"ಸ್ಯಾಂಡಲ್ವುಡ್ನ ಕಾಪಾಡುತ್ತಿರುವುದು ಶೆಟ್ಟಿ ಗ್ಯಾಂಗ್" ಎಂದವರಿಗೆ ನಟ ರಾಜ್ ಬಿ.ಶೆಟ್ಟಿ ಹೇಳಿದ್ದೇನು?
ಇತ್ತೀಚೆಗೆ ಸ್ಯಾಂಡಲ್ವುಡ್ನಲ್ಲಿ ಮೊದಲಿನಂತೆ ಸಿನಿಮಾಗಳು ಅಬ್ಬರಿಸುತ್ತಿಲ್ಲ. "ಕೆಜಿಎಫ್", "ಕಾಂತಾರ" ಸಿನಿಮಾಗಳ ಬಳಿಕ ಅಷ್ಟೇನು ಕನ್ನಡ ಸಿನಿಮಾಗಳು ಸದ್ದು ಮಾಡಲಿಲ್ಲ ಎನ್ನುವ ಮಾತು ಆಗಾಗ ಕೇಳಿಬರುತ್ತಿದೆ. ಇದರ ನಡುವೆ ಸ್ಯಾಂಡಲ್ವುಡ್ನಲ್ಲಿ ಗುಂಪುಗಾರಿಕೆ ಇದೆ, ಅವರಿಂದಲೇ ಕನ್ನಡ ಚಿತ್ರರಂಗ ಉಳಿಯುತ್ತಿದೆ ಎಂದು ಕೆಲ ಸೋಷಿಯಲ್ ಮೀಡಿಯಾ ಪೋಸ್ಟ್ಗಳು ಹರಿದಾಡುತ್ತಿವೆ. ಕನ್ನಡ ಚಿತ್ರರಂಗವನ್ನು ಆಪತ್ತಿನಿಂದ ಪಾರು ಮಾಡುವುದೇ ಆ ಮೂವರು, ಅವರು ಸ್ಯಾಂಡಲ್ವುಡ್ನ ಆಪತ್ಬಾಂಧವರು ಎನ್ನುವ ಮಾತುಗಳು ಕೇಳಿಬರುತ್ತಿದೆ. ಅದು ಬೇರೆ ಯಾರೂ ಅಲ್ಲ ನಟ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಹಾಗೂ ರಾಜ್.ಬಿ.ಶೆಟ್ಟಿ.
ಹೌದು, ಇವರಿಗೆ ತ್ರಿಬಲ್ ಆರ್ ಗ್ಯಾಂಗ್, ಶೆಟ್ಟಿ ಗ್ಯಾಂಗ್ ಎಂಬ ಹೆಸರೂ ಸಿನಿರಂಗದಲ್ಲಿದೆ. ಮೂವರ ಹೆಸರಿನಲ್ಲೂ ಶೆಟ್ಟಿ ಇರುವುದರಿಂದ ಸಹಜವಾಗಿ ಇವರನ್ನು ಆ ಹೆಸರಿನಿಂದಲೇ ಕರೆಯಲಾಗುತ್ತಿದೆ. ರಕ್ಷಿತ್ ಶೆಟ್ಟಿ ಅವರು ತಮ್ಮದೇ ಶೈಲಿಯ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದಾರೆ. ಅವರ ಚಾರ್ಲಿ ಹಾಗೂ ಸಪ್ತಸಾಗರದಾಚೆ ಎಲ್ಲೋ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೆಚ್ಚುಗೆ ಪಡೆದವು. ಇನ್ನು ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಕೂಡ ಕೆಜಿಎಫ್ ಬಳಿಕ ಇಡೀ ಭಾರತೀಯ ಚಿತ್ರರಂಗವನ್ನು ಕನ್ನಡದತ್ತ ತಿರುಗಿ ನೋಡುವಂತೆ ಮಾಡಿತ್ತು. ಇನ್ನು ಈಗ ರಾಜ್.ಶೆಟ್ಟಿ ಅವರು ಸು ಫ್ರಂ ಸೋ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದೆ.

ಸಿನಿಮಾರಂಗದಲ್ಲಿ ಹಲವರ ಗುಂಪುಗಾರಿಕೆ ಇದೆ. ಅದರಲ್ಲಿ ಈ ಶೆಟ್ಟಿ ಗ್ಯಾಂಗ್ ಕೂಡ ಒಂದು ಎಂದು ಹೇಳಲಾಗುತ್ತದೆ. ಕೆಲ ಸೋಷಿಯಲ್ ಮೀಡಿಯಾ ಪೇಜ್ಗಳಲ್ಲಿ ಇತ್ತೀಚೆಗೆ ಈ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಕನ್ನಡ ಚಿತ್ರರಂಗವನ್ನು ಉಳಿಸುತ್ತಿರುವುದೇ ಶೆಟ್ಟರ ಗ್ಯಾಂಗ್, ಅವರು ಇಂಡಸ್ಟ್ರಿಯ ಆಪತ್ಬಾಂಧವರು ಎಂದೆಲ್ಲ ಮೂವರ ಫೋಟೋಗಳನ್ನ ಹಂಚಿಕೊಳ್ಳುತ್ತಿದ್ದಾರೆ. ಶೆಟ್ಟಿ ಗ್ಯಾಂಗ್ ಮಾತ್ರವಲ್ಲ, ಶೆಟ್ಟಿ ಮಾಫಿಯಾ ಎಂದೆಲ್ಲ ಕರೆಯುತ್ತಿದ್ದಾರೆ. ಅವರಿಗೆಲ್ಲ ನಟ ರಾಜ್ ಬಿ.ಶೆಟ್ಟಿ ಖಡಕ್ ತಿರುಗೇಟು ನೀಡಿದ್ದಾರೆ.
ಕನ್ನಡ ಚಿತ್ರರಂಗದ ಸ್ಟಾರ್ ನಟರ ಸಿನಿಮಾಗಳು ಕಡಿಮೆಯಾಗಿವೆ. ಕೆಜಿಎಫ್ ಬಳಿಕ ಯಶ್ ಅವರ ಸಿನಿಮಾಗಳು ತೆರೆಗೆ ಬರಲಿಲ್ಲ. ಕೊಲೆ ಕೇಸ್ನಿಂದಾಗಿ ದರ್ಶನ್ ಅವರ ಡೆವಿಲ್ ಸಿನಿಮಾ ಕೂಡ ವಿಳಂಬವಾಗಿದೆ. ಇನ್ನು ಕಿಚ್ಚ ಸುದೀಪ್ ಅವರ ಸಿನಿಮಾಗಳು ಕೂಡ ಕಡಿಮೆಯಾಗಿವೆ. ಹೀಗಾಗಿ ಸಿನಿಮಾಗಳ ಕೊರತೆ ಎದುರಾಗುತ್ತಿದೆ ಎಂದು ನಿರ್ಮಾಪಕರು, ನಿರ್ದೇಶಕರೇ ಆಗಾಗ ಅಳಲು ತೋಡಿಕೊಳ್ಳುತ್ತಾರೆ. ಮತ್ತೊಂದೆಡೆ ರಿಷಬ್, ರಕ್ಷಿತ್ ಹಾಗೂ ರಾಜ್ ಸಿನಿಮಾಗಳು ಇತ್ತೀಚೆಗೆ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸುತ್ತಿರುವ ಕಾರಣಕ್ಕೆ ಚಿತ್ರರಂಗ ಆಪತ್ತಿನಲ್ಲಿದ್ದಾಗ ಕಾಪಾಡುವುದೇ ಶೆಟ್ಟಿ ಗ್ಯಾಂಗ್ ಎನ್ನುತ್ತಿದ್ದಾರೆ. ಕೆಲ ವಿರೋಧಿಗಳು ಇವರಿಗೆ ಶೆಟ್ಟಿ ಮಾಫಿಯಾ ಎಂಬ ಪಟ್ಟವೂ ಕೊಟ್ಟಿದ್ದಾರೆ.

ನೀವೂ ಗ್ಯಾಂಗ್ ಕಟ್ಟಿಕೊಳ್ಳಿ!
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಜ್, "ಕರ್ನಾಟಕದಲ್ಲಿ ಶೆಟ್ಟಿ ಮಾಫಿಯಾ, ಶೆಟ್ಟಿ ಗ್ಯಾಂಗ್ ಎಂದೆಲ್ಲ ಕರೆಯುತ್ತಾರೆ. ನೀವು ಕೂಡ ಗ್ಯಾಂಗ್ ಮಾಡಿ ಬ್ರದರ್, ನಿಮಗೆ ಒಂಟಿಯಾಗಿ ಓಡಾಡಿ ಎಂದು ಹೇಳಿದ್ಯಾರು? ನೀವು ಕೂಡ ಗ್ಯಾಂಗ್ ಕಟ್ಟಿಕೊಳ್ಳಿ. ನಿಮಗೆ ಎಲ್ಲ ರೀತಿಯಲ್ಲಿ ಜನಪ್ರಿಯತೆ ಬೇಕಾಗಿದೆ. ಆದರೆ ನೀವು ಬೇರೆಯವರ ಜೊತೆ ಸೇರಿಕೊಳ್ಳಲ್ಲ ಎಂಬುದು ನಮ್ಮ ಸಮಸ್ಯೆ ಅಲ್ಲ. ನೀವೂ ಕೂಡ ನಿಮ್ಮದೇ ಗ್ಯಾಂಗ್ ಕಟ್ಟಿಕೊಳ್ಳಿ" ಎಂದು ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ. ಈ ಮೂವರೂ ನಟರ ಸಿನಿಮಾಗಳಿಗೆ ಒಬ್ಬರಿಗೊಬ್ಬರು ಬೆಂಬಲ ಕೊಡುತ್ತಿರುತ್ತಾರೆ. ಹೀಗಾಗಿ ಚಿತ್ರರಂಗದಲ್ಲಿ ಈ ಹೊಸ ಟಾಕ್ ಇದೆ.












Click it and Unblock the Notifications