ಲೋಕಸಭೆ ಚುನಾವಣೆಗೆ ಮುನ್ನವೇ ಬಿಎಸ್ ವೈಗೆ ಬಿಜೆಪಿ ಬೈ ಬೈ?

Recommended Video

      lok sabha election 2019: ಲೋಕಸಭೆ ಚುನಾವಣೆಗೆ ಮುನ್ನವೇ ಬಿಎಸ್ ವೈಗೆ ಬಿಜೆಪಿ ಬೈ ಬೈ? | Oneindia Kannada

      ಇದು ಯಡಿಯೂರಪ್ಪನವರಿಗೆ ಕೊನೆ ಅವಕಾಶ. ಸರಕಾರ ರಚಿಸುವುದಕ್ಕೆ ಸಾಧ್ಯವಾಗದಿದ್ದರೂ ಈ ಮೈತ್ರಿ ಪಕ್ಷಗಳ ಮಧ್ಯೆ ಬೆಂಕಿ ಹಾಕಲೇಬೇಕು, ಕರ್ನಾಟಕದಲ್ಲಿ ರಾಷ್ಟ್ರಪತಿಗಳ ಆಳ್ವಿಕೆ ಬರುವಂತೆ ಮಾಡಲೇಬೇಕು. ಹಾಗೆ ಮಾಡದಿದ್ದರೆ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಜೀವನ ತೀರಾ ಹೀನಾಯವಾಗಿ ಕೊನೆಯಾಗುತ್ತದೆ...

      -ಹೀಗೆ ಮಾತನಾಡುತ್ತಾ ಕ್ಷಣ ಕಾಲ ಮೌನವಾದರು ಬಹು ಕಾಲದಿಂದ ಬಿಜೆಪಿ ಜತೆಗಿನ ಒಡನಾಟ ಹೊಂದಿರುವ ಆ ವ್ಯಕ್ತಿ. ಯಡಿಯೂರಪ್ಪ ಅವರನ್ನು ಪಕ್ಕಕ್ಕೆ ಸರಿಸುವುದು ಬಹುತೇಕ ಖಚಿತವಾಗಿದೆ. ಅದು ಸ್ವತಃ ಯಡಿಯೂರಪ್ಪ ಅವರಿಗೂ ಗೊತ್ತಿದೆ. ಈ ಬಾರಿಯ ಲೋಕಸಭಾ ಚುನಾವಣೆಯೇ ಡೆಡ್ ಲೈನ್. ಆ ನಂತರ ಮುಲಾಜಿಲ್ಲದೆ ಯಡಿಯೂರಪ್ಪ ಅವರನ್ನು ಬಿಜೆಪಿಯಲ್ಲಿ ಸೈಡಿಗೆ ಎಳೆದು ಹಾಕಲಾಗುತ್ತದೆ.

      ಬಿಜೆಪಿಗೆ ಯುವ ನಾಯಕತ್ವದ ಅಗತ್ಯ ಇದೆ. ಜತೆಗೆ ಎಷ್ಟೇ ಅವಕಾಶ ಸಿಕ್ಕರೂ ಮೊದಲಿನ ಹುರುಪಿನಲ್ಲಿ ಎದುರಾಳಿಗಳನ್ನು ಹಣಿಯುವುದಕ್ಕೆ ಯಡಿಯೂರಪ್ಪನವರಿಗೂ ಆಗುತ್ತಿಲ್ಲ. ಇನ್ನು ಪಕ್ಷದೊಳಗೇ ಅವರ ವಿರುದ್ಧ ಕತ್ತಿ ಮಸೆಯುತ್ತಿರುವವರು ಹಲವರಿದ್ದಾರೆ. ಮೇಲಿಂದ ಮೇಲೆ ತಮ್ಮ ಸೋಲಿಗೆ ಏನು ಕಾರಣ ಎಂಬುದು ಯಡಿಯೂರಪ್ಪಗೂ ಗೊತ್ತಿರುವುದರಿಂದ ತಮ್ಮ ಆಪ್ತರು, ಮಕ್ಕಳಿಗೆ ಪಕ್ಷದೊಳಗೊಂದು ಗಟ್ಟಿ ಸ್ಥಾನ ದೊರಕಿಸುವ ಹವಣಿಕೆಯಲ್ಲಿ ಅವರಿದ್ದಾರೆ.

      ವಿಧಾನಸಭೆ ಚುನಾವಣೆಯಲ್ಲಿ ಉಲ್ಟಾ ಹೊಡೆದ ಲೆಕ್ಕಾಚಾರ

      ವಿಧಾನಸಭೆ ಚುನಾವಣೆಯಲ್ಲಿ ಉಲ್ಟಾ ಹೊಡೆದ ಲೆಕ್ಕಾಚಾರ

      ಈ ಬಾರಿಯ ಆಪರೇಷನ್ ಕಮಲವನ್ನು ಬಡಪೆಟ್ಟಿಗೆ ಕೈ ಬಿಡುವುದಿಲ್ಲ. ಯಾಕೆಂದರೆ ಇನ್ನೊಂದು ಅವಧಿಗೆ ಮುಖ್ಯಮಂತ್ರಿ ಗಾದಿಯು ಸ್ವಲ್ಪದರಲ್ಲೇ ಕೈ ತಪ್ಪಿದೆ ಎಂಬ ಸುಲಭಕ್ಕೆ ತಮಣಿ ಆಗದ ಬೇಸರವೊಂದು ಅವರೊಳಗೆ ಮಡುಗಟ್ಟಿದೆ. ವಿಧಾನಸಭೆ ಚುನಾವಣೆ ಫಲಿತಾಂಶ ಬರುವ ಮುಂಚಿನಿಂದಲೂ, ಎಂಥದ್ದೇ ಸನ್ನಿವೇಶದಲ್ಲೂ ಜೆಡಿಎಸ್ ನವರು ಬಿಜೆಪಿ ಜತೆಗೇ ಬರುತ್ತಾರೆ. ಅವರ ಜತೆಗೆ ಚೌಕಾಶಿ ಮಾಡಿ, ಈ ಹಿಂದಿನ ಕಹಿ ಮರೆತು, ಸಿಎಂ ಗಾದಿ ಮೇಲೆ ಕೂರಬಹುದು ಅನ್ನೋದು ಯಡಿಯೂರಪ್ಪ ಲೆಕ್ಕಾಚಾರವಾಗಿತ್ತು. ಅದಕ್ಕೆ ಬೇಕಾದ ವೇದಿಕೆ ಕೂಡ ಸಿದ್ಧ ಮಾಡಿಟ್ಟುಕೊಂಡಿದ್ದರು. ಆದರೆ ಯಾವಾಗ ಲೆಕ್ಕಾಚಾರ ಉಲ್ಟಾ ಹೊಡೆಯಿತೋ ಮೊದಲಿಗೆ ಕನಲಿ ಹೋಗಿದ್ದು ಬಿಜೆಪಿ ಹೈಕಮಾಂಡ್. ಇಷ್ಟು ಸಂಭಾಳಿಸುವುದಕ್ಕೆ ಆಗದ ನೀವು ಅದೆಂಥ ಅನುಭವಿ ರಾಜಕಾರಣಿ ಎಂಬಂತೆ ಯಡಿಯೂರಪ್ಪ ಅವರ ಜತೆ ನಡೆದುಕೊಂಡರು.

      ಹೈ ಕಮಾಂಡ್ ಬಳಿ ಸವಾಲು ಹಾಕಿ ಬಂದಿದ್ದರು

      ಹೈ ಕಮಾಂಡ್ ಬಳಿ ಸವಾಲು ಹಾಕಿ ಬಂದಿದ್ದರು

      ಯಾವಾಗ ತನ್ನಂಥ ಗಟ್ಟಿ-ಬೇರು ಮಟ್ಟದ ರಾಜಕಾರಣಿಯನ್ನೇ ಹೀಗೆ ನಡೆಸಿಕೊಂಡರೋ ಆಗ ಯಡಿಯೂರಪ್ಪ, ಮೈತ್ರಿ ಸರಕಾರವನ್ನು ಕೆಡವುತ್ತೇನೆ ಎಂದು ಸವಾಲು ಹಾಕಿ ಬಂದಿದ್ದರು. ಅದಕ್ಕೆ ಇಂತಿಷ್ಟು ಕಾಲಾವಕಾಶವೂ ಕೇಳಿದ್ದರು. ವಿಧಾನಸಭಾ ಚುನಾವಣೆ ಮುಗಿದ ಹೊಸತರಲ್ಲೇ ಮೊದಲ ಬಾರಿಗೆ ಆಪರೇಷನ್ ಗೆ ಇಳಿದರಾದರೂ ಅದು ಶತಾಯಗತಾಯ ಈಡೇರುವುದಿಲ್ಲ ಅಂತ ಗೊತ್ತಾಗಿತ್ತು. ಎರಡನೇ ಬಾರಿಗೆ ಇಳಿದಾಗ ಪಕ್ಷದೊಳಗಿನ ಪ್ರಮುಖ ನಾಯಕರೇ ಕೈ ಕೊಟ್ಟರು ಎನ್ನುತ್ತವೆ ಮೂಲಗಳು. ಇನ್ನು ಮೂರನೇ ಬಾರಿಗೆ ಪಕ್ಷದೊಳಗಿನವರೇ ಯಡಿಯೂರಪ್ಪನವರ ಆಸೆಗೆ ಮಣ್ಣೆರಚಿದ್ದಾರೆ. ಇನ್ನೂ ಪಕ್ಷದೊಳಗೆ ಯಡಿಯೂರಪ್ಪ ಅವರನ್ನು ಮುಂದುವರಿಸಿಕೊಂಡು ಹೋಗುವುದರಲ್ಲಿ ಅರ್ಥವಿಲ್ಲ ಎಂಬ ಚರ್ಚೆ ಹೈ ಕಮಾಂಡ್ ನಲ್ಲೇ ಶುರುವಾಗಿದೆ. ಈಗಿನ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಒಟ್ಟಾಗಿಯೇ ಲೋಕಸಭೆ ಚುನಾವಣೆಗೆ ಹೋಗುವುದು ಪಕ್ಕಾ ಆಗಿದೆ.

      ಬಿಜೆಪಿ ಹನ್ನೆರಡಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವುದು ಅನುಮಾನ

      ಬಿಜೆಪಿ ಹನ್ನೆರಡಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವುದು ಅನುಮಾನ

      ಅಲ್ಲಿಗೆ ಬಿಜೆಪಿಗೆ ರಾಜ್ಯದಲ್ಲಿ ಹನ್ನೆರಡಕ್ಕಿಂತ ಹೆಚ್ಚು ಸ್ಥಾನಗಳು ಸಿಗುವುದು ಅನುಮಾನ ಎಂದು ಪಕ್ಷದ ಆಂತರಿಕ ವರದಿಯೇ ಹೇಳುತ್ತಿದೆ. ಇನ್ನು ಯಡಿಯೂರಪ್ಪ ಅವರನ್ನು ಮುಂಚೂಣಿಯಲ್ಲಿ ನಿಲ್ಲಿಸಿಕೊಂಡು ಲೋಕಸಭೆ ಚುನಾವಣೆಗೆ ಹೋದರೂ ಅಥವಾ ಅವರನ್ನು ಪಕ್ಕಕ್ಕೆ ಸರಿಸಿದರೂ ಹೆಚ್ಚು ವ್ಯತ್ಯಾಸ ಆಗುವುದಿಲ್ಲ ಎಂಬ ಆಲೋಚನೆ ಹೈಕಮಾಂಡ್ ನಲ್ಲಿ ಮೂಡಿದೆ. ಯಡಿಯೂರಪ್ಪ ಅವರ ನಾಯಕತ್ವದ ಬಗ್ಗೆ ಪಕ್ಷದಲ್ಲಿ ಅಸಮಾಧಾನ ಇರುವುದರಿಂದ ಹಾಗೂ ಪದೇ ಪದೇ ವಿಪಕ್ಷಗಳು ಬಿಎಸ್ ವೈರನ್ನು ಭ್ರಷ್ಟ ಎಂದು ಜರಿಯುವುದರಿಂದ ಆಗುವ ಡ್ಯಾಮೇಜ್ ನಿವಾರಿಸಿಕೊಳ್ಳುವುದಕ್ಕೆ ಆದ್ಯತೆ ನೀಡಬೇಕು ಎಂಬ ಬಗ್ಗೆ ಚಿಂತನೆ ನಡೆಯುತ್ತಿದೆ.

      ಹೈ ಕಮಾಂಡ್ ಬಳಿಯೇ ಕೆಲವು ಷರತ್ತು ಹಾಕಿದ್ದರು

      ಹೈ ಕಮಾಂಡ್ ಬಳಿಯೇ ಕೆಲವು ಷರತ್ತು ಹಾಕಿದ್ದರು

      ಪಳಗಿದ ರಾಜಕಾರಣಿ ಯಡಿಯೂರಪ್ಪ ಅವರಿಗೆ ಇವೆಲ್ಲ ಗೊತ್ತಿರಲಿಲ್ಲ ಅಂತಲ್ಲ. ಆದ್ದರಿಂದಲೇ ಹೈ ಕಮಾಂಡ್ ಜತೆಗೆ ಚೌಕಾಶಿಗೆ ಇಳಿದು, ಕರ್ನಾಟಕದಲ್ಲಿ ಮೈತ್ರಿ ಪಕ್ಷಗಳು ಒಟ್ಟಾಗಿ ಚುನಾವಣೆಗೆ ಹೋಗದಿರುವಂತೆ ಮಾಡುತ್ತೇನೆ. ಈಗಿರುವ ಸರಕಾರವನ್ನು ಉರುಳಿಸುತ್ತೇನೆ. ಅದಕ್ಕೆ ನನ್ನ ಕೆಲವು ಷರತ್ತುಗಳಿವೆ. ಅವುಗಳನ್ನು ಪೂರೈಸಬೇಕು ಎಂದಿದ್ದರು.ಈ ಮಾತುಕತೆಯಲ್ಲಾ ಆಗಿ ನಾಲ್ಕೈದು ತಿಂಗಳಿಗಿಂತ ಹೆಚ್ಚು ಸಮಯವೇ ಆಗಿದೆ. ಈಗಿನ ಸರಕಾರವನ್ನು ಕೆಡವುತ್ತೇನೆ. ನನ್ನನ್ನೇ ಮುಖ್ಯಮಂತ್ರಿಯಾಗಿ ಮಾಡಬೇಕು. ಲೋಕಸಭೆ ಚುನಾವಣೆಗೆ ಟಿಕೆಟ್ ಹಂಚಿಕೆ ಜವಾಬ್ದಾರಿ ನನಗೇ ನೀಡಬೇಕು...ಹೀಗೆ ಕೆಲವು ಷರತ್ತನ್ನು ಆಗ ಮುಂದಿಟ್ಟಿದ್ದರು. ಜತೆಗೆ ಪಕ್ಷದೊಳಗೆ ತನಗೆ ಅಡ್ಡಗಾಲಿನಂತೆ ಇರುವ ಕೆಲವು ನಾಯಕರನ್ನು ದಾರಿಯಿಂದ ಪಕ್ಕಕ್ಕೆ ಸರಿಸಬೇಕು ಎಂದು ಕೇಳಿದ್ದರು.

      ಇನ್ನೇನಿದ್ದರೂ ಮಕ್ಕಳಿಬ್ಬರ ಪಾಲಿಗೆ ಅವಕಾಶ

      ಇನ್ನೇನಿದ್ದರೂ ಮಕ್ಕಳಿಬ್ಬರ ಪಾಲಿಗೆ ಅವಕಾಶ

      ಲಿಂಗಾಯತ ಸಮುದಾಯದ ಪ್ರಬಲ ನಾಯಕರಾದ ಯಡಿಯೂರಪ್ಪನವರ ಮೇಲೆ ನಂಬಿಕೆ ಇಟ್ಟ ಹೈ ಕಮಾಂಡ್ ಕೂಡ ಎಲ್ಲವನ್ನೂ ಒಪ್ಪಿಕೊಂಡು, ಬೆಂಬಲ ಕೂಡ ಸೂಚಿಸಿತ್ತು. ಆದರೆ ಯಡಿಯೂರಪ್ಪ ಅವರಿಗೆ ಈ ಸಲ ಪಕ್ಷದೊಳಗೇ ಕೈ ಕೊಟ್ಟಿದ್ದಾರೆ. ಅಲ್ಲಿಗೆ ಅವರ ರಾಜಕೀಯ ಬದುಕಿನ ಕೊನೆ ಅಧ್ಯಾಯ ಇದು ಎಂಬುದು ನಿಶ್ಚಿತವಾಗಿದೆ. ಈಗಿನ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಎರಡನೇ ಮಗ ವಿಜಯೇಂದ್ರಗೆ ಪಕ್ಷದಲ್ಲಿ ಸಂಘಟನೆಗೆ ಸಂಬಂಧಿಸಿದಂತೆ ಕೆಲವು ಜವಾಬ್ದಾರಿ ನೀಡುವ ಹಾಗೂ ರಾಘವೇಂದ್ರ ಅವರನ್ನು ಈಗಿನಂತೆ ಸಂಸತ್ ಚುನಾವಣೆಗಳಿಗೆ ಸೀಮಿತಗೊಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಲೋಕಸಭೆ ಚುನಾವಣೆಗೆ ಮುನ್ನವೇ ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಆಗಬಹುದೋ ಅಥವಾ ಚುನಾವಣೆ ನಂತರ ಮಾಡುತ್ತಾರೋ ಎಂಬುದು ಸದ್ಯದ ಪ್ರಶ್ನೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+