ಮತ್ತೊಬ್ಬ ತೆಲುಗು ಸ್ಟಾರ್ ಹೀರೋಗೆ ಪ್ರಶಾಂತ್ ನೀಲ್ ಡೈರೆಕ್ಷನ್, KGF-3 ರಿಲೀಸ್ ಮತ್ತೆ ತಡ?
ಉಗ್ರಂ, ಕೆಜಿಎಫ್ ಖ್ಯಾತಿಯ ಕನ್ನಡ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ಇಡೀ ಭಾರತೀಯ ಚಿತ್ರರಂಗವನ್ನೇ ಶೇಕ್ ಮಾಡಿರುವ ನೀಲ್, ಟಾಲಿವುಡ್ ಅಂಗಳದಲ್ಲಿ ಹವಾ ಸೃಷ್ಟಿಸಿದ್ದು, ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಮೂಲಕ ತೆಲುಗು ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಸಲಾರ್-2 ಜೊತೆಗೆ ಯಂಗ್ ಟೈಗರ್ ಜ್ಯೂನಿಯರ್ ಎನ್ಟಿಆರ್ ಅವರಿಗೂ ಒಂದು ಸಿನಿಮಾ ಮಾಡುತ್ತಿದ್ದಾರೆ. ಇದೆಲ್ಲ ಮುಗಿಯುವವರೆಗೆ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-3 ಸಿನಿಮಾ ನಿರ್ದೇಶನಕ್ಕೆ ಕೈಹಾಕುವುದಿಲ್ಲ ಎಂಬ ಮಾತಿದೆ. ಆದರೆ ಇದು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಯಾಕೆಂದರೆ ನೀಲ್ ಮತ್ತೊಬ್ಬ ತೆಲುಗು ಸ್ಟಾರ್ ನಟನಿಗೆ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಈ ಸುದ್ದಿ ಹರಿದಾಡುತ್ತಿದೆ. ಟಾಲಿವುಡ್ನಲ್ಲಿ ಬ್ಯುಸಿಯಾಗಿರುವ ನೀಲ್ ಸಾಲು ಸಾಲು ತೆಲುಗು ಸಿನಿಮಾಗಳನ್ನು ಕೈಯಲ್ಲಿಟ್ಟುಕೊಂಡಿದ್ದಾರೆ. ನೀಲ್ ಆದಷ್ಟು ಬೇಗ ಕನ್ನಡಕ್ಕೆ ವಾಪಸ್ ಆಗಿ ನಮ್ಮ ಕೆಜಿಎಫ್-3 ಸಿನಿಮಾ ರಿಲೀಸ್ ಮಾಡಿ ಎನ್ನುತ್ತಿದ್ದಾರೆ ಯಶ್ ಅಭಿಮಾನಿಗಳು. ಇಲ್ಲಿವರೆಗೆ ನೀಲ್ ಅವರು ಅಧಿಕೃತವಾಗಿ ಎರಡು ತೆಲುಗು ಸಿನಿಮಾಗಳನ್ನು ಕೈಗೆತ್ತಿಕೊಂಡಿದ್ದಾರೆ. ಒಂದು ಪ್ರಭಾಸ್ ನಟನೆಯ ಸಲಾರ್-2 ಹಾಗೂ ತಾರಕ್ (ಜ್ಯೂ.ಎನ್ಟಿಆರ್) ಸಿನಿಮಾ. ಇದೇ ಕಾರಣಕ್ಕೆ ಕೆಜಿಎಫ್ ಸೀಕ್ವೆಲ್ ವಿಳಂಬವಾಗಿದೆ ಎಂದು ಹೇಳಲಾಗಿತ್ತು.

ಈಗ ನೀಲ್ ಮತ್ತೊಂದು ತೆಲುಗು ಸಿನಿಮಾ ಮಾಡಲು ರೆಡಿಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಒಂದು ವೇಳೆ ಇದು ನಿಜವೇ ಆದಲ್ಲಿ ರಾಕಿಂಗ್ ಸ್ಟಾರ್ ಅವರ ಕೆಜಿಎಫ್ ಚಾಪ್ಟರ್-3 ಸಿನಿಮಾ ಸದ್ಯಕ್ಕಂತೂ ಸೆಟ್ಟೇರಲ್ಲ ಎಂದು ಬೇಸರ ಹಂಚಿಕೊಳ್ಳುತ್ತಿದ್ದಾರೆ ಅವರ ಅಭಿಮಾನಿಗಳು. ಇನ್ನೂ ಕೆಲವರು ನೀಲ್ ಅವರಿಗೆ ಈಗ ಕನ್ನಡಕ್ಕಿಂತ ತೆಲುಗು ಹೆಚ್ಚಾಯಿತೇ ಎಂದೂ ದೂರುತ್ತಿದ್ದಾರೆ.
ಕೆಜಿಎಫ್ ಸಿನಿಮಾ ಮುಂದುವರಿಸುವುದನ್ನು ಬಿಟ್ಟು ನೀಲ್ ಮತ್ತೊಬ್ಬ ಟಾಲಿವುಡ್ ನಟ ಸಿನಿಮಾ ಮಾಡುತ್ತಿರುವುದೇಕೆ? ಆ ನಟ ಯಾರು ಎಂದೂ ತಲೆಕೆಡಿಸಿಕೊಂಡಿದ್ದಾರೆ. ಇದಕ್ಕೆ ಉತ್ತರ ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲೇ ಇದೆ. ವರದಿಗಳ ಪ್ರಕಾರ ಪುಷ್ಪ ಖ್ಯಾತಿಯ ನಟ ಅಲ್ಲು ಅರ್ಜುನ್ ಅವರಿಗೆ ನೀಲ್ ಆಕ್ಷನ್ ಕಟ್ ಹೇಳಲಿದ್ದಾರೆ ಎಂದು ಚರ್ಚೆಗಳು ಜೋರಾಗಿವೆ.

ಅಲ್ಲು ಅರ್ಜುನ್ ಹಾಗೂ ಪ್ರಶಾಂತ್ ನೀಲ್ "ರಾವಣಂ" ಎಂಬ ದೊಡ್ಡ ಪ್ರಾಜೆಕ್ಟ್ಗಾಗಿ ಒಂದಾಗುತ್ತಿದ್ದಾರೆ ಎಂದು ವರದಿಯಾಗಿದೆ. ಇದು ನೀಲ್ ಅವರ ಕನಸಿನ ಯೋಜನೆ ಎಂದೂ ಹೇಳಲಾಗುತ್ತಿದೆ. ನಿರ್ಮಾಪಕರ ಕಡೆಯಿಂದ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬರದಿದ್ದರೂ, ಈ ಚಿತ್ರವು ಪ್ರಶಾಂತ್ ನೀಲ್ ಅವರ ಕನಸಿನ ಯೋಜನೆಯಾಗಲಿದೆ. ಈ ಚಿತ್ರವು ನೀಲ್ ಅವರ ಕೆಜಿಎಫ್ ಹಾಗೂ ಸಲಾರ್ನಂತೆಯೇ ದೊಡ್ಡಮಟ್ಟದ ಸಿನಿಮಾ ಎಂದು ಹೇಳಲಾಗುತ್ತಿದೆ. ವರದಿಯೊಂದರ ಪ್ರಕಾರ ಅಲ್ಲು ಅರ್ಜುನ್ ಮತ್ತು ನೀಲ್ ರಾವಣಂ ಎಂಬ ಚಿತ್ರಕ್ಕಾಗಿ ಕೈಜೋಡಿಸಲಿದ್ದು, ಈ ಚಿತ್ರಕ್ಕೆ ಟಾಲಿವುಡ್ನ ದಿಲ್ ರಾಜು ಬಂಡವಾಳ ಹೂಡುವ ನಿರೀಕ್ಷೆಯಿದೆ. ಒಂದು ವೇಳೆ ಈ ತೆಲುಗು ಸಿನಿಮಾ ಸೆಟ್ಟೇರಿದರೆ ಕನ್ನಡದ ಕೆಜಿಎಫ್ ಸರಣಿ ಮತ್ತೆ ಮುಂದೂಡುವ ಸಾಧ್ಯತೆ ಇದೆ.












Click it and Unblock the Notifications