ವಿಜಯ್-ತ್ರಿಶಾ ಸಂಬಂಧದ ವದಂತಿ ನಡುವೆ ತಿರುಪತಿಯಲ್ಲಿ ನಟಿ ಹರಕೆ: ದಳಪತಿ ಗೆಲುವಿಗಾಗಿ ವಿಶೇಷ ಪ್ರಾರ್ಥನೆ?
ಇಂದು ತಮ್ಮ 43ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ತ್ರಿಶಾ ಕೃಷ್ಣನ್, ಈ ವಿಶೇಷ ದಿನವನ್ನು ತಿರುಪತಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯುವ ಮೂಲಕ ಅತ್ಯಂತ ಸರಳ ಮತ್ತು ಸಾಂಪ್ರದಾಯಿಕವಾಗಿ ಆರಂಭಿಸಿದರು. ಅವರು ಬೆಳ್ಳಂಬೆಳಿಗ್ಗೆ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ವಿಶೇಷವೆಂದರೆ, ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿರುವ ಹಾಗೂ ನಟ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷವು ಭರ್ಜರಿ ಮುನ್ನಡೆ ಸಾಧಿಸುತ್ತಿರುವ ರಾಜಕೀಯ ಸಂಚಲನದ ದಿನವೇ ತ್ರಿಶಾ ಅವರ ಜನ್ಮದಿನ ಮತ್ತು ದೇವಸ್ಥಾನದ ಭೇಟಿ ಸಂಭವಿಸಿದೆ. ವಿಜಯ್ ಅವರೊಂದಿಗೆ ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ತ್ರಿಶಾ ಅವರ ಈ ಭೇಟಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ತಮ್ಮ 26 ವರ್ಷಗಳ ಸುದೀರ್ಘ ಸಿನಿ ಪಯಣದಲ್ಲಿ ಅನೇಕ ಯಶಸ್ವಿ ಚಿತ್ರಗಳನ್ನು ನೀಡಿರುವ ತ್ರಿಶಾ, ಈಗಲೂ ಬೇಡಿಕೆಯ ನಟಿಯಾಗಿ ಮುಂದುವರಿದಿದ್ದಾರೆ. ಮುಂಬರುವ ಮೇ 14 ರಂದು ತೆರೆಕಾಣಲಿರುವ 'ಕರುಪ್ಪು' ಚಿತ್ರದಲ್ಲಿ ಅವರು ನಟ ಸೂರ್ಯ ಅವರೊಂದಿಗೆ ಮತ್ತೆ ತೆರೆ ಹಂಚಿಕೊಳ್ಳುತ್ತಿದ್ದು, ಈ ಪ್ರಾಜೆಕ್ಟ್ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮನೆಮಾಡಿದೆ. ಬದಲಾಗುತ್ತಿರುವ ಚಿತ್ರರಂಗದ ಟ್ರೆಂಡ್ಗಳಿಗೆ ತಕ್ಕಂತೆ ತಮ್ಮನ್ನು ತಾವು ಅಪ್ಡೇಟ್ ಮಾಡಿಕೊಳ್ಳುತ್ತಾ ಸಾಗಿರುವ ತ್ರಿಶಾ, ದಕ್ಷಿಣ ಭಾರತ ಚಿತ್ರರಂಗದ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ವಿಜಯ್ ಗೆಲುವಿಗಾಗಿ ತ್ರಿಶಾ ಪ್ರಾರ್ಥನೆ?
ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ಕಾತರದ ನಡುವೆಯೇ ನಟಿ ತ್ರಿಶಾ ಕೃಷ್ಣನ್ ಅವರ ತಿರುಪತಿ ಭೇಟಿ ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ನಟ ಹಾಗೂ ಟಿವಿಕೆ (TVK) ಪಕ್ಷದ ಮುಖ್ಯಸ್ಥ 'ದಳಪತಿ' ವಿಜಯ್ ಅವರೊಂದಿಗೆ ತ್ರಿಶಾ ಹೆಸರು ಪದೇ ಪದೇ ತಳುಕು ಹಾಕಿಕೊಳ್ಳುತ್ತಿರುವುದರ ನಡುವೆ, ಅವರು ತಿರುಮಲ ವೆಂಕಟೇಶ್ವರನ ದರ್ಶನಕ್ಕೆ ತೆರಳಿರುವುದು ಹಲವು ಕುತೂಹಲಗಳಿಗೆ ದಾರಿ ಮಾಡಿಕೊಟ್ಟಿದೆ. ತ್ರಿಶಾ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ 'ತಿರುಪತಿ' ಎಂದು ಬರೆದಿರುವ ರಸ್ತೆಯ ನಾಮಫಲಕ ಸ್ಪಷ್ಟವಾಗಿ ಕಾಣಿಸುತ್ತಿದೆ. ಏಪ್ರಿಲ್ 23ರಂದು ಮತದಾನ ಮುಗಿದು, ಇಂದು (ಮೇ 4) ಫಲಿತಾಂಶ ಪ್ರಕಟವಾಗುತ್ತಿರುವ ಬೆನ್ನಲ್ಲೇ ಅವರು ಈ ಯಾತ್ರೆ ಕೈಗೊಂಡಿರುವುದು ಗಮನ ಸೆಳೆದಿದೆ.
ವಿಜಯ್ ಅವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ರಾಜಕೀಯ ಅದೃಷ್ಟ ಪರೀಕ್ಷೆಗೆ ಇಳಿದಿರುವುದರಿಂದ, ಅವರ ಗೆಲುವಿಗಾಗಿ ಮತ್ತು ಅವರ ಹೊಸ ರಾಜಕೀಯ ಪಯಣ ಸುಖಕರವಾಗಿರಲಿ ಎಂದು ತ್ರಿಶಾ ಈ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ ಎಂದು ಅಭಿಮಾನಿಗಳ ವಲಯದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಕಳೆದ ಕೆಲವು ಸಮಯದಿಂದ ವಿಜಯ್ ಮತ್ತು ತ್ರಿಶಾ ನಡುವಿನ ಸಂಬಂಧದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಈ ಭೇಟಿಯು ಮತ್ತಷ್ಟು ಪುಷ್ಟಿ ನೀಡಿದಂತಿದೆ.
ವಿಶೇಷವಾಗಿ ಬಿಜೆಪಿಯ ನೈನಾರ್ ನಾಗೇಂದ್ರನ್ ಅವರಂತಹ ನಾಯಕರು ಇವರ ಹೆಸರನ್ನು ಉಲ್ಲೇಖಿಸಿ ಟೀಕೆ ಮಾಡಿದ ಬೆನ್ನಲ್ಲೇ, ತ್ರಿಶಾ ಅವರು ಯಾವುದೇ ಸಂಕೋಚವಿಲ್ಲದೆ ದೇವಸ್ಥಾನಕ್ಕೆ ಭೇಟಿ ನೀಡಿರುವುದು ಅವರ ಆತ್ಮವಿಶ್ವಾಸವನ್ನು ತೋರಿಸುತ್ತದೆ. ರಾಜಕೀಯ ಅಬ್ಬರದ ನಡುವೆಯೂ ತ್ರಿಶಾ ಅವರ ಈ ಆಧ್ಯಾತ್ಮಿಕ ನಡೆ ಈಗ ಸಿನಿಮಾ ಮತ್ತು ರಾಜಕೀಯ ಎರಡೂ ರಂಗಗಳಲ್ಲಿ ಹಾಟ್ ಟಾಪಿಕ್ ಆಗಿದೆ.

ನಿಗೂಢವಾಗಿ ಉಳಿದಿರುವ ವಿಜಯ್-ತ್ರಿಶಾ ಸಂಬಂಧದ ವದಂತಿ
ಕಳೆದ ಕೆಲವು ಸಮಯದಿಂದ ನಟ ವಿಜಯ್ ಮತ್ತು ತ್ರಿಶಾ ಕೃಷ್ಣನ್ ಅವರ ನಡುವಿನ ಬಾಂಧವ್ಯದ ಕುರಿತು ಸಾಕಷ್ಟು ಸುದ್ದಿಗಳು ಕೇಳಿಬರುತ್ತಿದ್ದರೂ, ಈವರೆಗೂ ಇಬ್ಬರೂ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ ಅಥವಾ ವದಂತಿಗಳನ್ನು ನಿರಾಕರಿಸಿಲ್ಲ. ಈ ಚರ್ಚೆಗಳು ಮತ್ತಷ್ಟು ತೀವ್ರಗೊಳ್ಳಲು ವಿಜಯ್ ಅವರ ಪತ್ನಿ ಸಂಗೀತ ಸ್ವರ್ಣಲಿಂಗಂ ಅವರು ಸಲ್ಲಿಸಿರುವ ವಿಚ್ಛೇದನ ಅರ್ಜಿ ಪ್ರಮುಖ ಕಾರಣವಾಗಿದೆ. ಸಂಗೀತ ಅವರು ಸಲ್ಲಿಸಿರುವ ಅರ್ಜಿಯಲ್ಲಿ, ವಿಜಯ್ ಅವರು ದೀರ್ಘಕಾಲದಿಂದ ಚಿತ್ರರಂಗದ ನಟಿಯೊಬ್ಬರ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಉಲ್ಲೇಖಿಸಿರುವುದು ಈ ಅನುಮಾನಗಳಿಗೆ ಪುಷ್ಟಿ ನೀಡಿದೆ.
ಈ ಡಿವೋರ್ಸ್ ಸುದ್ದಿ ಹೊರಬಿದ್ದ ಬೆನ್ನಲ್ಲೇ, ಚೆನ್ನೈನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ವಿಜಯ್ ಮತ್ತು ತ್ರಿಶಾ ಒಟ್ಟಾಗಿ ಕಾಣಿಸಿಕೊಂಡಿದ್ದು ಎಲ್ಲರ ಗಮನ ಸೆಳೆದಿತ್ತು. ಸಾರ್ವಜನಿಕವಾಗಿ ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು ಅವರ ಸಂಬಂಧದ ಕುರಿತಾದ ವದಂತಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ನೀಡಿದಂತಾಗಿದೆ. ಆದರೂ, ವಿಜಯ್ ಅವರು ಈ ವಿಚಾರದಲ್ಲಿ ಮೌನಕ್ಕೆ ಶರಣಾಗಿದ್ದಾರೆ. ವಿಶೇಷವಾಗಿ ಅವರು ಈಗ ರಾಜಕೀಯ ಜೀವನಕ್ಕೆ ಕಾಲಿಟ್ಟಿರುವುದರಿಂದ ಮತ್ತು ಇಂದು ಅವರ ಪಕ್ಷದ ಭವಿಷ್ಯ ನಿರ್ಧಾರವಾಗುವ ಚುನಾವಣಾ ಫಲಿತಾಂಶದ ದಿನವಾಗಿರುವುದರಿಂದ, ಇಂತಹ ವೈಯಕ್ತಿಕ ವಿಚಾರಗಳು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗಳನ್ನು ಹುಟ್ಟುಹಾಕುತ್ತಿವೆ.
ತಮಿಳು ಚಿತ್ರರಂಗದಲ್ಲಿ ಸುಮಾರು ಎರಡು ದಶಕಗಳಿಂದ ಅತ್ಯಂತ ಯಶಸ್ವಿ ಜೋಡಿಯಾಗಿ ಗುರುತಿಸಿಕೊಂಡವರು 'ದಳಪತಿ' ವಿಜಯ್ ಮತ್ತು ತ್ರಿಶಾ ಕೃಷ್ಣನ್. 'ಗಿಲ್ಲಿ'ಯಿಂದ ಆರಂಭವಾಗಿ ಇತ್ತೀಚಿನ 'ಲಿಯೋ' ಸಿನಿಮಾದವರೆಗೆ ಈ ಜೋಡಿಯ ಕೆಮಿಸ್ಟ್ರಿ ತೆರೆಯ ಮೇಲೆ ಯಾವಾಗಲೂ ಮ್ಯಾಜಿಕ್ ಮಾಡಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಕೆಮಿಸ್ಟ್ರಿ ಕೇವಲ ಸಿನಿಮಾಗೆ ಸೀಮಿತವಾಗಿಲ್ಲ, ಬದಲಿಗೆ ಇವರ ನಡುವೆ ನಿಜ ಜೀವನದಲ್ಲೂ ಪ್ರೇಮಾಂಕುರವಾಗಿದೆ ಎಂಬ ವದಂತಿಗಳು ಕಾಲಿವುಡ್ ಅಂಗಳದಲ್ಲಿ ಹಬ್ಬಿವೆ. ವಿಶೇಷವಾಗಿ ವಿಜಯ್ ಅವರ ವೈಯಕ್ತಿಕ ಜೀವನದಲ್ಲಿನ ಏರುಪೇರುಗಳು ಈ ಸುದ್ದಿಗೆ ಮತ್ತಷ್ಟು ತುಪ್ಪ ಸುರಿದಿವೆ.













Click it and Unblock the Notifications