Rashmika Mandanna: ಅಂದು ಹೈದ್ರಾಬಾದ್ನವಳು, ಇಂದು ತಾಯ್ನಾಡಿನ ಬಗ್ಗೆ ಕ್ಲಾರಿಟಿ ಕೊಟ್ಟ ರಶ್ಮಿಕಾ
ನಟಿ ರಶ್ಮಿಕಾ ಮಂದಣ್ಣ ಅವರು ಸದ್ಯ ಬಾಲಿವುಡ್ ಅಂಗಳದಲ್ಲಿ ಮಿಂಚುತ್ತಿದ್ದಾರೆ. ನಟ ಸಲ್ಮಾನ್ ಖಾನ್ ಜೊತೆ ನಟಿಸಿರುವ ಸಿಕಂದರ್ ಸಿನಿಮಾ ಇಂದು ತೆರೆಕಂಡಿದೆ. ಪ್ರೇಕ್ಷಕರಿಂದಲೂ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಶ್ಮಿಕಾ ಅಭಿನಯಕ್ಕೂ ಜನ ಫಿದಾ ಆಗಿದ್ದಾರೆ. ಇತ್ತೀಚೆಗೆ ಕನ್ನಡ ಹಾಗೂ ಕರ್ನಾಟಕದ ವಿಚಾರದಲ್ಲಿ ಗುರಿಯಾಗಿದ್ದ ರಶ್ಮಿಕಾ ಮಂದಣ್ಣ ಅವರು ಇದೀಗ ಕರ್ನಾಟಕದ ಸಂದರ್ಶನವೊಂದರಲ್ಲಿ ನೆನೆದಿದ್ದಾರೆ. ಈ ವಿಡಿಯೋ ವೈರಲ್ ಕೂಡ ಆಗಿದೆ.
ಸಿಕಂದರ್ ಸಿನಿಮಾ ಪ್ರಮೋಷನ್ ವೇಳೆ ಮಾತನಾಡಿರುವ ರಶ್ಮಿಕಾ ಈ ವೇಳೆ ಕನ್ನಡ ಹಾಗೂ ಕರ್ನಾಟಕವನ್ನು ಉಲ್ಲೇಖಿಸಿದ್ದಾರೆ. ಭಾಷೆಗಳನ್ನು ಕಲಿಯಬೇಕಾದ ಮಹತ್ವದ ಬಗ್ಗೆ ಮಾತನಾಡಿದ್ದಾರೆ ರಶ್ಮಿಕಾ. ಈ ವೇಳೆ ನಾನು ನಾನು ಕರ್ನಾಟಕದವಳು, ನಾನು ಹುಟ್ಟಿ ಬೆಳೆದಿದ್ದು ಕೂಡ ಕರ್ನಾಟಕದಲ್ಲೇ, ಅಲ್ಲಿ ನಾನು ಕನ್ನಡ ಹಾಗೂ ಇಂಗ್ಲೀಷ್ ಮಾತನಾಡುತ್ತಿದ್ದೆ ಎಂದು ರಶ್ಮಿಕಾ ಹೇಳಿದ್ದಾರೆ.

ಅಲ್ಲದೆ ನಾನು ಹೈದರಾಬಾದ್ಗೆ ಬಂದ ಬಳಿಕ ತೆಲುಗು ಭಾಷೆ ಕಲಿಯುವುದು ನನಗೆ ಅನಿವಾರ್ಯವಾಗಿತ್ತು. ಏಕೆಂದರೆ ನನ್ನ ಮನೆ, ಆಫೀಸ್ ಸಿಬ್ಬಂದಿ, ಸೆಕ್ಯುರಿಟಿ ಎಲ್ಲರೂ ತೆಲುಗು ಭಾಷೆಯವರೇ ಆಗಿರುವುದರಿಂದ ನಾನು ಅವರೊಂದಿಗೆ ಅಲ್ಲಿ ತೆಲುಗು ಭಾಷೆಯಲ್ಲೇ ಮಾತನಾಡಬೇಕಾಗಿತ್ತು. ಈ ಕಾರಣದಿಂದಲೇ ನಾನು ತೆಲುಗು ಭಾಷೆಯನ್ನು ಕಲಿತುಕೊಂಡಿದ್ದೇನೆ ಎಂದೂ ರಶ್ಮಿಕಾ ಹೇಳಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಶ್ಮಿಕಾ ಅಭಿಮಾನಿಗಳು ಈ ವಿಡಿಯೋ ಹಂಚಿಕೊಂಡು, ನೋಡ್ರಪ್ಪಾ ರಶ್ಮಿಕಾಗೆ ತಾಯ್ನಾಡಿನ ಮೇಲೆ ಗೌರವ ಇಲ್ಲ ಅಂದೋರು ಈ ವಿಡಿಯೋ ನೋಡಿ ಎಂದು ಶೇರ್ ಮಾಡುತ್ತಿದ್ದಾರೆ. ಅಲ್ಲದೆ ರಶ್ಮಿಕಾ ಅವರು ಡ್ಯಾಮೇಜ್ ಕಂಟ್ರೋಲ್ಗೆ ಈ ಮಾತನ್ನಾಡಿದ್ದಾರೆ ಎಂದು ಹಲವರು ದೂರಿದ್ದಾರೆ.
ನಾನು ಹೈದರಾಬಾದ್ನವಳು ಎಂದಿದ್ದ ರಶ್ಮಿಕಾ: ರಶ್ಮಿಕಾ ಅವರು ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ನಾನು ಹೈದರಾಬಾದ್ನವಳು ಎನ್ನುವ ಮೂಲಕ ವಿವಾದಕ್ಕೆ ಗುರಿಯಾಗಿದ್ದರು. ಏಕೆಂದರೆ ರಶ್ಮಿಕಾ ಅವರು ಮೂಲತಃ ಕರ್ನಾಟಕದವರು ಹಾಗೂ ಕನ್ನಡ ಸಿನಿಮಾದಿಂದಲೇ ಚಿತ್ರರಂಗಕ್ಕೆ ಕಾಲಿಟ್ಟವರು ಎಂದು ಉಲ್ಲೇಖಿಸಿ ಕನ್ನಡಿಗರು ರಶ್ಮಿಕಾ ವಿರುದ್ಧ ಗರಂ ಆಗಿದ್ದರು. ಇಂದು ನೀವು ಎಷ್ಟೇ ಎತ್ತರಕ್ಕೆ ಬೆಳೆದಿರಬಹುದು. ಆದರೆ, ಇಲ್ಲಿ ಅವಕಾಶ ಸಿಕ್ಕಿದ್ದರಿಂದಲೇ ನೀವು ಸಿನಿಮಾಗಳಲ್ಲಿ ನಟಿಸಿದ್ದು. ಈಗ ದಿಢೀರನೆ ತಾಯ್ನಾಡು ಯಾವುದು ಅನ್ನೋದನ್ನು ಮರೆಯುವಷ್ಟು ಧಿಮಾಕು ಬಂದಿದೆ ಎಂದು ರಶ್ಮಿಕಾ ವಿರುದ್ಧ ಸಿಡಿಮಿಡಿಗೊಂಡಿದ್ದರು.

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿಎ ನಾರಾಯಣಗೌಡ ಕೂಡ ರಶ್ಮಿಕಾ ಅವರ ಹೇಳಿಕೆಯನ್ನು ಖಂಡಿಸಿದ್ದರು. ಕಾಂಗ್ರೆಸ್ ಶಾಸಕ ರವಿ ಗಣಿಗ ಅವರು ಕೂಡ ರಶ್ಮಿಕಾ ಅವರ ಮೇಲೆ ಹಲವು ಆರೋಪಗಳನ್ನು ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ರಶ್ಮಿಕಾ ಅಭಿಯಾನ ಕೂಡ ನಡೆದಿತ್ತು. ಇದೀಗ ಅವರು ಸಿಕಂದರ್ ಸಿನಿಮಾದ ಕಾರ್ಯಕ್ರಮದಲ್ಲಿ ನಾನು ಕರ್ನಾಟಕದವಳು ಎನ್ನುವ ಮೂಲಕ ತಮ್ಮ ಮೇಲಿನ ವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications