ಬಿಹಾರ ಚುನಾವಣೆಯಲ್ಲಿ ಎನ್ಡಿಎ ದಿಗ್ವಿಜಯ: ಸಿ ವೋಟರ್ ಸಮೀಕ್ಷೆ
ಪಟ್ನಾ, ಅಕ್ಟೋಬರ್ 14: ಬಿಹಾರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ಪಕ್ಷಗಳಲ್ಲಿ ಢವಢವ ಶುರುವಾಗಿದೆ. ಕೋವಿಡ್ 19 ಭಯದ ನಡುವೆಯೂ ಬಿಹಾರ ಚುನಾವಣೆಯ ರಂಗು ಪಡೆದುಕೊಳ್ಳುತ್ತಿದೆ. ಅಕ್ಟೋಬರ್ 28ರಿಂದ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 10ರಂದು ಫಲಿತಾಂಶ ಪ್ರಕಟವಾಗಲಿದೆ. ಅದಕ್ಕೂ ಮುನ್ನ ಚುನಾವಣಾಪೂರ್ವ ಸಮೀಕ್ಷೆಗಳು ರಾಜಕೀಯ ಪಕ್ಷಗಳ ಭವಿಷ್ಯವನ್ನು ಊಹಿಸುವ ಪ್ರಯತ್ನ ನಡೆಸುತ್ತಿವೆ.
ಆಡಳಿತಾರೂಢ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಮೈತ್ರಿಕೂಟ ಸುಲಭವಾಗಿ ಗದ್ದುಗೆಗೆ ಏರಲಿದೆ ಎಂದು ಟೈಮ್ಸ್ ನೌ-ಸಿ ವೋಟರ್ ಅಭಿಪ್ರಾಯ ಸಮೀಕ್ಷೆ ಹೇಳಿದೆ. 243 ವಿಧಾನಸಭೆ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ-ಜನತಾದಳ ಮೈತ್ರಿಕೂಟ ಮತ್ತು ಕಾಂಗ್ರೆಸ್-ಆರ್ಜೆಡಿ ಮೈತ್ರಿಕೂಟಗಳ ನಡುವೆ ನೇರ ಹಣಾಹಣಿ ಇದೆ.
ಕೊರೊನಾ ವೈರಸ್ ಸೋಂಕಿನ ಭೀತಿ ಶುರುವಾದ ಬಳಿಕ ದೇಶದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಇದು ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಸರ್ಕಾರದ ಆಡಳಿತಗಳನ್ನು ಒರೆಗೆ ಹಚ್ಚಲಿದೆ. ಇಬ್ಬರೂ ಚುನಾವಣಾ ಅಖಾಡದಲ್ಲಿ ಎನ್ಡಿಎದ ಪ್ರಮುಖ ಶಕ್ತಿಗಳಾಗಿದ್ದಾರೆ. ಅತ್ತ ಮಹಾಮೈತ್ರಿಕೂಟದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬಳಗ ಹಾಗೂ ಆರ್ಜೆಡಿಯ ತೇಜಸ್ವಿ ಯಾದವ್ ಅವರ ಯುವ ಮುಂದಾಳತ್ವಕ್ಕೆ ಪರೀಕ್ಷೆ ಎದುರಾಗಿದೆ. ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರು ಜೈಲು ಶಿಕ್ಷೆ ಅನುಭವಿಸುತ್ತಿರುವುದರಿಂದ ಚುನಾವಣೆಯಲ್ಲಿ ಈ ಬಾರಿ ಲಾಲು ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ. ಮುಂದೆ ಓದಿ.

ಅಧಿಕಾರಕ್ಕೆ ಬರಲಿದೆ ಎನ್ಡಿಎ
243 ಸೀಟುಗಳ ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು 122 ಮ್ಯಾಜಿಕ್ ಸಂಖ್ಯೆ ತಲುಪಬೇಕಿದೆ. ಟೈಮ್ಸ್ ನೌ ಮತ್ತು ಸಿ ವೋಟರ್ ಸಂಸ್ಥೆ ಜಂಟಿಯಾಗಿ ನಡೆಸಿದ ಸಮೀಕ್ಷೆ ಪ್ರಕಾರ ಬಿಹಾರದಲ್ಲಿನ ವಿರೋಧಪಕ್ಷಗಳು ಚುನಾವಣೆ ಬಳಿಕವೂ ಅದೇ ಸ್ಥಾನದಲ್ಲಿ ಕೂರುವುದು ಅನಿವಾರ್ಯವಾಗಲಿದೆ. ಏಕೆಂದರೆ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಮೈತ್ರಿಕೂಟ ದಿಗ್ವಿಜಯ ಸಾಧಿಸಲಿದೆ.

ಯಾರಿಗೆ ಎಷ್ಟು ಸೀಟುಗಳು?
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 84 ಸೀಟುಗಳನ್ನು ಗೆಲ್ಲಲಿದೆ. ಅದರ ಮಿತ್ರ ಪಕ್ಷ ಜೆಡಿಯು 70 ಸೀಟುಗಳಲ್ಲಿ ಜಯಗಳಿಸಲಿದೆ. ಇನ್ನು ಮಹಾ ಘಟಬಂಧನದಲ್ಲಿ ಕಾಂಗ್ರೆಸ್ 15 ಸೀಟುಗಳಲ್ಲಿ ಜಯಗಳಿಸಲಿದೆ. ಆರ್ಜೆಡಿ 56 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಎಲ್ಜೆಪಿ 5 ಸೀಟುಗಳಲ್ಲಿ ಜಯಗಳಿಸಲಿದೆ. ಎನ್ಡಿಎ ಮಿತ್ರಪಕ್ಷಗಳು 5, ಎಡಪಕ್ಷಗಳು 5 ಹಾಗೂ ಇನ್ನುಳಿದ ಎರಡು ಸೀಟುಗಳು ಬೇರೆ ಪಕ್ಷಗಳ ಪಾಲಾಗಲಿವೆ. ಎನ್ಡಿಎ ಮೈತ್ರಿಕೂಟ 160 ಸೀಟುಗಳೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ಹೇಳಿದೆ.

ಸಿಎಂ ಯಾರಾಗಬೇಕು?
ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿಯಾಗಬೇಕು ಎಂದು ಶೇ 32ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದರೆ, ಪ್ರಸ್ತುತ ಉಪ ಮುಖ್ಯಮಂತ್ರಿಯಾಗಿರುವ ಸುಶೀಲ್ ಮೋದಿ ಪರ ಶೇ 12.5ರಷ್ಟು ಮತಗಳು ಬಂದಿವೆ. ಬಳಿಕ ಚಿರಾಗ್ ಪಾಸ್ವಾನ್, ಉಪೇಂದ್ರ ಕುಶ್ವಾಹ, ಗಿರಿರಾಜ್ ಸಿಂಗ್ ಅವರ ಹೆಸರುಗಳಿವೆ. ತಾರೀಖ್ ಅನ್ವರ್ ಸಿಎಂ ಆಗಲು ಸೂಕ್ತ ಎಂದು ಶೇ 1.5ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಜೈಲಿನಲ್ಲಿದ್ದರೂ ಲಾಲು ಪ್ರಸಾದ್ ಅವರ ಪರ ಶೇ 8.7 ಮತಗಳು ಬಿದ್ದಿವೆ. ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಜನರಲ್ಲಿ ಶೇ 17.6 ಮಂದಿ ತೇಜಸ್ವಿ ಯಾದವ್ ಪರ ಒಲವು ಪ್ರದರ್ಶಿಸಿದ್ದಾರೆ.

ಮತ ಹಂಚಿಕೆ
ಶೇ 33.8 ಮಂದಿ ಬಿಜೆಪಿಯನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ. ಶೇ 24.3 ಮಂದಿಗೆ ಆರ್ಜೆಡಿ ಪರ ಒಲವು ಇದೆ. ಶೇ 14.4ರಷ್ಟು ಮತದಾರರು ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಕಾಂಗ್ರೆಸ್ಗೆ ಶೇ 11.7 ಮತದಾರರ ಬೆಂಬಲವಿದೆ. ಇನ್ನು ಎಲ್ಜೆಪಿ ಶೇ 6.7 ಮತ್ತು ಇತರೆ ಪಕ್ಷಗಳು ಶೇ 9.1ರಷ್ಟು ಮತ ಹಂಚಿಕೆ ಪಡೆಯಲಿವೆ ಎಂದು ಸಮೀಕ್ಷೆ ಅಂದಾಜಿಸಿದೆ.

ನಿತೀಶ್ ಕುಮಾರ್ ಆಡಳಿತ
ಮುಖ್ಯಮಂತ್ರಿ ನಿತೀಶ್ ಕುಮಾರ್ ಆಡಳಿತದ ವಿರುದ್ಧ ಜನರಿಗೆ ಅಷ್ಟೇನೂ ಉತ್ತಮ ಅಭಿಪ್ರಾಯ ಇಲ್ಲ ಎಂದು ಸಮೀಕ್ಷೆ ತಿಳಿಸಿದೆ. ಶೇ 25.46ರಷ್ಟು ಮಂದಿ ನಿತೀಶ್ ಕುಮಾರ್ ಆಡಳಿತ ಉತ್ತಮವಾಗಿದೆ ಎಂದಿದ್ದಾರೆ. 34.29%ರಷ್ಟು ಜನರಿಗೆ ನಿತೀಶ್ ಆಡಳಿತ ಸಮಾಧಾನಕರ ಎನಿಸಿದೆ. ಆದರೆ ಶೇ 40.24 ಮಂದಿ ನಿತೀಶ್ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನರೇಂದ್ರ ಮೋದಿ ಆಡಳಿತ
ಪ್ರಧಾನಿ ನರೇಂದ್ರ ಮೋದಿ ಆಡಳಿತದ ಬಗ್ಗೆಯೂ ಜನಾಭಿಪ್ರಾಯ ವ್ಯಕ್ತವಾಗಿದೆ. ಶೇ 50.5ರಷ್ಟು ಮಂದಿ ಮೋದಿ ಆಡಳಿತ ಉತ್ತಮವಾಗಿದೆ ಎಂದಿದ್ದರೆ, ಶೇ 20.9ರಷ್ಟು ಮಂದಿಗೆ ಸುಮಾರಾಗಿದೆ ಎಂದೆನಿಸಿದೆ. ಇನ್ನು ಶೇ 28.6ರಷ್ಟು ಮಂದಿ ಕೆಟ್ಟ ಆಡಳಿತ ಎಂದು ಜರೆದಿದ್ದಾರೆ.












Click it and Unblock the Notifications