Sudeep Bigg Boss: ಬಿಗ್ ಬಾಸ್ನಿಂದ ಹೊರಬರಲು ಅಸಲಿ ಕಾರಣ ಇದೇ
ನಟ ಸುದೀಪ್ ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆಯಿಂದ ಹೊರ ಬರಲು ನಿರ್ಧರಿಸಿದ್ದಾರೆ. ಇದೇ ನನ್ನ ಕೊನೆಯ ಬಿಗ್ ಬಾಸ್, ಮುಂದಿನ ಸೀಸನ್ನಲ್ಲಿ ನಾನು ನಿರೂಪಣೆ ಮಾಡುವುದಿಲ್ಲ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದರು. ಕಾರ್ಯಕ್ರಮ ನಿರೂಪಣೆ ಮಾಡದೇ ಇರಲು ಕಾರಣವನ್ನು ನೀಡದೇ ಇದ್ದರು ಅವರ ದಿಢೀರ್ ನಿರ್ಧಾರ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು.
11 ಆವೃತ್ತಿಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮವನ್ನು ಸುದೀಪ್ ಯಶಸ್ವಿಯಾಗಿ ನಿರೂಪಣೆ ಮಾಡಿದ್ದಾರೆ. ಸುದೀಪ್ಗಾಗಿ ಅಪಾರ ವೀಕ್ಷಕರು ಬಿಗ್ ಬಾಸ್ ಕಾರ್ಯಕ್ರಮ ನೋಡುತ್ತಾರೆ. 11ನೇ ಆವೃತ್ತಿಯಲ್ಲೇ ಸುದೀಪ್ ಇರುವುದಿಲ್ಲ ಬೇರೊಬ್ಬರು ನಿರೂಪಣೆ ಮಾಡುತ್ತಾರೆ ಎನ್ನಲಾಗಿತ್ತು, ಆದರೆ ಸುದೀಪ್ ಅವರೇ ಈ ಆವೃತ್ತಿಯಲ್ಲೂ ನಿರೂಪಣೆ ಮಾಡುವುದು ಟೀಸರ್ ಬಳಿಕ ಖಚಿತವಾಗಿತ್ತು.

ಬಿಗ್ ಬಾಸ್ 11ನೇ ಸೀಸನ್ ಆರಂಭದಲ್ಲೇ ಸೂಪರ್ ಹಿಟ್ ಆಗಿದೆ. 9.9 ಟಿವಿಆರ್ ಪಡೆದಿಕೊಂಡಿದೆ, ಈ ಸಂತಸದ ನಡುವೆಯೇ ಸುದೀಪ್ ಹೊರಬರುವ ನಿರ್ಧಾರದ ಹಿಂದೆ ಬಲವಾದ ಕಾರಣವಿದೆ ಎನ್ನಲಾಗಿತ್ತು. ಸುದೀಪ್ ಬೇಸರಗೊಂಡು ನಿರ್ಧಾರ ಮಾಡಿದ್ದಾರೆ ಎನ್ನುವ ಅನುಮಾನವಿತ್ತು, ಈಗ ಅದು ನಿಜ ಆಗಿದೆ. ಬಿಗ್ ಬಾಸ್ ಮಾಜಿ ಸ್ಪರ್ಧಿ, ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಸುದೀಪ್ ನಿರ್ಧಾರದ ಹಿಂದಿನ ಕಾರಣ ತಿಳಿಸಿದ್ದಾರೆ.
ರೂಪೇಶ್ ರಾಜಣ್ಣ ಪ್ರಕಾರ ಸುದೀಪ್ ಸರ್ ಬಿಡಲು ಕಾರಣ ಇದು ಅಂತೆ #BBK11 #KicchaSudeep𓃵 pic.twitter.com/psnrpO6zvF
— Sampath (@sampath56798) October 14, 2024
ಪರಭಾಷಿಕರ ಅಟ್ಟಹಾಸಕ್ಕೆ ಬೇಸರ
ಕಳೆದ ಎರಡು ಸೀಸನ್ಗಳಿಂದ ಕನ್ನಡ ಬಿಗ್ ಬಾಸ್ ಕಾರ್ಯಕ್ರಮಕ್ಕೆ ನಿರ್ದೇಶಕರು ಬದಲಾಗಿದ್ದಾರೆ. ಬಿಗ್ ಬಾಸ್ ಶೋ ನಿರ್ದೇಶಕ ಪ್ರಕಾಶ್ ತಮಿಳಿನವರು, ಶೋ ಆಯೋಜಕಿ ಸುಷ್ಮಾ ಮರಾಠಿಯವರು, ಈ ಇಬ್ಬರೇ ಈಗ ಸುದೀಪ್ ಅವರು ಶೋನಿಂದ ದೂರ ಸರಿಯಲು ಕಾರಣ. ಸುದೀಪ್ ಹೇಳುವ ಸಣ್ಣ ಪುಟ್ಟ ಬದಲಾವಣೆಗಳಿಗೆ ಬೆಲೆ ಕೊಡದೇ ಇರುವುದು ಕಿಚ್ಚನ ಕೋಪಕ್ಕೆ ಕಾರಣವಾಗಿದೆ.
ಈ ಮೊದಲಿನ ಆವೃತ್ತಿಗಳಲ್ಲಿ ಕಂಟೆಸ್ಟೆಂಟ್ಗಳು ಇಂಗ್ಲಿಷ್ನಲ್ಲಿ ಹೆಚ್ಚು ಮಾತನಾಡಿದರೆ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂದು ಹಾಡು ಪ್ರಸಾರವಾಗುತ್ತಿತ್ತು, ಕನ್ನಡದಲ್ಲಿ ಮಾತನಾಡುವಂತೆ ಅಭ್ಯರ್ಥಿಗಳಿಗೆ ಸೂಚನೆ ಕೊಡಲಾಗುತ್ತಿತ್ತು. ಆದರೆ ನಿರ್ದೇಶಕರು, ಆಯೋಜಕರು ಬದಲಾದ ಬಳಿಕ ಈ ಪರಿಪಾಠ ನಿಂತಿದೆ. ಕನ್ನಡ ಹೆಚ್ಚು ಬಳಸಲು ಸುದೀಪ್ ಹೇಳಿದರೂ ಆಯೋಜಕರು ತಲೆ ಕೆಡಿಸಿಕೊಂಡಿಲ್ಲ ಎಂದು ರೂಪೇಶ್ ರಾಜಣ್ಣ ಹೇಳಿದ್ದಾರೆ.
ಮುಖ್ಯವಾಗಿ ಈ ಬಾರಿ ಸ್ವರ್ಗ ಮತ್ತು ನರಕ ಪರಿಕಲ್ಪನೆಯಲ್ಲಿ ಕೆಲವು ಸ್ಪರ್ಧಿಗಳನ್ನು ಜೈಲು ಸೆಲ್ ರೀತಿಯ ಸೆಟ್ನಲ್ಲಿ ಇರಿಸಲಾಗಿತ್ತು. ಮಹಿಳಾ ಸ್ಪರ್ಧಿಗಳು ಇದ್ದರೂ ಅವರಿಗೆ ನರಕದ ಸೆಟ್ನಲ್ಲಿ ಶೌಚಾಲಯದ ವ್ಯವಸ್ಥೆ ಇರಲಿಲ್ಲ. ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆ ಮಾಡುವಂತೆ ಸುದೀಪ್ ಹೇಳಿದರೂ ಆಯೋಜಕರು ತಲೆ ಕೆಡಿಸಿಕೊಂಡಿರಲಿಲ್ಲ. ವಾರಾಂತ್ಯದಲ್ಲಿ ಸುದೀಪ್ ಕಾರ್ಯಕ್ರಮ ನಡೆಸುವಾಗ, ನರಕದಲ್ಲಿದ್ದ ಸ್ಪರ್ಧಿಗಳನ್ನು ಕೂರಿಸಿ ಮಾತನಾಡಿಸಲು ಹೇಳಿದ್ದರೂ ಆಯೋಜಕರು ಒಪ್ಪಿರಲಿಲ್ಲ. ಇದರಿಂದ ನರಕದಲ್ಲಿ ಸ್ಪರ್ಧಿಗಳು ನಿಂತುಕೊಂಡೇ ಇರಬೇಕಾಗಿತ್ತು ಇದು ಸುದೀಪ್ ಬೇಸರಗೊಳ್ಳಲು ಮತ್ತೊಂದು ಕಾರಣ.
ಸ್ಪರ್ಧಿಗಳ ಬಂಧನದ ಬಗ್ಗೆ ಮಹಿಳಾ ಆಯೋಗ ದೂರು ಕೊಟ್ಟ ಬಳಿಕ ಜೈಲು ಸೆಲ್ ಸೆಟ್ನಲ್ಲಿದ್ದ ಗೋಡೆಯನ್ನು ತೆಗೆಯಲಾಗಿದೆ. ಇಂತಹ ಕಾನೂನಾತ್ಮಕ ಸಮಸ್ಯೆಗಳನ್ನು ಎದುರಿಸಲು ಲೀಗಲ್ ಟೀಂ ಸರಿಯಾಗಿಲ್ಲ ಎನ್ನುವುದು ಸುದೀಪ್ ಕೋಪಕ್ಕೆ ಕಾರಣವಾಗಿದೆ.
ರಮ್ಮಿ ಗೇಮಿಂಗ್ ಕಂಪನಿಯೊಂದು ಬಿಗ್ಬಾಸ್ಗೆ ಪ್ರಾಯೋಜಕತ್ವ ನೀಡಿದೆ. ಆ ಕಂಪನಿ ಲೋಗೋವನ್ನು ಕೆಳಗಡೆ ಹಾಕಬೇಕು ಎಂದು ಸುದೀಪ್ ಹೇಳಿದ್ದರೂ ಅದನ್ನು ಮೇಲೆ ಹಾಕಲಾಗಿತ್ತು. ಆದರೆ ಅದೇ ಆಪ್ ಬಳಕೆ ಬಗ್ಗೆ ಸುದೀಪ್ರಿಂದಲೇ ಪದೇ ಪದೇ ಹೇಳಿಸಿದ್ದು ಕೂಡ ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.












Click it and Unblock the Notifications