Umapathy Gowda; ಬೇರೆ ಹೀರೋ ಸಿನಿಮಾ ನೋಡಬೇಡಿ ಎಂದ ಅಭಿಮಾನಿಗಳ ಬಗ್ಗೆ ಉಮಾಪತಿ ಗೌಡ ಹೇಳಿದ್ದೇನು?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಅವರಿಗೆ ಜಾಮೀನು ಯಾವಾಗ ಸಿಗುತ್ತದೆ, ಮುಂದಿನ ಸಿನಿಮಾ ಯಾವಾಗ ಬಿಡುಗಡೆ ಎನ್ನುವ ವಿಚಾರ ಸದ್ಯ ಯಾರಿಗೂ ಗೊತ್ತಿಲ್ಲ. ಆದರೆ ಕೆಲವು ಅಭಿಮಾನಿಗಳು ಮಾತ್ರ ದರ್ಶನ್ ಸಿನಿಮಾ ಬಿಡುಗಡೆಯಾಗುವವರೆಗೂ ಬೇರೆ ಯಾವುದೇ ನಟನ ಸಿನಿಮಾ ನೋಡದಂತೆ ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡುತ್ತಿದ್ದಾರೆ.
ಕಳೆದ ಆರು ತಿಂಗಳಿನಿಂದ ಕನ್ನಡ ಚಿತ್ರರಂಗದಲ್ಲಿ ಯಾವ ಸಿನಿಮಾಗೂ ದೊಡ್ಡ ಮಟ್ಟದ ಗೆಲುವು ಸಿಕ್ಕಿಲ್ಲ. ಕೆಲವು ಸಿನಿಮಾಗಳು ಚನ್ನಾಗಿದ್ದರೂ ಪ್ರೇಕ್ಷಕರ ಕೊರತೆಯಿಂದ ಸೊರಗಿವೆ. ಕೆಲವು ಹೊಸಬರ ಸಿನಿಮಾಗಳು ಮಾತ್ರ ಗೆಲುವು ಸಾಧಿಸಿದ್ದರೂ ಅದು ದೊಡ್ಡ ಮಟ್ಟದ್ದಾಗಿಲ್ಲ.

ಕಳೆದ ವರ್ಷ ಡಿಸೆಂಬರ್ ನಲ್ಲಿ ಬಿಡುಗಡೆಯಾಗಿದ್ದ ಕಾಟೇರ ಸಿನಿಮಾಗೆ ದೊಡ್ಡ ಯಶಸ್ಸು ಸಿಕ್ಕಿತ್ತು. ಅದಾದ ಬಳಿಕ ಕನ್ನಡದಲ್ಲಿ ಸ್ಟಾರ್ ಹೀರೋಗಳ ಯಾವ ಸಿನಿಮಾ ಕೂಡ ಬಿಡುಗಡೆಯಾಗಿಲ್ಲ. ದ್ವಿತೀಯಾರ್ಧದಲ್ಲಿ ಹಲವು ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದ್ದು ಕನ್ನಡ ಚಿತ್ರರಂಗಕ್ಕೆ ಉಸಿರು ನೀಡುವ ವಿಶ್ವಾಸದಲ್ಲಿದೆ.
ಉಮಾಪತಿ ಗೌಡ ಹೇಳಿದ್ದೇನು?
ಬೇರೆ ನಟರ ಸಿನಿಮಾ ನೋಡಲ್ಲ ಎನ್ನುತ್ತಿರುವ ಅಭಿಮಾನಿಗಳ ಬಗ್ಗೆ ನಿರ್ಮಾಪಕ ಉಮಾಪತಿ ಗೌಡ ಮಾತನಾಡಿದ್ದು, ಸಿನಿಮಾರಂಗದಲ್ಲಿ ಏಳು ಬೀಳು ಸಹಜ, ಒಳ್ಳೆಯ ಸಿನಿಮಾಗಳು ಗೆಲ್ಲುವುದನ್ನು ಯಾರಿಗೂ ತಡೆಯಲು ಆಗಲ್ಲ ಎಂದಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸಿನಿಮಾ ಯಶಸ್ವಿಯಾಗುವುದು ಯಾವಾಗ ಎನ್ನುವ ಬಗ್ಗೆ ಹೇಳಿದ್ದಾರೆ. ಸಿನಿಮಾ ರಂಗದ ಯಜಮಾನಿಕೆಯನ್ನು ವಹಿಸಲು ಯಾರಿಗೂ ಸಾಧ್ಯವಿಲ್ಲ. ಇದು ಹಲವು ತಲೆಮಾರುಗಳಿಂದ ದೊಡ್ಡ ದೊಡ್ಡವರು ಕಟ್ಟಿ ಬೆಳೆಸಿದ ಚಿತ್ರರಂಗ. ಒಳ್ಳೆಯ ಸೀಸನ್ ಮತ್ತು ಕೆಟ್ಟ ಸೀಸನ್ ಎನ್ನುವುದು ಸಹಜ. ಚುನಾವಣೆ, ಐಪಿಎಲ್ ಇದ್ದ ಕಾರಣ ಜನ ಸಿನಿಮಾ ನೋಡಲು ಆಸಕ್ತಿ ತೋರಿಲ್ಲ, ಮಳೆ-ಬೆಳೆ ಚನ್ನಾಗಿ ಆದಾಗ ರೈತರಿಗೆ ಹಣ ಸಿಗುತ್ತದೆ, ಆಗ ಮಾರುಕಟ್ಟೆಯಲ್ಲಿ ಹಣದ ವಹಿವಾಟು ನಡೆಯುತ್ತದೆ, ಸಿನಿಮಾ ಕೂಡ ಹಣ ಮಾಡುತ್ತದೆ. ಅದನ್ನು ಬಿಟ್ಟು ಯಾರೋ ಅವರ ಸಿನಿಮಾ ನೋಡಬೇಡಿ, ಇವರ ಸಿನಿಮಾ ನೋಡಬೇಡಿ ಅದಲ್ಲಾ ನಡೆಯುವುದಿಲ್ಲ ಎಂದರು.
ಮರುಬಿಡುಗಡೆ ಪರ್ವ
ಸ್ಟಾರ್ ನಟರ ಸಿನಿಮಾಗಳ ಕೊರತೆಯಿರುವ ಕಾರಣ, ಹಳೆ ಸಿನಿಮಾಗಳನ್ನು ಮರು ಬಿಡುಗಡೆ ಮಾಡುವ ಪರ್ವ ಶುರುವಾಗಿದೆ. ದರ್ಶನ್ ಜೈಲಿನಲ್ಲಿರುವಾಗಲೇ ಅವರ ಶಾಸ್ತ್ರಿ ಸಿನಿಮಾ ಮರುಬಿಡುಗಡೆಯಾಗಿದೆ. ಹುಚ್ಚ, ಜೋಗಿ, ರಾಜಾಹುಲಿ ಸಿನಿಮಾಗಳು ಕೂಡ ಮರುಬಿಡುಗಡೆಗೆ ಸಜ್ಜಾಗುತ್ತಿವೆ.












Click it and Unblock the Notifications