ಕೊಡಗಿನ ಪ್ರಕೃತಿಗೆ ಕಳೆ ತಂದ ಮಳೆಗಾಲದ ಸುಂದರಿಯರು...
ಕೊಡಗಿನಲ್ಲಿ ಒಂದಷ್ಟು ಮಳೆ ಸುರಿದಿರುವುದರಿಂದ ಪ್ರಕೃತಿ ಪುಳಕಗೊಂಡಿದೆ. ಬೇಸಿಗೆಯ ಉರಿ ಬಿಸಿಲಿಗೆ ಸಿಲುಕಿ ಸೊರಗಿ ಹೋದ ಜಲಧಾರೆಗಳು ಮತ್ತೆ ಜೀವ ಪಡೆದು ಹೆಬ್ಬಂಡೆಗಳ ನಡುವೆ ಧುಮುಕಲಾರಂಭಿಸಿವೆ. ಕೊಡಗಿನ ಜಲಧಾರೆಗಳು ನೋಡುಗರಿಗೆ ಹುರುಪು ತುಂಬುವುದಂತು ಖಚಿತ.
Recommended Video
ಇಲ್ಲಿರುವ ಹೆಚ್ಚಿನ ಜಲಧಾರೆಗಳು ಬೆಟ್ಟಗುಡ್ಡಗಳ ನಡುವೆ ಹುದುಗಿವೆ. ಅವುಗಳತ್ತ ನಡೆದೇ ಹೋಗುವುದೇ ಒಂಥರಾ ಖುಷಿ. ಹೀಗಾಗಿ ಜಲಧಾರೆಗಳತ್ತ ತೆರಳಿದರೆ ಮನಸ್ಸಿಗೆ ಉನ್ಮಾದ. ಸುರಿಯುವ ಮಳೆಯಲ್ಲಿ ಸುತ್ತಲಿನ ಪ್ರಕೃತಿಯ ವಿಹಂಗಮ ನೋಟವನ್ನು ಸವಿಯುತ್ತಾ ಸಾಗುತ್ತಿದ್ದರೆ ಅದು ನೀಡುವ ಪ್ರತಿ ಅನುಭವಗಳು ಮನಪಟಲದಲ್ಲಿ ಉಳಿಯುವಂತೆ ಮಾಡುತ್ತದೆ.

ನಡೆದು ನೋಡು ಕೊಡಗಿನ ಬೆಡಗನು...
'ನಡೆದು ನೋಡು ಕೊಡಗಿನ ಬೆಡಗು' ಎಂಬ ಕವಿವಾಣಿ ಜಲಧಾರೆಗಳನ್ನು ವೀಕ್ಷಿಸಲು ಹೊರಡುವ ನಿಸರ್ಗ ಪ್ರೇಮಿಗಳಿಗೆ ಹೇಳಿ ಬರೆಯಿಸಿದಂತಿದೆ. ನಗರ ನಾಗರಿಕತೆಯ ಗಂಧಗಾಳಿಗೆ ಒಳಗಾಗದೆ ದಟ್ಟ ಕಾಡಿನ ನಡುವೆ... ಮತ್ಯಾರದೋ ಕಾಫಿ, ಏಲಕ್ಕಿ ತೋಟಗಳಲ್ಲಿ... ತಮ್ಮ ಪಾಡಿಗೆ ತಾವು ಎಂಬಂತೆ ಭೋರ್ಗರೆದು ಧುಮುಕಿ ಹೋಗುವ ಜಲಧಾರೆಗಳನ್ನು ಹತ್ತಿರ ಹೋಗಿ ವೀಕ್ಷಿಸುವುದು ಹಾಗೂ ಕ್ಯಾಮರಾದಲ್ಲಿ ಸೆರೆ ಹಿಡಿಯವುದು ಅಷ್ಟು ಸುಲಭವಲ್ಲ. ಹತ್ತಾರು ಕಿ.ಮೀ. ದೂರವನ್ನು ಕಾಲ್ನಡಿಗೆಯಲ್ಲಿಯೇ ಕ್ರಮಿಸುವ, ಬೆಟ್ಟಗುಡ್ಡಗಳನ್ನೇರುವ, ಅಷ್ಟೇ ಅಲ್ಲ ರಕ್ತ ಹೀರಲು ಬರುವ ಜಿಗಣೆಗಳೊಂದಿಗೆ ಹೋರಾಡಲು ಸಿದ್ಧರಾಗಿರಬೇಕು. ಹಾಗಿದ್ದರೆ ಮಾತ್ರ ಜಲಪಾತದ ಸೊಬಗನ್ನು ಸನಿಹದಿಂದ ಸವಿಯಬಹುದು.

ಪಶ್ಚಿಮ ಘಟ್ಟ ಜಲಧಾರೆಗಳ ತವರು
ಪಶ್ಚಿಮ ಘಟ್ಟ ಜಲಧಾರೆಗಳ ತವರು ಎಂದರೆ ತಪ್ಪಾಗಲಾರದು. ಇಲ್ಲಿನ ಬೆಟ್ಟಗುಡ್ಡಗಳಲ್ಲಿ ಮಳೆಗಾಲದ ದಿನಗಳಲ್ಲಿ ಅಸಂಖ್ಯಾತ ಜಲಧಾರೆಗಳು ಸೃಷ್ಟಿಯಾಗಿ ತಮ್ಮ ಪಾಡಿಗೆ ತಾವು ಎಂಬಂತೆ ಅಜ್ಞಾತ ಜಲಧಾರೆಗಳಾಗಿ ಉಳಿದು ಬಿಡುತ್ತವೆ. ಇವುಗಳ ಜಾಡು ಹುಡುಕಿ ಸನಿಹಕ್ಕೆ ತೆರಳುವುದು ಅಷ್ಟು ಸುಲಭವಲ್ಲ. ಆದರೂ ಅವುಗಳತ್ತ ಪ್ರವಾಸಿಗರು ತೆರಳುತ್ತಿರುವುದು ಅವುಗಳ ಸೌಂದರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಹಲವಷ್ಟಿವೆ ಅಜ್ಞಾತ ಜಲಧಾರೆಗಳು
ಕೊಡಗಿನಲ್ಲಿರುವ ಜಲಧಾರೆಗಳ ಪೈಕಿ ಹೆಚ್ಚಿನವುಗಳು ಅಲ್ಪಾಯುಷಿಗಳು. ಇವುಗಳು ಮಳೆಗಾಲದಲ್ಲಿ ಮಾತ್ರ ಭೋರ್ಗರೆದು ಧುಮುಕಿ ತಮ್ಮ ಚೆಲುವನ್ನು ಪ್ರದರ್ಶಿಸುತ್ತವೆಯಾದರೂ ಮಳೆಗಾಲ ಕಳೆದು ಬೇಸಿಗೆ ಬರುತ್ತಿದ್ದಂತೆಯೇ ತನ್ನ ಚೆಲುವು ಕಳೆದುಕೊಂಡು ಅದೃಶ್ಯವಾಗಿಬಿಡುತ್ತವೆ. ಹಾಗಾಗಿ ಈ ಜಲಧಾರೆಗಳನ್ನು ಮಳೆಗಾಲದ ಬೆಡಗಿಯರು ಎಂದರೆ ತಪ್ಪಾಗಲಾರದು. ಹಲವಾರು ಜಲಧಾರೆಗಳು ದಟ್ಟಕಾಡಿನ ನಡುವೆ ತೋಟಗಳ ನಡುವೆ ಅಡಗಿ ಕುಳಿತಿದ್ದು, ಮಳೆಗಾಲದಲ್ಲಿ ಧಾರಾಕಾರವಾಗಿ ಮಳೆ ಸುರಿದಾಗ ಮೈಕೈ ತುಂಬಿಕೊಂಡು ಚೆಲುವು ಪ್ರದರ್ಶಿಸುತ್ತವೆ. ಪಟ್ಟಣದಿಂದ ದೂರವಾಗಿ ರಸ್ತೆ ಸಂಪರ್ಕವೂ ಇಲ್ಲದಿರುವುದರಿಂದ ಅವು ಅಜ್ಞಾತ ಜಲಧಾರೆಗಳಾಗಿ ಉಳಿದುಹೋಗಿವೆ.

ನೋಡಬಹುದಾದ ಜಲಧಾರೆಗಳು ಹೀಗಿವೆ..
ಎಲ್ಲರೂ ನೋಡಿರುವ, ನೋಡದಿರುವ ಮತ್ತು ನೋಡಬಹುದಾದ ಜಲಧಾರೆಗಳು ಹಲವಾರು ಇವೆ. ಅವುಗಳನ್ನು ಪಟ್ಟಿ ಮಾಡುತ್ತಾ ಹೋದರೆ, ಮಡಿಕೇರಿ ಬಳಿ ಅಬ್ಬಿ ಜಲಧಾರೆಯಿದ್ದರೆ, ಮಡಿಕೇರಿಯಿಂದ ಮಂಗಳೂರು ಕಡೆಗಿನ ರಸ್ತೆಯಲ್ಲಿ ಬೆಟ್ಟಗಳ ಮೇಲೆ ಪುಟ್ಟ ಜಲಧಾರೆಗಳು ಕಾಣಸಿಗುತ್ತವೆಯಾದರೂ ಅವುಗಳ ನಡುವೆ ಹಲವು ನೋಡತಕ್ಕ ಜಲಧಾರೆಗಳಿವೆ. ಜೋಡುಪಾಲ ಬಳಿ ಉಂಬುಳ್ ಗುಂಡಿ ಜಲಧಾರೆ, ಮುಂದೆ ರಸ್ತೆ ಬದಿಯಲ್ಲೇ ತಿರುವಿನಲ್ಲಿರುವ ಜೋಡುಪಾಲ ಜಲಧಾರೆ ಕಾಣಸಿಗುತ್ತದೆ. ಕೊಯನಾಡು ಸೇತುವೆಯ ಎಡಭಾಗದ ರಸ್ತೆಯಲ್ಲಿ ಸುಮಾರು ಐದು ಕಿ.ಮೀ. ಸಾಗಿದರೆ ಕಲ್ಯಾಳ ಜಲಧಾರೆಯಿದೆ.
ಇನ್ನು ಮಡಿಕೇರಿಯಿಂದ ಸೋಮವಾರಪೇಟೆ ಕಡೆಗಿನ ರಸ್ತೆಯಲ್ಲಿ ಹೊರಟರೆ ಮುಕ್ಕೋಡ್ಲು ಜಲಧಾರೆಯ ದರ್ಶನವಾಗುತ್ತದೆ. ಮಕ್ಕಂದೂರಿಗೆ ಮೂರು ಕಿ.ಮೀ. ದೂರದ ಹಾಲೇರಿಯಲ್ಲಿ ಕುಪ್ಪೆಹೊಳೆ ಎಂಬಲ್ಲಿ ಪುಟ್ಟಜಲಧಾರೆಯಿದೆ. ಸೋಮವಾರಪೇಟೆ ಕಡೆಗೆ ಹೊರಟರೆ ಮಾದಾಪುರ ಸಿಗುತ್ತದೆ. ಅಲ್ಲಿಂದ ಗರ್ವಾಲೆಗೆ ತೆರಳಿದರೆ ಮೂರು ಕಿ.ಮೀ. ದೂರದಲ್ಲಿ ಮೇದುರಜಲಧಾರೆಯಿದೆ. ಸೋಮವಾರಪೇಟೆಗೆ ತೆರಳಿದರೆ ಅಲ್ಲಿಂದ ಶಾಂತಳ್ಳಿ ಕಡೆಗಿನ ರಸ್ತೆಯಲ್ಲಿ ಸುಮಾರು ಎಂಟು ಕಿ.ಮೀ. ದೂರದಲ್ಲಿ ಬಾಚಳ್ಳಿ ಅಬ್ಬಿ, ಮುಖ್ಯ ರಸ್ತೆಯಲ್ಲಿ ಶಾಂತಳ್ಳಿಗೆ ತೆರಳಿ ಅಲ್ಲಿಂದ ಮುಂದೆ ಹೋದರೆ ಹಂಚಿನಳ್ಳಿ ಸಿಗುತ್ತದೆ. ಅಲ್ಲಿ ಬಲಕ್ಕೆ ಮಣ್ಣು ರಸ್ತೆಯಲ್ಲಿ ನಾಲ್ಕು ಕಿ.ಮೀ. ಸಾಗಿದರೆ ಮಲ್ಲಳ್ಳಿ ಜಲಧಾರೆಯನ್ನು ತಲುಪಬಹುದಾಗಿದೆ.

ಇರ್ಪು ಜಲಧಾರೆಯ ನೋಟ ಮನಮೋಹಕ
ವಿರಾಜಪೇಟೆಗೆ ತೆರಳಿದರೆ ಅಲ್ಲಿಂದ 55 ಕಿ.ಮೀ. ದೂರದಲ್ಲಿ ಇರ್ಪು ಜಲಧಾರೆಯಿದೆ. ಮಡಿಕೇರಿಯಿಂದ ನಾಪೋಕ್ಲುಗೆ ತೆರಳಿದರೆ ಅಲ್ಲಿಗೆ ಸನಿಹದಲ್ಲಿ ಹಲವಾರು ಜಲಧಾರೆಗಳಿವೆ. ಭಾಗಮಂಡಲ ರಸ್ತೆಯಲ್ಲಿ ಬಲ್ಲಮಾವಟಿಗೆ ತೆರಳಿದರೆ ಅಲ್ಲಿಂದ ಎಡಕ್ಕೆ ಪೆರೂರು ಕಡೆಗೆ ಹೆಜ್ಜೆ ಹಾಕಿದರೆ ದೇವರಗುಂಡಿ ಹಾಗೂ ಭಾಗಮಂಡಲ ಆಸ್ಪತ್ರೆಯ ಹಿಂಭಾಗದ ರಸ್ತೆಯಲ್ಲಿ 3 ಕಿ.ಮೀ ತೆರಳಿದರೆ ತಣ್ಣಿಮಾನಿ ಪಾರೆಕಟ್ಟು ಜಲಧಾರೆಯನ್ನು ನೋಡಬಹುದಾಗಿದೆ.
ಭಾಗಮಂಡಲದಿಂದ ಕರಿಕೆಯತ್ತ ತೆರಳಿದರೆ ಅಲ್ಲಿ ಹಲವಾರು ಮಳೆಗಾಲದ ಜಲಧಾರೆಗಳು ಕಾಣಸಿಗುತ್ತವೆ. ಇವು ಮಳೆಗಾಲದಲ್ಲಿ ಮಾತ್ರ ಗೋಚರಿಸುತ್ತವೆ. ಇವುಗಳ ನಡುವೆ ಬಾಚಿಮಲೆ ಜಲಧಾರೆಯೂ ಒಂದಾಗಿದೆ. ಭಾಗಮಂಡಲದಿಂದ ಮಡಿಕೇರಿ ರಸ್ತೆಯಲ್ಲಿ ತೆರಳಿದರೆ ಚೆಟ್ಟಿಮಾನಿ ಸಿಗುತ್ತದೆ. ಇಲ್ಲಿರುವ ಪ್ರಾಥಮಿಕ ಶಾಲೆಯ ಬಳಿಯ ರಸ್ತೆಯಲ್ಲಿ 2 ಕಿ.ಮೀ. ತೆರಳಿದರೆ ಪೋಲಮಾನಿ ಸಿಗುತ್ತದೆ. ಪೋಲಮಾನಿ ರಸ್ತೆಯಲ್ಲಿ 3 ಕಿ.ಮೀ. ದೂರದಲ್ಲಿ ದಾಸನಕಾಡು ಎಂಬ ಜಲಧಾರೆಯಿದೆ.
ನಾಲ್ಕುನಾಡು ಅರಮನೆ ಎದುರು ಜಲಧಾರೆ
ನಾಪೋಕ್ಲುವಿನಿಂದ ಚೆಯ್ಯಂಡಾಣೆಗೆ ತೆರಳಿದರೆ ಅಲ್ಲಿಂದ 2 ಕಿ.ಮೀ. ದೂರದಲ್ಲಿ ಚೇಲಾವರ ಗ್ರಾಮ ಸಿಗುತ್ತದೆ. ಚೇಲಾವರದಲ್ಲಿ ನಯನ ಮನೋಹರ ಮೂರು ಜಲಧಾರೆಗಳಿವೆ. ನಾಪೋಕ್ಲುವಿನಿಂದ ಕಕ್ಕಬೆಗೆ ತೆರಳಿದರೆ ಅಲ್ಲಿಂದ ಯುವಕಪಾಡಿಯ ನಾಲ್ಕುನಾಡು ಅರಮನೆ ಸಮೀಪಕ್ಕೆ ಬಂದರೆ ಎದುರಿನಲ್ಲಿಯೇ ಜಲಧಾರೆ ಧುಮುಕುತ್ತದೆ. ನಾಲ್ಕುನಾಡು ಅರಮನೆಯ ಮುಂದಿನ ರಸ್ತೆಯಲ್ಲಿ ಸುಮಾರು 4 ಕಿ.ಮೀ. ರಸ್ತೆಯಲ್ಲಿ ಸಾಗಿದರೆ ಮಾದಂಡ ಅಬ್ಬಿ ಜಲಧಾರೆಯನ್ನು ತಲುಪಬಹುದಾಗಿದೆ.
ಕಕ್ಕಬ್ಬೆಯಿಂದ ಕಬ್ಬಿನಕಾಡು ಎಂಬಲ್ಲಿಗೆ ತೆರಳಿ ಅಲ್ಲಿಂದ ಬಲಕ್ಕೆ ಏರು ಹಾದಿಯಲ್ಲಿ 4 ಕಿ.ಮೀ. ಸಾಗಿದರೆ ಅಪ್ಪಾರಂಡ ಸುರೇಶ್ ಚಂಗಪ್ಪ ಅವರ ಮನೆ ಸಿಗುತ್ತದೆ. ಅಲ್ಲಿಂದ ಮತ್ತೆ 3 ಕಿ.ಮೀ. ನಡೆದರೆ ಬೆಟ್ಟಗುಡ್ಡಗಳ ನಡುವೆ ಧುಮ್ಮಿಕ್ಕುವ ನೀಲಕಂಡಿ ಜಲಧಾರೆ ಸಿಗುತ್ತದೆ. ಮಡಿಕೇರಿಯಿಂದ ಸಿದ್ದಾಪುರ ರಸ್ತೆಯಲ್ಲಿ ತೆರಳಿದರೆ ಚೆಟ್ಟಳ್ಳಿ ಬಳಿ ಮುಖ್ಯ ರಸ್ತೆಯಲ್ಲಿಯೇ ಜಲಧಾರೆ ಕಾಣಸಿಗುತ್ತದೆ. ಇದನ್ನು ಚೆಟ್ಟಳ್ಳಿ ಫಾಲ್ಸ್ ಎಂದೇ ಸ್ಥಳೀಯರು ಕರೆಯುತ್ತಾರೆ. ಇದಲ್ಲದೆ ಹತ್ತಾರು ಜಲಧಾರೆಗಳು ಬೆಟ್ಟಗುಡ್ಡ, ಕಾಫಿ, ಏಲಕ್ಕಿ ತೋಟಗಳ ನಡುವೆ ಹುದುಗಿದ್ದು, ಮುಂಗಾರು ಆರಂಭಗೊಂಡು ಧಾರಾಕಾರ ಮಳೆ ಸುರಿದಾಗ ತಮ್ಮ ಪಾಡಿಗೆ ತಾವು ಭೋರ್ಗರೆದು ಸುರಿದು ಬೇಸಿಗೆ ಬರುತ್ತಿದ್ದಂತೆಯೇ ಅದೃಶ್ಯವಾಗಿ ಬಿಡುತ್ತವೆ.
-
ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಹೇಗಿದ್ರು ನೋಡಿ ರಶ್ಮಿಕಾ ಮಂದಣ್ಣ, ವಿಡಿಯೋ ವೈರಲ್ -
Sanju Samson: ವೆಸ್ಟ್ ಇಂಡೀಸ್ ವಿರುದ್ಧ ಅಬ್ಬರ: ತೆಗಳಿದ ಬಾಯಲ್ಲೇ ಸಂಜು ಸ್ಯಾಮ್ಸನ್ಗೆ ಗೌತಮ್ ಗಂಭೀರ್ ಶಹಭಾಸ್ಗಿರಿ -
Lunar Eclipse 2026:ನಾಳೆ ಕೇತುಗ್ರಸ್ತ ಚಂದ್ರಗ್ರಹಣ: ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ದರ್ಶನದ ಸಮಯ ಬದಲು, ಗ್ರಹಣ ಶಾಂತಿ ಹೋಮ -
Horoscope March 2: ಈ ರಾಶಿಯವರಿಗೆ ಸಕಾರಾತ್ಮಕ ಪ್ರಗತಿ, ಮೇಷ-ಮೀನ ರಾಶಿಯವರೆಗೆ ಇಂದಿನ ದಿನ ಭವಿಷ್ಯ -
ಮಧ್ಯಪ್ರಾಚ್ಯದಲ್ಲಿ ವಿಮಾನಗಳ ಸಂಚಾರ ವ್ಯತ್ಯಯ: ಕರ್ನಾಟಕದ ನಾಗರಿಕರಿಗೆ ಸರ್ಕಾರ ನೆರವು -
Gold Rate : ಆಭರಣ ಪ್ರಿಯರಿಗೆ ಬಿಗ್ ಶಾಕ್; ಭಾರಿ ಏರಿಕೆ ಕಂಡ ಚಿನ್ನ- ಬೆಳ್ಳಿ ದರ, ಇಲ್ಲಿದೆ ಇಂದಿನ ಬೆಲೆ ಪಟ್ಟಿ -
Iran Vs America, Israel ಯುದ್ಧ ತೀವ್ರ: ಗಲ್ಫ್ ರಾಷ್ಟ್ರಗಳಿಗೂ ವ್ಯಾಪಿಸಿದ ಸಂಕಷ್ಟ; ಈ ಕ್ಷಣದ 10 ಪ್ರಮುಖ ಬೆಳವಣಿಗೆಗಳು -
ಯುದ್ಧದ ನಡುವೆಯೂ ಸರ್ವಧರ್ಮ ಸಮನ್ವಯತೆ ಸಂದೇಶ: ನಮ್ ಭಾರತ ಅಂದ್ರೆ ಹೀಗೆ ಅಂತಾ ವಿಶ್ವಕ್ಕೆ ಸಾರಿದ ಸಂಜು ಸ್ಯಾಮ್ಸನ್ -
Gold Price: ಇಂದು ಚಿನ್ನದ ಬೆಲೆಯಲ್ಲಿ ದಾಖಲೆಯ ಕುಸಿತ, ಯುದ್ಧದ ಎಫೆಕ್ಟ್ನಿಂದ ಬಂಗಾರ-ಬೆಳ್ಳಿ ಮತ್ತಷ್ಟು ದುಬಾರಿ! ಮುನ್ಸೂಚನೆ -
ಕರ್ನಾಟಕದ ಅಲಿಪುರದಲ್ಲಿ ಇರಾನ್ ನಾಯಕ ಖಮೇನಿ ಅಂದು ಆಡಿದ್ದ ಮಾತುಗಳೇನು ? -
Donald Trump: ಅಮೆರಿಕ, ಇಸ್ರೇಲ್ Vs ಇರಾನ್ ಯುದ್ಧದ ಬಗ್ಗೆ ಬಿಗ್ ಅಪ್ಡೇಟ್ಸ್ ಕೊಟ್ಟ ಡೊನಾಲ್ಡ್ ಟ್ರಂಪ್, ಏನದು -
ಮೂತ್ರ ವಿಸರ್ಜನೆ ವಿಡಿಯೋಗೆ ಕಿಚ್ಚ ಸುದೀಪ್ ಹಾಡು: ಬಿಗ್ಬಾಸ್ ಡಾಗ್ ಸತೀಶ್ ವಿರುದ್ಧ ರಜತ್ ದೂರು












Click it and Unblock the Notifications