CT Ravi Profile: ಬಾಬಾಬುಡನ್ ದತ್ತಪೀಠದಿಂದ ದೆಹಲಿಯವರೆಗೆ, ಸಿ.ಟಿ.ರವಿ ಪರಿಚಯ
ಯಡಿಯೂರಪ್ಪನವರ ಸರಕಾರದಲ್ಲಿ ಸಚಿವರಾಗಿದ್ದ ಸಿ.ಟಿ.ರವಿ ಈಗ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಜೊತೆಗೆ ಮೂರು ರಾಜ್ಯಗಳ ಉಸ್ತುವಾರಿ ಕೂಡಾ ಆಗಿದ್ದಾರೆ. ಅವರ ವ್ಯಕ್ತಿಚಿತ್ರದ ಒಂದು ಕಿರು ನೋಟವನ್ನು ಲೇಖನದಲ್ಲಿ ತಿಳಿಸಲಾಗಿದೆ.
ಸರಕಾರದ ಅಥವಾ ಕ್ಷೇತ್ರದ ಅಭಿವೃದ್ದಿ ಕಾರ್ಯವನ್ನು ಮುಂದಿಟ್ಟು ಕೊಂಡು ಹೆಚ್ಚಾಗಿ ಸಾರ್ವಜನಿಕರ ಮುಂದೆ ಹೋಗದೇ, ಹಿಂದುತ್ವ, ಬಾಬಾಬುಡನ್ ಗಿರಿ ವಿಚಾರದ ಮೂಲಕ ಜನಪ್ರಿಯರಾದವರು ಸಿ.ಟಿ.ರವಿ. ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಪ್ರಮುಖ ನಾಯಕರಾಗಿರುವ ರವಿಯವರು, ಬಿಜೆಪಿಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೆ ಆಪ್ತರೂ ಕೂಡಾ. ರವಿಯವರ ಕಿರು ಪರಿಚಯ ಹೀಗಿದೆ:
ಚಿಕ್ಕಮಾಗರವಳ್ಳಿ ತಿಮ್ಮೇಗೌಡ ರವಿ ಯಾನೆ ಸಿ.ಟಿ.ರವಿಯವರು ಹುಟ್ಟಿದ್ದು ಚಿಕ್ಕಮಗಳೂರಿನಲ್ಲಿ, ದಿನಾಂಕ ಜುಲೈ 18, 1967ರಂದು. ಸಂಘದ ಕಾರ್ಯಕರ್ತನಾಗಿ, ನಾಲ್ಕು ಬಾರಿ ಶಾಸಕರಾಗಿ, ಸಚಿವರಾಗಿ, ಈಗ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯ ಹುದ್ದೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ ಅಂದರೆ ಅದು ಅವರಲ್ಲಿರುವ ಪಕ್ಷ ನಿಷ್ಠೆ, ಹಿಂದುತ್ವ ಮತ್ತು ಮಾತಿನ ಕಲೆಯಿಂದಾಗಿ.

2012ರಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದ ಸಿ.ಟಿ.ರವಿಯವರು 1999ರಲ್ಲಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿ ಸೋಲುಂಡಿದ್ದರು. 2018ರಲ್ಲಿ ಸಲ್ಲಿಸಿದ ಅಫಿಡವಿಟ್ ಪ್ರಕಾರ ಇವರ ಆಸ್ತಿ 5,01,35,079 ಕೋಟಿ ರೂಪಾಯಿ ಮತ್ತು ಇರುವ ಸಾಲ 2,16,87,727 ಕೋಟಿ ರೂಪಾಯಿ.
ಇವರ ಮೇಲೆ ಐಪಿಸಿ 409, 420, 120,463, 466,120B, 171E ಕೇಸುಗಳು ದಾಖಲಾಗಿದ್ದವು. ಲೋಕಾಯುಕ್ತ ವಿಶೇಷ ನ್ಯಾಯಾಲಯ, ಬೆಂಗಳೂರು ಮೇಯೋಹಾಲ್ ಕೋರ್ಟ್, ಚಿಕ್ಕಮಗಳೂರು ಜೆಎಂಎಫ್ ಸಿ ಕೋರ್ಟ್ ನಲ್ಲಿ ಕೇಸ್ ರಿಜಿಸ್ಟರ್ ಆಗಿದೆ ಕೂಡಾ. ಅರೆನೂರು ಗ್ರಾಮದಲ್ಲಿ ಏಳು ಎಕರೆ ಕೃಷಿ ಜಮೀನು, ಚಿಕ್ಕಮಗಳೂರಿನಲ್ಲಿ ಕೃಷಿಯೇತರ ಜಮೀನು, ಬೆಂಗಳೂರು ಎಚ್ಬಿಆರ್ ಲೇಔಟ್ ನಲ್ಲಿ ಸೈಟ್, ಚಿಕ್ಕಮಗಳೂರು ಬಸವನಹಳ್ಳಿ ಮುಖ್ಯರಸ್ತೆಯಲ್ಲಿ ಜಮೀನು, ರಾಮನಹಳ್ಳಿ ಕಸಬ ಹೋಬಳಿಯಲ್ಲಿ ನಿವೇಶನವನ್ನು ಇವರು ಹೊಂದಿದ್ದಾರೆ.

ಕರ್ನಾಟಕ ಯುವ ಬಿಜೆಪಿ ಘಟಕದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲು ಆರಂಭಿಸಿದ ಸಿ.ಟಿ.ರವಿಯವರನ್ನು ರಾಜನಾಥ್ ಸಿಂಗ್ ಅವರು ವಿಶೇಷ ಆಹ್ವಾನಿತರ ಸ್ಥಾನಮಾನವನ್ನು ನೀಡಿದ್ದರು. ಇದಾದ ನಂತರ ಇವರು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. 2004ರಲ್ಲಿ ಮೊದಲ ಬಾರಿಗೆ ಅವರು ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಸಗೀರ್ ಅಹ್ಮದ್ ಅವರನ್ನು ಸುಮಾರು 25ಸಾವಿರಕ್ಕೂ ಅಧಿಕ ಮತಗಳಿಂದ ಸೋಲಿಸಿ ವಿಧಾನಸಭೆಗೆ ಆಯ್ಕೆಯಾದರು.
ಮುನ್ಸಿಪಲ್ ಕೌನ್ಸಿಲರ್ ನೀಡಿದ್ದ ದೂರು
2011ರಲ್ಲಿ ಮುನ್ಸಿಪಲ್ ಕೌನ್ಸಿಲರ್ ನೀಡಿದ ದೂರಿನ ಅನ್ವಯ ಸಿ.ಟಿ.ರವಿ ವಿರುದ್ದ ಲೋಕಾಯುಕ್ತ ಪೊಲೀಸ್ ನಲ್ಲಿ FIR ದಾಖಲಾಗಿತ್ತು. ಸಾರ್ವಜನಿಕ ಆಸ್ತಿಯನ್ನು ಆಂಜನೇಯ ಎಜುಕೇಶನ್ ಸೊಸೈಟಿ ಹೆಸರಿನಲ್ಲಿ 12.09ಲಕ್ಷ ರೂಪಾಯಿಗೆ ಖರೀದಿಸಿದ್ದರು. ಅಸಲಿಗೆ ಅಂದಿನ ಮಾರುಕಟ್ಟೆ ಬೆಲೆ ಐದು ಕೋಟಿ ಬೆಲೆಬಾಳುವ ಆಸ್ತಿಯನ್ನು ತಮ್ಮ ಪ್ರಭಾವ ಬಳಸಿ ದುರುಪಯೋಗ ಪಡಿಸಿಕೊಂಡಿದ್ದರು ಎನ್ನುವ ಆರೋಪದ ಮೇಲೆ ದೂರು ದಾಖಲಾಗಿತ್ತು.
ಉನ್ನತ ಶಿಕ್ಷಣ ಇಲಾಖೆಯ ಸಚಿವರಾಗಿ ಕಾರ್ಯನಿರ್ವಹಿಸಿದ ರವಿ
2012ರಲ್ಲಿ ಬಿಜೆಪಿ ಸರಕಾರದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಸಚಿವರಾಗಿ ಕಾರ್ಯನಿರ್ವಹಿಸಿದ ರವಿ, 2013ರಲ್ಲಿ ಕಾಂಗ್ರೆಸ್ಸಿನ ಕೆ.ಎಸ್.ಶಾಂತೇಗೌಡ ವಿರುದ್ದ 10,988 ವಿರುದ್ದ ಗೆಲುವು ಸಾಧಿಸಿದರು. ಕಳೆದ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ಸಿನ ಬಿ.ಎಲ್.ಶಂಕರ್ ವಿರುದ್ದ ಭಾರೀ ಅಂತರದ ಗೆಲುವು ಸಾಧಿಸುವ ಮೂಲಕ ಸತತವಾಗಿ ನಾಲ್ಕು ಬಾರಿ ಶಾಸಕರಾದ ಹೆಗ್ಗಳಿಕೆಗೆ ಪಾತ್ರರಾದರು.
ಸಿ.ಟಿ.ರವಿ ಪ್ರಚೋದನಕಾರಿ ಭಾಷಣ
ಸಿ.ಟಿ.ರವಿ ಪ್ರಚೋದನಕಾರಿ ಭಾಷಣ ನೀಡಿದ್ದಕ್ಕಾಗಿ (2017, ಸಕಲೇಶಪುರದಲ್ಲಿ) ಕರ್ನಾಟಕ ಹೈಕೋರ್ಟ್ ಇವರಿಗೆ ನೊಟೀಸ್ ಜಾರಿ ಮಾಡಲು ಸೂಚಿಸಿತ್ತು. ಫೆಬ್ರವರಿ 19, 2019ರಲ್ಲಿ ರವಿ ಪ್ರಯಾಣಿಸುತ್ತಿದ್ದ ಕಾರು (ತುಮಕೂರಿನಲ್ಲಿ) ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತ ಪಟ್ಟಿದ್ದರು. ಜೊತೆಗೆ, ಮೂವರು ಗಂಭೀರವಾಗಿ ಗಾಯಗೊಂಡಿದ್ದರು.
ಹಿಂದುತ್ವ, ಹಲಾಲ್, ಹಿಜಾಬ್, ಟಿಪ್ಪು ಸುಲ್ತಾನ್
ಹಿಂದುತ್ವ, ಹಲಾಲ್, ಹಿಜಾಬ್, ಟಿಪ್ಪು ಸುಲ್ತಾನ್ ವಿಚಾರದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಕ್ಕಾಗಿ ವಿರೋಧ ಪಕ್ಷಗಳು ಹಲವು ಬಾರಿ ಇವರ ವಿರುದ್ದ ಆಕ್ರೋಶವನ್ನು ಹೊರಹಾಕಿದ್ದವು. ತೀರಾ ಇತ್ತೀಚೆಗೆ ಮಾಂಸಾಹಾರಿ ಸೇವಿಸಿ ದೇಗುಲಕ್ಕೆ ಭೇಟಿ ನೀಡಿದ ವಿಚಾರದಲ್ಲಿ ಸಿ.ಟಿ.ರವಿಯವರು ವ್ಯಾಪಕ ಟ್ರೋಲಿಗೆ ಒಳಗಾಗಿದ್ದರು. ನಾನ್ ವೆಜ್ ತಿಂದಿರುವುದನ್ನು ಮರೆತು ದೇವಸ್ಥಾನಕ್ಕೆ ಹೋಗಿದ್ದೆ ಎನ್ನುವ ಸ್ಪಷ್ಟನೆ ರವಿ ಕಡೆಯಿಂದ ಬಂದಿತ್ತು.
ಇನಾಂ ದತ್ತಾತ್ರೇಯ ಬಾಬಾಬುಡನ್ಗಿರಿ ಕ್ಷೇತ್ರ
ರಾಜ್ಯದ ಅತ್ಯಂತ ದೊಡ್ಡ ಶಿಖರ ಮುಳ್ಳಯ್ಯನಗಿರಿ. ಹಿಂದೂ ಮುಸ್ಲಿಮರ ಭಾವೈಕ್ಯತೆ ಕೇಂದ್ರ ಇನಾಂ ದತ್ತಾತ್ರೇಯ ಬಾಬಾಬುಡನ್ಗಿರಿ ಕ್ಷೇತ್ರ ಇರೋದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲೇ. ರಾಜಕೀಯವಾಗಿ ಸಿ.ಟಿ.ರವಿ ಮುನ್ನಲೆಗೆ ಬರಲು ಬಾಬಾಬುಡನ್ ಗಿರಿ- ದತ್ತಪೀಠ ವಿಚಾರ ಪ್ರಮುಖವಾಗಿದೆ. ಸ್ವಾತಂತ್ರ್ಯ ಬಂದ ಬಳಿಕ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಚಿಕ್ಕಮಗಳೂರು ಕಾಂಗ್ರೆಸ್ನ ಭದ್ರಕೋಟೆಯಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ತಮ್ಮ ರಾಜಕೀಯ ಪುನರ್ಜನ್ಮವನ್ನೂ ಪಡೆದಿದ್ದರು. ಆದರೆ, ಈಗ ಕ್ಷೇತ್ರ ಕಮಲದ ಕೋಟೆಯಾಗಿದೆ.
ನಾಯಕತ್ವ ಗುಣ ಬೆಳೆಸಿಕೊಂಡಿದ್ದ ಯುವ ನಾಯಕ ಸಿ.ಟಿ.ರವಿ
ಎಬಿವಿಪಿ ಕಾರ್ಯಕರ್ತನಾಗಿ ಕಾಲೇಜು ದಿನಗಳಲ್ಲಿ ನಾಯಕತ್ವ ಗುಣ ಬೆಳೆಸಿಕೊಂಡಿದ್ದ ಯುವ ನಾಯಕ ಸಿ.ಟಿ.ರವಿ, ಹಿಂದುತ್ವದ ಒಂದೊಂದು ಹೋರಾಟವನ್ನೇ ರಾಜಕೀಯ ಮೆಟ್ಟಿಲಾಗಿ ಮಾಡಿಕೊಂಡು ಈ ಹಂತಕ್ಕೆ ಬಂದು ನಿಂತಿದ್ದಾರೆ, ಮುಂಬರುವ (2023) ಚುನಾವಣೆಯಲ್ಲೂ ರವಿ ಟಿಕೆಟ್ ಆಕಾಂಕ್ಷಿ. ಎಚ್.ಡಿ.ತಮ್ಮಯ್ಯ, ಗಾಯತ್ರಿ ಶಾಂತೇಗೌಡ, ಬಿ.ಎಚ್.ಹರೀಶ್ (ಕಾಂಗ್ರೆಸ್), ತಿಮ್ಮಶೆಟ್ಟಿ (ಜೆಡಿಎಸ್) ಅಭ್ಯರ್ಥಿಗಾಗಿ ಪೈಪೋಟೀಯಲ್ಲಿದ್ದಾರೆ.
ಸಿ.ಟಿ.ರವಿಗೆ ನಿಜವಾದ ಅಗ್ನಿಪರೀಕ್ಷೆ ಎದುರಾಗಲಿದೆ ಎನ್ನುವ ವಿಶ್ಲೇಷಣೆ
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಎಚ್.ಡಿ.ತಮ್ಮಯ್ಯ, ತೀರಾ ಇತ್ತೀಚಿನವರೆಗೆ ರವಿಯವರ ಪರಮಾಪ್ತರು. ಚಿಕ್ಕಮಗಳೂರು ಕ್ಷೇತ್ರದ ಅಂತರಂಗವನ್ನು ಬಲ್ಲವರೂ, ರಾಜಕೀಯವಾಗಿ ಹಿಡಿತವನ್ನೂ ಹೊಂದಿರುವ ತಮ್ಮಯ್ಯಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದೇ ಆದಲ್ಲಿ, ಕ್ಷೇತ್ರದ ಚುನಾವಣೆ ಜಿದ್ದಾಜಿದ್ದಿನಿಂದ ಇರಲಿದ್ದು, ಸಿ.ಟಿ.ರವಿಗೆ ನಿಜವಾದ ಅಗ್ನಿಪರೀಕ್ಷೆ ಎದುರಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.












Click it and Unblock the Notifications