ಶಕ್ತಿ ದೇವತೆಗೆ ಸೀರೆ ಮಡಿಲಕ್ಕಿ ಕೊಟ್ಟು ಪವಿತ್ರಾ ಪೂಜೆ: ಕಾರಣ ಏನು?
ಬೆಂಗಳೂರಿನ ಶಕ್ತಿ ದೇವತೆ ಬನಶಂಕರಿ ದೇವಸ್ಥಾನಕ್ಕೆ ನಟಿ ಪವಿತ್ರಾ ಗೌಡ ಭೇಟಿ ಕೊಟ್ಟಿದ್ದಾರೆ. ದೇವರಿಗೆ ಸೀರೆ ಮಡಿಲಕ್ಕಿ ಕೊಟ್ಟು ಪವಿತ್ರಾ ಪೂಜೆಯನ್ನು ಸಲ್ಲಿಸಿದ್ದಾರೆ. ಮಂಗಳವಾರದ (ಏಪ್ರಿಲ್ 15) ದಿನ ದೇವರಿಗೆ ವಿಶೇಷ ಪೂಜೆ ನೆರೆವೇರಿಸಿ ಭಕ್ತಿಯಿಂದ ಪ್ರಾರ್ಥನೆ ಮಾಡಿದ್ದಾರೆ ಪವಿತ್ರಾ. ನಿಮಿಷಾಂಬ ದೇವಸ್ಥಾನದ ಬಳಿಕ ಶಕ್ತಿ ದೇವತೆಯಾದ ಬನಶಂಕರಿ ದೇವಸ್ಥಾನದಲ್ಲಿ ಅವರು ಪೂಜೆ ಸಲ್ಲಿಸಿದ್ದಾರೆ. ಹಾಗಾದರೆ ಪವಿತ್ರಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದು ಯಾಕೆ?
ಜೈಲಿಗೆ ಹೋಗಿ ಬಂದ ಮೇಲೆ ಪವಿತ್ರಾ ಗೌಡ ಒಂದಲ್ಲಾ ಒಂದು ಶಕ್ತಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಲೇ ಇದ್ದಾರೆ. ಜೈಲಿನಿಂದ ಹೊರ ಬಂದ ಬಳಿಕ ಪವಿತ್ರಾ ದೆಹಲಿ ತೆರಳಿ ಕೆಲ ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದಿದ್ದ ಕುಂಭಮೇಳಕ್ಕೆ ತೆರಳಿ ಅಲ್ಲಿ ಗಂಗೆಯಲ್ಲಿ ಮಿಂದೆದ್ದಿದ್ದರು.

ಬಳಿಕ ಪವಿತ್ರಾ ಗೌಡ ನಿಮಿಷಾಂಬ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ಅವರು ಬನಶಂಕರಿಗೆ ತೆರಳಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಲಕ್ಷಣವಾಗಿ ಸೀರೆ ಉಟ್ಟು, ಲವಲವಿಕೆಯಿಂದ ದೇವಸ್ಥಾನಕ್ಕೆ ಆಗಮಿಸಿದ ಪವಿತ್ರಾ ಗೌಡ ಸಂತೋಷದಿಂದ ಇದ್ದಿದ್ದು ವಿಡಿಯೋದಲ್ಲಿ ಕಂಡು ಬಂದಿದೆ. ಹಾಗಾದರೆ ಪವಿತ್ರಾ ಗೌಡ ಶಕ್ತಿ ದೇವತೆ ಮೊರೆ ಹೋಗಿದ್ದು ಯಾಕೆ?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಆಗಿರುವ ಪವಿತ್ರಾ ಗೌಡ ಅವರಿಗೆ ಹೈಕೋರ್ಟ್ ನೀಡಿದ ಜಾಮೀನು ರದ್ದು ಕೋರಿ ಪೊಲೀಸರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ ಇದರ ವಿಚಾರಣೆ ಮುಂದುವರೆದಿದೆ. ಹೀಗಾಗಿ ಸುಪ್ರೀಂ ಕೋರ್ಟ್ ವಿಚಾರಣೆಗೆ ಕರೆದಾಗಲೆಲ್ಲಾ ಪವಿತ್ರಾ ಗೌಡ ಕೋರ್ಟ್ ಗೆ ಹಾಜರಾಗುತ್ತಿದ್ದಾರೆ. ಜಾಮೀನು ಪಡೆದು ಹೊರಬಂದರೂ ಕೂಡ ಈ ಸಂಕಷ್ಟದಿಂದ ಪವಿತ್ರಾ ಪಾರಾಗಿಲ್ಲ. ತಮಗೆ ಬಂದಿರುವ ಈ ಎಲ್ಲಾ ಸಂಕಷ್ಟಗಳಿಂದ ಪಾರು ಮಾಡಲು ಪವಿತ್ರಾ ದೇವರ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ.

ಇತ್ತ ನಟ ದರ್ಶನ್ಗೂ ಕೂಡ ಈ ಸಂಕಷ್ಟ ತಪ್ಪುತ್ತಿಲ್ಲ. ಈ ಸಂಕಷ್ಟದಿಂದ ಪತಿಯನ್ನು ಕಾಪಾಡಲು ಪತ್ನಿ ವಿಜಯಲಕ್ಷ್ಮೀ ಕೂಡ ಶಕ್ತಿ ದೇವರ ಮೊರೆ ಹೋಗಿದ್ದಾರೆ. ಅಣ್ಣಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪತಿ ಆರೋಗ್ಯಕ್ಕಾಗಿ ಹಾಗೂ ಕಾನೂನು ಸಮಸ್ಯೆಗಳ ಪರಿಹಾರಕ್ಕಾಗಿ ವಿಯಜಲಕ್ಷ್ಮೀ ಬೇಡಿಕೊಂಡಿದ್ದಾರೆ.
ಅಣ್ಣಮ್ಮ ದೇವಾಲಯಕ್ಕೆ ಸೀರೆ ಮಡಿಲಕ್ಕಿ ಕೊಟ್ಟು ಹರಕೆ ತೀರಿಸಿದ್ದಾರೆ. ಒಂದೆಡೆ ವಿಜಯಲಕ್ಷ್ಮೀ ಟೆಂಬಲ್ ರನ್ ಮುಂದುವರೆಸಿದರೆ, ಅತ್ತ ಪವಿತ್ರಾ ಗೌಡ ಅವರು ಕೂಡ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥಿಸುತ್ತಿದ್ದಾರೆ. ಬನಶಂಕರಿ ದೇವಸ್ಥಾನಕ್ಕೆ ಪವಿತ್ರಾ ಗೌಡ ಭೇಟಿ ನೀಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಪರ ವಿರೋಧ ಕಾಮೆಂಟ್ಗಳು ಹೆಚ್ಚಾಗಿವೆ.
ಒಟ್ಟಿನಲ್ಲಿ ಇತ್ತ ದರ್ಶನ್ ಪತ್ನಿ ವಿಜಯಲಕ್ಷ್ಮೀ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದರೆ ಮತ್ತೊಂದೆಡೆ ಪವಿತ್ರಾ ಗೌಡ ಕೂಡ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿದೆ.











Click it and Unblock the Notifications