ಪಂಚರಾಜ್ಯ ಫಲಿತಾಂಶ: ಬಿಜೆಪಿ ಧೂಳಿಪಟವಾಗೋಕೆ 5 ಕಾರಣ

ಆಡಳಿತ ವಿರೋಧಿ ವಾತಾವರಣ, ಮೋದಿ ಅಲೆಯ ಮೇಲಿನ ಅವಲಂಬನೆ, ಕಾಂಗ್ರೆಸ್ಸಿನ ಪ್ರಭಾವಶಾಲಿ ಪ್ರಚಾರ... ಹೀಗೇ ಬಿಜೆಪಿಯ ಅನಿರೀಕ್ಷಿತ ಸೋಲಿಗೆ ಸಾಕಷ್ಟು ಕಾರಣಗಳನ್ನು ಕೊಡಬಹುದು. ಅವುಗಳಲ್ಲಿ ಬಿಜೆಪಿಗೆ ತನ್ನ ಮೇಲಿದ್ದ ಅತಿಯಾದ ಆತ್ಮವಿಶ್ವಾಸವೂ ಒಂದು ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ!

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ, ಮಿಜೋರಾಂ, ತೆಲಂಗಾಣ ರಾಜ್ಯಗಳಲ್ಲಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು(ಡಿ.11) ಹೊರಬಿದ್ದಿದೆ.

ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲವಾದರೂ ರಾಜಸ್ಥಾನ ಮತ್ತು ಛತ್ತೀಸ್ ಗಢದಲ್ಲಂತೂ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಿದೆ. ಮಧ್ಯಪ್ರದೇಶದಲ್ಲಿ ಸಹ ಸರಳ ಬಹುಮತದತ್ತ ದಾಪುಗಾಲಿಟ್ಟಿರುವ ಕಾಂಗ್ರೆಸ್, ಇಲ್ಲಿಯೂ ಸರ್ಕಾರ ರಚಿಸುವುದು ಬಹುತೇಕ ಖಚಿತವೆನ್ನಿಸಿದೆ. ಬಿಎಸ್ಪಿ ಸಹ ಕಾಂಗ್ರೆಸ್ಸಿಗೆ ತನ್ನ ಬೆಂಬಲ ಸೂಚಿಸಿ 'ಆನೆ' ಬಲ ನೀಡಿದೆ.

2019 ರ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಕರೆಸಿಕೊಂಡ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಬಿಜೆಪಿ ನಾಯಕರಿಗೆ ತೀವ್ರ ಮುಖಭಂಗವನ್ನುಂಟು ಮಾಡಿದೆ. ಇದು ಬಿಜೆಪಿಗೆ ಆತ್ಮಾವಲೋಕನದ ಕಾಲವೂ ಹೌದು. ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಇಂಥದೊಂದು ಆಘಾತ ಬಿಜೆಪಿಯ ಭವಿಷ್ಯದ ದೃಷ್ಟಿಯಿಂದಲೂ ಸ್ವಾಗತಾರ್ಹವಲ್ಲ.

ಬಿಜೆಪಿಯ ಈ ಸೋಲಿನ ಕಾರಣ ಹುಡುಕುವುದಕ್ಕೆ ಹೋದರೆ, ತಾನು ಅಧಿಕಾರದಲ್ಲಿದ್ದ ಮೂರು ರಾಜ್ಯಗಳಲ್ಲೂ ಬಿಜೆಪಿ ಜನರ ವಿಶ್ವಾಸ ಗಳಿಸುವುದರಲ್ಲಿ ವಿಫಲವಾಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ.

ಆಡಳಿತ ವಿರೋಧಿ ಅಲೆ

ಆಡಳಿತ ವಿರೋಧಿ ಅಲೆ

ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ಮೂರು ರಾಜ್ಯಗಳಲ್ಲೂ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಎದ್ದಿತ್ತು. ಮೂರೂ ಸರ್ಕಾರಗಳ ವಿರುದ್ಧವೂ ಕೇಳಿ ಬಂದ ಕೆಲವು ಭ್ರಷ್ಟಾಚಾರ ಹಗರಣಗಳು, ಮತ್ತು ನಾಯಕರ ಅಸಬದ್ಧ ಹೇಳಿಕೆಗಳು ಮತದಾರರ ಮೇಲೆ ಪರಿಣಾಮ ಬೀರಿದ್ದವು. ರಾಜಸ್ಥಾನದಲ್ಲಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ಬಗ್ಗೆ ಬಿಜೆಪಿಯಲ್ಲೇ ಕೆಲವು ನಾಯಕರಿಗೆ ವೈಮನಸ್ಯವಿತ್ತು. ಮಧ್ಯಪ್ರದೇಶದಲ್ಲಿ ಕಳೆದ ಎರಡು ಬಾರಿ ಉತ್ತಮ ಆಡಳಿತ ನೀಡಿದ್ದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ತಮ್ಮ ಮೂರನೇ ಅವಧಿಯಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸಿದ್ದರು. ಜೊತೆಗೆ ಈ ರಾಜ್ಯದಲ್ಲಿ ರೈತರೇ ಸರ್ಕಾರದ ವಿರುದ್ಧ ಧಂಗೆ ಎದ್ದಿದ್ದು, ಸರ್ಕಾರಕ್ಕೆ ಭಾರೀ ಹಿನ್ನಡೆಯನ್ನುಂಟು ಮಾಡಿತ್ತು.

ಋಣಾತ್ಮಕ ಪ್ರಚಾರ

ಋಣಾತ್ಮಕ ಪ್ರಚಾರ

2014 ರ ಲೋಕಸಭಾ ಚುನಾವಣೆ, ನಂತರ ನಡೆದ ಉತ್ತರ ಪ್ರದೇಶ, ಗುಜರಾತ್ ಮುಂತಾದ ರಾಜ್ಯಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆ ಸೋಲುಂಟು ಮಾಡಿದ್ದು ಋಣಾತ್ಮಕ ಪ್ರಚಾರ. ವೇದಿಕೆಯನ್ನು ಪಕ್ಷದ ಸಾಧನೆಯ ಪ್ರಚಾರಕ್ಕೆ ಬಳಸಿಕೊಳ್ಳುವ ಬದಲು, ವಿಪಕ್ಷ ಬಿಜೆಪಿಯನ್ನು ಹಳಿಯುವುದಕ್ಕೆಯೇ ಕಾಂಗ್ರೆಸ್ ಉಪಯೋಗಿಸಿಕೊಂಡಿತ್ತು. ಇದೀಗ ಈ ಪಂಚ ರಾಜ್ಯಗಳ ಚುನಾವಣೆಯಲ್ಲೂ ಬಿಜೆಪಿ ಇದೇ ಸ್ಟ್ರಾಟಜಿ ಬಳಸಿ ತನ್ನ ಸೋಲನ್ನು ತಾನೇ ಆಹ್ವಾನಿಸಿಕೊಂಡಿದೆ. ಪ್ರಧಾನಿ ಮೋದಿಯರಾಗಲೀ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಾಗಲಿ ವಿವಾದಾತ್ಮಕ ಹೇಳಿಕೆ, ಪ್ರಚೋದನಾಕಾರಿ ಮಾತುಗಳು, ವಿಪಕ್ಷ ಹಳಿಯುವ ಕೆಲಸಕ್ಕೆ ನೀಡಿದ ಮಹತ್ವವನ್ನು ಬಿಜೆಪಿಯ ಸಾಧನೆಯನ್ನು ಒತ್ತಿ ಹೇಳಲು ನೀಡಲಿಲ್ಲ. ಪಕ್ಷದ ಸೋಲಿಗೆ ಇದೇ ಬಹುಮುಖ್ಯ ಕಾರಣವೂ ಆಗಿರಬಹುದು.

ಮೋದಿ ಅಲೆಯ ಮೇಲೆ ಅವಲಂಬನೆ

ಮೋದಿ ಅಲೆಯ ಮೇಲೆ ಅವಲಂಬನೆ

ನರೇಂದ್ರ ಮೋದಿ ಪ್ರಧಾನಿಯಾದಾಗಿನಿಂದಲೂ ಚುನಾವಣೆಯ ಸಮಯದಲ್ಲಿ 'ಮೋದಿ ಅಲೆ' ಕೆಲಸ ಮಾಡುತ್ತದೆ ಎಂಬ ನಂಬಿಕೆ ಬಿಜೆಪಿಯಲ್ಲಿತ್ತು. ಕೆಲವು ಚುನಾವಣೆಗಳಲ್ಲಿ ಅದು ಸತ್ಯವೂ ಆಗಿತ್ತು. ಆದರೆ ಈ ಐದು ರಾಜ್ಯಗಳ ಚುನಾವಣೆಯಲ್ಲಿ ಮೋದಿ ಅಲೆಯಾಗಲಿ, ಶಾ, ಯೋಗಿ ಅಲೆಯಾಗಲಿ ಕಿಂಚಿತ್ತೂ ಕೆಲಸ ಮಾಡಿದಂತಿಲ್ಲ. ಬಹುಶಃ ಮತದಾರನಲ್ಲಿ ಕೇಂದ್ರ ಸರ್ಕಾರದ ಮೇಲೂ ಇರಬಹುದಾದ ಮುನಿಸನ್ನು ಈ ರೀತಿ ಹೊರಹಾಕಿರಬಹುದು. ಈ ಮೂಲಕ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳುವ ಅಗ್ಯವಿದೆ ಎಂಬುದನ್ನು ಮತದಾರ ಸಾಂಕೇತಿಕವಾಗಿ ತೋರಿಸಿಕೊಟ್ಟಿದ್ದಾನೆ.

ಅತಿಯಾದ ಆತ್ಮವಿಶ್ವಾಸ

ಅತಿಯಾದ ಆತ್ಮವಿಶ್ವಾಸ

ಬಿಜೆಪಿಗೆ ರಾಜಸ್ಥಾನ ರಾಜ್ಯದಲ್ಲಿ ಸೋಲುವ ಕೊಂಚ ಅನುಮಾನ ಇದ್ದರೂ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ರಾಜ್ಯದಲ್ಲಿ ಗೆದ್ದೇ ಗೆಲ್ಲುವ ಅತಿಯಾದ ಆತ್ಮವಿಶ್ವಾಸವಿತ್ತು. ಕೊನೆಯ ಕ್ಷಣಗಳಲ್ಲಿ ಮೋದಿ ಅಲೆ ಮ್ಯಾಜಿಕ್ ಮಾಡಬಹುದು, ಯೋಗಿಯವರಂಥ ಸ್ಟಾರ್ ಪ್ರಚಾರಕರು ತಮ್ಮ ಬೆನ್ನಿಗೆ ನಿಲ್ಲಬಹುದು ಎಂಬೆಲ್ಲ ಯೋಚನೆಗಳು ತಲೆಕೆಳಗಾಗಿದ್ದು ಎಕ್ಸಿಟ್ ಪೋಲ್ ಹೊರಬಿದ್ದಾಗಲೇ. ಆದರೂ ಬಿಜೆಪಿ ಗೆಲ್ಲುವ ವಿಶ್ವಾಸವನ್ನು ಕಳೆದುಕೊಂಡಿರಲಿಲ್ಲ. ಇಂದು ಕೊನೆಯ ಹಂತದವರೆಗೂ ರೋಚಕ ಘಟ್ಟದಲ್ಲಿದ್ದ ಮಧ್ಯಪ್ರದೇಶ ಫಲಿತಾಂಶ ಕೊನೆಗೂ ಕಾಂಗ್ರೆಸ್ಸಿಗೆ ಬಹುಮತ ನೀಡುವಲ್ಲಿ ಸಫಲವಾಗಿದೆ.

ಕಾಂಗ್ರೆಸ್ಸಿನ ಪ್ರಭಾವಶಾಲಿ ಪ್ರಚಾರ

ಕಾಂಗ್ರೆಸ್ಸಿನ ಪ್ರಭಾವಶಾಲಿ ಪ್ರಚಾರ

ಈ ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಇರುವುದನ್ನು ಚೆನ್ನಾಗಿ ತಿಳಿದಿದ್ದ ಕಾಂಗ್ರೆಸ್ ಬಿಜೆಪಿ ನಾಯಕರ ಲೋಪಗಳನ್ನು, ಸರ್ಕಾರದ ಹುಳುಕನ್ನು ಜನರಿಗೆ ತೋರಿಸುವಲ್ಲಿ ಸಫಲವಾಯಿತು. ಟಿಕೆಟ್ ವಂಚಿತರಾಗಿ ಬಂಡಾಯ ಎದ್ದವರನ್ನು ಪಕ್ಷದ ವಿರುದ್ಧ ಎತ್ತಿಕಟ್ಟುವ ಕೆಲಸವನ್ನೂ ರಾಜಕೀಯ ತಂತ್ರಗಾರಿಕೆಯ ಬಹುಮುಖ್ಯ ಭಾಗವನ್ನಾಗಿ ಕಾಂಗ್ರೆಸ್ ಆಯ್ದುಕೊಂಡಿತ್ತು. ಬಿಜೆಪಿ ವಿರುದ್ಧ ಮುನಿಸಿಕೊಂಡಿದ್ದ ಮನ್ವೇಂದ್ರ ಸಿಂಗ್ ರಂಥ ನಾಯಕರನ್ನು ತರಾತುರಿಯಲ್ಲಿ ಪಕ್ಷಕ್ಕೆ ಸ್ವಾಗತಿಸಿಕೊಂಡು ಅವರಿಗೆ ಉತ್ತಮ ಸ್ಥಾನಮಾನ ನೀಡುವ ಭರವಸೆ ನೀಡಿತು. ಹಿಂದಿನ ಎಲ್ಲ ಚುನಾವಣೆಗಳಲ್ಲಿ ತಾನು ಮಾಡಿದ ಎಲ್ಲ ತಪ್ಪುಗಳನ್ನೂ ಪಾಠ ಎಂದುಕೊಂಡ ಕಾಂಗ್ರೆಸ್, ಈ ಬಾರಿ ಅದು ಮರುಕಳಿಸದಂತೆ ಎಚ್ಚರಿಕೆ ವಹಿಸಿತ್ತು. ಆ ಎಚ್ಚರಿಕೆ ಈಗ ಫಲನೀಡಿದೆ. ಲೋಕಸಭಾ ಚುನಾವಣೆಯ ಹೊತ್ತಲ್ಲಿ ಕಾಂಗ್ರೆಸ್ಸಿಗೆ ಈ ಪಂಚರಾಜ್ಯ ಚುನಾವಣೆ ಹೊಸ ಆಶಾಕಿರಣ ಎನ್ನಿಸಿದೆ.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+