Sony Mulewa: ಕನ್ನಡ ಸಿನಿಮಾಗಳಲ್ಲಿ ನಟಿಸಲು ಕನ್ನಡ ಕಲಿತ 'ವಧು' ನಟಿ ಪ್ರಿಯಾಂಕಾ
ಬಿಗ್ಬಾಸ್ ಮುಗಿದ ಬಳಿಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸ್ತುತ ಎರಡು ಹೊಸ ಧಾರಾವಾಹಿಗಳು ಲಗ್ಗೆ ಇಟ್ಟಿವೆ. ಇವು ವೀಕ್ಷಕರ ಗಮನ ಸೆಳೆದಿದ್ದು ಅದರಲ್ಲೂ ವಧು ಧಾರವಾಹಿಯಂತೂ ತನ್ನ ವಿಭಿನ್ನ ಕಥೆಯ ಮೂಲಕ ಎಲ್ಲರ ಮನೆಮಾತಾಗಿದೆ. ಇದೀಗ ವಧು ಧಾರಾವಾಹಿಯ ಹೀರೋ ಸಾರ್ಥಕ್ ಪತ್ನಿ ಪ್ರಿಯಾಂಕಾ ಪಾತ್ರದಲ್ಲಿ ನಟಿಸಿರುವ ಸೋನಿ ಮುಲೇವಾ ಭಾರೀ ಸುದ್ದಿಯಲ್ಲಿದ್ದಾರೆ. ಹಾಗಾದರೆ ಸೋನಿ ಮುಲೇವಾ ಯಾರು? ಸೋನಿ ಮುಲೇವಾ ಎಲ್ಲಿಯವರು? ಇವರ ಬಗ್ಗೆ ಒಂದಿಷ್ಟು ಡಿಟೇಲ್ಸ್ ನೋಡೋಣ.
ಸೋನಿ ಮುಲೇವಾ ಅವರು ಚಿಕ್ಕವಯಸ್ಸಿನಿಂದಲೂ ನಟಿ ಆಗಬೇಕು ಅನ್ನೋ ಆಸೆ ಇಟ್ಟುಕೊಂಡಿದ್ದರಂತೆ. ಅದರಲ್ಲೂ ಕನ್ನಡದ ನಟಿ ಆಗಬೇಕು ಅನ್ನೋದು ಇವರ ಹೆಬ್ಬಯಕೆಯಾಗಿತ್ತು. ಹೀಗಾಗಿ ಚೆನ್ನಾಗಿ ಕನ್ನಡ ಕಲಿಯಬೇಕು ಅನ್ನೋ ಉದ್ದೇಶದಿಂದಲೇ ಎಂಟನೇ ತರಗತಿಯಿಂದ ಮೊದಲ ಭಾಷೆಯಾಗಿ ಕನ್ನಡವನ್ನೇ ಸೋನಿ ಮುಲೇವಾ ಆಯ್ಕೆ ಮಾಡಿಕೊಂಡಿದ್ದರು. ಇದರಿಂದಾಗಿ ಈ ನಟಿಗೆ ಕನ್ನಡ ತುಂಬಾ ಸುಲಲಿತವಾಗಿ ಮಾತನಾಡಲು ಬರುತ್ತದೆ. ಆದರೆ ಇವರ ಹಿನ್ನೆಲೆ ಕೇಳಿದರೆ ನೀವು ಶಾಕ್ ಆಗೋದು ಗ್ಯಾರಂಟಿ.

ಸೋನಿ ಮುಲೇವಾ ಯಾರು?
ಹೌದು... ನಟಿ ಸೋನಿ ಮುಲೇವಾ ಅವರು ಮೂಲತ: ರಾಜಸ್ಥಾನದವರು. ಆದರೂ ಇವರಿಗೆ ಕನ್ನಡದ ಮೇಲೆ ಇರುವ ಪ್ರೀತಿಗೆ ನಾವೆಲ್ಲಾ ತಲೆ ಬಾಗಲೇಬೇಕು. ಜನ್ಮ ಭೂಮಿ ಕರ್ಮ ಭೂಮಿ ಅನ್ನೋ ಹಾಗೆ ರಾಜಸ್ಥಾನ ಮತ್ತು ಕರ್ನಾಟಕವನ್ನು ಸೋನಿ ಮುಲೇವಾ ತಮ್ಮ ಎರಡು ಕಣ್ಣುಗಳು ಎಂದು ಕರೆಯುತ್ತಾರೆ. ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ಸೋನಿ ಮುಲೇವಾಗೆ ಮೊದಲು ಬಣ್ಣ ಹಚ್ಚಿದ್ದು ಮಂಡ್ಯ ರಮೇಶ್ ಅವರು. ಮಂಡ್ಯ ರಮೇಶ್ ಅವರೇ ನನ್ನ ಗುರುಗಳು ಎಂದು ಸೋನಿ ಮುಲೇವಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಇನ್ನೂ ಬಿಎ ಜರ್ನಲಿಸಂ ಮಾಡಿರುವ ಸೋನಿ ಮುಲೇವಾಗೆ ಎಂಎ ಮಾಡುವ ಆಸಕ್ತಿ ಇದೆ. ಡಿಪ್ಲೊಮಾ ಇನ್ ಆರ್ಟ್ಸ್ ಕೂಡ ಮಾಡಿದ್ದಾರೆ ಸೋನಿ ಮುಲೇವಾ. ಈ ಹಿಂದೆ ಗಟ್ಟಿ ಮೇಳ ಧಾರಾವಾಹಿಯಲ್ಲಿ ಸೋನಿ ಮುಲೇವಾ ಅತಿಥಿ ಪಾತ್ರ ನಿರ್ವಹಿಸಿದ್ದರು. ಇನ್ನೂ ಮಹಾನಟಿ ಶೋನಲ್ಲೂ ಸೋನಿ ಮುಲೇವಾ ಸ್ಪರ್ಧಿಸಿದ್ದರು. ಪಾರು ಸೇರಿದಂತೆ ಹಲವಾರು ಸೀರಿಯಲ್ಗಳಿಗೆ ಆಡಿಷನ್ ಕೊಟ್ರು ಕೂಡ ರಿಜೆಕ್ಟ್ ಆಗಿದ್ದರು.
ವಧು ಧಾರಾವಾಹಿಯಲ್ಲಿ ಗಮನ ಸೆಳೆದ ಸೋನಿ ಮುಲೇವಾ
ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವಂತಹ 'ವಧು' ಸೀರಿಯಲ್ನಲ್ಲಿ ಸಾರ್ಥಕ್ ಪತ್ನಿ ಪ್ರಿಯಾಂಕಾ ಪಾತ್ರದಲ್ಲಿ ಇವರು ನಟನೆಯನ್ನು ಮಾಡುತ್ತಿದ್ದು ಎಲ್ಲರ ಗಮನ ಸೆಳೆದಿದ್ದಾರೆ. ವಧು ಧಾರಾವಾಹಿಯಲ್ಲಿ ಎಲ್ಲದಕ್ಕೂ ನನಗೆ ನಾನೇ ಮೇಲು ಎಂದುಕೊಳ್ಳುವ ಯಜಮಾನತಿಯಾಗುವ ಬಯಕೆ ಹೊಂದಿರುವ ಹೆಣ್ಣು ಪ್ರಿಯಾಂಕಾ ಪಾತ್ರ. ಹೀಗಾಗಿ ಈ ಒಂದು ಪಾತ್ರಕ್ಕೆ ಹೇಳಿ ಮಾಡಿಸಿದಂತೆ ಸೋನಿ ಮುಲೇವಾ ಅವರು ಬಣ್ಣ ಹಚ್ಚಿದ್ದಾರೆ.
ನಟಿ ಸೋನಿ ಮುಲೇವಾ ಅವರದ್ದು ಮೂಲ ಸ್ಥಾನ ರಾಜಸ್ಥಾನ ಆದರೂ ಕೂಡ ಅಪ್ಪ ಹಾಗೂ ಅಪ್ಪನ ಊರು ರಾಜಸ್ಥಾನ ಆಗಿದ್ದರೂ ಕೂಡ ಸೋನಿ ಮುಲೇವಾ ಹುಟ್ಟಿಬೆಳದಿದ್ದು ಎಲ್ಲವೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅನ್ನೋದು ವಿಶೇಷ.
ವಧು ಧಾರಾವಾಹಿ ಕಥೆ
'ವಧು' ಓರ್ವ ಅವಿವಾಹಿತೆ. ಆಕೆ ವೃತ್ತಿಯಲ್ಲಿ ವಿಚ್ಚೇದನ ಕೊಡಿಸುವ ಲಾಯರ್. ಆದರೆ ಈಕೆಯ ಬಳಿ ಬರುವ ಜೋಡಿಗಳು ವಿಚ್ಚೇದನ ಪಡೆಯುವುದಕ್ಕಿಂತ ಒಂದಾಗುವುದು ಗ್ಯಾರಂಟಿ ಅನ್ನೋ ಹೆಸರು ಈಕೆಗೆ ಇರುತ್ತದೆ. ಯಶಸ್ವಿ ಉದ್ಯಮಿ ಆಗಿರುವ ಹೀರೋ ಸಾರ್ಥಕ್ ಎಂಬಾತ ತನ್ನ ದಾಂಪತ್ಯದಲ್ಲಿ ಬಿರುಕುಂಟಾಗಿದ್ದರಿಂದ ತನ್ನ ಪತ್ನಿ ಪ್ರಿಯಾಂಕಾದೊಂದಿಗೆ ವಿಚ್ಚೇದನ ಪಡೆಯಲು ಲಾಯರ್ ವಧು ಬಳಿ ಹೋಗುತ್ತಾರೆ. ಹೀಗೆ ಧಾರಾವಾಹಿಯ ಕಥೆ ಶುರುವಾಗುತ್ತದೆ.
ಇನ್ನೂ ಈ ಧಾರಾವಾಹಿಯಲ್ಲಿ ಹಿರಿಯ ನಟಿ ವಿನಯಾ ಪ್ರಸಾದ್, ಸುಧಾ ಬೆಳವಾಡಿ, ರವಿ ಭಟ್, ರವಿ ಕುಮಾರ್, ರೇಖಾ ಸಾಗರ್, ಸಾರ್ಥಕ್ ಪಾತ್ರದಲ್ಲಿ ಅಭಿಷೇಕ್ ಶ್ರೀಕಾಂತ್, ವಧು ಪಾತ್ರದಲ್ಲಿ ದುರ್ಗಾಶ್ರೀ ಮತ್ತು ಪ್ರಿಯಾಂಕಾ ಪಾತ್ರದಲ್ಲಿ ಸೋನಿ ಮುಲೇವಾ ಅಭಿನಯಿಸುತ್ತಿದ್ದಾರೆ. ಈ ಧಾರಾವಾಹಿ ಆರಂಭದಲ್ಲೇ ಜನಪ್ರಿಯತೆಯನ್ನು ಗಳಿಸಿದೆ.












Click it and Unblock the Notifications