ದರ್ಶನ್ ದೊಡ್ಡ ಸ್ಟಾರ್ ಆಗಲು ಪುನೀತ್ ಕೂಡ ಕಾರಣ! ಏನಿದು ಹೊಸ ಸುದ್ದಿ
ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಇಂದು. ಇತ್ತ ಕೊಲೆ ಕೇಸ್ನಲ್ಲಿ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದಾರೆ. ಇಬ್ಬರೂ ನಟರ ನಡುವೆ ಒಳ್ಳೆಯ ಬಾಂಧವ್ಯ ಇದ್ದರೂ, ಇಬ್ಬರ ಅಭಿಮಾನಿಗಳ ನಡುವೆ ಈಗಲೂ ದ್ವೇಷ, ಕಿಚ್ಚು ಮುಂದುವರಿಯುತ್ತಲೇ ಇದೆ. ದರ್ಶನ್ ಅವರು ಅಪ್ಪು ಜೊತೆಗೆ ಸ್ನೇಹದಿಂದ ಇದ್ದರು ಎನ್ನುವುದು ಎಲ್ಲರಿಗೂ ಗೊತ್ತಿರೋ ವಿಚಾರ. ಆದರೆ, ದರ್ಶನ್ ಇಷ್ಟು ದೊಡ್ಡ ಸ್ಟಾರ್ ಆಗಿ ಬೆಳೆದಿರುವುದರ ಹಿಂದೆ ಪುನೀತ್ ರಾಜ್ಕುಮಾರ್ ಅವರ ಪಾತ್ರವೂ ಇದೆ ಎಂಬ ವಿಚಾರ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡುತ್ತಿದೆ.
ಹೌದು, ನಟ ದರ್ಶನ್ ಅವರು ಮೆಜೆಸ್ಟಿಕ್ ಸಿನಿಮಾ ಮೂಲಕ ನಟರಾಗಿ ಹೊರಹೊಮ್ಮಿದವರು. ಮೊದಲ ಸಿನಿಮಾದಲ್ಲೇ ದರ್ಶನ್ ಸಖತ್ ಸೌಂಡ್ ಮಾಡಿದ್ದ ನಟ. ಈ ಸಿನಿಮಾದ ಕ್ರೇಜ್ ಇಂದಿಗೂ ಕಡಿಮೆಯಾಗಿಲ್ಲ. ಒಟ್ಟಿನಲ್ಲಿ ದರ್ಶನ್ ಅವರ ಸಿನಿ ಕೆರಿಯರ್ಗೆ ಈ ಮೆಜೆಸ್ಟಿಕ್ ಸಿನಿಮಾ ಒಂದು ಅಡಿಪಾಯ ಅಂತಲೇ ಹೇಳುತ್ತಾರೆ. ಇನ್ನು ಈ ಸಿನಿಮಾಗೂ ನಟ ದಿವಂಗತ ಪುನೀತ್ ರಾಜ್ಕುಮಾರ್ ಅವರಿಗೂ ನಂಟಿತ್ತು ಎಂಬ ವಿಚಾರ ಇದೀಗ ರಿವೀಲ್ ಆಗಿದೆ.

ಒಟ್ಟಿನಲ್ಲಿ ಈ ಸಿನಿಮಾ ಸಕ್ಸಸ್ ಆಗಲು ಒಂದು ರೀತಿಯಲ್ಲಿ ಪುನೀತ್ ರಾಜ್ಕುಮಾರ್ ಅವರೂ ಕಾರಣ ಎಂದು ಹೇಳಲಾಗುತ್ತಿದೆ. ಅಲ್ಲದೆ ದರ್ಶನ್ ಅವರಿಗೆ ಮೆಜೆಸ್ಟಿಕ್ ಸಿನಿಮಾ ಒಳ್ಳೇ ಫೇಮ್ ತಂದುಕೊಟ್ಟಿತ್ತು. ಈ ಸಿನಿಮಾದಿಂದಲೇ ದರ್ಶನ್ ಸ್ಯಾಂಡಲ್ವುಡ್ನಲ್ಲಿ ಎತ್ತರಕ್ಕೆ ಬೆಳೆದಿದ್ದು ಎನ್ನುವ ಮಾತಿದೆ. ಹಾಗಾಗಿ ದರ್ಶನ್ ಅವರು ಇಷ್ಟು ದೊಡ್ಡ ಸ್ಟಾರ್ ಆಗಿ ಮೆರೆಯಲು ಒಂದು ರೀತಿಯಲ್ಲಿ ಪರೋಕ್ಷವಾಗಿ ಪುನೀತ್ ರಾಜ್ಕುಮಾರ್ ಅವರೂ ಕಾರಣ ಎಂದು ಹೇಳಲಾಗಿದೆ.
ಅಸಲಿ ವಿಚಾರವೇನು?: ಮೆಜೆಸ್ಟಿಕ್ ಸಿನಿಮಾವನ್ನು ನಿರ್ಮಾಪಕ ಭಾಮಾ ಹರೀಶ್ ಹೊರತಂದಿದ್ದರು. ಈ ಸಿನಿಮಾವನ್ನು ಅವರ ಉಲ್ಲಾಸ್ ಪ್ರೊಡಕ್ಷನ್ ಸಂಸ್ಥೆಯಿಂದ ರಿಲೀಸ್ ಮಾಡಿದ್ದರು. ಆದರೆ, ದೊಡ್ಮನೆಯ ಒಡೆತನದಲ್ಲಿದ್ದ ಪೂರ್ಣಿಮಾ ಸಂಸ್ಥೆಯ ಯುನಿಟ್ ಬಳಸಿಕೊಂಡಿಯೂ ಮೆಜೆಸ್ಟಿಕ್ ಸಿನಿಮಾ ರಿಲೀಸ್ ಮಾಡಲಾಗಿತ್ತು ಎಂಬ ವಿಚಾರವನ್ನು ಭಾಮಾ ಹರೀಶ್ ಅವರು ಇತ್ತೀಚಿನ ಸಂದರ್ಶನಗಳಲ್ಲಿ ರಿವೀಲ್ ಮಾಡಿದ್ದಾರೆ. ರಾಜ್ಕುಮಾರ್ ಕುಟುಂಬದ ಒಡೆತನದಲ್ಲಿದ್ದ ಪೂರ್ಣಿಮಾ ಸಂಸ್ಥೆಯನ್ನು ಆಗ ಪುನೀತ್ ರಾಜ್ಕುಮಾರ್ ಅವರೇ ನೋಡಿಕೊಳ್ಳುತ್ತಿದ್ದರು ಎಂದೂ ನಿರ್ಮಾಪಕ ಹೇಳಿದ್ದಾರೆ.

ಅಂದು ಶೂಟಿಂಗ್ಗೆ ಪೂರ್ಣಿಮಾ ಸಂಸ್ಥೆಯ ಯುನಿಟ್ ಬಳಸಲಾಗಿತ್ತು. ಎಲ್ಲ ಕೆಲಸ ಆದ ಮೇಲೆ ಹಣ ಪಾವತಿಸಲು ಪೂರ್ಣಿಮಾ ಕಚೇರಿಗೆ ಹೋಗಿದ್ದಾಗ ಪುನೀತ್ ರಾಜ್ಕುಮಾರ್ ಅವರೇ ಅಲ್ಲಿದ್ದರು. ಆಗ ಅವರಿಗೆ ತೂಗುದೀಪ ಶ್ರೀನಿವಾಸ್ ಪುತ್ರನ ಸಿನಿಮಾ ಎಂದು ಅವರ ಬಳಿ ಹೇಳಿಕೊಂಡಿದ್ದೆ. ಆಗ ಪುನೀತ್ ರಾಜ್ಕುಮಾರ್ ಅವರು ತೂಗುದೀಪ ಅಂಕಲ್ ನಮ್ಮವ್ರು ಎಂದು ಹೇಳಿ ಕಡಿಮೆ ಹಣ ತಗೊಂಡಿದ್ರು. ಮೆಜೆಸ್ಟಿಕ್ ಸಿನಿಮಾಗೆ ಆಲ್ ದಿ ಬೆಸ್ಟ್ ಎಂದಿದ್ದರು ಎಂದು ಭಾಮಾ ಹರೀಶ್ ಆ ದಿನವನ್ನು ಮೆಲುಕು ಹಾಕಿದ್ದಾರೆ.
ಹಾಗಾಗಿ ಪರೋಕ್ಷವಾಗಿ ಈ ಮೆಜೆಸ್ಟಿಕ್ ಸಿನಿಮಾದ ಹಿಂದೆ ಪುನೀತ್ ರಾಜ್ಕುಮಾರ್ ಅವರ ಹೆಜ್ಜೆ ಗುರುತಿದೆ. ಅಲ್ಲದೆ ಮೆಜೆಸ್ಟಿಕ್ ಸಿನಿಮಾ ಫ್ಲಾಪ್ ಆಗಿದ್ದರೆ, ದರ್ಶನ್ ಅವರ ಕೆರಿಯರ್ ಕೂಡ ಬಹಳ ಕಷ್ಟದಲ್ಲಿರುತ್ತಿತ್ತು ಎಂದು ಸಿನಿಮಾದ ಗಣ್ಯರು ಹೇಳಿದ್ದುಂಟು. ಒಟ್ಟಾರೆ ದರ್ಶನ್ ಅವರಂತಹ ನಟನನ್ನು ಸಿನಿಮಾರಂಗಕ್ಕೆ ಪರಿಚಯಿಸುವಲ್ಲಿ ಪುನೀತ್ ಅವರ ಪಾತ್ರವೂ ಇದೆ ಎಂಬ ವಿಚಾರ ಗಮನ ಸೆಳೆದಿದೆ. ಅಂದಹಾಗೆ ಪುನೀತ್ ರಾಜ್ಕುಮಾರ್ ಅವರ ಅರಸು ಸಿನಿಮಾದಲ್ಲಿ ದರ್ಶನ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.












Click it and Unblock the Notifications