ಕೆಲಸದ ಒತ್ತಡವೇ 60% ನಗರವಾಸಿಗಳಲ್ಲಿ ತಲೆನೋವಿಗೆ ಮುಖ್ಯ ಕಾರಣ; ವರದಿ
ಹೈದರಾಬಾದ್, ಸೆಪ್ಟೆಂಬರ್ 29: ಜೀವನಶೈಲಿ ಬದಲಾದಂತೆ, ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯದಲ್ಲಿಯೂ ಏರುಪೇರುಗಳಾಗುತ್ತಿವೆ. ಆಧುನಿಕ ಜೀವನಶೈಲಿ ಮನುಷ್ಯನ ಸಮಗ್ರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇದು ಹಲವು ರೂಪಗಳಲ್ಲಿ ತೋರ್ಪಡಿಕೆಯಾಗುತ್ತಿದೆ.
ಜೀವನಶೈಲಿ ತಂದೊಡ್ಡುತ್ತಿರುವ ಹಲವು ಸಮಸ್ಯೆಗಳಲ್ಲಿ ತಲೆ ನೋವು ಪ್ರಮುಖವಾಗಿದೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ನೌಕರಿಯಲ್ಲಿರುವವರಿಗೆ ತಲೆನೋವು ಸಾಮಾನ್ಯವೂ ಆಗಿ ಹೋಗಿದೆ.
ವಾರಕ್ಕೆ ಮೂರು ದಿನ ತಲೆ ನೋವು ಕಾಣಿಸಿಕೊಳ್ಳುವುದು ರೂಢಿಯೂ ಎಂಬಂತೆ ಆಗಿದೆ. ಇದಕ್ಕೆ ಪರಿಹಾರ ಏನು ಎಂಬುದನ್ನು ಯೋಚಿಸಲು ಸಾಧ್ಯವಾಗದಷ್ಟು ಒತ್ತಡ ತುಂಬಿಕೊಂಡಿದೆ. ಇದಕ್ಕೆ ಪೂರಕವೆಂಬಂತೆ 'ಸಾರಿಡಾನ್' ವರದಿಯೊಂದನ್ನು ಬಿಡುಗಡೆ ಮಾಡಿದೆ.

ಭಾರತದ ಬೇಯರ್ಸ್ ಗ್ರಾಹಕ ಆರೋಗ್ಯ ವೇದಿಕೆ, ಸಾರಿಡಾನ್ ವಿಭಾಗವು, 'ಸಾರಿಡಾನ್ ತಲೆನೋವು ವರದಿ' ಎಂಬ ಸಮಗ್ರ ವರದಿ ಬಿಡುಗಡೆ ಮಾಡಿದೆ. ಕೊರೊನಾ ಸಾಂಕ್ರಾಮಿಕ ಹೇಗೆ ಜನರ ಮೇಲೆ ಪ್ರಭಾವ ಬೀರಿದೆ, ತಲೆನೋವಿನ ತೀಕ್ಷ್ಣತೆ ಹೇಗಿರಲಿದೆ? ತಲೆನೋವಿಗೆ ಕಾರಣವೇನು ಎಂಬ ಕುರಿತು ವರದಿ ನೀಡಿದೆ.
ಸಮೀಕ್ಷೆಯು ಜನರಲ್ಲಿ ತಲೆನೋವು ಹೆಚ್ಚುತ್ತಿರುವ ಪ್ರಮಾಣ ಹಾಗೂ ಒತ್ತಡದ ಪ್ರಮುಖ ಲಕ್ಷಣಗಳು, ತಲೆನೋವಿಗೆ ಕಾರಣವಾಗುವ ಅಂಶಗಳ ಜೊತೆಗೆ ಜನರು ಇದರಿಂದ ಹೊರಬರಲು ಕಂಡುಕೊಂಡಿರುವ ಪರಿಹಾರ ಕ್ರಮಗಳ ಒಳನೋಟವನ್ನು ತೋರಿದೆ.
ನಾಲ್ಕು ಮೆಟ್ರೊ ನಗರಗಳು, ಶ್ರೇಣಿ 1 ಹಾಗೂ 2ರ ಪಟ್ಟಣಗಳನ್ನೊಳಗೊಡಂತೆ 24 ನಗರಗಳಲ್ಲಿನ 10 ಸಾವಿರಕ್ಕಿಂತಲೂ ಹೆಚ್ಚು ಜನರ ಆರೋಗ್ಯ ಹಾಗೂ ನೌಕರಿಯ ಮಾಹಿತಿಯನ್ನು ಈ ಅಧ್ಯಯನ ಒಳಗೊಂಡಿದೆ. ಸಾಂಕ್ರಾಮಿಕ ಸಮಯದಲ್ಲಿ ಬದಲಾದ ಪ್ರವೃತ್ತಿಯೊಂದಿಗೆ 90% ಜನರು ಒತ್ತಡ ಪ್ರೇರಿತ ತಲೆನೋವಿನಿಂದ ಬಳಲುತ್ತಿದ್ದಾರೆ ಎಂಬ ಅಂಶವನ್ನು ಬಹಿರಂಗಪಡಿಸಿದೆ.

ಅದರಲ್ಲೂ ನಗರ ಪ್ರದೇಶಗಳಲ್ಲಿನ ನೌಕರರಲ್ಲಿ 60% ಮಂದಿ ಕೆಲಸದ ಒತ್ತಡದಿಂದಾಗಿಯೇ ತಲೆನೋವಿನ ಸಮಸ್ಯೆಗೆ ತುತ್ತಾಗುತ್ತಿದ್ದಾರೆ ಎಂಬ ಅಂಶವನ್ನು ಎತ್ತಿಹೇಳಿದೆ.
ಸಾಂಕ್ರಾಮಿಕದಿಂದಾಗಿ ನೌಕರಿಯಲ್ಲಿನ ಒತ್ತಡ ಇನ್ನಷ್ಟು ಹೆಚ್ಚಾಗಿದೆ. ಕೆಲಸ ಕಳೆದುಕೊಳ್ಳುವ ಭೀತಿಯಿಂದ ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ಕೆಲಸ ಮಾಡುವುದನ್ನು ನೌಕರರು ರೂಢಿಸಿಕೊಂಡಿದ್ದು, ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಸಮಸ್ಯೆಗಳು ಬೇರೆ ಬೇರೆ ರೂಪದಲ್ಲಿ ಹೊರಕಾಣಿಸಿಕೊಳ್ಳುತ್ತಿವೆ. ಅದರಲ್ಲಿ ಒತ್ತಡ ಪ್ರೇರಿತ ತಲೆನೋವು ಕೂಡ ಒಂದಾಗಿದೆ ಎಂಬುದನ್ನು ಸಂಶೋಧನೆ ತಿಳಿಸಿದೆ.
ನಗರಗಳಲ್ಲಿ ನಾಲ್ಕರಲ್ಲಿ ಒಬ್ಬರು, ಹೆಚ್ಚಾಗಿ ಪುರುಷರು, ತಮಗೆ ತಲೆ ನೋವು ಬಂದರೂ ಅದನ್ನು ಮರೆ ಮಾಚುತ್ತಾರೆ ಎಂಬುದನ್ನು ಅಧ್ಯಯನ ಹೇಳಿದೆ. ದೇಶದ ಪ್ರಮುಖ ನಾಲ್ಕು ಮಹಾನಗರಗಳಲ್ಲಿ ನವದೆಹಲಿಯನ್ನು ಅತಿ ಹೆಚ್ಚು ಒತ್ತಡದ ನಗರವಾಗಿ ಗುರುತಿಸಲಾಗಿದೆ.
ನಗರವಾಸಿಗಳಲ್ಲಿ ಹಣಕಾಸಿನ ಸಮಸ್ಯೆಗಳು ಅಥವಾ ಕೆಲಸದ ಒತ್ತಡದಿಂದ ತಲೆ ನೋವು ಆಗಾಗ್ಗೆ ಕಾಣಿಸಿಕೊಳ್ಳುತ್ತದೆ ಎಂಬ ಅಂಶವನ್ನು ವರದಿ ಉಲ್ಲೇಖಿಸಿದೆ. ಜೊತೆಗೆ ಪೌಷ್ಟಿಕಾಂಶಯುಕ್ತ ಆಹಾರದ ಕೊರತೆ, ಜೀವನಶೈಲಿ ಇದಕ್ಕೆ ಪ್ರೇರಣೆ ನೀಡಿದೆ ಎಂದು ಹೇಳಿದೆ.
'ತಲೆನೋವಿನ ಕುರಿತ ಸಮೀಕ್ಷಾ ವರದಿಯು ಭಾರತೀಯರ ಮೇಲೆ ಸಾಂಕ್ರಾಮಿಕ ಪರಿಣಾಮವನ್ನು ಪ್ರತಿಬಿಂಬಿಸುತ್ತಿದೆ. ಈ ಸಂಶೋಧನೆ ಮೂಲಕ ನಾವು ತಲೆನೋವನ್ನು ಮರೆಮಾಚದೇ ಅದನ್ನು ನಿವಾರಿಸಿಕೊಳ್ಳಲು ಮುಂದಾಗಬೇಕು ಎಂಬ ಅಂಶವನ್ನು ಪ್ರೇರೇಪಿಸುತ್ತೇವೆ. ನೋವುರಹಿತ ಜೀವನವನ್ನು ನಡೆಸಲು ಪ್ರೇರಣೆ ನೀಡುವುದು ನಮ್ಮ ಮುಖ್ಯ ಉದ್ದೇಶ' ಎಂದು ಬೇಯರ್ಸ್ ಗ್ರಾಹಕ ಆರೋಗ್ಯ ವೇದಿಕೆ ಇಂಡಿಯಾದ ಮುಖ್ಯಸ್ಥ ಸಂದೀಪ್ ವರ್ಮಾ ತಿಳಿಸಿದ್ದಾರೆ.
ಲಿಂಗ, ನೌಕರ ವರ್ಗ (ಪೂರ್ಣ ಸಮಯ, ಅರೆಕಾಲಿಕ, ಮಹಿಳೆಯರು, ಉದ್ಯಮಿ), ವಯಸ್ಸು, ಜನಸಂಖ್ಯೆ ಹೀಗೆ ಹಲವು ವಿಷಯಗಳನ್ನು ಆಧರಿಸಿ HANSA ಸಂಶೋಧನೆ ನಿಯೋಜಿತ ವರದಿ ಇದಾಗಿದೆ. 22-45 ವಯೋಮಾನದವರನ್ನು ಹೆಚ್ಚಾಗಿ ಈ ಸಂಶೋಧನೆಯಲ್ಲಿ ಒಳಗೊಳ್ಳಲಾಗಿದೆ.












Click it and Unblock the Notifications