ಡಿಕೆಶಿ ಪರ ನಿಂತ ಒಕ್ಕಲಿಗರು: ಆತಂಕಗೊಂಡ BSY ಯಿಂದ ಮಾಸ್ಟರ್ ಪ್ಲ್ಯಾನ್!
ಬೆಂಗಳೂರು, ಸೆಪ್ಟೆಂಬರ್ 14: ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರ ಬಂಧನವನ್ನು ವಿರೋಧಿಸಿ ಬೆಂಗಳೂರಿನಲ್ಲಿ ಒಕ್ಕಲಿಗ ಸಮುದಾಯ ನಡೆಸಿದೆ ಪ್ರತಿಭಟನೆಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಂಚ ಆತಂಕಗೊಂಡಿದ್ದಾರೆ.
Recommended Video
ಸುಮಾರು 30,000 ಕ್ಕೂ ಹೆಚ್ಚು ಒಕ್ಕಲಿಗರು ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ಬೆಂಬಲಕ್ಕೆ ನಿಂತಿದ್ದು ಯಡಿಯೂರಪ್ಪನವರಿಗೆ ದಿಗಿಲನ್ನುಂಟು ಮಾಡಿದೆ. ಆದ್ದರಿಂದ ಒಕ್ಕಲಿಗರನ್ನು ಸೆಳೆಯಲು ಸರ್ಕಾರ ಏನೆಲ್ಲ ಪ್ರಯತ್ನ ಮಾಡಬಹುದೋ ಆ ಪ್ರಯತ್ನಕ್ಕೆ ಬಿ.ಎಸ್.ಯಡಿಯೂರಪ್ಪ ಕೈಹಾಕಿದ್ದಾರೆ.
ಡಿಕೆಶಿ ಅವರನ್ನು ಅಕ್ರಮ ಹಣ ಹೊಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯ ಬಂಧಿಸಿತ್ತು.

ಬೃಹತ್ ಪ್ರತಿಭಟನೆ
ಡಿ.ಕೆ.ಶಿವಕುಮಾರ್ ಅವರ ಬಂಧನವನ್ನು ವಿರೋಧಿಸಿ ಬೆಂಗಳೂರಿನಲ್ಲಿ ಒಕ್ಕಲಿಗ ಸಮುದಾಯದ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ಪ್ರತಿಭಟನೆಯಲ್ಲಿ ಸುಮಾರು 30,000 ಕ್ಕೂ ಹೆಚ್ಚು ಜನರು ಸೇರಿರಬಹುದು ಎಂದು ಅಂದಾಜಿಸಲಾಗಿತ್ತು.

ಆತಂಕಗೊಂಡ ಯಡಿಯೂರಪ್ಪ
ಡಿ.ಕೆ.ಶಿವಕುಮಾರ್ ಅವರನ್ನು ಬೆಂಬಲಿಸಿ ಇಷ್ಟೊಂದು ಒಕ್ಕಲಿಗರು ಸೇರುತ್ತಾರೆ ಎಂದು ನಿರೀಕ್ಷಿಸಿರದ ಯಡಿಯೂರಪ್ಪ ಈ ಪ್ರತಿಭಟನೆಯ ನಂತರ ಕೊಂಚ ಆತಂಕಗೊಂದರು. ಕೂಡಲೇ ಒಕ್ಕಲಿಗರ ಓಲೈಕೆಯತ್ತ ಗಮನ ಹರಿಸಿದರು.
ಅದೇ ಕಾರಣಕ್ಕೇ ಅವರು ಬೆಂಗಳೂರಿನ ಏರ್ಪೋರ್ಟ್ ರಸ್ತೆಯಲ್ಲಿ ಕೆಂಪೇಗೌಡ ಪ್ರತಿಮೆ ಅನಾವರಣದ ಮಾತನ್ನೆತ್ತಿದ್ದಾರೆ. ಜೊತೆಗೆ ಬೆಂಗಳೂರು ನಿರ್ಮಾತೃ ಕೆಂಪೇಗೌಡ ಪ್ರಾಧಿಕಾರಕ್ಕೆ 100 ಕೋಟಿ ರೂ. ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ಪ್ರತಿಮೆ ನಿರ್ಮಾಣದ ಪ್ರಸ್ತಾಪ ಮೊದಲೇ ಇತ್ತು
ಏರ್ಪೋರ್ಟ್ ರಸ್ತೆಯಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣದ ಪ್ರಸ್ತಾಪ ಮೊದಲೇ ಇತ್ತು. ಈಗಾಗಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹ ಪ್ರತಿಮೆ ನಿರ್ಮಾಣಕ್ಕೆ 5 ಕೋಟಿ ರೂ ಎತ್ತಿಟ್ಟಿದೆ. ಆದರೆ ಬಿ.ಎಸ್.ಯಡಿಯೂರಪ್ಪನವರು ಒಕ್ಕಲಿಗ ಪ್ರತಿಭಟನೆಯ ನಂತರ ಈ ವಿಷಯವನ್ನು ಘೋಷಿಸುವ ಅಗತ್ಯವೇನಿತ್ತು? ಇದು ಓಲೈಕೆಯ ರಾಜಕಾರಣವಲ್ಲವೇ ಎಂಬುದು ಈಗ ಎದ್ದಿರುವ ಪ್ರಶ್ನೆ.

ಜಾತಿಯೇ ಮುಳುವಾದರೆ?
ಕರ್ನಾಟಕದಲ್ಲಿ ಯಾವುದೇ ವಿಷಯವೇ ಆದರೂ ಸರಿ ಮತ್ತು ತಪ್ಪು ನಿರ್ಧಾರವಾಗುವುದೇ ಜಾತಿಯ ಮೇಲೆ! ಭ್ರಷ್ಟಾಚಾರ ಆರೋಪ ಹೊತ್ತು ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿದ್ದರೂ ಡಿ.ಕೆ.ಶಿವಕುಮಾರ್ ಅವರು ವಿಚಾರಣೆ ಎದುರಿಸಲಿ, ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ, ಇಲ್ಲವೆಂದರೆ ಸ್ವಚ್ಛ ಕೈಯಿಂದ ಆಚೆ ಬರಲಿ ಎನ್ನುವಂಥ ಉದಾರತೆ ಯಾರಲ್ಲೂ ಇಲ್ಲ. ಡಿ.ಕೆ.ಶಿವಕುಮಾರ್ ಬಂಧನವನ್ನು ಒಂದು ಸಮುದಾಯದ ಮೇಲಿನ ದಾಳಿ ಎಂಬಂತೆ ಬಿಂಬಿಸುತ್ತಿರುವುದರಿಂದ ತನಗೆ ಎಲ್ಲಿ ಈ ಜಾತಿಯೇ ಮುಳುವಾಗುತ್ತದೋ ಎಂಬ ಆತಂಕ ಬಿಜೆಪಿಗೆ.

ಈಗ ಕೆಂಪೇಗೌಡ ನೆನಪಾಗಿದ್ದೇಕೆ?
ಹಾಗೆ ನೋಡುವುದಕ್ಕೆ ಹೋದರೆ ಜೂನ್ ತಿಂಗಳಿನಲ್ಲಿಯೇ ಕೆಂಪೇಗೌಡ ಜಯಂತಿ ಆಗಿದೆ. ಅದನ್ನು ಆಚರಿಸಿಯೂ ಆಗಿದೆ. ಆದರೆ ಇದೀಗ ಮತ್ತೊಮ್ಮೆ ಕೆಂಪೇಗೌಡರನ್ನು ನೆನಪಿಸಿಕೊಂಡು, ಪ್ರಾಧಿಕಾರಕ್ಕೆ ಅನುದಾನ ನೀಡಿದ್ದು ಒಕ್ಕಲಿಗರ ಓಲೈಕೆಗಾಗಿಯೇ ಎಂಬುದನ್ನು ಸಾಬೀತುಪಡಿಸಿದೆ.












Click it and Unblock the Notifications