ಆಕಾಶದಿಂದ ಇಂದ್ರ, ಚಂದ್ರ ಚುಕ್ಕಿಯನ್ನು ನರೇಂದ್ರ ಮೋದಿ ತಂದರೇ? ಈಶ್ವರ್ ಖಂಡ್ರೆ ವಾಗ್ದಾಳಿ
Recommended Video

ಹದಿನೈದು ಲಕ್ಷವನ್ನು ಐವತ್ತು ದಿನದೊಳಗೆ ಕೊಡುತ್ತೇನೆ ಅಂದ್ರು, ಸ್ವಿಸ್ ಬ್ಯಾಂಕ್ ನಿಂದ ಕಪ್ಪುಹಣವನ್ನು ತರುತ್ತೇನೆ ಅಂದರು, ಕೊಟ್ಟ ಭರವಸೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಒಂದಾದರೂ ಈಡೇರಿಸಿದ್ದಾರಾ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
'ಒನ್ ಇಂಡಿಯಾ' ಜೊತೆ ಮಾತನಾಡುತ್ತಾ ಈಶ್ವರ್ ಖಂಡ್ರೆ, ಕೇಂದ್ರ ಸರಕಾರದ ವೈಫಲ್ಯವನ್ನು ಇಂಚಿಂಚೂ ಬಿಡಿಸುತ್ತಾ ಹೋದರು. ಮೋದಿ ಸರಕಾರದಲ್ಲಿ ಮಹಿಳೆಯರು ಸುರಕ್ಷಿತರಾಗಿದ್ದಾರಾ ಎಂದು ಪ್ರಶ್ನಿಸಿರುವ ಖಂಡ್ರೆ, ಅತ್ಯಾಚಾರದ ಗ್ರಾಫ್ ಮೋದಿ ಅವಧಿಯಲ್ಲಿ ಏರುತ್ತಲೇ ಇದೆ ಎಂದು ಕಿಡಿಕಾರಿದ್ದಾರೆ.
ಬೀದರ್ ಲೋಕಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಗಳೂ ಆಗಿರುವ ಈಶ್ವರ್ ಖಂಡ್ರೆ. ಚುನಾವಣೆ ಹೊಸ್ತಿಲಲ್ಲಿ ಹೇಗಿದೆ ರಾಜಕೀಯ, ಹೇಗಿದೆ ಚುನಾವಣೆಗೆ ಪ್ರಿಪರೇಶನ್, ಮೋದಿ ಜನಪ್ರಿಯತೆ ಬಗ್ಗೆ ಮಾತನಾಡಿದ್ದಾರೆ. ಅವರ ಸಂದರ್ಶನದ ಆಯ್ದಭಾಗ, ಇಂತಿದೆ..
ಪ್ರ: ಬಿಜೆಪಿ ನಿಮ್ಮ ನೇರ ಪ್ರತಿಸ್ಪರ್ಧಿ. ಯಾವ ವಿಷಯವನ್ನು ಇಟ್ಟುಕೊಂಡು ಮತದಾರರ ಬಳಿ ಹೋಗ್ತೀರಾ?
ಖಂಡ್ರೆ: ಸಾಮಾಜಿಕ, ಕೃಷಿ, ಶಿಕ್ಷಣ ಸೇರಿದಂತೆ ಹಲವಾರು ವಿಷಯಗಳಲ್ಲಿ ನಮ್ಮ ದೇಶ ತಲೆ ಎತ್ತಿ ತಿರುಗುವಂತೆ ಮಾಡಿದ್ದು ಕಾಂಗ್ರೆಸ್ ಪಕ್ಷ. ಬಿಜೆಪಿಯವರು ಯಾವ ರೀತಿ ಜನರನ್ನು ಮೋಸ ಮಾಡುತ್ತಿದ್ದಾರೆ ಎನ್ನುವುದನ್ನು ಮತದಾರರಿಗೆ ವಿವರಿಸುತ್ತೇವೆ.
ಕೊಟ್ಟ ಒಂದೇ ಒಂದು ಭರವಸೆಯನ್ನು ಮೋದಿ ಸರಕಾರ ಕಳೆದ ಐದು ವರ್ಷಗಳಲ್ಲಿ ಮಾಡಲಿಲ್ಲ. ಕಳೆದ ಚುನಾವಣೆಯಲ್ಲಿ ಇಂದ್ರಚಂದ್ರ ಚುಕ್ಕಿಯನ್ನು ತಂದು ಕೊಡುತ್ತೇನೆಂದ ಮೋದಿಯವರು ಮಾಡಿದ್ದು ಏನು? ನೂರು ದಿನಗಳಲ್ಲಿ ಕಪ್ಪುಹಣ ತಂದುಕೊಡುತ್ತೇನೆ ಎಂದಿದ್ದ ಚೌಕೀದಾರರು ಏನು ಮಾಡಿದರು? ಈ ವಿಷಯಗಳನ್ನೆಲ್ಲಾ ಜನರಿಗೆ ಮನದಟ್ಟು ಮಾಡುವ ಕೆಲಸವನ್ನು ನಾವು ಮಾಡುತ್ತೇವೆ.

ಇಪ್ಪತ್ತು ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿಗೆ ಅಭ್ಯರ್ಥಿ ಕೊರತೆ ಕಾಡುತ್ತಿದೆಯಾ?
ಪ್ರ: ಇಪ್ಪತ್ತು ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿಗೆ ಅಭ್ಯರ್ಥಿ ಕೊರತೆ ಕಾಡುತ್ತಿದೆಯಾ?
ಖಂಡ್ರೆ: ಎಲ್ಲೂ ನಮಗೆ ಅಭ್ಯರ್ಥಿಗಳ ಕೊರೆತೆಯಿಲ್ಲ. ಒಂದೊಂದು ಕ್ಷೇತ್ರದಲ್ಲೂ ಐದರಿಂದ ಹತ್ತು ಜನ ಆಕಾಂಕ್ಷಿಗಳಿದ್ದಾರೆ. ಹಾಗಾಗಿಯೇ, ಸೀಟು ಅಂತಿಮ ಮಾಡುವ ಪ್ರಕ್ರಿಯೆ ಇನ್ನೂ ಮುಕ್ತಾಯಗೊಂಡಿಲ್ಲ. ಎಲ್ಲವನ್ನೂ ವಿಚಾರ ಮಾಡಿಕೊಂಡು ನಮ್ಮ ವರಿಷ್ಠರು ಸೀಟ್ ಬಗ್ಗೆ ಅಂತಿಮ ತೀರ್ಮಾನ ಮಾಡುತ್ತಾರೆ.
ಪ್ರ: ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಹೇಗಿದೆ ಚುನಾವಣಾ ವಾತಾವರಣ?
ಖಂಡ್ರೆ: ಇದು ಮೊದಲಿನಿಂದಲೂ ಕಾಂಗ್ರೆಸ್ಸಿನ ಭದ್ರಕೋಟೆಯಾಗಿತ್ತು. ತೊಂಬತ್ತರ ದಶಕದಲ್ಲಿ ನಮ್ಮೊಳಗಿನ ಭಿನ್ನಾಭಿಪ್ರಾಯದಿಂದಾಗಿ ಬಿಜೆಪಿ ಮೇಲುಗೈ ಸಾಧಿಸಿತ್ತು. ಹೋದ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಅದಕ್ಕಿಂತ ಪೂರ್ವದಲ್ಲಿ ಕಾಂಗ್ರೆಸ್ ಗೆದ್ದಿತ್ತು.
ವಿಶೇಷವಾಗಿ ನಾನು ಉಸ್ತುವಾರಿ ಮಂತ್ರಿಯಾದ ನಂತರ, ಕ್ಷೇತ್ರದಲ್ಲೆಲ್ಲಾ ಸುತ್ತಾಡಿ, ಸಂಘಟನೆ ಬಲಪಡಿಸುವ ಕೆಲಸವನ್ನು ಮಾಡಿದ್ದೇನೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ವೇಳೆ, ಹೆಚ್ಚುವರಿಯಾಗಿ ಎರಡು ಸಾವಿರ ಕೋಟಿ ಅನುದಾನವನ್ನು ತಂದು ಕ್ಷೇತ್ರಾಭಿವೃದ್ದಿ ಮಾಡಿದ್ದೇನೆ. ಹಾಗಾಗಿ, ಬೀದರ್ ನಲ್ಲಿ ಈ ಬಾರಿ ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ.

ಪ್ರಿಯಾಂಕ ಎಂಟ್ರಿ ಕಾಂಗ್ರೆಸ್ಸಿಗೆ ಲಾಭ ಆಗುತ್ತಾ?
ಪ್ರ: ಪ್ರಿಯಾಂಕ ಎಂಟ್ರಿ ಕಾಂಗ್ರೆಸ್ಸಿಗೆ ಲಾಭ ಆಗುತ್ತಾ, ಕುಟುಂಬ ರಾಜಕಾರಣ ಎಂದು ಜನ ಬೇಸರಿಸಿಕೊಳ್ಳಬಹುದಾ?
ಖಂಡ್ರೆ: ಕುಟುಂಬ ರಾಜಕಾರಣ ಎನ್ನುವ ಪ್ರಶ್ನೆ ಇಲ್ಲಿ ಬರುವುದಿಲ್ಲ. ಪ್ರಬುದ್ದ, ಯುವ ಮುಖಂಡರಾಗಿ ಪ್ರಿಯಾಂಕ ಹೊರಹೊಮ್ಮಿದ್ದಾರೆ. ರಾಜಕೀಯ ಪರಿವಾರದಿಂದ ಅವರು ಬಂದವರು. ಇಂದಿರಾ ಗಾಂಧಿಯವರ ಪ್ರತಿರೂಪದಂತೆ ಪ್ರಿಯಾಂಕ ನಮ್ಮೊಂದಿಗಿದ್ದಾರೆ.
ಉಕ್ಕಿನ ಮಹಿಳೆ ಎಂದು ಇಂದಿರಾ ಗಾಂಧಿ ಪ್ರಖ್ಯಾತಿಯಾಗಿದ್ದರು, ಬಡವರ ಬಗ್ಗೆ ಕಾಳಜಿಯನ್ನು ಹೊಂದಿದ್ದರು. ಅದೇ ರೀತಿಯಲ್ಲಿ ಜನ ಪ್ರಿಯಾಂಕ ಅವರನ್ನೂ ನೋಡುತ್ತಿದ್ದಾರೆ. ಯುವಕ, ಯುವತಿಯರು ಪ್ರಿಯಾಂಕ ಅವರನ್ನು ಫಾಲೋ ಮಾಡುತ್ತಿದ್ದಾರೆ. ಹಾಗಾಗಿ, ಅವರಿಂದ ಪರಿವರ್ತನೆ ಸಾಧ್ಯ.

ಮುದ್ದಹನುಮೇಗೌಡ್ರು ಪಕ್ಷದ ನಿಷ್ಟಾವಂತ ಮುಖಂಡರು
ಪ್ರ: ಮುದ್ದಹನುಮೇಗೌಡ್ರು ಬಹಳ ಬೇಸರಿಸಿಕೊಂಡಿದ್ದಾರಲ್ವಾ?
ಖಂಡ್ರೆ: ಅವರು ನಮ್ಮ ಪಕ್ಷದ ನಿಷ್ಟಾವಂತ ಮುಖಂಡರು. ಹೀಗಾಗಿ ಅವರಿಗೆ ನ್ಯಾಯ ಸಿಗಲೇ ಬೇಕು. ಸಮಾಜದ ಮತ್ತು ಜನರ ಹಿತದೃಷ್ಟಿಯಿಂದ ಈ ಮೈತ್ರಿ ಸರಕಾರ ರಚನೆಯಾಗಿದೆ. ಮೈತ್ರಿಯಲ್ಲಿ ಸ್ವಲ್ಪ ಕೊಡಬೇಕು, ತೆಗೆದುಕೊಳ್ಲಬೇಕು ಎನ್ನುವುದು ಇರುವುದರಿಂದ, ತುಮಕೂರು ಕ್ಷೇತ್ರವನ್ನು ಜೆಡಿಎಸ್ಸಿಗೆ ಕೊಡುವ ತೀರ್ಮಾನ ಮಾಡಲಾಗಿದೆ.
ಪರ್ಯಾಯವಾಗಿ, ಹೈಕಮಾಂಡ್ ಇವರಿಗೆ ಸೂಕ್ತ ಸಮಯದಲ್ಲಿ ಸೂಕ್ತ ಸ್ಥಾನಮಾನ ನೀಡಲಿದೆ, ಇದು ಖಂಡಿತ.

ಯಾವ ಆಧಾರದ ಮೇಲೆ ಸಂಘ ಪರಿವಾರವನ್ನು ದೂರುತ್ತೀರಾ?
ಪ್ರ: ರಾಹುಲ್ ಕಾರ್ಯಕ್ರಮದಲ್ಲಿ ಮೋದಿಗೆ ಜೈಕಾರ, ಯಾವ ಆಧಾರದ ಮೇಲೆ ಸಂಘ ಪರಿವಾರವನ್ನು ದೂರುತ್ತೀರಾ?
ಖಂಡ್ರೆ: ಬಿಜೆಪಿಯವರೇ ಮಾಡಿದ್ದು ಎನ್ನುವುದು ಜಗಜ್ಜಾಹೀರಾಗಿದೆ. ಇವತ್ತು ಯಾವರೀತಿ ಬಿಜೆಪಿಯವರು ಜನರಿಗೆ ಸುಳ್ಳು ಹೇಳುತ್ತಿದ್ದಾರೆ, ದಾರಿ ತಪ್ಪಿಸುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೆಲವೊಂದು ಬಲಪಂಥೀಯ ಸಂಘಟನೆಯವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಡಬಾರದನ್ನು ಮಾಡುತ್ತಿದ್ದಾರೆ.
ಪ್ರತಿಪಕ್ಷದವರ ಮೇಲೆ ಸೇಡಿನ ರಾಜಕಾರಣವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಕೇಂದ್ರದ ಸಂಸ್ಥೆಗಳನ್ನು ದುರಪಯೋಗ ಮಾಡಿಕೊಂಡಿರುವ ಸಾಕಷ್ಟು ಉದಾಹರಣೆಗಳಿವೆ. ಜನರನ್ನು ತಪ್ಪುದಾರಿಗೆ ಎಳೆಯುವುದು ಅವರ ಧೋರಣೆ. ಅವರು ನೂರು ಜನ ಕರೆದುಕೊಂಡು ಬಂದರೆ, ನಾವು ಐನೂರು ಜನರನ್ನು ಸೇರಿಸಲು ನಮಗೆ ಶಕ್ತಿಯಿಲ್ಲವಾ? ಆದರೆ, ನಾವು ವ್ಯವಸ್ಥೆಯಲ್ಲಿ ನಂಬಕೆ ಇಟ್ಟುಕೊಂಡವರು.

ಮಸೂದ್ ಅಜರ್ ಅನ್ನು ಬೆಳ್ಳಿತಾಟಿಯ ಮೇಲೆ ಕಂದಹಾರ್ ಗೆ ಬಿಟ್ಟುಬಂದದ್ದು ಯಾರು?
ಪ್ರ: ಪುಲ್ವಾಮಾ, ಏರ್ ಸ್ಟ್ರೈಕ್ ನಂತರ ಮೋದಿ ಜನಪ್ರಿಯತೆ ಹೆಚ್ಚಾಗಿದೆ ಎನ್ನುತ್ತದೆ ಅಲ್ವಾ ಸಮೀಕ್ಷೆಗಳು?
ಖಂಡ್ರೆ: ನೋಡಿ ಈ ಸಮೀಕ್ಷೆಗಳು ಬಹಳ ಸಲ ತಲೆಕೆಳಗಾಗಿದ್ದನ್ನು ನೋಡಿದ್ದೇವೆ. ವಾಜಪೇಯಿ ಇದ್ದಂತಹ ಸಂದರ್ಭದಲ್ಲಿ ಇಂಡಿಯಾ ಶೈನಿಂಗ್ ಅಂತ ಬಂತು. ಪ್ರತಿಯೊಬ್ಬರ ತಲೆಯಲ್ಲಿ ಮತ್ತೆ ವಾಜಪೇಯಿ ಬರುತ್ತಾರೆ ಎಂದೇ ಅಂದುಕೊಂಡಿದ್ದರು. ಆ ಸಮೀಕ್ಷೆಗಳು ಸತ್ಯವಾಯಿತಾ?
ಯುಪಿಎ ಅಧಿಕಾರಕ್ಕೆ ಬಂತು, ಕಾಂಗ್ರೆಸ್ಸಿಗೆ ಹೆಚ್ಚಿನ ಸ್ಥಾನ ಬಂತು. ಅದೇ ರೀತಿಯಲ್ಲಿ, ಪುಲ್ವಾಮಾ ದಾಳಿಯನ್ನು ಬಿಜೆಪಿಯವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಮೋದಿ ಅಲೆಯಿದೆ, 22ಸ್ಥಾನ ಗೆಲ್ಲುತ್ತೇವೆ ಎಂದು ಬಿಜೆಪಿ ಹಿರಿಯ ಮುಖಂಡರು ಹೇಳುತ್ತಾರೆ. ಇವರಿಗೆಲ್ಲಾ ಜನಪರ ಕಾಳಜಿಯಿದೆಯಾ?
ಮಸೂದ್ ಅಜರ್ ಅನ್ನು ಬೆಳ್ಳಿತಾಟಿಯ ಮೇಲೆ, ಜಸ್ವಂತ್ ಸಿಂಗ್ ಉಸ್ತುವಾರಿಯಲ್ಲಿ ಕಂದಹಾರ್ ಗೆ ಬಿಟ್ಟು ಬಂದಿದ್ದನ್ನು ಜನ ಮರೀತಾರಾ? ಆತನ ಕಡೆಯವರೇ ತಾನೇ ಪುಲ್ವಾಮಾ ದಾಳಿ ನಡೆಸಿದ್ದು. ಇದನ್ನೆಲ್ಲಾ ಜನ ನೋಡದೇ ಇರುತ್ತಾರಾ?

ಫೇಸ್ ಬುಕ್, ಟ್ವಿಟ್ಟರ್ ಬಳಕೆ
ಪ್ರ: ಸಾಮಾಜಿಕ ಜಾಲತಾಣದ ಬಳಕೆಯ ಬಗ್ಗೆ?
ಖಂಡ್ರೆ: ಇದರಲ್ಲಿ ಒಳ್ಳೆಯದೂ ಇದೆ, ಕೆಟ್ಟದ್ದೂ ಇದೆ. ಬಿಜೆಪಿಯವರು ಇದನ್ನು ಇಟ್ಟುಕೊಂಡು ಯಾವ ಕೀಳುಮಟ್ಟಕ್ಕೆ ಇಳಿಯುತ್ತಾರೆ ಎನ್ನುವುದಕ್ಕೆ ಸಾಮಾಜಿಕ ಜಾಲತಾಣದ ಚಟುವಟಿಕೆಗಳು ಸಾಕ್ಷಿ. ಪ್ರತಿಯೊಂದರಲ್ಲೂ ಅಪಪ್ರಚಾರ ಮಾಡುತ್ತಾರೆ. ಬೇಟಿ ಪಡಾವೊ, ಬೇಟಿ ಬಚಾವೋ ಎನ್ನುತ್ತಾರೆ ಒಂದು ಕಡೆ, ಇನ್ನೊಂದು ಕಡೆ ಪ್ರಿಯಾಂಕ ಗಾಂಧಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡುತ್ತಾರೆ.
ಬೇಟಿ ಬಚಾವೋ ಕಾರ್ಯಕ್ರಮದ ಶೇ. 56 ಅನುದಾನವನ್ನು ಬರೀ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ಏನೇನು ನಡೆಯುತ್ತಿದೆ, ಇವರಿಗೆ ಮಹಿಳೆಯರ ಬಗ್ಗೆ ಚಿಂತನೆ ಇದೆಯಾ? ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಮಹಿಳೆಯರ ಮೇಲಿನ ಅತ್ಯಾಚಾರದ ಗ್ರಾಫ್ ಜಾಸ್ತಿಯಾಗಿದೆ. ಇಪ್ಪತ್ತು ಜನ ಆಗರ್ಭ ಶ್ರೀಮಂತರಿಗಾಗಿ ಮೋದಿ ಸರಕಾರ ಕಾರ್ಯಕ್ರಮವನ್ನು ನೀಡಿದೆ.

ಪ್ರ: ರಾಜ್ಯದ ಮತ್ತು ಬೀದರ್ ಜನತೆಯಲ್ಲಿ ನಿಮ್ಮ ಮನವಿ
ಖಂಡ್ರೆ: ಸರ್ವರಿಗೂ ಸಮಪಾಲು, ಸಮಬಾಳು ಎಂದು ಬಸವಣ್ಣನವರು ಹೇಳಿದ್ದಾರೆ. ಸರ್ವರ ಅಭಿವೃದ್ದಿಯೇ ಕಾಂಗ್ರೆಸ್ಸಿನ ಮಂತ್ರ. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವಂತಹ ಕೆಲಸವನ್ನು ಮಾಡಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ಬಸವತತ್ವ, ಸಂವಿಧಾನದಂತೆ ಕಾಂಗ್ರೆಸ್ ನಡೆಯುತ್ತಿದೆ.
ಹೀಗಾಗಿ, ಎಲ್ಲರೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ಜಾತ್ಯಾತೀತ ಶಕ್ತಿಗೆ ಬಲತುಂಬ ಬೇಕು. ಭ್ರಷ್ಟ,ಕೋಮುವಾದಿ ಬಿಜೆಪಿ ಸರಕಾರವನ್ನು ಬುಡಸಮೇತ ಕಿತ್ತುಹಾಕಲು ಎಲ್ಲರೂ ನಮಗೆ ಮತನೀಡಬೇಕು ಎಂದು ನಿಮ್ಮ ಮಾಧ್ಯಮಗಳ ಮೂಲಕ ರಾಜ್ಯದ ಜನರಿಗೆ ವಿನಂತಿ ಮಾಡುತ್ತೇನೆ.
-
ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ: 23 ಚಿನ್ನದ ಪದಕ ಗೆದ್ದು ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ ಕರ್ನಾಟಕ -
ಏರ್ ಕೂಲರ್ vs ಏರ್ ಕಂಡಿಷನರ್: ಬೇಸಿಗೆಯಲ್ಲಿ ನಿಮ್ಮ ಸರಿಯಾದ ಆಯ್ಕೆ ಯಾವುದು? -
ಇಂಧನ ಪೂರೈಕೆ ಕೊರತೆ ಭೀತಿ: 2026ರಲ್ಲಿ ನೀವು ಖರೀದಿಸಬಹುದಾದ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಇಲ್ಲಿವೆ -
Bagalkote: ಕೃಷ್ಣ ಮೇಲ್ದಂಡೆ ಯೋಜನೆ ವಿಳಂಬಕ್ಕೆ ಕಾಂಗ್ರೆಸ್ಸೇ ಕಾರಣ: ವಿವರ ಬಿಚ್ಚಿಟ್ಟ ಬಸವರಾಜ ಬೊಮ್ಮಾಯಿ -
ದಾವಣಗೆರೆ ಉಪಚುನಾವಣೆ: ಅಲ್ಪಸಂಖ್ಯಾತರ ಬೆಂಬಲ ಕಾಂಗ್ರೆಸ್ ಕಡೆ – ಸಲೀಂ ಅಹಮದ್ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ












Click it and Unblock the Notifications