾಕಿಕೊಂಡು ಬದುಕುತ್ತಿದ್ದಾರೆ. ದಿನವಿಡೀ ದಣಿದು ಬಂದರೆ ಸಂಜೆ ನೀರಿಗೆ ಹಾಹಾಕಾರ. ನೀರು ಕೇಳಿದರೆ ಜನ ಜಗಳಕ್ಕೆ ಬರುತ್ತಿದ್ದರು. ಸಮೀಪದಲ್ಲಿ ನೀರಿಗೆ ಹೋದಾಗ ಗಲಾಟೆಯೂ ಆಯ್ತು. ಯಾರನ್ನು ಕೇಳಿದರೂ ನೀರು ಕೊಡಲಿಲ್ಲ. ಆಗಲೇ ತೀರ್ಮಾನಿಸಿದ ಈ ದಂಪತಿ ನೀರಿಗಾಗಿ ಬಾವಿಯನ್ನೇ ತೋಡಿದ್ದಾರೆ.

 5 ಅಡಿ ಅಗಲ, 60 ಅಡಿ ಆಳದ ಬಾವಿ

5 ಅಡಿ ಅಗಲ, 60 ಅಡಿ ಆಳದ ಬಾವಿ

30*40 ಸೈಟಿನಲ್ಲಿ ದಂಪತಿಗಳಿಬ್ಬರು ಸೇರಿ 5 ಅಡಿ ಅಗಲ, 60 ಅಡಿ ಆಳದ ಬಾವಿಯನ್ನೇ ತೋಡಿದ್ದಾರೆ. ಹಗಲಿನಲ್ಲಿ ಕೂಲಿ ಕೆಲಸಕ್ಕೆ ಹೋಗಿ ಬೆಳಗ್ಗೆ 2 ಗಂಟೆ, ಸಂಜೆ 2 ಗಂಟೆ ದಿನಕ್ಕೆ ನಾಲ್ಕೇ ಗಂಟೆ ಕೆಲಸ ಮಾಡಿ ಬಾವಿ ತೋಡಿದ್ದಾರೆ. ಬಾವಿಯಲ್ಲಿ ನೀರು ಜಿನುಗುತ್ತಿದ್ದು, ಇನ್ನೈದು ಅಡಿ ತೆಗೆದರೆ ಸಮೃದ್ಧ ಜಲ ಉಕ್ಕಲಿದೆ. ನೀರಿಲ್ಲ ಅಂತ ನೊಂದು ಕೂತ ದಂಪತಿಗೆ ಹೊಳೆದದ್ದೇ ಬಾವಿ ತೋಡುವ ಐಡಿಯಾ.

13 ವರ್ಷ ಶಬರಿಮಲೆಗೆ ಹೋಗಿದ್ದ ರಾಜು, ಅಯ್ಯಪ್ಪ ನೀನೇ ಗತಿಯಪ್ಪಾ... ಅಂತ ಅಯ್ಯಪ್ಪನಿಗೆ ಪೂಜೆ ಮಾಡಿ ಸಂಕ್ರಾಂತಿ ಜ್ಯೋತಿಯ ದಿನದಂದೇ ಬಾವಿ ತೆಗೆಯಲು ಭೂಮಿಗೆ ಮೊದಲ ಹಾರೆ-ಪಿಕಾಸಿ ಹಾಕಿದ್ದರು. ಇವರ ಸಾಹಸವನ್ನು ಕಂಡು ಹುಚ್ಚರು ಎಂದು ನಕ್ಕವರೇ ಹೆಚ್ಚು. ಆದರೂ ಹಠ ಬಿಡದ ರಾಜು-ಶಾರದಾ ದಂಪತಿ ಕೇವಲ ಹಾರೆ-ಪಿಕಾಸಿಯಲ್ಲೇ ಬಾವಿ ತೋಡಿ ಮುಗಿಸಿದ್ದಾರೆ.

 ದಂಪತಿಯ ಕಣ್ಣಲ್ಲಿ ನೀರು ಜಿನುಗುತ್ತಿದೆ

ದಂಪತಿಯ ಕಣ್ಣಲ್ಲಿ ನೀರು ಜಿನುಗುತ್ತಿದೆ

55 ದಿನಗಳ ನಿರಂತರ ಶ್ರಮದಿಂದ ಇದೀಗ ಬಾವಿಯಲ್ಲಿ ಜಲ ಕಾಣಿಸಿಕೊಂಡಿದೆ. ಕೊನೆಗೂ ನಮ್ಮ ಪ್ರಯತ್ನ ಯಶಸ್ಸು ಕಾಣುವ ಸೂಚನೆ ಸಿಕ್ಕಿದಂತಾಗಿರುವುದಕ್ಕೆ ದಂಪತಿಯ ಕಣ್ಣಲ್ಲಿ ನೀರು ಜಿನುಗುತ್ತಿದೆ. ಮೂರು ವರ್ಷದ ಹಿಂದೆ ಸೈಟ್ ಕೊಟ್ಟಿರುವ ಪಂಚಾಯತಿ ಸೂಕ್ತ ಸೂರು ನಿರ್ಮಿಸಿ ಕೊಟ್ಟಿಲ್ಲ. ಟಾರ್ಪಲ್ ಶೆಡ್‌ನಲ್ಲಿ ವಾಸವಿರುವ ಈ ಕುಟುಂಬ ನಮಗೊಂದು ಸೂರು ಕೊಡಿಸಿ ಅಂತ ಕಣ್ಣೀರಿಟ್ಟಿದ್ದಾರೆ.

 ಅಕ್ಕಪಕ್ಕದವರಿಗೆ ನೀರು ಸಿಗಲಿ ಅನ್ನುವುದು ನನ್ನ ಆಸೆ

ಅಕ್ಕಪಕ್ಕದವರಿಗೆ ನೀರು ಸಿಗಲಿ ಅನ್ನುವುದು ನನ್ನ ಆಸೆ

ಈ ಬಗ್ಗೆ ಮಾತಾನಾಡಿದ ರಾಜು, "ನಾವು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ, ಪಕ್ಕದ ಮನೆಯ ಬಳಿ ನೀರು ಹಿಡಿಯಲು ಹೋದಾಗ ಜಗಳವಾಡಿ ನನ್ನ ಮೇಲೆ ಹಲ್ಲೆ ಮಾಡಿದ್ದರು. ನಾನು ಜಗಳಕ್ಕೆ ಹೋಗುವ ಮನುಷ್ಯನಲ್ಲ, ಹಾಗಾಗಿ ನೀರಿಗಾಗಿ ಬಾವಿ ತೆಗೆಯಬೇಕು ಅಂದುಕೊಂಡು ಈ ಬಾವಿ ತೋಡಿದ್ದೇನೆ. ಈಗಾಗಲೇ 60 ಅಡಿ ಆಳ ಬಾವಿ ತೆಗೆದಿದ್ದೇವೆ, ನೀರು ಬಂದರೆ ನಮ್ಮ ಅಕ್ಕಪಕ್ಕದವರಿಗೆ ನೀರು ಸಿಗಲಿ ಅನ್ನುವುದು ನನ್ನ ಆಸೆ. ನೀರಿನ ಸೆಲೆ ಸಿಗುತ್ತಿದೆ, ಇನ್ನೆರಡು ಅಡಿ ಆಳಕ್ಕೆ ತೋಡಿದರೆ ನೀರು ಬರುತ್ತದೆ. ಈ ಬಾವಿ ತೋಡಿದ್ದು ಸಾರ್ಥಕವಾಗುತ್ತದೆ,'' ಎಂದಿದ್ದಾರೆ.

ಈ ಬಗ್ಗೆ ಮಾತಾನಾಡಿದ ಶಾರದಾ, "ನಮಗೆ ಗ್ರಾಮ ಪಂಚಾಯತಿಯವರು ಸರಿಯಾಗಿ ನೀರು ಬಿಡುತ್ತಿಲ್ಲ, ಬಿಟ್ಟರೂ ಸ್ವಲ್ಪ ಹೊತ್ತು ಬಿಟ್ಟು ಕಟ್ ಮಾಡುತ್ತಾರೆ. ನೀರಿನ ಹಾಹಾಕಾರ ನೋಡಲಾರದೆ ನನ್ನ ಪತಿ ಬಾವಿ ತೋಡಲು ಮುಂದಾಗಿದ್ದಾರೆ. ಅವರಿಗೆ ನಾನು ಕೂಡ ಸಹಕಾರ ಮಾಡಿದ್ದೇನೆ. ನೀರು ಬರುವ ನಂಬಿಕೆ ನಮಗಿದೆ. ಇದರ ಜೊತೆ ವಿದ್ಯುತ್ ಸಂಪರ್ಕ, ಒಂದು ಮನೆ ಕಟ್ಟಿಸಿಕೊಟ್ಟರೇ ಸಾಕು ಸರ್ ಎಂದು ತಿಳಿಸಿದರು.

 ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡು ಐಟಿಐ ಓದುತ್ತಿರುವ ಮಗ

ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡು ಐಟಿಐ ಓದುತ್ತಿರುವ ಮಗ

ಈ ದಂಪತಿಗೆ 3 ಜನ ಮಕ್ಕಳಿದ್ದು, ದೊಡ್ಡವಳ ಮದುವೆಯಾಗಿದೆ. 2ನೇ ಮಗಳು ಮಂಗಳೂರಿನಲ್ಲಿ ಮನೆ ಕೆಲಸ ಮಾಡಿಕೊಂಡು ಓದುತ್ತಿದ್ದಾಳೆ. ಮಗ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡು ಐಟಿಐ ಓದುತ್ತಿದ್ದಾನೆ. ಬದುಕಿಗಾಗಿ ಅಪ್ಪ-ಮಕ್ಕಳು ಒಂದೊಂದು ಕಡೆ ದುಡಿಯುತ್ತಿದ್ದಾರೆ. ಇಡೀ ಕುಟುಂಬ ಕಣ್ಣೀರಲ್ಲೇ ಕೈ ತೊಳೆಯುತ್ತಿದೆ. ಇಂತಹ ಕಷ್ಟಜೀವಿಗಳಿಗೆ ನೀರು ಕೊಡದಿರುವುದು ನಿಜಕ್ಕೂ ದುರಂತ. ಈ ಆಧುನಿಕ ಭಗೀರಥರು ಬಾವಿಗೆ ರಿಂಗ್ ಕೂರಿಸುವುದಕ್ಕಾದರೂ ಸಹಕಾರ ಕೊಟ್ಟರೆ ಸಾಕು ಅಂತಿದ್ದಾರೆ. ಆಗ ಈ ಬಡಪಾಯಿಗಳ ಶ್ರಮಕ್ಕೆ ಬೆಲೆ ಸಿಕ್ಕಂತಾಗುತ್ತದೆ. ಅದೇನೆ ಇರಲಿ, ಎದುರಾದ ಕಷ್ಟಕ್ಕೆ ಕಂಗೆಡದೆ ತೊಡೆ ತಟ್ಟಿ ನೀರಿಗಾಗಿ ಬಾವಿಯನ್ನೇ ತೋಡಿದ ಈ ಹಠವಾದಿ ದಂಪತಿಗೆ ಹ್ಯಾಟ್ಸಾಫ್ ಹೇಳಲೇಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+