Darshan Thoogudeepa: ಲಾರಿ ಪಕ್ಕ ಕುಳಿತ ಫೋಟೋ ರೇಣುಕಾಸ್ವಾಮಿದು ಅಲ್ಲ? 'D' ಡೌಟ್ ನಿಜವಾದರೆ ದಾಸನ ಬದುಕೇ ಚೇಂಜ್!
ನಟ ದರ್ಶನ್ ಜಾಮೀನಿನ ಮೇಲೆ ಹೊರಬಂದ ಬೆನ್ನಲ್ಲೆ ಬಿಗ್ ಡವಲಪ್ಮೆಂಟ್ವೊಂದಾಗಿದೆ. ರೇಣುಕಾಸ್ವಾಮಿ ಕೊಲೆಯ ಮೇಲೆ ಅನುಮಾನ ಶುರುವಾಗಿದ್ದು, ಎರಡು ತಿಂಗಳಾದರೂ ಎಫ್ಎಸ್ಎಲ್ ರಿಪೋರ್ಟ್ ಬಂದಿಲ್ಲ. ಇದೇ ದಾಸನಿಗೆ ಟರ್ನಿಂಗ್ ಪಾಯಿಂಟ್ ಆಗುತ್ತಾ ಅನ್ನೋ ಚರ್ಚೆ ನಡೆಯುತ್ತಿದೆ.
ರೇಣುಕಾಸ್ವಾಮಿಯ ಆ ಒಂದು ಫೋಟೋ ದರ್ಶನ್ ಕ್ರೌರ್ಯತೆಯನ್ನು ಸಾರಿ ಸಾರಿ ಹೇಳಿತ್ತು. ದರ್ಶನ್ ರೇಣುಕಾಸ್ವಾಮಿ ಅದೆಷ್ಟರ ಮಟ್ಟಿಗೆ ಚಿತ್ರಹಿಂಸೆ ಕೊಟ್ಟದ್ದರು, ಅದು ಹೇಗೆ ಮನಸೋ ಇಚ್ಚೆ ಥಳಿಸಿದ್ದರು ಅನ್ನೋದನ್ನು ವೈರಲ್ ಆದ ಫೋಟೋ ತೆರೆದಿಟ್ಟಿತ್ತು. ಲಾರಿ ಪಕ್ಕದಲ್ಲಿ ಕುಳಿತು ಅಂಗಲಾಚುತ್ತಿದ್ದ ರೇಣುಕಾಸ್ವಾಮಿ, ಒಂದೇ ಒಂದು ಬಾರಿ ಪ್ರಾಣ ಭಿಕ್ಷೆ ಕೊಡಿ ಎಂದು ಕಾಡಿ ಬೇಡಿದ್ದ. ಆದರೆ ಹೆಣ ಉರುಳಿಸಬೇಕು ಅಂತ ನಿಂತವರಿಗೆ ರೇಣುಕಾಸ್ವಾಮಿ ಗೋಳಾಟ ಕಾಣಿಸಲಿಲ್ಲ. ನೆತ್ತರು ಹರಿಯುತ್ತಿದ್ದರು ದರ್ಶನ್ ಆಂಡ್ ಗ್ಯಾಂಗ್ನ ರಕ್ತದ ದಾಹ ಮಾತ್ರ ಕಡಿಮೆ ಆಗಿರಲಿಲ್ಲ. ಹೀಗಾಗಿ ರೇಣುಕಾಸ್ವಾಮಿ ಕೊಲೆಗೆ ಇದೊಂದು ಫೋಟೋವೇ ಮೇಜರ್ ಸಾಕ್ಷಿಯಾಗಿತ್ತು.

ರೇಣುಕಾಸ್ವಾಮಿ ಫೋಟೋ ಮೇಲೆ ಅನುಮಾನ:-
ಆದರೀಗ ಈ ಫೋಟೋ ಮೇಲೆನೇ ಅನುಮಾನ ಶುರುವಾಗಿದೆ. ನಿಜಕ್ಕೂ ಇದು ರೇಣುಕಾಸ್ವಾಮಿ ಫೋಟೋನೆನಾ? ಅಥವಾ ಎಐ(AI)ನಿಂದ ಜನರೇಟ್ ಆಗಿರುವ ಫೋಟೋನಾ? ಅನ್ನೋ ಅನುಮಾನದ ಕಿಚ್ಚು ಹೆಚ್ಚಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 17ಜನ ಆರೋಪಿಗಳ ಮೊಬೈಲ್ ಫೋನ್ ಜಪ್ತಿ ಮಾಡಿದ್ದ ಪೊಲೀಸರು ಎಲ್ಲವೂ ಹೈದರಾಬಾದ್ನ ಎಫ್ಎಸ್ಎಲ್ಗೆ ಕಳುಹಿಸಿದ್ದರು. ಈ ವೇಳೆ ರೇಣುಕಾಸ್ವಾಮಿ ಫೋಟೋ ರಿಟ್ರೀವ್ ಆಗಿತ್ತು. ಇದನ್ನೇ ಪ್ರಮುಖ ಸಾಕ್ಷಿಯನ್ನಾಗಿಸಿಕೊಂಡು ದರ್ಶನ್ ಗ್ಯಾಂಗ್ ಕಾನೂನು ಕುಣಿಕೆ ಬಿಗಿ ಮಾಡಿದ್ದರು. ಆದರೀಗ ಈ ಫೋಟೋವೇ ದೊಡ್ಡ ಕಗ್ಗಂಟಾಗಿದೆ.
ಎ10 ಆರೋಪಿ ವಿನಯ್ ಮೊಬೈಲ್ನಲ್ಲಿ ರೇಣುಕಾಸ್ವಾಮಿ ಫೋಟೋ ಪತ್ತೆಯಾಗಿತ್ತು. ಅಳುತ್ತಾ ಕೈ ಮುಗಿದು ಕುಳಿತ ಫೋಟೋ ಪೊಲೀಸರ ಕೈಗೆ ಸಿಗುತ್ತಿದ್ದಂತೆ ದರ್ಶನ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು. ಎಐನಿಂದ ಈ ಫೋಟೋ ಜನರೇಟ್ ಮಾಡಿದ್ದಾರೆ ಎಂದು ವಕೀಲರು ಅನುಮಾನ ವ್ಯಕ್ತಪಡಿಸಿದ್ದರು. ಹೀಗಾಗಿ ತನಿಖಾ ತಂಡ ಎಫ್ಎಸ್ಎಲ್ಗೆ ಇದೇ ಫೋಟೋ ಕಳುಹಿಸಿತ್ತು. ಇದೆಲ್ಲಾ ಆಗಿ ಎರಡು ತಿಂಗಳಾದರೂ ಎಫ್ಎಸ್ಎಲ್ನಿಂದ ರಿಪೋರ್ಟ್ ಬಂದಿಲ್ಲ.
ಒಂದು ವೇಳೆ ಇದು ಎಐ ಜನರೇಟೆಡ್ ಫೋಟೋನೇ ಆದರೆ ಪ್ರಕರಣ ಬಿಗ್ ಟ್ವಿಸ್ಟ್ ಪಡೆದುಕೊಳ್ಳಲಿದೆ. ಸ್ವಾಮಿ ಕೊಲೆ ಕೇಸ್ನಲ್ಲಿ ಲಾಕ್ ಅಗಿರುವ ಆರೋಪಿಗಳಿಗೆ ರಿಲೀಫ್ ಸಿಗುವ ಸಾಧ್ಯತೆ ಕೂಡ ಇದೆ. ಒಂದು ವೇಳೆ ಅದೇ ಒರಿಜಿನಲ್ ಫೋಟೋ ಅಂತಾದ್ರೆ ಡಿ ಗ್ಯಾಂಗ್ಗೆ ಸಂಕಷ್ಟ ಸುತ್ತಿಕೊಳ್ಳೋದು ಖಾಯಂ.
15 ದಿನದಲ್ಲಿ ಖಾಕಿ ಸೇರಲಿದೆ ರಿಪೋರ್ಟ್
ಸ್ವಾಮಿ ಕೊಲೆ ಕೇಸ್ನಲ್ಲಿ ಈಗಾಗಲೇ ಕಾಮಾಕ್ಷಿಪಾಳ್ಯ ಪೊಲೀಸರು 3991 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಅದರೆ ಇನ್ನೂ ತನಿಖೆ ಪೂರ್ಣವಾಗದ ಹಿನ್ನೆಲೆ ಹೆಚ್ಚುವರಿ ಚಾರ್ಜ್ಶೀಟ್ ಸಲ್ಲಿಕೆ ಮಾಡುವುದಾಗಿ ಕೋರ್ಟ್ಗೂ ಮಾಹಿತಿ ನೀಡಿದ್ದಾರೆ. ದರ್ಶನ್ ಹಾಗೂ ಪವಿತ್ರಾ ಗೌಡ ಮೊಬೈಲ್ ಫೋನ್ನಲ್ಲಿ ಇರುವ ಮೆಸೇಜ್ ಮಾಹಿತಿ ಜೊತೆಗೆ ಸ್ವಾಮಿ ಫೋಟೋ ರಿಪೋರ್ಟ್ 15 ದಿನದಲ್ಲಿ ಖಾಕಿ ಕೈ ಸೇರಲಿದೆ. ಹೀಗಾಗಿ ಈ ರಿಪೋರ್ಟ್ ಬಂದ್ಮೆಲೆ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಲು ತನಿಖಾ ತಂಡ ಸಿದ್ದವಾಗಿದೆ. ಈಗಾಗಲೇ ತನಿಖಾ ತಂಡದ ಕೈಗೆ ಸಿಕ್ಕಿರುವ ಸಾಕ್ಷಿಗಳೇ ಆರೋಪಿಗಳ ಪಾಲಿಗೆ ಕಂಟಕವಾಗಿವೆ. ಈಗೇನಾದರೂ ಈ ಎರಡು ರಿಪೋರ್ಟ್ ಡಿ ಬಾಸ್ ಗ್ಯಾಂಗ್ ವಿರುದ್ಧ ಬಂದರೆ ಕಾನೂನಿನ ಕುಣಿಕೆ ಮತ್ತಷ್ಟು ಬಿಗಿಯಾಗಲಿದೆ.
ಒಂದು ವೇಳೆ ಫೋಟೋ ಒರಿಜಿನಲ್ ಫೋಟೋ ಅಲ್ಲ ಅಂತಾದರೆ ದರ್ಶನ್ ಗ್ಯಾಂಗ್ ಜೈಲಿನಿಂದ ಹೊರಬರುವ ಸಾಧ್ಯತೆ ಇದೆ. ಇದರಿಂದ ಇಡೀ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಗಲಿದೆ. ಒಟ್ಟಿನಲ್ಲಿ ಎಫ್ಎಸ್ಎಲ್ ರಿಪೋರ್ಟ್ಗಾಗಿ ತನಿಖಾ ತಂಡ ಎದುರು ನೋಡುತ್ತಿದ್ದು ವರದಿ ಬಂದ ಬಳಿಕವಷ್ಟೇ ಮುಂದೆನೂ ಎನ್ನುವುದು ನಿರ್ಧಾರವಾಗಲಿದೆ.
ದರ್ಶನ್ ಬೇಲ್ ರದ್ದು ಕೋರಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ
ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ಜಾಮೀನಿನ ಮೇಲೆ ಹೊರಬಂದಿರುವ ನಟ ದರ್ಶನ್ ಅವರ ಬೇಲ್ ಅನ್ನು ರದ್ದು ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಪೊಲೀಸರು ತಯಾರಿ ನಡೆಸಿದ್ದಾರೆ. ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ನಡೆಯುತ್ತಿವೆ.
ಈ ಬಗ್ಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮಧ್ಯಂತರ ಜಾಮೀನು ತಡೆ ಕೋರಿ ಮೇಲ್ಮನವಿ ಸಲ್ಲಿಕೆಯಲ್ಲಿ ಯಾವುದೇ ವಿಳಂಬ ಆಗಿಲ್ಲ. ಮೇಲ್ಮನವಿ ಯಾವಾಗ ಸಲ್ಲಿಸಬೇಕು ಎಂಬುದನ್ನು ಗೃಹ ಇಲಾಖೆ ಕಾರ್ಯದರ್ಶಿ ತಿರ್ಮಾನ ಮಾಡುತ್ತಾರೆ. ಮೇಲ್ಮನವಿ ಸಲ್ಲಿಸುವುದಾದರೆ ಸಲ್ಲಿಸಿ ಎಂದು ನಾನೂ ಸೂಚಿಸಿದ್ದೇನೆ. ಇಂತಹ ಪ್ರಕರಣಗಳಲ್ಲಿ ಪ್ರಕ್ರಿಯೆಗಳನ್ನು ಅನುಸರಿಸಬೇಕಾಗುತ್ತದೆ' ಎಂದಿದ್ದಾರೆ.












Click it and Unblock the Notifications