ಕನ್ನಡ ಚಿತ್ರರಂಗ ಅನಾಗರಿಕ, ದಿನಕ್ಕೆ ₹10 ಲಕ್ಷ ಕೊಟ್ರೂ ನಟಿಸಲ್ಲ: ನಟ ಪ್ರಕಾಶ್ ಬೆಳವಾಡಿ ಹೀಗಂದಿದ್ದೇಕೆ?
ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಹಿರಿಯ ನಟ ಪ್ರಕಾಶ್ ಬೆಳವಾಡಿ ಅವರು ಬಹುಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಟಾಲಿವುಡ್, ಬಾಲಿವುಡ್ನಲ್ಲೂ ಹವಾ ಇಟ್ಟಿದ್ದಾರೆ. ದೊಡ್ಡ ಬ್ಯಾನರ್ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಅವರು ಕನ್ನಡ ಚಿತ್ರರಂಗದ ಬಗ್ಗೆ ಸಂದರ್ಶನವೊಂದರಲ್ಲಿ ನೀಡಿರುವ ಹೇಳಿಕೆಯು ಚರ್ಚೆಗೆ ಗ್ರಾಸವಾಗಿದೆ. ಮೂಲತಃ ಕನ್ನಡದವರೇ ಆಗಿರುವ ಪ್ರಕಾಶ್ ಬೆಳವಾಡಿಯವರು ಕನ್ನಡ ಚಿತ್ರರಂಗದ ಬಗ್ಗೆ ಶಾಕಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. 'ಕನ್ನಡ ಚಿತ್ರರಂಗವು ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಅನಾಗರಿಕ ಮತ್ತು ಹಿಂದುಳಿದ ಇಂಡಸ್ಟ್ರಿ' ಎಂದು ಕರೆದಿದ್ದಾರೆ. ಇದಕ್ಕೆ ಅವರು ಕಾರಣವೂ ನೀಡಿದ್ದಾರೆ.
ರಾಪಿಡ್ ರಶ್ಮಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಪ್ರಕಾಶ್ ಬೆಳವಾಡಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಈಗಾಗಲೇ ಅವರು ಪರಭಾಷಾ ಚಿತ್ರಗಳಲ್ಲಿ ಮಿಂಚಿದ್ದರೂ ಕನ್ನಡದ ಸಿನಿಮಾವೊಂದರಲ್ಲಿ ನಟಿಸುವಾಗ ಆದ ಕೆಟ್ಟ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ. 'ಕನ್ನಡ ಸಿನಿರಂಗದಲ್ಲಿ ಒರಟಾಗಿ ನಡೆದುಕೊಳ್ಳುವವರಿದ್ದಾರೆ, ಆದರೆ ಎಲ್ಲರೂ ಅಲ್ಲ. ಆದರೆ ಬೇರೆ ಚಿತ್ರರಂಗದವರು ನನ್ನೊಂದಿಗೆ ತುಂಬಾ ಚೆನ್ನಾಗಿ ವರ್ತಿಸಿದ್ದಾರೆ. ಅಲ್ಲಿ ನನಗೆ ಒಳ್ಳೆಯ ಗೌರವ ಸಿಕ್ಕಿದೆ' ಎಂದಿದ್ದಾರೆ.

'ಕನ್ನಡದಲ್ಲಿ ನಾನು ದೊಡ್ಡ ಬ್ಯಾನರ್ವೊಂದರ ಸಿನಿಮಾದಲ್ಲಿ ನಟಿಸಿದ್ದೆ. ಆದರೆ ನಾನು ಅದರ ಹೆಸರು ಹೇಳಲು ಬಯಸಲ್ಲ, ಏಕೆಂದರೆ ನನಗೆ ಅವರ ಬಗ್ಗೆ ಭಯ ಇದೆ. ಕನ್ನಡ ಚಿತ್ರರಂಗ ಈಗ ಹಾಗೆ ಇದೆ. ಅವರು ನನಗೆ ಮುಂದೆ ಪಾತ್ರ ಕೊಡ್ತಾರೋ, ಇಲ್ಲವೋ ಅನ್ನುವ ಭಯ ಇಲ್ಲ, ಅವರು ಮುಂದೆ ಕರೆದರೂ ಆ ಬ್ಯಾನರ್ನಲ್ಲಿ ನಾನು ನಟಿಸಲ್ಲ, ಒಂದು ದಿನಕ್ಕೆ 10 ಲಕ್ಷ ರೂಪಾಯಿ ಸಂಭಾವನೆ ಕೊಟ್ಟರೂ ನಾನು ನಟಿಸುವುದಿಲ್ಲ' ಎಂದು ಪ್ರಕಾಶ್ ಬೆಳವಾಡಿ ಬೇಸರ ಹಂಚಿಕೊಂಡಿದ್ದಾರೆ.
'ನಾನು ಒಂದು ಸಿನಿಮಾದಲ್ಲಿ ನಟಿಸುತ್ತಿದ್ದೆ, ನಿರ್ದೇಶಕರು ಆ ಪಾತ್ರಕ್ಕೆ ನಾನೇ ಬೇಕು ಎಂದು ಕೇಳಿದ್ದರು. ಅವರು ನಾಲ್ಕು ಕಂತಿನಲ್ಲಿ ನನ್ನ ಸಂಭಾವನೆ ಹಣ ಕೊಡುವುದಾಗಿ ಹೇಳಿದ್ದರು. ಆದರೆ ಅವರು ಕೊನೆಯ ಕಂತಿನ ಹಣ ಕೊಡಲೇ ಇಲ್ಲ. ಅಂದು ಸಿನಿಮಾದ ಕೊನೆಯ ದಿನ ಶೂಟಿಂಗ್ ನಡೆಯುತ್ತಿತ್ತು. ಅಂದು ನನ್ನ ಕ್ಯಾರವಾನ್ಗೆ 4 ಜನರನ್ನ ಕಳಿಸಿದ್ದರು. ಅವರು ಆ ಚಿಕ್ಕ ವ್ಯಾನ್ಗೆ ನುಗ್ಗಿ, ಮಾಂಸ ತಿಂದು ಎಸೆದಿದ್ದರು. ಟಾಯ್ಲೆಟ್ನಲ್ಲಿ ನೀರು ಖಾಲಿ ಮಾಡಿ ಹೋದರು. ಇದರಿಂದ ನನಗೆ ಬೇಸರವಾಯ್ತು' ಎಂದು ವಿವರಿಸಿದ್ದಾರೆ.
ರಾಜ್ಕುಮಾರ್ ಕುಟುಂಬದವರಿಗೆ ಸಂಸ್ಕಾರ ಇದೆ
'ಆದರೆ ಎಲ್ಲರೂ ಹೀಗೇ ಇರಲ್ಲ. ಅನೇಕರಿಗೆ ಹೇಗೆ ವರ್ತಿಸಬೇಕು? ಎನ್ನುವುದೇ ಗೊತ್ತಿಲ್ಲ. ಕನ್ನಡ ಸಿನಿಮಾಗಳಲ್ಲಿ ಕಾಂಟ್ರ್ಯಾಕ್ಟ್ ಅನ್ನೋದೇ ಇಲ್ಲ, ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಸಿಕೊಳ್ಳಲ್ಲ, ಇಲ್ಲಿ ಮಾತ್ರವೇ ಹೀಗೆ, ನಾವು ತುಂಬಾ ಹಿಂದುಳಿದಿದ್ದೇವೆ. ನನ್ನ ಪ್ರಕಾರ ಕನ್ನಡ ಚಿತ್ರರಂಗ ಅನಾಗರಿಕ ಚಿತ್ರರಂಗ' ಎಂದು ಪ್ರಕಾಶ್ ಬೆಳವಾಡಿಯವರು ಹೇಳಿದ್ದಾರೆ. 'ರಾಜ್ಕುಮಾರ್ ಕುಟುಂಬದವರೊಂದಿಗೂ ನಾನು ನಟಿಸಿದ್ದೇನೆ. ಅಪ್ಪು, ಶಿವರಾಜ್ಕುಮಾರ್ ಜೊತೆ ನಟಿಸಿದ್ದು, ಅವರೆಲ್ಲ ತುಂಬಾ ಒಳ್ಳೆಯ ಸಂಸ್ಕಾರ, ನಡತೆ ಇರುವವರು' ಎಂದು ಹೊಗಳಿದ್ದಾರೆ.
ಈ ವಿಡಿಯೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಹಲವರು ಬೆಳವಾಡಿ ಅವರ ಮಾತಿಗೆ ಬೆಂಬಲ ಸೂಚಿಸಿದ್ದರೆ, ಕೆಲವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರರಂಗದ ಬಗ್ಗೆ ಈ ರೀತಿ ಕೇವಲವಾಗಿ ಮಾತನಾಡಬೇಡಿ ಎಂದೂ ಹೇಳಿದ್ದಾರೆ.












Click it and Unblock the Notifications