ರಾಜ್ಯಸಭೆ ಸದಸ್ಯ ಡಾ. ಕೆ. ನಾರಾಯಣ ಪರಿಚಯ
ಬೆಂಗಳೂರು, ನವೆಂಬರ್ 23: ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆ ಸದಸ್ಯರಾಗಿ ಬಿಜೆಪಿಯ ಡಾ. ಕೆ. ನಾರಾಯಣ್ ಅವಿರೋಧವಾಗಿ ಆಯ್ಕೆಯಾದರು. ಅಶೋಕ್ ಗಸ್ತಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ಘೋಷಣೆಯಾಗಿತ್ತು.
ಬೇರೆ ಯಾವ ಪಕ್ಷದ ಅಭ್ಯರ್ಥಿಯೂ ನಾಪತ್ರ ಸಲ್ಲಿಸಿದ ಕಾರಣ ಬಿಜೆಪಿಯ ಡಾ. ಕೆ. ನಾರಾಯಣ ಅವರು ರಾಜ್ಯಸಭೆ ಸದಸ್ಯರಾಗಿ ಸೋಮವಾರ ಅವಿರೋಧವಾಗಿ ಆಯ್ಕೆಯಾದರು. ಉಪ ಚುನಾವಣೆಯ ಚುನಾವಣಾಧಿಕಾರಿ, ಕರ್ನಾಟಕ ವಿಧಾನಸಭಾ ಕಾರ್ಯದರ್ಶಿ ವಿಶಾಲಾಕ್ಷಿ ಅವರು ಅಧಿಕೃತವಾಗಿ ಈ ಕುರಿತು ಘೋಷಣೆ ಮಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಡಾ. ಕೆ. ನಾರಾಯಣ ಅವರಿಗೆ ನವೆಂಬರ್ 18ರಂದು ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬಿ-ಫಾರಂ ನೀಡಿದ್ದರು. ಅಂದೇ ನಾರಾಯಣ ಅವರು ನಾಮಪತ್ರವನ್ನು ಸಲ್ಲಿಕೆ ಮಾಡಿದ್ದರು.

ಡಾ. ಕೆ. ನಾರಾಯಣ ಪರಿಚಯ; ಬಿಜೆಪಿ ಸಾಮಾನ್ಯ ಕಾರ್ಯಕರ್ತರಿಗೆ ಮನ್ನಣೆ ನೀಡುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮುದ್ರಣ ಉದ್ಯಮ ನಡೆಸುತ್ತಿರುವ ಡಾ. ಕೆ. ನಾರಾಯಣ ಅವರಿಗೆ ರಾಜ್ಯಸಭೆ ಸದಸ್ಯರಾಗುವ ಅವಕಾಶವನ್ನು ಪಕ್ಷ ನೀಡಿದೆ.
ಬೆಂಗಳೂರಿನಲ್ಲಿರುವ ಡಾ. ಕೆ. ನಾರಾಯಣ ಮುದ್ರಣ ಉದ್ಯಮ ಹೊಂದಿದ್ದಾರೆ. ಬಿಜೆಪಿ ಮತ್ತು ಸಂಘ ಪರಿವಾರದ ಕರಪತ್ರಗಳನ್ನು ಮುದ್ರಿಸಿ ಕೊಡುತ್ತಿದ್ದರು. ದೇವಾಂಗ ಸಮುದಾಯಕ್ಕೆ ಸೇರಿದ ಇವರು ಮೊದಲ ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಡಾ. ಕೆ. ನಾರಾಯಣ ಮೂಲತಃ ಮಂಗಳೂರಿನವರು. 1982ರಲ್ಲಿ ಬೆಂಗಳೂರು ನಗರದಲ್ಲಿ ಮೊದಲ ಬಾರಿಗೆ ಮಲ್ಟಿ ಕಲರ್ ಪ್ರಿಂಟಿಂಗ್ ತಂತ್ರಜ್ಞಾನವನ್ನು ಪರಿಚಯಿಸಿದ್ದು ನಾರಾಯಣ ಅವರು. ಸಂಸ್ಕೃತ ಮಾಸ ಪತ್ರಿಕೆ 'ಸಂಭಾಷಣಾ ಸಂದೇಶ'ವನ್ನು ಪ್ರಕಟಿಸುತ್ತಿದ್ದಾರೆ.
ಹಿಂದೂ ಸೇವಾ ಪ್ರತಿಷ್ಠಾನದ ಖಜಾಂಚಿ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪ್ರಮುಖ ಹುದ್ದೆಗಳಲ್ಲಿ ಡಾ. ಕೆ. ನಾರಾಯಣ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಮಂಗಳೂರು, ಪುತ್ತೂರು ಸೇರಿದಂತೆ ಹಲವಾರು ಕಡೆ ಸಮುದಾಯದ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿದ್ದಾರೆ.
ಶಿಕ್ಷಣ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸುಮಾರು 40 ವರ್ಷಗಳ ಕಾಲ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಇವರಿಗೆ ಗೌರವ ಡಾಕ್ಟರೇಟ್ ಸಹ ಸಿಕ್ಕಿದೆ.












Click it and Unblock the Notifications