ಪಶ್ಚಿಮ ಬಂಗಾಳದಿಂದ ಎನ್ಆರ್ ಸಿಯನ್ನು ಬಿಜೆಪಿ ಕೈಬಿಟ್ಟಿದ್ದೇಕೆ?
ಕೋಲ್ಕತಾ, ಡಿಸೆಂಬರ್ 21: ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಜಾರಿಯನ್ನು ಬಿಜೆಪಿ ಅಧಿಕೃತವಾಗಿ ಕೈಬಿಟ್ಟಿದೆ. ರಾಜ್ಯದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಮತದಾರರ ಆಕ್ರೋಶಕ್ಕೆ ತುತ್ತಾಗುವ ಸಾಧ್ಯತೆ ಇರುವುದರಿಂದ ಅಮಿತ್ ಶಾ ಅವರ ಉದ್ದೇಶವನ್ನು ತಡೆಹಿಡಿಯಲಾಗಿದೆ. ಈ ಮುಂಚೆ ಅವರು ಬಂಗಾಳದಲ್ಲಿ ಏನೇ ಆದರೂ ಎನ್ಆರ್ಸಿ ಜಾರಿಗೆ ತರುವುದಾಗಿ ಹೇಳಿದ್ದರು.
ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನು ನಾಲ್ಕು ತಿಂಗಳು ಬಾಕಿ ಇದೆ. ಹತ್ತು ವರ್ಷಗಳ ಟಿಎಂಸಿ ಆಡಳಿತವನ್ನು ಪತನಗೊಳಿಸಿ ತನ್ನ ಸಾಮಾಜ್ಯ ಕಟ್ಟಲು ಬಿಜೆಪಿ ಕನಸು ಕಾಣುತ್ತಿದೆ. ತಳಮಟ್ಟದಲ್ಲಿ ಪರಾಮರ್ಶೆ ನಡೆಸಿದ ಪ್ರಮುಖ ನಾಯಕರು ಎನ್ಆರ್ಸಿಯನ್ನು ಚುನಾವಣೆಯ ವಿಷಯವನ್ನಾಗಿಸಿದರೆ ಅದು ದೊಡ್ಡ ಮಟ್ಟಕ್ಕೆ ಹೊಡೆತ ನೀಡುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಅದನ್ನು ಸದ್ಯಕ್ಕೆ ಕೈಬಿಡಲು ತೀರ್ಮಾನಿಸಲಾಗಿದೆ.
ಆದರೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜನವರಿಯಿಂದ ಕಟ್ಟುನಿಟ್ಟಾಗಿ ಜಾರಿಗೆ ತರುವ ಪ್ರಾಥಮಿಕ ಕಾರ್ಯಗಳನ್ನು ಶುರುಮಾಡುವ ಬಗ್ಗೆ ಬಿಜೆಪಿ ಪಟ್ಟುಹಿಡಿದಿದೆ ಎನ್ನಲಾಗಿದೆ. ಕೊರೊನಾ ವೈರಸ್ ಲಸಿಕೆ ನೀಡುವ ಕಾರ್ಯಕ್ರಮ ಶುರುವಾದ ಬಳಿಕವಷ್ಟೇ ಸಿಎಎ ಅನುಷ್ಠಾನ ನಡೆಯಲಿದೆ ಎಂದು ಅಮಿತ್ ಶಾ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ.

ಬಂಗಾಳ, ಅಸ್ಸಾಂನಲ್ಲಿ ಬಾಂಗ್ಲಾದೇಶಿಗಳು
ಮುಸ್ಲಿಂ ಬಾಹುಳ್ಯದ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನಗಳಿಗೆ ಸೇರಿದ ಆರು ಅಲ್ಪಸಂಖ್ಯಾತ ಸಮುದಾಯಗಳ ವಲಸಿಗರಿಗೆ ಭಾರತದ ಪೌರತ್ವ ನೀಡುವುದನ್ನು ಸಿಎಎ ಸುಲಭವಾಗಿಸಿದರೆ, ಅಕ್ರಮ ವಲಸಿಗರನ್ನು ಗುರುತಿಸಿ, ಗಡಿಪಾರು ಮಾಡುವುದರತ್ತ ಎನ್ಆರ್ಸಿ ಗುರಿ ಹೊಂದಿದೆ. ಈ ಎರಡೂ ಕಾಯ್ದೆಗಳು ಭಾರತದಲ್ಲಿನ ಅಕ್ರಮ ಮುಸ್ಲಿಂ ವಲಸಿಗರನ್ನು ಹೊರಗಟ್ಟುವ ಉದ್ದೇಶ ಹೊಂದಿವೆ ಎಂದು ಹೇಳಲಾಗಿದೆ. ಬಾಂಗ್ಲಾದೇಶ ಗಡಿಯಲ್ಲಿರುವ ಬಂಗಾಳ ಮತ್ತು ಅಸ್ಸಾಂಗಳು ಅಕ್ರಮ ವಲಸಿಗರ ತಾಣಗಳಾಗಿವೆ.

ಅಸ್ಸಾಂನಲ್ಲಿ ಉಂಟಾದ ಗೊಂದಲ
ಸಿಎಎ ಮತ್ತು ಎನ್ಆರ್ಸಿಗೂ ಸಂಬಂಧವಿಲ್ಲ ಎಂದು ಬಿಜೆಪಿ ಪ್ರತಿಪಾದಿಸುತ್ತಾ ಬಂದಿದೆ. ಆದರೆ ಸ್ವತಃ ಅಮಿತ್ ಶಾ ಅನೇಕ ಬಾರಿ ಅವುಗಳ ಸಂಬಂಧವನ್ನು ಹೇಳಿದ್ದಾರೆ. ಕಳೆದ ವರ್ಷ ಸುಪ್ರೀಂಕೋರ್ಟ್ ಆದೇಶದ ಬಳಿಕ ಎನ್ಆರ್ಸಿಯನ್ನು ಪ್ರಾಯೋಗಿತವಾಗಿ ಅಸ್ಸಾಂನಲ್ಲಿ ಜಾರಿಗೆ ತರಲಾಗಿತ್ತು. ಬಿಜೆಪಿ ಸರ್ಕಾರವಿರುವ ರಾಜ್ಯದಲ್ಲಿ ಅಂತಿಮ ಪಟ್ಟಿಯಲ್ಲಿ ಅನೇಕ ಹಿಂದೂಗಳ ಹೆಸರು ಇದ್ದಿದ್ದು ಗೊಂದಲಕ್ಕೆ ಕಾರಣವಾಗಿದೆ. ಹೀಗಾಗಿ ಬಂಗಾಳದಲ್ಲಿ ಕಾಯ್ದೆ ಜಾರಿಗೆ ಹಿಂದೇಟು ಹಾಕಲಾಗಿದೆ.

ಎನ್ಆರ್ಸಿ ಆದ್ಯತೆ ಪಟ್ಟಿಯಲ್ಲಿಲ್ಲ
ಪಶ್ಚಿಮ ಬಂಗಾಳದ ಎರಡು ದಿನಗಳ ಭೇಟಿಯಲ್ಲಿ ಎನ್ಆರ್ಸಿ ಕುರಿತಾದ ಹೇಳಿಕೆಯಿಂದ ಅಮಿತ್ ಶಾ ದೂರವಿದ್ದದ್ದು ಬಿಜೆಪಿಯ ನೀತಿಯಲ್ಲಿನ ಬದಲಾವಣೆಯನ್ನು ಸ್ಪಷ್ಟಪಡಿಸಿದೆ. ಎನ್ಆರ್ಸಿ ಕುರಿತಾದ ಪ್ರಶ್ನೆಗೆ ಉತ್ತರಿಸದ ಅವರು, ಸಿಎಎ ಕುರಿತಾಗಿ ಪ್ರತಿಕ್ರಿಯಿಸಿದ್ದರು. ಎನ್ಆರ್ಸಿ ಈಗ ಪಕ್ಷದ ಆದ್ಯತೆಯ ಪಟ್ಟಿಯಿಂದ ಹೊರಗಿಡಲಾಗಿದೆ. ಅಸ್ಸಾಂನಲ್ಲಿ ಎನ್ಆರ್ಸಿ ಜಾರಿಗೆ ಬಂದಿದ್ದು ಕೂಡ ಪಕ್ಷದ ನಿರ್ಧಾರವಾಗಿರಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ತಿಳಿಸಿದ್ದಾರೆ.

ಇದು ಚುನಾವಣೆಯ ತಂತ್ರವಲ್ಲ
'ಅಸ್ಸಾಂನಲ್ಲಿ ಸುಪ್ರೀಂಕೋರ್ಟ್ನ ಆದೇಶದಂತೆ ಜಾರಿಯಾಗಿದೆ. ಆದರೆ ಬಂಗಾಲದಲ್ಲಿ ಅಂತಹ ನ್ಯಾಯಾಂಗದ ಆದೇಶಗಳಿಲ್ಲ. ಸರ್ಕಾರ ಅಥವಾ ಪಕ್ಷದಲ್ಲಿ ಎನ್ಆರ್ಸಿ ಬಗ್ಗೆ ಚರ್ಚೆ ನಡೆಯುತ್ತಿಲ್ಲ' ಎಂದು ಅವರು ತಿಳಿಸಿದ್ದಾರೆ. ಬಾಂಗ್ಲಾದೇಶದಿಂದ ಬಂದು ಬಂಗಾಲದಲ್ಲಿ ಅನೇಕ ವರ್ಷಗಳಿಂದ ಯಾವುದೇ ಹಕ್ಕುಗಳಿಲ್ಲದೆ ನೆಲೆಸಿರುವ ನಿರಾಶ್ರಿತರಿಗೆ ನಾವು ಪೌರತ್ವ ನೀಡುತ್ತೇವೆ. ಇದು ಚುನಾವಣೆಯ ತಂತ್ರವಲ್ಲ. ಜನರಿಗೆ ನಾವು ನೀಡಿದ ಭರವಸೆ. ಅದನ್ನು ಈಡೇರಿಸುತ್ತೇವೆ. ಸಿಎಎ ಮೊದಲ ಹಂತದ ಕೆಲಸ ಜನವರಿಯಲ್ಲಿ ಆರಂಭವಾಗಲಿದೆ' ಎಂದು ಹೇಳಿದ್ದಾರೆ.

ಮಮತಾಗೆ ಚುನಾವಣೆ ವಿಷಯ
ಎನ್ಆರ್ಸಿ ವಿಷಯವು ರಾಜಕೀಯವಾಗಿ ಯಾವ ರೀತಿಯ ಪ್ರಭಾವ ಬೀರಲಿದೆ ಎನ್ನುವುದನ್ನು ಇನ್ನೂ ಅಂದಾಜಿಸಲು ಸಾಧ್ಯವಾಗಿಲ್ಲ. ಆದರೆ ಮಮತಾ ಬ್ಯಾನರ್ಜಿ ಅದನ್ನು ತಮ್ಮ ಚುನಾವಣೆಯ ವಿಷಯವಾಗಿ ಬಳಸಿಕೊಂಡಿದ್ದಾರೆ. ಬಿಜೆಪಿ ಜನರನ್ನು ಒಡೆಯಲು ಬಯಸಿದೆ ಎಂದು ಅವರು ಆರೋಪಿಸುತ್ತಿದ್ದಾರೆ.

ಬಾಂಗ್ಲಾ ಜತೆಗಿನ ಸಂಬಂಧ
ಇತ್ತ ಬಿಜೆಪಿ ಎನ್ಆರ್ಸಿ ಜಾರಿಯಾಗುವುದಿಲ್ಲ ಎಂದು ಪ್ರತಿಪಾದಿಸಲು ಆರಂಭಿಸಿದೆ. ಬಂಗಾಳದಲ್ಲಿ ಎನ್ಆರ್ಸಿ ಜಾರಿಗೆ ತರುವುದು ಬಾಂಗ್ಲಾದೇಶದೊಂದಿಗಿನ ಸಂಬಂಧದ ಮೇಲೆ ಪರಿಣಾಮ ಬೀರಲಿದೆ. ಪಕ್ಷದ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಬಂಗಾಳಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ಅವಲೋಕಿಸಿದ್ದಾರೆ. ಅಸ್ಸಾಂನಲ್ಲಿ ಉಂಟಾದ ಗೊಂದಲಗಳನ್ನು ಪರಿಹರಿಸುವುದರಲ್ಲಿ ಬಿಜೆಪಿ ಮುಳುಗಿದೆ. ಅವರು ಬಯಸಿದ್ದು ಮತ್ತು ಆಲೋಚಿಸಿದ್ದು ಅಲ್ಲಿ ಯಥಾವತ್ತಾಗಿ ಜಾರಿಯಾಗಿಲ್ಲ. ಹೀಗಾಗಿ ಬಂಗಾಳದಲ್ಲಿ ಬಿಜೆಪಿ ತನ್ನ ನಿಲುವು ಬದಲಿಸಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications