Chikkanna: ದರ್ಶನ್ ಜೊತೆ ಪಾರ್ಟಿ ಮಾಡಿದ ಉಪಾಧ್ಯಕ್ಷ ಚಿಕ್ಕಣ್ಣನಿಗೆ ಸಂಕಷ್ಟ; ಪೊಲೀಸರಿಂದ ತೀವ್ರ ವಿಚಾರಣೆ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ನಟ ದರ್ಶನ್ ಆಪ್ತರಾಗಿರುವ ಚಿಕ್ಕಣ್ಣನಿಗೂ ಕೂಡ ಈಗ ಸಂಕಷ್ಟ ಎದುರಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಗೆ ಸಂಬಂಧಪಟ್ಟಂತೆ ಚಿಕ್ಕಣ್ಣರಿಗೆ ಪೊಲೀಸರು ನೋಟಿಸ್ ಕೊಟ್ಟಿದ್ದರು. ಇಂದು ದರ್ಶನ್ ಮತ್ತು ಆರೋಪಿಗಳನ್ನು ಪೊಲೀಸರು ಕರೆದೊಯ್ದು ಆರ್ ಆರ್ ನಗರದ ಸ್ಟೋನಿಬ್ರೂಕ್ ರೆಸ್ಟೋ ಬಾರ್ ನಲ್ಲಿ ಸ್ಥಳ ಮಹಜರು ಮಾಡಿದ್ದಾರೆ.

ರೇಣುಕಾಸ್ವಾಮಿಯನ್ನು ಕೊಲೆಯಾದ ದಿನವೇ ದರ್ಶನ್ ಮತ್ತು ಸ್ನೇಹಿತರು ಸ್ಟೋನಿ ಬ್ರೂಕ್ನಲ್ಲಿ ಮದ್ಯಪಾನ ಮಾಡಿದ್ದು, ಈ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಇದ್ದರು ಎನ್ನುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು.
ಇಂದು ಸ್ಥಳ ಮಹಜರು ಮಾಡುವ ವೇಳೆ ನಟ ಚಿಕ್ಕಣ್ಣ ಸ್ಥಳಕ್ಕೆ ಹೋಗಿ ಪೊಲೀಸರ ತನಿಖೆಗೆ ಸಹಕಾರ ಕೊಟ್ಟಿದ್ದಾರೆ. ಮಹಜರು ಮುಗಿದ ಬಳಿಕ ಚಿಕ್ಕಣ್ಣರನ್ನು ಅವರ ಕಾರಿನಲ್ಲೇ ಪೊಲೀಸರು ಅನ್ನಪೂರ್ಣೇಶ್ವರಿ ಪೊಲಿಸ್ ಠಾಣೆಗೆ ಕರೆದೊಯ್ದು ವಿಚಾರಣೆ ಮಾಡಿದ್ದಾರೆ.
ಚಿಕ್ಕಣ್ಣ ಹೇಳಿದ್ದೇನು?
ಪಾರ್ಟಿ ವೇಳೆ ದರ್ಶನ್ ಮತ್ತು ಸ್ನೇಹಿತರು ರೇಣುಕಾಸ್ವಾಮಿ ಅವರ ಬಗ್ಗೆ ಏನಾದರೂ ಮಾತನಾಡಿದ್ದರಾ ಎನ್ನುವ ಬಗ್ಗೆ ಚಿಕ್ಕಣ್ಣ ಅವರನ್ನು ಪ್ರಶ್ನೆ ಮಾಡಿದ್ದಾರೆ.
ಸ್ಟೋನಿಬ್ರೂಕ್ ರೆಸ್ಟೋರೆಂಟ್ನಲ್ಲಿ ದರ್ಶನ್ ಮತ್ತು ಚಿಕ್ಕಣ್ಣ ಊಟ ಮಾಡಿದ್ದರು ಎಂದು ಹೇಳಲಾಗಿದೆ. ದರ್ಶನ್ ಊಟಕ್ಕೆ ಬಾ ಎಂದಿದ್ದರು, ಅದಕ್ಕೆ ಊಟ ಮಾಡಲು ಹೋಗಿದ್ದೆ, ದರ್ಶನ್ ಮತ್ತು ನಾನು ಸ್ನೇಹಿತರಾಗಿದ್ದು ಮೊದಲಿನಿಂದಲೂ ಊಟಕ್ಕೆ ಒಟ್ಟಿಗೆ ಸೇರುತ್ತೇವೆ. ಪಾರ್ಟಿ ಮುಗಿದ ನಂತರ ನಾನು ಮನೆಗೆ ಬಂದೆ ಆಮೇಲೆ ಏನಾಗಿದೆ ನನಗೆ ಗೊತ್ತಿಲ್ಲ ಎಂದು ಚಿಕ್ಕಣ್ಣ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ ಎನ್ನಲಾಗಿದೆ.
ಮಾಧ್ಯಮಗಳಲ್ಲಿ ಸುದ್ದಿ ಬಂದಾಗಲೇ ನನಗೆ ಈ ವಿಚಾರ ಗೊತ್ತಾಗಿದೆ. ಅದನ್ನು ಬಿಟ್ಟು ಇನ್ಯಾವ ವಿಚಾರ ನನಗೆ ಗೊತ್ತಿಲ್ಲ ಎಂದು ಚಿಕ್ಕಣ್ಣ ಪೊಲೀಸರಿಗೆ ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಿಕ್ಕಣ್ಣ ಅವರನ್ನು ಸಾಕ್ಷಿಯನ್ನಾಗಿ ಪರಿಗಣಿಸಲು ಪೊಲೀಸರು ನಿರ್ಧಾರ ಮಾಡಿದ್ದಾರೆ.
ಚಿಕ್ಕಣ್ಣ ಮತ್ತು ದರ್ಶನ್ ನಡುವೆ ಮೊದಲಿನಿಂದ ಉತ್ತಮ ಬಾಂಧವ್ಯ ಇದೆ. ಚಿಕ್ಕಣ್ಣ ಸಿನಿಮಾಗೆ ದರ್ಶನ್ ಬೆಂಬಲ ನೀಡಿದ್ದರು. ದರ್ಶನ್ ಅವರ ಜೊತೆ ಪಾರ್ಟಿ ಮಾಡಿದ್ದು ಈಗ ಚಿಕ್ಕಣ್ಣ ಅವರಿಗೆ ತಲೆನೋವಾಗಿದೆ.












Click it and Unblock the Notifications