Darshan Arrest: ದರ್ಶನ್ ಜೊತೆ ಸಂಧಾನ! ರೇಣುಕಾಸ್ವಾಮಿ ತಂದೆ ಹೇಳಿದ್ದೇನು? ಜಿಲ್ಲಾಧಿಕಾರಿಗಳನ್ನ ಭೇಟಿ ಮಾಡಿದ್ದೇಕೆ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಮನೆ ಊಟ ಕೊಡುವಂತೆ ಅವರು ಸಲ್ಲಿಸಿದ್ದ ಅರ್ಜಿ ಕೂಡ ವಜಾಗೊಂಡಿದ್ದು, ಸದ್ಯಕ್ಕೆ ಜೈಲೂಟವೇ ಗತಿ ಎನ್ನುವಂತಾಗಿದೆ. ದರ್ಶನ್ರನ್ನು ಭೇಟಿ ಮಾಡಲು, ನಟರು, ಪ್ರಭಾವಿಗಳು ಒಬ್ಬೊಬ್ಬರಾಗಿ ಜೈಲಿಗೆ ಹೋಗಿ ಬರುತ್ತಿದ್ದಾರೆ. ಮತ್ತೊಂದೆಡೆ ಪೊಲೀಸರು ಬಲವಾದ ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದು, ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸಲು ಕೆಲಸ ಮಾಡುತ್ತಿದ್ದಾರೆ.
ಮತ್ತೊಂದೆಡೆ ರೇಣುಕಾಸ್ವಾಮಿ ಕುಟುಂಬ ಕಂಗಾಲಾಗಿದೆ. ರೇಣುಕಾಸ್ವಾಮಿ ಪತ್ನಿ ಗರ್ಭಿಣಿಯಾಗಿದ್ದು, ಗಂಡನನ್ನು ಕಳೆದುಕೊಂಡ ನೋವು ಒಂದೆಡೆಯಾದರೆ, ಆರೋಗ್ಯ ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಈ ಬೆನ್ನಲ್ಲೇ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ, ದರ್ಶನ್ ನಮ್ಮ ಮನೆಗೆ ಬಂದರೆ ಸ್ವಾಗತಿಸುತ್ತೇನೆ ಎಂದಿದ್ದರು.

ಶಿವನಗೌಡ ಅವರ ಹೇಳಿಕೆಯನ್ನು ಕೆಲವರು ತಿರುಚುವ ಕೆಲಸ ಮಾಡಿದ್ದರು. ಮಗನನ್ನು ಕಳೆದುಕೊಂಡರು, ದುಡ್ಡಿಗಾಗಿ ದರ್ಶನ್ ಜೊತೆ ಸಂಧಾನಕ್ಕೆ ಒಪ್ಪಿಕೊಂಡಿದ್ದಾರೆ, ಅದಕ್ಕೆ ದರ್ಶನ್ ಮನೆಗೆ ಬರಲಿ ಎನ್ನುವಂತೆ ಮಾತನಾಡಿದ್ದಾರೆ ಎಂದು ಕೆಲವರು ಆರೋಪ ಮಾಡಿದ್ದರು. ಆದರೆ ರೇಣುಕಾಸ್ವಾಮಿ ಎಲ್ಲಾ ವದಂತಿಗಳನ್ನು ತಳ್ಳಿಹಾಕಿದ್ದು, ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.
ಮನೆಗೆ ಬಂದವರನ್ನು ಸತ್ಕರಿಸುವುದು ನಮ್ಮ ಸಂಪ್ರದಾಯ, ಮನೆಗೆ ಬರಲಿ ಎಂದ ಮಾತ್ರಕ್ಕೆ ಸಂಧಾನಕ್ಕೆ ಒಪ್ಪಿಕೊಂಡಿದ್ದೇನೆ ಎಂದಲ್ಲ, ಸಂಧಾನ ಎನ್ನುವುದು ಅಸಾಧ್ಯವಾದ ಮಾತು, ನಾನು ಕಳೆದುಕೊಂಡಿರುವುದು ಮಗನನ್ನು ಎಂದು ಹೇಳಿದ್ದಾರೆ.
ರೇಣುಕಾಸ್ವಾಮಿ ತಂದೆ ಹೇಳಿದ್ದೇನು?
ದರ್ಶನ್ ನಮ್ಮ ಮನೆಗೆ ಬರಲಿ ಎನ್ನುವ ಅರ್ಥದಲ್ಲಿ ಹೇಳಿಲ್ಲ, ನಮ್ಮ ಮನೆಗೆ ಯಾರೇ ಬಂದರೂ, ಬರಬೇಡಿ ಎನ್ನುವುದಿಲ್ಲ. ಅವರು ಮನೆಗೆ ಬರಲಿ ಎಂದ ಮಾತ್ರಕ್ಕೆ ರಾಜಿಗೆ ಒಪ್ಪಿಕೊಂಡಿದ್ದೇನೆ ಎಂದಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಮಗನನ್ನು ಕಳೆದುಕೊಂಡಿರು ಸಂಕಟ ನನಗೆ ಗೊತ್ತಿದೆ, ಅವರಿಗೇನು ಗೊತ್ತಾಗುತ್ತದೆ. ಸಾಯುವ ಮುಂಚೆ ಆತ ಎಷ್ಟು ನೋವು ಅನುಭವಿಸಿದ್ದಾನೆ ಎನ್ನುವುದು ನನಗೆ ಮಾತ್ರ ಗೊತ್ತಿದೆ. ದರ್ಶನ್ ಜೊತೆ ನನಗೆ ಸಂಪರ್ಕವೂ ಇಲ್ಲ, ರಾಜಿಯಾಗುವ ಪ್ರಶ್ನೆಯೇ ಇಲ್ಲ, ಕಾನೂನು ಹೋರಾಟ ನಡೆಯುತ್ತದೆ, ನ್ಯಾಯಾಲಯ ಇದೆ, ಕಾನೂನು ಇದೆ, ಪೊಲೀಸರು ಇದ್ದಾರೆ, ಸರ್ಕಾರ ಇದೆ ಅದು ನೋಡಿಕೊಳ್ಳುತ್ತದೆ ಎಂದು ಹೇಳಿದ್ದಾರೆ.
ದರ್ಶನ್ಗೆ ಹೆಚ್ಚಿದ ಸಂಕಷ್ಟ?
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಬಲವಾದ ಸಾಕ್ಷಿಗಳು ಲಭ್ಯವಾಗಿದ್ದು, ಅವುಗಳನ್ನು ಕೋರ್ಟ್ನಲ್ಲಿ ಹಾಜರುಪಡಿಸಲು ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ದರ್ಶನ್ರನ್ನು ಹೊರಗೆ ಕರೆದುಕೊಂಡು ಬರಲು ಅವರ ಕುಟುಂಬ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಆದರೆ, ಸದ್ಯಕ್ಕೆ ದರ್ಶನ್ಗೆ ಜಾಮೀನು ಸಿಗುವುದ ಕಷ್ಟವಾಗಿದ್ದು, ಇನ್ನೂ ಹಲವು ತಿಂಗಳು ಬೇಕಾಗುತ್ತದೆ ಎನ್ನಲಾಗಿದೆ.
ಸರ್ಕಾರಿ ಕೆಲಸಕ್ಕೆ ಮನವಿ
ಮತ್ತೊಂದೆಡೆ ರೇಣುಕಾಸ್ವಾಮಿ ಪತ್ನಿ ಜಿ.ಎಸ್. ಸಹನಾ ಚಿತ್ರದುರ್ಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ್ದು, ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ಕೊಡುವಂತೆ ಮನವಿ ಮಾಡಿದ್ದಾರೆ. ರೇಣುಕಾಸ್ವಾಮಿ ದುಡಿಮೆಯಲ್ಲೇ ಸಂಸಾರ ನಡೆಯುತ್ತಿತ್ತು, ಈಗ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದಿದ್ದಾರೆ.
ಜಿಲ್ಲಾಧಿಕಾರಿ ವೆಂಕಟೇಶ್ ಅವರನ್ನು ಭೇಟಿಯಾಗಿರುವ ಸಹನಾ, ಅತ್ತೆ, ಮಾವ ಹಾಗೂ ಮಾವನ ತಾಯಿ ಇದ್ದು, ಅವರನ್ನು ನೋಡಿಕೊಳ್ಳಲು ಕಷ್ಟವಾಗುತ್ತಿದೆ. ನಾನು 6 ತಿಂಗಳ ಗರ್ಭಿಣಿಯಾಗಿದ್ದು ಜೀವನ ನಡೆಸಲು ಕಷ್ಟವಾಗುತ್ತಿದ್ದು, ನಾನು ದ್ವಿತೀಯ ಪಿಯುಸಿ ಓದಿದ್ದೇನೆ ಅದಕ್ಕೆ ತಕ್ಕಂತ ಸರ್ಕಾರಿ ಕೆಲಸ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.












Click it and Unblock the Notifications