BPL card: ಅಂಚೆ ಕಛೇರಿಯಲ್ಲಿ ಭಾಗ್ಯಲಕ್ಷ್ಮಿ-ಸುಕನ್ಯಾ ಸಮೃದ್ಧಿ ಖಾತೆ, ಪ್ರಯೋಜನಗಳು
ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಅನೇಕ ಸಸೌಲಭ್ಯಗಳು ಸಿಗುತ್ತವೆ. ಕಾರ್ಡ್ದಾರರು ಅಂಚೆ ಕಛೇರಿಯಲ್ಲಿ ಭಾಗ್ಯಲಕ್ಷ್ಮಿ-ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದು. ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆದು ವಾರ್ಷಿಕ ರೂ. 3000ದಂತೆ 15 ವರ್ಷಗಳವರೆಗೆ ಒಟ್ಟು ರೂ. 45,000ಗಳನ್ನು ಠೇವಣಿ ಇಡಬಹುದು. ಮಗುವಿಗೆ 21 ವರ್ಷ ಪೂರ್ಣಗೊಂಡ ಬಳಿಕ ಈ ಹಣ ಬಡ್ಡಿಯ ಜೊತೆ ಕೈ ಸೇರಲಿದೆ.
ಭಾಗ್ಯಲಕ್ಷ್ಮಿ-ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯಡಿ ಬಿಪಿಎಲ್ ಕುಟುಂಬದ 2 ಹೆಣ್ಣು ಮಕ್ಕಳಿಗೆ, ಪ್ರತಿ ಮಗುವಿನ ಹೆಸರಿನಲ್ಲಿ ವಾರ್ಷಿಕ ರೂ. 3000ದಂತೆ 15 ವರ್ಷಗಳವರೆಗೆ ಒಟ್ಟು ರೂ. 45,000ಗಳನ್ನು ಹೂಡಿಕೆ ಮಾಡಬಹುದು. ಮಗುವಿಗೆ 21 ವರ್ಷ ಪೂರ್ಣಗೊಂಡ ನಂತರ ಪರಿಪಕ್ವ ಮೊತ್ತ ಅಂದಾಜು ರೂ. 1.27 ಲಕ್ಷ ನೀಡಲಾಗುತ್ತದೆ. ಅಲ್ಲದೇ ಮಕ್ಕಳು 10ನೇ ತರಗತಿ ನಂತರ ಉನ್ನತ ವಿದ್ಯಾಭ್ಯಾಸಕ್ಕಾಗಿ ಖಾತೆಯಲ್ಲಿರುವ ಮೊತ್ತದ ಶೇ.50ರಷ್ಟು ಭಾಗವನ್ನು ಹಿಂಪಡೆಯಲು ಅವಕಾಶವಿರುತ್ತದೆ.

ಹಲವಾರು ಪ್ರಶ್ನೆಗಳಿವೆ: ಭಾಗ್ಯಲಕ್ಷ್ಮಿ-ಸುಕನ್ಯಾ ಸಮೃದ್ಧಿ ಖಾತೆ ಬಗ್ಗೆ ಹಲವಾರು ಪ್ರಶ್ನೆಗಳಿವೆ. ಅವುಗಳಲ್ಲಿ ಪ್ರಮುಖ ಪ್ರಶ್ನೆಗಳಿಗೆ ಉತ್ತರವನ್ನು ನೀಡುವ ಮೂಲಕ ಜನರ ಗೊಂದಲವನ್ನು ಬಗೆಹರಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ.
* ಭಾಗ್ಯಲಕ್ಷ್ಮೀ ಯೋಜನೆಯ ಅಡಿ ಖಾತೆಗೆ ಯಾರನ್ನು ನಾಮಿನಿ ಮಾಡಬೇಕು?. ಭಾಗ್ಯಲಕ್ಷ್ಮೀ ಯೋಜನೆಯ ಅಡಿ ಖಾತೆಯು ಫಲಾನುಭವಿ ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆ ಊರ್ಜಿತದಲ್ಲಿರುತ್ತದೆ. ತಾಯಿ ಸದರಿ ಖಾತೆಯಲ್ಲಿ ಪೋಷಕಿಯಾಗಿದ್ದು ನಾಮಿನಿ ಕೂಡ ಆಗಿರುತ್ತಾರೆ. ತಾಯಿ ಬದುಕದೇ ಇದ್ದಲ್ಲಿ ಆಗ ತಂದೆ ನಾಮಿನಿಯಾಗಿ ಗುರುತಿಸತಕ್ಕದ್ದು. ಒಂದು ವೇಳೆ ಇಬ್ಬರೂ ಜೀವಂತ ಇಲ್ಲದೇ ಇದ್ದಲ್ಲಿ ಕಾನೂನು ರೀತ್ಯಾ ಪೋಷಕರು ನಾಮಿನಿಯಾಗಿ ಗುರುತಿಸಬಹುದು.
* ಭಾಗ್ಯಲಕ್ಷ್ಮೀ ಖಾತೆ ತೆರೆದ ನಂತರ ತಾಯಿ ಮೃತಪಟ್ಟಲ್ಲಿ ಏನು ಮಾಡಬೇಕು?. ಪೋಷಕರ ಬದಲಾವಣೆಗಾಗಿ ನಿವೇದನೆಯನ್ನು ಮರಣ ಪ್ರಮಾಣ ಪತ್ರ ಹಾಗೂ ತಂದೆಯ ಗುರುತಿನ ಹಾಗೂ ವಿಳಾಸದ ಪುರಾವೆಯೊಂದಿಗೆ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಅವರಿಗೆ ಸಂಬಂಧಿತ ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಮೂಲಕ ಕಳುಹಿಸತಕ್ಕದ್ದು. ಇದೇ ರೀತಿ ಸ್ವಭಾವಿಕ ಪೋಷಕರು (ತಂದೆ ಹಾಗೂ ತಾಯಿ) ಇಬ್ಬರೂ ಮೃತ ಪಟ್ಟಲ್ಲಿ ಕಾನೂನು ರೀತ್ಯಾ ಪೋಷಕರ ಹೆಸರಲ್ಲಿ ಬದಲಾವಣೆ ಮಾಡಲು ಸೂಕ್ತ ಪುರಾವೆಯೊಂದಿಗೆ ನಿವೇದನೆಯನ್ನು ಮೇಲಿನಂತೆ ಕಳುಹಿಸಬಹುದು.
* ಭಾಗ್ಯಲಕ್ಷ್ಮೀ ಯೋಜನೆಯ ಸುಕನ್ಯಾ ಸಮೃದ್ಧಿ ಖಾತೆಯಲ್ಲಿ ವೈಯಕ್ತಿಕವಾಗಿ ಹಣ ಕಟ್ಟಬಹುದೇ?. ಖಂಡಿತವಾಗಿಯೂ, ಕೋರ್ ಬ್ಯಾಂಕಿಂಗ್ ಸೌಲಭ್ಯವಿರುವ ಯಾವುದೇ ಪ್ರಧಾನ/ ಉಪ ಅಂಚೆ ಕಚೇರಿಯಲ್ಲಿ ವಾರ್ಷಿಕ ಮಿತಿ ರೂ.1.5 ಲಕ್ಷ ಮೀರದಂತೆ (ಸರಕಾರದ ವತಿಯಿಂದ ಜಮಾ ಮಾಡಲಾದ ರೂ. 3000ವನ್ನು ಸೇರಿಸಿ) ಕಟ್ಟಬಹುದು. ಯಾವುದೇ ಶಾಖಾ ಅಂಚೆ ಕಚೇರಿಯಲ್ಲಿ ಹಣ ಜಮಾ ಮಾಡಲು ಆಗುವುದಿಲ್ಲ. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆ ತೆರೆಯುವುದರ ಮೂಲಕ ಬ್ಯಾಂಕ್ ಅಕೌಂಟ್ ಮೂಲಕ ಆನ್ಲೈನ್ನಲ್ಲಿಯೂ ನಲ್ಲಿ ಸುಕನ್ಯಾ ಸಮೃದ್ಧಿ ಖಾತೆಯಲ್ಲಿ ಹಣ ಜಮಾ ಮಾಡಬಹುದು.
* ಭಾಗ್ಯಲಕ್ಷ್ಮಿ ಯೋಜನೆಯ ಅಡಿ ಬಾಂಡ್ ಬರುತ್ತದೆಯೇ?. ಭಾಗ್ಯಲಕ್ಷ್ಮೀ ಯೋಜನೆಯ ಅಡಿ ತೆರೆಯಲಾದ ಸುಕನ್ಯಾ ಸಮೃದ್ಧಿ ಖಾತೆ ಗೆ ಸಂಬಂಧಿಸಿದ ಪಾಸ್ ಪುಸ್ತಕ ನೀಡಲಾಗುತ್ತದೆ. ಪಾಸ್ ಪುಸ್ತಕವನ್ನು ಸಂಬಂಧಿಸಿದ ಜಿಲ್ಲೆಯ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರಿಗೆ ನೇರವಾಗಿ ಬೆಂಗಳೂರು ಜಿ.ಪಿ.ಓ. ದಿಂದ ಕಳುಹಿಸಿ ಕೊಡಲಾಗುವುದು.
* ಭಾಗ್ಯಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಬಿ.ಪಿ.ಎಲ್. ಕಾರ್ಡ್ ಪಡೆಯುವುದು ಕಡ್ಡಾಯವೇ?. ತಾಯಿಯ ಹೆಸರು ಇರುವ ಕಾರ್ಡ್ ಕಡ್ಡಾಯವೇ?. ಭಾಗ್ಯಲಕ್ಷ್ಮೀ ಯೋಜನೆಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನೆಯಾಗಿದ್ದು ಈ ಯೋಜನೆಯ ಅಡಿ ಬಿಪಿಎಲ್ ಕಾರ್ಡ್ ಹೊಂದಿರುವ ಮಕ್ಕಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಇದಕ್ಕೆ ಕುಟುಂಬದ ಯಜಮಾನನ ಹೆಸರಿನಲ್ಲಿರುವ ಬಿಪಿಎಲ್ ಕಾರ್ಡ್ ಪ್ರಸ್ತುತ ಪಡಿಸಬೇಕಾಗುತ್ತದೆ. ಬಿಪಿಎಲ್ ಕಾರ್ಡ್ನಲ್ಲಿ ತಾಯಿಯ ಹೆಸರು ಇರಬೇಕಾದ್ದು ಕಡ್ಡಾಯವಲ್ಲ. ಆದರೆ ತಾಯಿಯ ಅಂದರೆ ಸುಕನ್ಯಾ ಸಮೃದ್ಧಿ ಖಾತೆ ಅಪ್ರಾಪ್ತ ಮಗುವಿನ ಹೆಸರಿನಲ್ಲಿ ತೆರೆಯುವಾಗ ನಿಗದಿ ಪಡಿಸಿದ ಪೋಷಕರ ಗುರುತಿನ ಹಾಗೂ ವಿಳಾಸದ ಪುರಾವೆ ನೀಡುವುದು ಕಡ್ಡಾಯವಾಗಿರುತ್ತದೆ.












Click it and Unblock the Notifications