ನಿತೀಶ್ ನಾಯಕತ್ವದ ಬಗ್ಗೆ ನಡ್ಡಾ ಘೋಷಣೆ, ಚಿರಾಗ್ ಕಿಡಿ
ಪಾಟ್ನಾ, ಸೆ. 13: ಬಿಹಾರದಲ್ಲಿ ಯಾರ ನೇತೃತ್ವದಲ್ಲಿ ಚುನಾವಣೆ ನಡೆಸಬೇಕು ಎಂಬ ಕುತೂಹಲಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ತೆರೆ ಎಳೆದಿದ್ದಾರೆ. ಬಿಹಾರ ಸಿಎಂ ನಿತೀಶ್ ಕುಮಾರ್ ನೇತೃತ್ವದಲ್ಲೇ ಚುನಾವಣೆ ಎದುರಿಸಲಿದೆ ಎಂದು ಘೋಷಿಸಿದ್ದಾರೆ. ಇದರಿಂದ ಸಹಜವಾಗಿ ಎಲ್ಜೆಪಿಯ ಚಿರಾಗ್ ಪಾಸ್ವಾನ್ ಗರಂ ಆಗಿದ್ದಾರೆ.
ಜೆಡಿಯು ವಿರುದ್ಧ ಎಲ್ ಜೆಪಿ ಅಭ್ಯರ್ಥಿ ಕಣಕ್ಕಿಳಿದರೆ ಮೈತ್ರಿ ಹಾಗೂ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂಬುದು ಬಿಜೆಪಿಗೂ ಗೊತ್ತಿದ್ದರೂ ನಿತೀಶ್ ರನ್ನೇ ಮುಂದಿಟ್ಟು ಬಿಹಾರ ಯುದ್ಧ ಗೆಲ್ಲಲು ಬಿಜೆಪಿ ಮುಂದಾಗಿದೆ. ಎಲ್ ಜೆಪಿಗೆ ರಾಮ್ ವಿಲಾಸ್ ಪಾಸ್ವಾನ್ ಅವರು ಕೇಂದ್ರ ಸಚಿವರಾಗಿ ಉಳಿದುಕೊಳ್ಳಬೇಕಿದೆ. ಚುನಾವಣೆ ಹತ್ತಿರ ಇರುವುದರಿಂದ ಮೈತ್ರಿ ಉಳಿಸಿಕೊಳ್ಳುವುದು ಮೂರು ಪಕ್ಷಗಳಿಗೂ ಬೇಕಿದೆ.
ಸುಶಾಂತ್ ಸಿಂಗ್ ಚುನಾವಣೆ ವಿಷಯವಲ್ಲ: ಈ ನಡುವೆ ಬಿಜೆಪಿ ಮುಖಂಡ ಸುಶೀಲ್ ಮೋದಿ ಅವರು ಸುಶಾಂತ್ ಸಿಂಗ್ ಸಾವಿನ ಪ್ರಕರಣವನ್ನು ಚುನಾವಣೆ ವಿಷಯವಾಗಿ ಬಿಜೆಪಿ ಬಳಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜೆಪಿ ನಡ್ಡಾರನ್ನು ಭೇಟಿ ಮಾಡಲು ಉತ್ಸುಕನಾಗಿದ್ದೇನೆ, ಜೆಪಿ ನಡ್ಡಾ ಹಾಗೂ ಅಮಿತ್ ಶಾರ ಜೊತೆ ಸಂಪರ್ಕದಲ್ಲಿದ್ದೇನೆ. ಜೆಡಿಯು ದೊಡ್ಡ ಪಕ್ಷವಾಗಿದ್ದು, ಮೊದಲು ಜೆಡಿಯು ಮುಖಂಡರನ್ನೇ ಭೇಟಿ ಮಾಡಲಿ, ನಂತರ ನಮ್ಮನ್ನು ಭೇಟಿಯಾಗಲಿ ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ.

ದಲಿತ ಮತಗಳ ಲೆಕ್ಕಾಚಾರ ಹೇಗಿದೆ?
ದಲಿತ ಮತಗಳ ಲೆಕ್ಕಾಚಾರ ಅಂದು -ಇಂದು ಬಿಹಾರದಲ್ಲಿ ಶೇ 17ರಷ್ಟು ದಲಿತ ಮತಗಳಿವೆ. ಜಾತಿ ಆಧಾರಿತ ರಾಜಕೀಯವನ್ನು ಚೆನ್ನಾಗಿ ಅರಿತಿದ್ದ ಆರ್ ಜೆಡಿಯ ಲಾಲೂ ಪ್ರಸಾದ್ ಯಾದವರು ವೋಟ್ ಬ್ಯಾಂಕ್ ತಂತ್ರವನ್ನು ಚೆನ್ನಾಗಿ ಬಳಸಿಕೊಂಡಿದ್ದರು. ಲಾಲೂ-ರಾಬ್ಡಿ ದೇವಿ ಅಧಿಕಾರ ಅವಧಿಯ ಫಲವೇ ಪಾಸ್ವಾನ್ ಅವರಿಗೆ ದಲಿತ ಕಾರ್ಡ್ ಬಳಸಿ ಲೋಕಸಭೆ ಚುನಾವಣೆಯಲ್ಲಿ ಭಾರಿ ಅಂತರದಲ್ಲಿ ಗೆಲ್ಲಲು ಸಾಧ್ಯವಾಗುತ್ತಿತ್ತು. ಲಾಲೂ ಪ್ರಸಾದ್ ಅವರು ದಲಿತ ಮತಗಳನ್ನು ಕಳೆದುಕೊಳ್ಳುವ ವೇಳೆಗೆ ನಿತೀಶ್ ಕುಮಾರ್ ಹಾಗೂ ಪಾಸ್ವಾನ್ ಇಬ್ಬರು ಇದೇ ವೋಟ್ ಬ್ಯಾಂಕ್ ಮೇಲೆ ಕಣ್ಣಿರಿಸಿದರು. 2005ರಲ್ಲಿ ಅಧಿಕಾರಕ್ಕೆ ಬಂದ ನಿತೀಶ್ ಅವರು ಮಹಾದಲಿತ್ ವೋಟ್ ಬ್ಯಾಂಕ್ ತಂತ್ರ ಬಳಸಿದರು. 20ಕ್ಕೂ ಅಧಿಕ ಉಪ ಪಂಗಡಗಳನ್ನು ಒಳಗೊಂಡಿದ್ದ ಮಹಾದಲಿತ್ ಸಮೂಹಕ್ಕೆ ಪಾಸ್ವಾನ್ ಉಪ ಪಂಗಡವನ್ನು ನಿತೀಶ್ ಸೇರಿಸಿರಲಿಲ್ಲ. 2015ರ ವಿಧಾನಸಭೆ ಚುನಾವಣೆ ಹೊರತುಪಡಿಸಿದರೆ, ಪಾಸ್ವಾನ್ ಅವರು ತಮ್ಮ ಪಂಗಡದ ಬಲದಿಂದಲೇ 2014 ಹಾಗೂ 2019ರಲ್ಲಿ ಜಯ ದಾಖಲಿಸಿದರು. ಬಿಜೆಪಿ ಅವರ ಬೆನ್ನ ಹಿಂದೆ ಇತ್ತು ಎಂಬುದನ್ನು ಒತ್ತಿ ಹೇಳಬೇಕಾಗಿಲ್ಲ.

ಚಿರಾಗ್ ಸಿಎಂ ಅಭ್ಯರ್ಥಿ ಎಂಬಂತೆ ಬಿಂಬಿಸಲಾಗಿದೆ
ತಮ್ಮನ್ನು ಸಿಎಂ ಅಭ್ಯರ್ಥಿ ಎಂಬಂತೆ ಬಿಂಬಿಸಿ ಕೊಂಡಿರುವ ಚಿರಾಗ್ ಪಾಸ್ವಾನ್ ಅವರು ಸ್ಥಳೀಯರ ಅಗತ್ಯಕ್ಕೆ ದನಿಯಾದರು. ''ಬಿಹಾರ ಮೊದಲು, ಬಿಹಾರಿ ಮೊದಲು'' ಎಂಬ ಘೋಷವಾಕ್ಯ ಹೊರ ತಂದರು. ಮಿತ್ರಪಕ್ಷವಾದರೂ ನಿತೀಶ್ ಆಡಳಿತದ ಹುಳುಕುಗಳನ್ನು ಎತ್ತಿ ಹಿಡಿದರು. ಜನಪರ ಕಾರ್ಯಗಳಲ್ಲಿ ತೊಡಗಿಕೊಂಡು ಮನ್ನಣೆ ಗಳಿಸಿದರು. ಕೊವಿಡ್ 19 ಸಾಂಕ್ರಾಮಿಕ ಸಂದರ್ಭದಲ್ಲಿ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಚಿರಾಗ್ ನಾಯಕತ್ವ ವಹಿಸಿಕೊಳ್ಳಬೇಕು ಎಂಬುದು ಯುವ ಜನಾಂಗದ ಒಕ್ಕೊರಲ ಬೇಡಿಕೆಯಾಗಿದೆ ಎಂದು ಎಲ್ ಜೆಪಿ ಹೇಳಿಕೊಂಡಿದೆ.

ಬಿಹಾರದ ಸಮಸ್ಯೆ ಬಗೆಹರಿಸಲಿ ಎಂದ್ ಎಲ್ ಜೆಪಿ
ಕೊವಿಡ್ 19 ಹಿನ್ನೆಲೆಯಲ್ಲಿ ಬೇರೆ ರಾಜ್ಯಗಳಿಗೆ ಉದ್ಯೋಗ ಅರಸಿ ವಲಸೆ ಹೋಗಿದ್ದ ಯುವ ಸಮುದಾಯಕ್ಕೆ ಚಿರಾಗ್ ಭರವಸೆ ನೀಡಿದ್ದು, ಎಲ್ಲರೂ ಬಿಹಾರದಲ್ಲೆ ನೆಲೆಗೊಳ್ಳಲು ಸಿದ್ಧ ಎಂದಿದ್ದಾರೆ. ನಿತೀಶ್ ಸರ್ಕಾರ ಸರಿಯಾಗಿ ಕಾಳಜಿ ವಹಿಸಿದ್ದರೆ ಬೇರೆ ರಾಜ್ಯಕ್ಕೆ ವಲಸೆ ಹೋಗುವ ಪ್ರಮೇಯವೇ ಇರುತ್ತಿರಲಿಲ್ಲ ಎಂದು ಚಿರಾಗ್ ಎಲ್ಲರಿಗೂ ಮನದಟ್ಟಾಗುವಂತೆ ಮಾಡಿದ್ದಾರೆ. ದಲಿತ-ಮುಸ್ಲಿಂ ಹಾಗೂ ಶ್ರಮಿಕ ವರ್ಗದವರಿಗೆ ನಿತೀಶ್ ಸರ್ಕಾರದ ಮೇಲೆ ಉದ್ಯೋಗ ಕುರಿತಂತೆ ಇದ್ದ ನಿರೀಕ್ಷೆ ಹುಸಿಯಾಗಿದೆ ಎಂದು ಎಲ್ ಜೆಪಿ ಆರೋಪಿಸಿದೆ.
Recommended Video

ಸೀಟು ಹಂಚಿಕೆ ಹಾಗೂ ಅಭ್ಯರ್ಥಿ ಆಯ್ಕೆ ಗೊಂದಲ
ಸೀಟು ಹಂಚಿಕೆ ಹಾಗೂ ಅಭ್ಯರ್ಥಿಗಳನ್ನು ಯಾವ ಕ್ಷೇತ್ರಗಳಲ್ಲಿ ಕಣಕ್ಕಿಳಿಸಬೇಕು ಎಂಬ ಸಮಸ್ಯೆ ಚಿರಾಗ್ ಹಾಗೂ ನಿತೀಶ್ ನಡುವಿನ ತಿಕ್ಕಾಟಕ್ಕೆ ಮೂಲ ಕಾರಣವಾಗಿದೆ. 2010ರ ವಿಧಾನಸಭೆಯಲ್ಲಿ ಇದ್ದ ಸೀಟು ಹಂಚಿಕೆ ಅನುಪಾತದಂತೆ ಈ ಬಾರಿಯೂ ಸೀಟು ಹಂಚಿಕೆಯಾಗಲಿ ಎಂದು ಜೆಡಿಯು ಹಠ ಹಿಡಿದಿದೆ. ಈಗ ಬಿಜೆಪಿ ವರಿಷ್ಠರು ಸೀಟು ಹಂಚಿಕೆ, ಜಾತಿ ಸೆಂಟಿಮೆಂಟು, ಹಿಂದುಳಿದ, ಶೋಷಿತ, ಅಲ್ಪಸಂಖ್ಯಾತರು ಎಲ್ಲರ ಪ್ರಾತಿನಿಧ್ಯ ಪರಿಗಣಿಸಿ ಜೆಡಿಯು ಹಾಗೂ ಎಲ್ ಜೆಪಿ ನಡುವಿನ ಕಿತ್ತಾಟವನ್ನು ಬಗೆಹರಿಸಬೇಕಿದೆ. ಜೆಡಿಯು ವಿರುದ್ಧ 143 ಎಲ್ ಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧ ಚಿರಾಗ್ ಘೋಷಿಸಿದ್ದಾರೆ.












Click it and Unblock the Notifications