ಗೃಹ ಸಚಿವರಿಗೆ ನಟ ದುನಿಯಾ ವಿಜಯ್ ಮಾಡಿದ ಮನವಿ ಏನು..?
ಬೆಂಗಳೂರು, ಆಗಸ್ಟ್ 10: ನಟ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ಭೀಮ ಸಿನಿಮಾ ನಿನ್ನೆ ಅಂದರೆ ಆಗಸ್ಟ್ 09 ಶುಕ್ರವಾರದಂದು ರಾಜ್ಯಾದ್ಯಂತ ತೆರೆ ಕಂಡಿದೆ. ಮತ್ತೆ ರೀ-ಓಪನ್ ಆದ ಥೀಯೇಟರ್ಗಳು ಸೇರಿದಂತೆ ಒಟ್ಟು 400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಭೀಮ ಸಿನಿಮಾ ತೆರೆಕಂಡಿದೆ. ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇದ್ದು, ವಿಭಿನ್ನ ವಿಷಯದೊಂದಿಗೆ ತೆರೆ ಕಂಡಿರುವ ಭೀಮಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಬೆಂಗಳೂರು ಭೂಗತ ಲೋಕ ಹಾಗೂ ಬೆಂಗಳೂರಿನ ಯುವ ಜನತೆ ಮಾದಕ ವಸ್ತುಗಳಿಗೆ ಹೇಗೆ ದಾಸರಾಗುತ್ತಿದ್ದಾರೆ ಎನ್ನುವ ಬಗ್ಗೆ ಭೀಮ ಸಿನಿಮಾದಲ್ಲಿ ತೋರಿಸಲಾಗಿದ್ದು, ಈ ಮೂಲಕ ಸಮಾಜಕ್ಕೆ ಸಂದೇಶ ನೀಡಲು ಭೀಮ ತಂಡ ಯತ್ನಿಸಿದೆ. ಸದ್ಯ ಭೀಮ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದು, ಚಿತ್ರದ ನಾಯಕ ದುನಿಯಾ ವಿಜಯ್ ಗೃಹ ಸಚಿವರಿಗೆ ಒಂದು ವಿಶೇಷ ಮನವಿ ಮಾಡಿದ್ದಾರೆ.

ಚಿತ್ರಮಂದಿರದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ನಟ ದುನಿಯಾ ವಿಜಯ್, ಮೊನ್ನೆ ತ್ರಿಪುರದಲ್ಲಿ ಎರಡೂವರೆ ಸಾವಿರ ಹೆಣ್ಣು ಮಕ್ಕಳಿಗೆ ಹೆಚ್ಐವಿ, ಆರೂವರೆ ಸಾವಿರ ಗಂಡು ಮಕ್ಕಳಿಗೆ ಹೆಚ್ಐವಿ. ಟ್ಯಾಬ್ಲೆಟ್ ನಶೆಯಲ್ಲಿದ್ದವರು ನೀವು ನಂಬಲ್ಲ ಕೈಯಲ್ಲಿ ನರ ಸಿಕ್ಕಿಲ್ಲ ಅಂದರೆ ಕಾಲಿನ ನರಕ್ಕೆ ಮಾದಕ ವಸ್ತು ಇರುವ ಸೂಜಿ ಚುಚ್ಚಿಕೊಳ್ಳುತ್ತಾರೆ. ಅದಕ್ಕೆ ಒಂದೇ ಸಿರಿಂಜ್ ಬಳಸುವುದರಿಂದ ಹೆಚ್ಐವಿ ಆಗಿ ಬಿಟ್ಟಿದೆ. ಅದು ಓದುತ್ತಿರುವ ಮಕ್ಕಳಿಗೆ ಆಗಿದೆ ಎಂದರು.

ಇನ್ನು ನಾಳೆ ದಿನ ಇಲ್ಲಿರುವ ಮಕ್ಕಳಿಗೆ ಆಗುತ್ತದೆ. ನಾವು ಎಷ್ಟು ಜಾಗ್ರತರಾಗಿರುತ್ತೇವೆ ಅಷ್ಟು ಒಳ್ಳೆಯದು. ರಾಜ್ಯ ಗೃಹ ಮಂತ್ರಿಗಳಿಗೂ ನನ್ನ ಮನವಿ ಇದು. ನೀವು ರಹಸ್ಯವಾಗಿ ಇಂತವರನ್ನು ಹಿಡಿಯದೇ ಹೋದರೆ ನಾಳೆ ದಿನ ದೊಡ್ಡ ಪರಿಣಾಮ ಬೀರುತ್ತದೆ. ನೀವು ಹಿಡಿದು ಮಾಧ್ಯಮಗಳಿಗೆ ತೋರಿಸಬೇಕು ಇದೇ ವ್ಯಕ್ತಿ ಈ ರೀತಿ ಮಾಡುತ್ತಿದ್ದ ಅಂತಾ. ಅಂತವರಿಗೆ ಬೇಲ್ ಇಲ್ಲದೇ ಇರುವ ಶಿಕ್ಷೆ ಕೊಡಬೇಕು. ಆವಾಗ ಇಂತಹ ಕೃತ್ಯ ಮಾಡುವವರಿಗೆ ಅರ್ಥವಾಗುತ್ತದೆ. ಇದು ಮಕ್ಕಳ ಸಾವಿನ ಪ್ರಶ್ನೆ. ಹೀಗಾಗಿ ಮಾದಕ ವಸ್ತು ಬಳಕೆ ಹಾಗೂ ಮಾರಾಟ ಮಾಡುವವರಿಗೆ ಕಾನೂನಿನ ಅಡಿ ಅಂತವರಿಗೆ ಕಠಿಣ ಶಿಕ್ಷೆ ಕೊಡಬೇಕು ಎಂದು ನಟ ದುನಿಯಾ ವಿಜಯ್ ಆಗ್ರಹಿಸಿದರು.












Click it and Unblock the Notifications