Allu Arjun: ಅಲ್ಲು ಅರ್ಜುನ್ಗೆ ದೊಡ್ಡ ರಿಲೀಫ್; ಮಧ್ಯಂತರ ಜಾಮೀನು ಮಂಜೂರು
ಪುಷ್ಪ 2 ಸಿನಿಮಾ ನಟ ಅಲ್ಲು ಅರ್ಜುನ್ಗೆ 14 ದಿನ ನ್ಯಾಯಾಂಗ ಬಂಧನದ ಬೆನ್ನಲ್ಲೇ ಮಧ್ಯಂತರ ಜಾಮೀನು ಸಿಕ್ಕಿದೆ. ತೆಲಂಗಾಣ ಹೈಕೋರ್ಟ್ ನಟ ಅಲ್ಲು ಅರ್ಜುನ್ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಬಂಧನದ ಭೀತಿಯಲ್ಲಿದ್ದ ನಟನಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ. ಪುಷ್ಪ 2 ಸಿನಿಮಾ ಬಿಡುಗಡೆಗೆ ಮುನ್ನ ಹೈದರಾಬಾದ್ನ ಸಂಧ್ಯಾ ಚಿತ್ರಮಂದಿರದಲ್ಲಿ ಪ್ರೀಮಿಯರ್ ಪ್ರದರ್ಶನದ ವೇಳೆ ಉಂಟಾಗಿದ್ದ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ರನ್ನು ಬಂಧಿಸಲಾಗಿತ್ತು.
ಸಂಧ್ಯಾ ಚಿತ್ರಮಂದಿರದಲ್ಲಿ ಕಾಲ್ತುಳಿತ ಪ್ರಕರಣದಲ್ಲಿ 13 ಜನರ ಮೇಲೆ ಪ್ರಕರಣ ದಾಖಲಾಗಿದ್ದು ಅಲ್ಲು ಅರ್ಜುನ್ ಎ11 ಆರೋಪಿಯಾಗಿ ಹೆಸರಿಸಲಾಗಿದೆ. ಶುಕ್ರವಾರ ಅಲ್ಲು ಅರ್ಜುನ್ರನ್ನು ಪೊಲೀಸರು ಬಂಧಿಸಿದ್ದು, ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಿದ ಬಳಿಕ ಕೋರ್ಟ್ಗೆ ಹಾಜರುಪಡಿಸಿದರು.

ವಾದ ಆಲಿಸಿದ ತೆಲಂಗಾಣ ಹೈಕೋರ್ಟ್ ಆರೋಪಿ ಅಲ್ಲು ಅರ್ಜುನ್ರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿತು. ನ್ಯಾಯಾಲಯದ ಅದೇಶದ ಬಳಿಕ ಅಲ್ಲು ಅರ್ಜುನ್ರನ್ನು ಕಾರಾಗೃಹಕ್ಕೆ ಸ್ಥಳಾಂತರಿಸಲು ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ ಹೈಕೋರ್ಟ್ನಲ್ಲಿ ವಿಚಾರಣೆ ನಡೆದಿದ್ದು ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ.
ಕೋರ್ಟ್ಗೆ ಮನವಿ ಮಾಡಿದ್ದ ಅಲ್ಲು ಅರ್ಜುನ್
ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದು ಮಾಡುವಂತೆ ಅಲ್ಲು ಅರ್ಜುನ್ ಕೋರ್ಟ್ ಮೆಟ್ಟಿಲೇರಿದ್ದರು. ಡಿಸೆಂಬರ್ 11ರಂದು ತೆಲಂಗಾಣ ಹೈಕೋರ್ಟ್ನಲ್ಲಿ ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಇನ್ನೂ ನಡೆಯಬೇಕಿದ್ದು ಅದಕ್ಕೂ ಮುನ್ನವೇ ಅಲ್ಲು ಅರ್ಜುನ್ರನ್ನು ಬಂಧಿಸಲಾಗಿತ್ತು.
ದೂರು ವಾಪಸ್
ಅಲ್ಲು ಅರ್ಜುನ್ ಬಂಧಿಸಿದ ಸುದ್ದಿ ತಿಳಿಯುತ್ತಿದ್ದಂತೆ ಕಾಲ್ತುಳಿತದಲ್ಲಿ ಮೃತಪಟ್ಟಿದ್ದ ಮಹಿಳೆಯ ಪತಿ ಮಾಧ್ಯಮಗಳ ಜೊತೆ ಮಾತನಾಡಿದ್ದು, ಅಲ್ಲು ಅರ್ಜುನ್ರನ್ನು ಬಂಧಿಸುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ. ಅವರನ್ನು ಬಂಧಿಸುವುದಾದರೆ ನಾನು ಪ್ರಕರಣ ವಾಪಸ್ ಪಡೆಯುತ್ತೇನೆ ಎಂದು ತಿಳಿಸಿದ್ದಾರೆ. ಒಂದು ವೇಳೆ ದೂರುದಾರರು ಕೇಸ್ ವಾಪಸ್ ಪಡೆದರೆ, ಅಲ್ಲು ಅರ್ಜುನ್ಗೆ ಬಂದಿರುವ ಸಂಕಷ್ಟ ಪರಿಹಾರವಾಗುವ ಸಾಧ್ಯತೆ ಇದೆ. ಸದ್ಯ ಅಲ್ಲು ಅರ್ಜುನ್ರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಕಾರಣ ಅವರು ಜೈಲಿನಲ್ಲಿ ಇರಬೇಕಾಗುತ್ತದೆ.
ಅಲ್ಲು ಅರ್ಜುನ್ ಮೇಲಿನ ಆರೋಪವೇನು?
ಪುಷ್ಪ 2 ಸಿನಿಮಾ ಪ್ರೀಮಿಯರ್ ಪ್ರದರ್ಶನದ ವೇಳೆ ಅಪಾರ ಜನ ಸೇರುವ ನಿರೀಕ್ಷೆ ಮಾಡಲಾಗಿತ್ತು, ಸಂಧ್ಯಾ ಚಿತ್ರಮಂದಿರದ ಬಳಿ ಪೊಲೀಸರು ಸೂಕ್ತ ಭದ್ರತೆ ಕೂಡ ಒದಗಿಸಿದ್ದರು. ಆದರೆ ಅಲ್ಲು ಅರ್ಜುನ್ ಚಿತ್ರಮಂದಿರಕ್ಕೆ ಭೇಟಿ ನೀಡುವ ವಿಚಾರವನ್ನು ಪೊಲೀಸರಿಗೆ ತಿಳಿಸಿರಲಿಲ್ಲ ಎನ್ನುವುದು ಅವರ ಮೇಲಿನ ಆರೋಪವಾಗಿದೆ. ಅಲ್ಲು ಅರ್ಜುನ್ ಬರುವ ವಿಚಾರ ಮೊದಲೇ ತಿಳಿದಿದ್ದರೆ ಪೊಲೀಸರು ಹೆಚ್ಚಿನ ಭದ್ರತೆಯನ್ನು ಒದಗಿಸುತ್ತಿದ್ದರು. ಅಲ್ಲು ಅರ್ಜುನ್ ಚಿತ್ರಮಂದಿರದ ಬಳಿ ಬಂದಿದ್ದರಿಂದಲೇ ಕಾಲ್ತುಳಿತಕ್ಕೆ ಕಾರಣವಾಗಿದೆ ಎನ್ನುವುದು ಅವರ ಮೇಲಿರುವ ಆರೋಪ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಧ್ಯಾ ಚಿತ್ರಮಂದಿರದ ಮಾಲೀಕರು, ಆಡಳಿತ ಮಂಡಳಿ, ಅಲ್ಲು ಅರ್ಜುನ್ ಭದ್ರತಾ ಸಿಬ್ಬಂದಿ ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಾಗಿದೆ.












Click it and Unblock the Notifications