ಅಯೋಧ್ಯೆ ತೀರ್ಪು; ಐವರು ನ್ಯಾಯಮೂರ್ತಿಗಳ ಪರಿಚಯ
ಬೆಂಗಳೂರು, ನವೆಂಬರ್ 09 : ದಶಕಗಳ ಕಾಲದ ವಿವಾದದ ಕುರಿತು ಸುಪ್ರೀಂಕೋರ್ಟ್ ಇಂದು ಅಂತಿಮ ತೀರ್ಪನ್ನು ನೀಡಲಿದೆ. ಅಯೋಧ್ಯೆ ವಿವಾದದ ಕುರಿತ ತೀರ್ಪನ್ನು ಸುಪ್ರೀಂಕೋರ್ಟ್ ನೀಡಲಿದ್ದು, ದೇಶದ್ಯಂತ ಭಾರಿ ಬಂದೋಬಸ್ತ್ ಮಾಡಲಾಗಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜಯ್ ಗೋಗಾಯ್ ನೇತೃತ್ವದ ಪೀಠ ಶನಿವಾರ ಬೆಳಗ್ಗೆ 10.30ಕ್ಕೆ ತೀರ್ಪನ್ನು ಪ್ರಕಟಿಸಲಿದೆ. ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಸಂವಿಧಾನಿಕ ಪೀಠದಲ್ಲಿ ಐವರು ನ್ಯಾಯಮೂರ್ತಿಗಳಿದ್ದಾರೆ.
ಅಯೋಧ್ಯಾ ಪ್ರಕರಣ Timeline : 1528 ರಿಂದ 2019ರ ತನಕ ಕಾಲಾನುಕ್ರಮದಲ್ಲಿ
ಸಂವಿಧಾನಿಕ ಪೀಠದಲ್ಲಿರುವ ಎಲ್ಲಾ ನ್ಯಾಯಮೂರ್ತಿಗಳಿಗೆ ಝಡ್ ಪ್ಲಸ್ ಭದ್ರತೆ ನೀಡಲಾಗಿದೆ. ಕರ್ನಾಟಕ ಮೂಲದ ನ್ಯಾಯಮೂರ್ತಿ ಅಬ್ದುಲ್ ನಜೀರ್ ಸಹ ಐವರು ನ್ಯಾಯಮೂರ್ತಿಗಳ ಪೀಠದಲ್ಲಿದ್ದಾರೆ. ದೇಶವೇ ತೀರ್ಪಿನ ಬಗ್ಗೆ ಕುತೂಹಲದಿಂದ ಕಾಯುತ್ತಿದೆ.
Ayodhya Verdict Live Updates: ಅಯೋಧ್ಯೆ ಐತಿಹಾಸಿಕ ತೀರ್ಪಿಗೆ ಕ್ಷಣಗಣನೆ
ಮುಖ್ಯ ನ್ಯಾಯಮೂರ್ತಿ ರಂಜಯ್ ಗೋಗಾಯ್ ನವೆಂಬರ್ 17ರಂದು ನಿವೃತ್ತರಾಗಲಿದ್ದಾರೆ. ಅವರ ಬಳಿಕ ಮುಖ್ಯ ನ್ಯಾಯಮೂರ್ತಿಯಾಗಲಿರುವ ಎಸ್. ಎ. ಬೋಬ್ಡೆ ಅವರು ಸಹ ಈ ಪೀಠದಲ್ಲಿದ್ದಾರೆ. ಐವರು ನ್ಯಾಯಮೂರ್ತಿಗಳ ಪರಿಚಯ ಇಲ್ಲಿದೆ.
ರಂಜನ್ ಗೋಗಾಯ್
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಾಯ್ ಅಸ್ಸಾಂ ಮೂಲದವರು. ದೇಶದ ಈಶಾನ್ಯ ಭಾಗದಿಂದ ಬಂದು ನ್ಯಾಯಾಂಗ ವ್ಯವಸ್ಥೆಯಲ್ಲಿ ಉನ್ನತ ಹಂತಕ್ಕೆ ತಲುಪಿದ ಮೊದಲಿಗರು. 2012ರ ಏಪ್ರಿಲ್ನಲ್ಲಿ ಸುಪ್ರೀಂಕೋರ್ಟ್ ನ್ಯಾಯೂರ್ತಿಗಳಾಗಿ ಬಡ್ತಿ ಪಡೆದರು. 1978ರಲ್ಲಿ ಗುಹವಾಟಿ ಹೈಕೋರ್ಟ್ನಲ್ಲಿ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದ ರಂಜನ್ ಗೋಗಾಯ್, ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯೂರ್ತಿಗಳಾಗಿರುವ ಇವರು ನವೆಂಬರ್ 17ರಂದು ನಿವೃತ್ತರಾಗಲಿದ್ದಾರೆ.
ನ್ಯಾಯಮೂರ್ತಿ ಬೋಬ್ಡೆ
ರಂಜನ್ ಗೋಗಾಯ್ ಅವರ ಬಳಿಕ ನ್ಯಾಯೂರ್ತಿ ಶರದ್ ಅರವಿಂದ್ ಬೋಬ್ಡೆ (63) ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಲಿದ್ದಾರೆ. ಮಹಾರಾಷ್ಟ್ರ ಮೂಲದ ಎಸ್. ಎ. ಬೋಬ್ಡೆ ಸಿಜೆಐ ಆದ ಬಳಿಕ 18 ತಿಂಗಳು ಕಾರ್ಯ ನಿರ್ವಹಿಸಲಿದ್ದಾರೆ. 2000ದಲ್ಲಿ ಬಾಂಬೆ ಹೈಕೋರ್ಟ್ ಹೆಚ್ಚುವರಿ ನ್ಯಾಯಾಧೀಶರಾಗಿ ಬೋಬ್ಡೆ ನೇಮಕಗೊಂಡರು. 2013ರ ಏಪ್ರಿಲ್ನಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಬಡ್ತಿ ಪಡೆಯುವ ಮೊದಲು ಅವರು ಮಧ್ಯ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದರು.
ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಹೆಚ್ಚು ವರ್ಷ ಸೇವೆ ಸಲ್ಲಿಸಿದ್ದ ವೈ. ವಿ. ಚಂದ್ರಚೂಡ್ ಪುತ್ರ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್. 2016ರ ಮೇನಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು. ಹಾರ್ವರ್ಡ್ನಲ್ಲಿ ಕಾನೂನು ಪದವಿ ಪಡೆದಿರುವ ಅವರು ಬಾಂಬೆ ಮತ್ತು ಅಲಹಬಾದ್ ಹೈಕೋರ್ಟ್ನಲ್ಲಿ ಸೇವೆ ಸಲ್ಲಿಸಿದ್ದಾರೆ.
ನ್ಯಾಯಮೂರ್ತಿ ಅಶೋಕ್ ಭೂಷಣ್
ನ್ಯಾಯಮೂರ್ತಿ ಅಶೋಕ್ ಭೂಷನ್ ಸಂವಿಧಾನಿಕ ಪೀಠದ ಐವರು ನ್ಯಾಯಮೂರ್ತಿಗಳ ಪೈಕಿ ಒಬ್ಬರು. 1979ರಲ್ಲಿ ಅಲಹಾಬಾದ್ ಹೈಕೋರ್ಟ್ನಲ್ಲಿ ವಕೀಲರಾಗಿ ಅವರು ಸೇವೆ ಆರಂಭಿಸಿದರು. 2001ರಲ್ಲಿ ನ್ಯಾಯಾಧೀಶರಾದರು. 2014ರಲ್ಲಿ ಕೇರಳ ಹೈಕೋರ್ಟ್ ನ್ಯಾಯೂರ್ತಿಗಳಾದ ಅವರು, 2015ರಲ್ಲಿ ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದರು. 2016ರ ಮೇ ನಿಂದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿದ್ದಾರೆ.
ನ್ಯಾಯಮೂರ್ತಿ ಅಬ್ದುಲ್ ನಜೀರ್
ಕರ್ನಾಟಕ ಹೈಕೋರ್ಟ್ನಲ್ಲಿ 20 ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿರುವ ನ್ಯಾಯಮೂರ್ತಿ ಅಬ್ದುಲ್ ನಜೀರ್ ಸಂವಿಧಾನಿಕ ಪೀಠದಲ್ಲಿದ್ದಾರೆ. 2003ರಲ್ಲಿ ಹೆಚ್ಚುವರಿ ನ್ಯಾಯಾಧೀಶರಾದ ಅವರು 2017ರ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಬಡ್ತಿ ಪಡೆದರು.