ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ದೌಲತ್ತಿನ ಫೋಟೋದ ಬಗ್ಗೆ ರೇಣುಕಾಸ್ವಾಮಿ ತಂದೆ ಹೇಳಿದ್ದೇನು?
Actor Darshan: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ಈಗಾಗಲೇ ಮುಕ್ತಾಯದ ಹಂತದಲ್ಲಿದ್ದು, ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಈ ನಡುವೆಯೇ ಇದೀಗ ಪ್ರಕರಣದ ಆರೋಪಿ ನಟ ದರ್ಶನ್ ಜೈಲಿನಲ್ಲಿ ರೌಡಿ ಶೀಟರ್ ಜೊತೆ ಸಿಗರೇಟ್, ಮಗ್ ಹಿಡಿದುಕೊಂಡಿರುವ ಫೋಟೋ ಭಾರೀ ವೈರಲ್ ಆಗುತ್ತಿದ್ದು, ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ದೌಲತ್ತಿನಿಂದ ರೆಸಾರ್ಟ್ನಲ್ಲಿ ಕುಳಿತಿರುವಂತೆ ದೌಲತ್ತಿನಿಂದ ಸಿಗರೇಟ್ ಸೇದುತ್ತಾ ಕುಳಿತುಕೊಂಡಿರುವ ಫೋಟೋ ನೋಡಿ ಪ್ರತಿಕ್ರಿಯಿಸಿದ ರೇಣುಕಾಸ್ವಾಮಿ ತಂದೆ ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಪೊಲೀಸರು & ಸರ್ಕಾರದ ಮೇಲೆ ನಂಬಿಕೆ ಇದೆ. ಇದನ್ನ ನೋಡಿ ನಮಗೆ ಶಾಕ್ ಆಯ್ತು ಎಂದು ಮೃತ ರೇಣುಕಾ ಸ್ವಾಮಿ ತಂದೆ ಶಿವನಗೌಡರ್ ಕಣ್ಣೀರಿಡುತ್ತಾ ಹೇಳಿದ್ದಾರೆ. ಅಲ್ಲದೆ, ಸಮಗ್ರವಾಗಿ ಇದು ಕೂಡಾ ತನಿಖೆ ಆಗಲಿ. ಎಲ್ಲಿ ತಪ್ಪಾಗಿದೆ ಎಂದು ಪರಿಶೀಲನೆ ಮಾಡಲಿ. ಯಾರಾದರೂ ತಪ್ಪು ಮಾಡಿದರೆ ಕಠಿಣ ಶಿಕ್ಷೆಯಾಗಲಿ ಎಂದು ಕಣ್ಣೀರಿಡುತ್ತಾ ಆಗ್ರಹಿಸಿದರು.
ಮಾಧ್ಯಮಗಳು ಎಲ್ಲವನ್ನು ಬಯಲಿಗೆಳೆಯುತ್ತವೆ: ನಟ ದರ್ಶನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಒಂದೊಂದೇ ವಿಚಾರಗಳು ಬೈಲಿಗೆಳೆಯುತ್ತಿವೆ. ಈ ಮೂಲಕ ಎಲ್ಲರಿಗೂ, ಸರ್ಕಾರಕ್ಕೂ ಎಚ್ಚರಿಕೆ ಕೊಡುತ್ತಿದ್ದೀರ. ತಮಗೂ ಸಹ ತುಂಬಾ ಧನ್ಯವಾದ, ಸರ್ಕಾರ ಕೂಡ ಗಮನ ಹರಿಸಬೇಕು ಎಂದರು. ಇನ್ನು ನ್ಯಾಯಾಂಗ ಇದೆ, ಚಾರ್ಜ್ ಶೀಟ್ ಹಾಕಿದ ಬಳಿಕ ಗೊತ್ತಾಗುತ್ತದೆ. ಜಡ್ಜ್ ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಪೂರ್ಣ ನಂಬಿಕೆ ಇದೆ ಎಂದು ಶಿವನಗೌಡ ತಿಳಿಸಿದರು.
ಜೈಲು ಜೈಲಾಗಿರಬೇಕು: ಆ ಫೋಟೋ ನೋಡಿ ನಮಗೆ ಶಾಕ್ ಆಯ್ತು. ತನಿಖೆ ಆಗಲಿ, ನಮಗೆ ನ್ಯಾಯಾಂಗದ ಮೇಲೆ ನಂಬಿಕೆಯಿದೆ. ಈ ಘಟನೆ ನೋಡಿ ನನಗೆ ಪರಮಾಶ್ವರ್ಯ ಆಗಿದೆ. ಜೈಲು ಜೈಲು ಆಗಿರಬೇಕು, ಮತ್ತೊಂದು ಆಗಿರಬಾರ್ದು ಎಂದರು. ಇನ್ನು ಎ2 ಆರೋಪಿ ನಟ ದರ್ಶನ್ ಕುರ್ಚಿ ಮೇಲೆ ಕುಳಿತು ಚಹ, ಸಿಗರೇಟ್ ಹಿಡಿದು ರೆಸಾರ್ಟ್ನಲ್ಲಿ ಕುಳಿತಂತೆ ಕೂತಿದ್ದಾರೆ ಎಂದು ಹೇಳುತ್ತಾ ಕಣ್ಣೀರಿಟ್ಟರು.
ಸಿಎಂ ಸಿದ್ದರಾಮಯ್ಯ ಅವರು ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂದಿದ್ದಾರೆ. ಪೊಲೀಸರ ಮೇಲೆ ನಮಗೆ ಪೂರ್ಣ ನಂಬಿಕೆ ಇದೆ. ನನ್ನ ಮಗನ ಕಳೆದುಕೊಂಡಿದ್ದು ನನಗೆ ಗೊತ್ತಿದೆ. ನನ್ನ ಮಗನಿಗೆ ಶಾಂತಿ ಸಿಗಬೇಕು ಅಂದರೆ, ಅವರಿಗೆ ಶಿಕ್ಷೆಯಾಗಬೇಕು. ನಿರ್ದಾಕ್ಷಿಣ್ಯವಾಗಿ ತನಿಖೆ ಮಾಡಬೇಕು ಎಂದು ಕೈಮುಗಿದು ಸರ್ಕಾರವನ್ನು ಕೇಳುತ್ತೇನೆ ಎಂದರು.
ಸರ್ಕಾರ, ಪೊಲೀಸರು, ನ್ಯಾಯಾಂಗದ ಮೇಲೆ ನಂಬಿಕೆ ಇದೆ. ನನ್ನ ಮಗನ ಸಾವಿಗೆ ಈಡೀ ರಾಜ್ಯ ದುಃಖ ಪಟ್ಟಿದೆ.
ಗೃಹ ಸಚಿವರು ಕೂಡಾ ಈ ಬಗ್ಗೆ ಗಮನ ಹರಿಸಬೇಕು. ನಮ್ಮ ಕುಟುಂಬ ಕಣ್ಣಿರಲ್ಲಿ ಕೈತೊಳೆದಿದೆ. ಇವರಿಗೆ ಮನುಷ್ಯತ್ವ ಇದೆಯಾ ಎಂದು ದರ್ಶನ್ ಹಾಗೂ ಜೈಲಾಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ದಿನ ಬೆಳಗಾದ್ರೆ ಸೊಸೆ ಜೀವನದ ಬಗ್ಗೆ ಸಂಕಟ ಆಗುತ್ತದೆ. ಇನ್ನು ಈ ವೇಳೆ ಇಂತಹ ದೃಶ್ಯಗಳು ನಮ್ಮ ಹೊಟ್ಟೆ ಉರಿಸುತ್ತದೆ. ದಯವಿಟ್ಟು ಅರ್ಥ ಮಾಡಿಕೊಂಡು ಸಮಗ್ರ ತನಿಖೆ ಆಗಬೇಕು. ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಶಿವನಗೌಡರ್ ಒತ್ತಾಯಿಸಿದರು.












Click it and Unblock the Notifications