Get Updates
Get notified of breaking news, exclusive insights, and must-see stories!

ಆಡಿಯೋ ರಾಡಿ : ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದರೇ ಸಿದ್ದರಾಮಯ್ಯ?

Recommended Video

      ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ ನಿಜಕ್ಕೂ ಅದ್ಭುತ | Oneindia Kannada

      ಆಪರೇಷನ್ ಕಮಲ ಕಾರ್ಯಾಚರಣೆಯ ಭಾಗವಾಗಿ ಜೆಡಿಎಸ್ ಶಾಸಕರನ್ನು ಸೆಳೆಯುವ ಸಂದರ್ಭದಲ್ಲಿ ಸಿಡಿದ ಆಡಿಯೋ ಸಿ.ಡಿ. ಪ್ರಕರಣವನ್ನು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಹೊರಟಿದ್ದಾರೆಯೇ? ಒಂದೇ ಕಲ್ಲಿಗೆ ಹಲವು ಹಕ್ಕಿಗಳನ್ನು ಹೊಡೆಯಲು ಹೊರಟಿದ್ದಾರೆಯೇ?

      ಹಾಗೆಂಬ ಶಂಕೆ ರಾಜ್ಯ ಬಿಜೆಪಿಯ ಹಿರಿಯ ನಾಯಕರನ್ನು ಕಾಡತೊಡಗಿದೆ. ಬುಧವಾರ ಬೆಳಗ್ಗೆ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರು ನಡೆಸಿದ ಸಭೆಯಲ್ಲಿ ಸಿದ್ದರಾಮಯ್ಯ ನಡೆದುಕೊಂಡ ರೀತಿ ಅವರ ಅನುಮಾನಕ್ಕೆ ಮೂಲ ಕಾರಣ.

      ಅಂದ ಹಾಗೆ, ರಾಜ್ಯಾದ್ಯಂತ ಭಾರೀ ಕೋಲಾಹಲವನ್ನು ಸೃಷ್ಟಿಸಿದ, ಬಿಜೆಪಿ ಹೈಕಮಾಂಡ್ ಕೂಡಾ ಆತಂಕಗೊಳ್ಳುವಂತೆ ಮಾಡಿದ ಆಡಿಯೋ ಬಿಡುಗಡೆ ಪ್ರಕರಣದ ಬಗ್ಗೆ ಎಸ್.ಐ.ಟಿ ತನಿಖೆ ನಡೆಸಲು ಸರ್ಕಾರ ನಿರ್ಧರಿಸಿತಲ್ಲ? ಈ ನಿರ್ಧಾರದ ವಿರುದ್ಧ ಬಿಜೆಪಿ ಹೋರಾಟಕ್ಕಿಳಿಯಿತು.

      ಎಸ್.ಐ.ಟಿ ತನಿಖೆ ನಡೆಸುವುದು ಎಂದರೆ ಪೊಲೀಸರ ಕೈಗೆ ಶಾಸಕರನ್ನೊಪ್ಪಿಸುವುದು ಎಂದರ್ಥ. ವಿಧಾನಸಭೆಯೇ ಜನತಾ ನ್ಯಾಯಾಲಯವಾಗಿರುವಾಗ ಅದರ ಭಾಗವಾಗಿರುವ ಶಾಸಕರನ್ನು ಪೊಲೀಸರ ವಶಕ್ಕೊಪಿಸುವುದು ಸರಿಯಾದ ನಡವಳಿಕೆಯಲ್ಲ ಎಂದು ಬಿಜೆಪಿ ಕೋಲಾಹಲ ಎಬ್ಬಿಸಿದ್ದು ಸಹಜವೇ.

      ಆದರೆ ಬುಧವಾರ ಕೂಡಾ ಅದು ಮುಂದುವರಿದರೆ ಸದನ ಕಲಾಪವನ್ನು ನಡೆಸುವುದು ಕಷ್ಟವಾಗಬಹುದು ಎಂಬ ಕಾರಣಕ್ಕಾಗಿ ಸ್ಪೀಕರ್ ರಮೇಶ್ ಕುಮಾರ್ ಅವರು ತಮ್ಮ ಕಛೇರಿಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ನಾಯಕರ ಸಂಧಾನ ಸಭೆ ನಡೆಸಿದರು.

      ಬಿಜೆಪಿ ಬೇಡ ಅಂದಿತು, ಎಚ್ಡಿಕೆ ಓಕೆ ಅಂದರು

      ಬಿಜೆಪಿ ಬೇಡ ಅಂದಿತು, ಎಚ್ಡಿಕೆ ಓಕೆ ಅಂದರು

      ಕುತೂಹಲಕಾರಿ ಅಂಶವೆಂದರೆ, ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಕರೆದಿದ್ದ ಈ ಸಭೆಯಲ್ಲಿ ಬಿಜೆಪಿ ತನ್ನ ನಿಲುವನ್ನು ಪುನರುಚ್ಚರಿಸಿ, ಪ್ರಕರಣದ ಬಗ್ಗೆ ಬೇರೆ ಯಾವುದಾದರೂ ತನಿಖೆ ನಡೆಸಿ, ಎಸ್.ಐ.ಟಿ ತನಿಖೆ ಮಾತ್ರ ಬೇಡ ಎಂದಾಗ ಸಿಎಂ ಕುಮಾರಸ್ವಾಮಿ ತಕ್ಷಣವೇ ಅದನ್ನು ಒಪ್ಪಿಕೊಂಡಿದ್ದು.

      ಈ ವಿಷಯದಲ್ಲಿ ನಾನೇನೂ ಪ್ರತಿಷ್ಠೆಗೆ ಅಂಟಿಕೊಂಡಿಲ್ಲ, ಎಸ್.ಐ.ಟಿ ಬದಲು ಬೇರೆ ತನಿಖೆ ನಡೆಸುವುದಾದರೆ ನಡೆಸೋಣ ಎಂದುಬಿಟ್ಟರು. ಆದರೆ ತಕ್ಷಣವೇ ಅಲ್ಲಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಮಾತ್ರ, ನೋ, ನೋ, ಯಾವ ಕಾರಣಕ್ಕೂ ಎಸ್.ಐ.ಟಿ ಹೊರತುಪಡಿಸಿ ಬೇರೆ ತನಿಖೆ ನಡೆಸಿದರೆ ಸತ್ಯ ಹೊರಬರಲು ಸಾಧ್ಯವಿಲ್ಲ ಎಂದು ವಾದಿಸತೊಡಗಿದರು.

      ಸಿದ್ದರಾಮಯ್ಯ ಅವರ ವಾದವೇ ಗೆದ್ದಿತು

      ಸಿದ್ದರಾಮಯ್ಯ ಅವರ ವಾದವೇ ಗೆದ್ದಿತು

      ಫೈನಲಿ, ನೋನೋ ಎನ್ಐಟಿ ತನಿಖೆಯೇ ಆಗಲಿ ಅಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾದವೇ ಗೆದ್ದಿತು. ರಮೇಶ್ ಕುಮಾರ್ ಕೂಡ ಎಸ್ಐಟಿ ತನಿಖೆಗೆ ಗೋ ಅಹೆಡ್ ಅಂದರು. ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಾ ಬೇರೆ ದಾರಿ ಕಾಣದೆ ಮೌನವಾದರು. ಹೀಗಾಗಿ ಆಡಿಯೋ ವಿವಾದದ ಬಗ್ಗೆ ಎಸ್.ಐ.ಟಿ ತನಿಖೆ ನಡೆಸುವುದು ಸರ್ಕಾರದ ಅಂತಿಮ ತೀರ್ಮಾನವಾಯಿತು.

      ಆದರೆ ಈ ಬೆಳವಣಿಗೆಯನ್ನು ಕಂಡ ಬಿಜೆಪಿ ನಾಯಕರಿಗೆ ಒಂದು ಅನುಮಾನ ಶುರುವಾಗಿದೆ. ಅದೆಂದರೆ, ಸಿದ್ದರಾಮಯ್ಯ ಅವರು ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಹೊಡೆಯಲು ಹೊರಟಿದ್ದಾರಾ? ಎಂಬುದು. ಸಿದ್ದರಾಮಯ್ಯ ಅವರ ನಡೆಯನ್ನು ಬಲ್ಲದಿರುವವರೇನಲ್ಲ ಬಿಜೆಪಿ ನಾಯಕರು. ಹಿಂದೆ ಕೂಡ, ಇಂಥ ಘಟನಾವಳಿಗಳಿಗೆ ಸಿದ್ದರಾಮಯ್ಯನವರೇ ಸೂತ್ರಧಾರಿಯಾಗಿದ್ದಾರೆ. ಇಂಥ ರಾಜಕೀಯ ಆಟ ಆಡುವಲ್ಲಿ ಸಿದ್ದರಾಮಯ್ಯ ಸಿದ್ಧಹಸ್ತರು ಎಂಬುದನ್ನೂ ಬಿಜೆಪಿ ನಾಯಕರು ಬಲ್ಲರು.

      ಎಸ್.ಐ.ಟಿ ತನಿಖೆ ನಡೆದರೆ ಬಿಜೆಪಿಗೆ ಕಷ್ಟ

      ಎಸ್.ಐ.ಟಿ ತನಿಖೆ ನಡೆದರೆ ಬಿಜೆಪಿಗೆ ಕಷ್ಟ

      ಮೊದಲನೆಯದಾಗಿ, ಆಡಿಯೋ ವಿವಾದವನ್ನು ಎಸ್.ಐ.ಟಿ ತನಿಖೆಗೆ ಒಪ್ಪಿಸಿದರೆ ಬಿಜೆಪಿ ಕಷ್ಟ ಎದುರಿಸುವುದು ನಿಶ್ಚಿತ. ಅದರ ಅಂತಿಮ ಫಲಿತಾಂಶ ಏನೇ ಇರಲಿ, ಆದರೆ ಆ ತನಿಖಾ ಸಂಸ್ಥೆಯ ಮೂಲಕ ತನಿಖೆ ನಡೆಯುವುದು ನಿಶ್ಚಿತವಾಗಿರುವುದರಿಂದ ಆಡಿಯೋದಲ್ಲಿ ಕೇಳಿ ಬಂದ ಧ್ವನಿಗಳು ಯಾರವು? ಎಂದು ಅದು ಮೊದಲು ಹುಡುಕುತ್ತದೆ.

      ಆ ಟೈಮಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಶಾಸಕರಾದ ಶಿವನಗೌಡ ನಾಯಕ್, ಪ್ರೀತಂ ಗೌಡ ಅವರನ್ನು ಎಸ್.ಐ.ಟಿ ಲಾಕ್ ಮಾಡುತ್ತದೆ. ಅದರಿಂದ ಅವರು ಬಚಾವಾಗಲು ಹಲ ಮಾರ್ಗಗಳಿವೆಯಾದರೂ, ಮಾನಸಿಕ ಯಾತನೆಗೆ ಗುರಿಯಾಗುವುದಂತೂ ಸ್ಪಷ್ಟ.

      ಯಡಿಯೂರಪ್ಪ ಅವರಿಗೆ ಮಾನಸಿಕ ಯಾತನೆ ನೀಡಲು ಆರಂಭಿಸಿದರೆ ಸಹಜವಾಗಿಯೇ ಅದು ರಾಜ್ಯದ ಪ್ರಬಲ ಲಿಂಗಾಯತ ಸಮುದಾಯಕ್ಕೆ ರಾಂಗ್ ಮೆಸೇಜ್ ರವಾನಿಸುತ್ತದೆ. ತಮ್ಮ ನಾಯಕನಿಗೆ ಸರ್ಕಾರ ಕಿರುಕುಳ ನೀಡುತ್ತಿದೆ ಎಂಬ ಭಾವನೆ ಅದಕ್ಕೆ ಬರುತ್ತದೆ.

      ವಿಲನ್ ಆಗಿ ನಿಲ್ಲುವವರು ಕುಮಾರಸ್ವಾಮಿ

      ವಿಲನ್ ಆಗಿ ನಿಲ್ಲುವವರು ಕುಮಾರಸ್ವಾಮಿ

      ಯಾರೇನೇ ಹೇಳಿದರೂ ಜಾತಿ ವ್ಯವಸ್ಥೆಯೇ ನಿರ್ಣಾಯಕವಾಗಿರುವ ಭಾರತದಲ್ಲಿ ಇದು ಸಹಜ ಬೆಳವಣಿಗೆ. ಹೀಗಾಗಿ ಯಡಿಯೂರಪ್ಪ ಅವರಿಗೆ ಎಸ್.ಐ.ಟಿ ಕಿರುಕುಳ ನೀಡುತ್ತಿದೆ ಎಂಬ ಭಾವನೆ ಬಂದರೆ ಲಿಂಗಾಯತ ಸಮುದಾಯ ದೊಡ್ಡ ಮಟ್ಟದಲ್ಲಿ ಆಕ್ರೋಶಗೊಳ್ಳುತ್ತದೆ.

      ಆಗ ಅದರ ಕಣ್ಣ ಮುಂದೆ ವಿಲನ್ ಆಗಿ ನಿಲ್ಲುವವರು ಮುಖ್ಯಮಂತ್ರಿ ಕುಮಾರಸ್ವಾಮಿ. ಸಹಜವಾಗಿಯೇ ಅದು ಅವರ ವಿರುದ್ಧ ಕೆಂಗಣ್ಣು ಬೀರುತ್ತದೆ. ಅಲ್ಲಿಗೆ ಎರಡು ಪ್ರಬಲ ಸಮುದಾಯಗಳ ನಾಯಕತ್ವದ ನಡುವೆ ಸಂಘರ್ಷ ಏರ್ಪಡುತ್ತದೆ.

      ಅಲ್ಲಿಗೆ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಕಡುವೈರಿಗಳ ಪೋಜಿನಲ್ಲಿ ನಿಲ್ಲಬೇಕಾಗುತ್ತದೆ. ಅಷ್ಟೇ ಅಲ್ಲ, ಪಾರ್ಲಿಮೆಂಟ್ ಚುನಾವಣೆಯ ಒಳಗೇ ಅದರ ಪ್ರಭಾವ ಶುರುವಾಗುತ್ತದೆ. ಒಂದು ವೇಳೆ ಇದು ವರ್ಕ್ ಔಟ್ ಆದರೆ, ಮತ್ತು ಯಡಿಯೂರಪ್ಪ ಸಿಎಂ ಆಗಲು ಬಿಜೆಪಿ ಹೈಕಮಾಂಡೇ ಬಿಡುತ್ತಿಲ್ಲ ಎಂಬ ಅನುಮಾನ ಈಗಾಗಲೇ ಲಿಂಗಾಯತ ಸಮುದಾಯದಲ್ಲಿರುವುದರಿಂದ ಲೋಕಸಭೆ ಚುನಾವಣೆಯಲ್ಲಿ ಅದು ಬಿಜೆಪಿ ಹಾಗೂ ಜೆಡಿಎಸ್ ಗಳೆರಡನ್ನೂ ದ್ವೇಷಿಸತೊಡಗುತ್ತದೆ.

      ಯಡಿಯೂರಪ್ಪ ತಪ್ಪಿತಸ್ಥ ಎಂದು ಸಾಬೀತಾದರೆ

      ಯಡಿಯೂರಪ್ಪ ತಪ್ಪಿತಸ್ಥ ಎಂದು ಸಾಬೀತಾದರೆ

      ಅಂದ ಹಾಗೆ ರಾಜಕಾರಣದಲ್ಲಿ ಒಂದು ಸಮುದಾಯದ ಶೇಕಡಾ ಐವತ್ತಕ್ಕೂ ಹೆಚ್ಚು ಮತಗಳನ್ನು ಸೆಳೆಯಬಲ್ಲವರೇ ಆ ಸಮುದಾಯದ ನಾಯಕರು. ಇದನ್ನು ಸ್ಪಷ್ಟಪಡಿಸಿಕೊಂಡೇ ಮುಂದೆ ಹೋಗೋಣ. ಆ ಸಾಮರ್ಥ್ಯ ಇರುವುದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಮಾತ್ರ. ಬಿಜೆಪಿಯಲ್ಲಿ ಅಷ್ಟ್ಯಾಕೆ ಕಾಂಗ್ರೆಸ್ಸಿನಲ್ಲಿಯೂ ಆ ಸಾಮರ್ಥ್ಯ ಯಾರಿಗೂ ಇಲ್ಲ.

      ವಿಷಯಕ್ಕೆ ಮರಳಿ ಬರುವುದಾದರೆ, ಒಂದು ವೇಳೆ ಎಸ್ಐಟಿ ತನಿಖೆಯಾಗಿ ಯಡಿಯೂರಪ್ಪ ತಪ್ಪಿತಸ್ಥ ಎಂದು ಸಾಬೀತಾದರೆ, ಲಿಂಗಾಯತ ಸಮುದಾಯ ಪಾರ್ಲಿಮೆಂಟ್ ಚುನಾವಣೆಯ ಟೈಮಿನಲ್ಲಿ ಬಿಜೆಪಿಗೆ ಭರ್ಜರಿ ಹೊಡೆತ ಕೊಡುತ್ತದೆ. ಲಿಂಗಾಯತ ಸಮುದಾಯಕ್ಕೆ ಜೆಡಿಎಸ್ ಜತೆ ನಿಲ್ಲಲು ಸಾಧ್ಯವಿಲ್ಲವಾದ್ದರಿಂದ, ಸಹಜವಾಗಿ ಕಾಂಗ್ರೆಸ್ ಕಡೆ ವಲಸೆ ಹೋಗುತ್ತದೆ.

      ಯಡಿಯೂರಪ್ಪ ಕಡೆಗಣನೆಗಾದರೆ

      ಯಡಿಯೂರಪ್ಪ ಕಡೆಗಣನೆಗಾದರೆ

      ಹಾಗೇನಾದರೂ ಆದರೆ ಚುನಾವಣೆಯಲ್ಲಿ ಕಾಂಗ್ರೆಸ್ ಅಹಿಂದ ಸಮುದಾಯಗಳ ಗಣನೀಯ ಪ್ರಮಾಣದ ವೋಟುಗಳ ಜತೆ, ಪ್ರಬಲ ಲಿಂಗಾಯತ ಸಮುದಾಯದ ವೋಟುಗಳನ್ನೂ ಪಡೆದು ಹದಿನೈದಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತದೆ. ಇದು ಎಷ್ಟರ ಮಟ್ಟಿಗೆ ಸಾಧ್ಯ ಎಂಬುದನ್ನು ಕಾಲವೇ ಉತ್ತರಿಸಲಿದೆ.

      ಅಷ್ಟಾದರೆ ಸಾಕು, ಸಹಜವಾಗಿಯೇ ಯಡಿಯೂರಪ್ಪ ಅವರು ಪಕ್ಷದ ಮಟ್ಟದಲ್ಲಿ ಕಡೆಗಣನೆಗೊಳಗಾಗುತ್ತಾರೆ (ಅಲ್ಲದೆ, ಅವರೀಗ ಎಪ್ಪತ್ತೈದು ವರ್ಷ ದಾಟಿದ್ದಾರೆ). ಅವರನ್ನು ಕಡೆಗಣಿಸುವ ಕೆಲಸ ನಡೆದರೆ ಬಿಜೆಪಿಯಲ್ಲಿ ಮತ್ತೆ ಒಡಕುಂಟಾಗುತ್ತದೆ. ಈ ಒಡಕಿನ ಸಂದರ್ಭದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲೂ ಗೊಂದಲ ಉಂಟಾಗುವಂತೆ ಮಾಡಿದರೆ ಸರ್ಕಾರವೇ ಉರುಳಿ ಹೋಗುತ್ತದೆ.

      ಮತ್ತೆ ಚುನಾವಣೆ ಅನಿವಾರ್ಯ

      ಮತ್ತೆ ಚುನಾವಣೆ ಅನಿವಾರ್ಯ

      ಈ ಸಂದರ್ಭದಲ್ಲಿ ಕರ್ನಾಟಕದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರಿದರೆ ಸಹಜವಾಗಿಯೇ ಸರ್ಕಾರ ನಡೆಸಲು ತಮಗೆ ಬಹುಮತವಿದೆ ಎಂದು ಸಾಬೀತು ಪಡಿಸುವುದು ಯಾವ ಪಕ್ಷಕ್ಕೂ ಸಾಧ್ಯವಿಲ್ಲ. ಆ ಸಾಧ್ಯತೆ ಇದ್ದದ್ದು ಯಡಿಯೂರಪ್ಪ ಅವರಿಗೆ ಮಾತ್ರ. ಆದರೆ, ಅವರು ಪ್ರತಿಬಾರಿ ಆಪರೇಷನ್ ಕಮಲ ಮಾಡಿ ಸೋಲುತ್ತಿದ್ದಾರೆ.

      ಯಾವಾಗ ಸರ್ಕಾರ ರಚಿಸಲು ಯಾರೂ ಮುಂದೆ ಬರಲು ಸಾಧ್ಯವಿಲ್ಲವೋ? ಆಗ ಸಹಜವಾಗಿಯೇ ಕರ್ನಾಟಕ ಮಧ್ಯಂತರ ಚುನಾವಣೆಯನ್ನು ಎದುರಿಸುವುದು ಅನಿವಾರ್ಯವಾಗುತ್ತದೆ. ಒಂದು ವೇಳೆ ಮತ್ತೆ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾದರೆ ಲಾಭ ಯಾರಿಗೆ?

      ಸಿದ್ದರಾಮಯ್ಯ ಮಾಸ್ಟರ್ ಸ್ಟ್ರೋಕ್

      ಸಿದ್ದರಾಮಯ್ಯ ಮಾಸ್ಟರ್ ಸ್ಟ್ರೋಕ್

      ಆಗ ನಡೆಯುವ ಚುನಾವಣೆಯಲ್ಲಿ ಅಹಿಂದ ಪ್ಲಸ್ ಲಿಂಗಾಯತ ಸಮುದಾಯದ ಗಣನೀಯ ಮತಗಳು ಕಾಂಗ್ರೆಸ್ ಗೆ ದಕ್ಕಿದರೆ ಸ್ವಯಂಬಲದ ಮೇಲೆ ಸರ್ಕಾರ ರಚಿಸಲು ಅದಕ್ಕೆ ಸಾಧ್ಯವಾಗುತ್ತದೆ. ಮತ್ತು ಹೀಗೆ ಸರ್ಕಾರ ರಚಿಸುವ ಸಾಮರ್ಥ್ಯ ಅದಕ್ಕೆ ದಕ್ಕಿದರೆ ನಿಸ್ಸಂಶಯವಾಗಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗುತ್ತಾರೆ.

      ಹೀಗೆ ಸದ್ಯದಲ್ಲೇ ಮರಳಿ ಕರ್ನಾಟಕದ ಸಿಎಂ ಆಗಲು ಸಿದ್ದರಾಮಯ್ಯ ಈ ಮಾಸ್ಟರ್ ಸ್ಟ್ರೋಕ್ ಬಾರಿಸಿದರೇ? ಎಂಬುದು ಬಿಜೆಪಿ ನಾಯಕರ ಅನುಮಾನ. ಈ ಅನುಮಾನವನ್ನು ನಿರಾಕರಿಸುವವರಿರಬಹುದು. ಆದರೆ ಅಂತಹ ಸಾಧ್ಯಾಸಾಧ್ಯತೆಗಳನ್ನು ಮಾತ್ರ ಯಾವ ಕಾರಣಕ್ಕೂ ತಳ್ಳಿ ಹಾಕಲು ಸಾಧ್ಯವಿಲ್ಲ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+