ಸಿದ್ದರಾಮಯ್ಯ ಆಪ್ತ ಬಿ. ನಾರಾಯಣರಾವ್ ಪರಿಚಯ
ಬೀದರ್, ಸೆಪ್ಟೆಂಬರ್ 24 : ಬೀದರ್ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ. ನಾರಾಯಣರಾವ್ ವಿಧಿವಶರಾಗಿದ್ದಾರೆ. ಕೋವಿಡ್ 19 ಸೋಂಕು, ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಸೆಪ್ಟೆಂಬರ್ 1ರಂದು ಕೋವಿಡ್ ಸೋಂಕು ಖಚಿತವಾದ ಹಿನ್ನಲೆಯಲ್ಲಿ ಶಾಸಕ ಬಿ. ನಾರಾಯಣರಾವ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 65 ವರ್ಷದ ಅವರು ಗುರುವಾರ ಮಧ್ಯಾಹ್ನ 3.55ರ ಸುಮಾರಿಗೆ ಮೃತಪಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ನಾರಾಯಣರಾವ್. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನಾರಾಯಣರಾವ್ ಅವರನ್ನು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕ ಮಾಡಿದ್ದರು.
ಬಿ. ನಾರಾಯಣರಾವ್ 2018ರ ವಿಧಾನಸಭೆ ಚುನಾವಣೆಯಲ್ಲಿ ಬಸವಕಲ್ಯಾಣ ಕ್ಷೇತ್ರದಲ್ಲಿ 61,425 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಬಿಜೆಪಿಯಿಂದ ಮಲ್ಲಿಕಾರ್ಜುನ, ಜೆಡಿಎಸ್ನಿಂದ ಪಿ. ಜಿ. ಆರ್. ಸಿಂಧ್ಯಾ ನಾರಾಯಣರಾವ್ ಎದುರಾಳಿಯಾಗಿದ್ದರು.

ಕೃಷಿ ಕುಟುಂಬದವರು
ಬಿ. ನಾರಾಯಣರಾವ್ ಹುಟ್ಟೂರು ಬೀದರ್ ತಾಲೂಕಿನ ಬಸಂತಪುರ. ನರಸಪ್ಪ ಮತ್ತು ಕೃಷ್ಣಾಬಾಯಿ ದಂಪತಿಗಳ ಪುತ್ರ. ಪರಿಶಿಷ್ಟ ಪಂಗಡವಾದ ಟೋಕರಿ ಕೋಲಿ ಸಮಾಜಕ್ಕೆ ಸೇರಿದವರು. ಕೃಷಿ ಕುಟುಂಬದಲ್ಲಿ ಬೆಳೆದ ಅವರು ಬಸವಕಲ್ಯಾಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದು ಬಂದಿದ್ದರು.

ನಾರಾಯಣರಾವ್ ಬಿಎ ಪದವೀಧರರು
ಬಸಂತಪುರ ಗ್ರಾಮದಲ್ಲಿಯೇ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದ್ದ ನಾರಾಯಣರಾವ್, ಬೀದರ್ನ ಬಿವಿಬಿ ಕಾಲೇಜಿನಿಂದ ಬಿಎ ಪದವಿ ಪಡೆದಿದ್ದಾರೆ. ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗಲೇ ವಿದ್ಯಾರ್ಥಿ ನಾಯಕರಾಗಿ ಗುರುತಿಸಿಕೊಂಡಿದ್ದರು.

ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆ
ಜಯಪ್ರಕಾಶ ನಾರಾಯಣ ಮತ್ತು ದೇವರಾಜ್ ಅರಸು ಅವರ ಪ್ರಭಾವಕ್ಕೆ ಒಳಗಾಗಿ ರಾಜಕೀಯ ಪ್ರವೇಶ ಮಾಡಿದರು. ಮೊದಲು ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದರು. ಜಿಲ್ಲಾ ಪಂಚಾಯಿತಿ ಯೋಜನಾ ಸಮಿತಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಣೆ ಮಾಡಿದರು. ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರದ ಮಾಜಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.

35 ವರ್ಷಗಳ ಸೇವೆ
ಆರಂಭದಲ್ಲಿ ಜನತಾಪಕ್ಷದಲ್ಲಿದ್ದ ಬಿ. ನಾರಾಯಣರಾವ್ ಬಳಿಕ ಕಾಂಗ್ರೆಸ್ ಸೇರಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದರು. ವಿವಿಧ ಕ್ಷೇತ್ರಗಳ ಚುನಾವಣೆ ಉಸ್ತುವಾರಿ ಕಾರ್ಯ ನಿರ್ವಹಣೆ ಮಾಡಿದರು. ಸುಮಾರು 35 ವರ್ಷಗಳ ಕಾಲ ಅವರು ಮಾಡಿದ ಸೇವೆ ಗುರುತಿಸಿ ಕಾಂಗ್ರೆಸ್ ಪಕ್ಷ ಬಸವಕಲ್ಯಾಣ ಕ್ಷೇತ್ರದ ಟಿಕೆಟ್ ನೀಡಿತ್ತು.
|
ನಾರಾಯಣರಾವ್ ನಿಧನಕ್ಕೆ ಸಿದ್ದರಾಮಯ್ಯ ಸಂತಾಪ
ಮೊದಲ ಸಲ ಶಾಸಕರಾಗಿ ಭರವಸೆಯ ನಾಯಕನಾಗಿ ಬೆಳೆಯುತ್ತಿದ್ದ
ಬಿ.ನಾರಾಯಣ ರಾವ್ ನಡುಹಾದಿಯಲ್ಲಿಬಾಳಪಯಣ ಕೊನೆಗೊಳಿಸಿ ನಮ್ಮನ್ನು ಶೋಕದಲ್ಲಿ ಮುಳುಗಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.












Click it and Unblock the Notifications