Pavithra Gowda: ಜಾಮೀನು ಪಡೆಯಲು ಪವಿತ್ರಾ ಗೌಡ ಮಾಸ್ಟರ್ ಪ್ಲಾನ್!
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಗೆಳತಿ ಪವಿತ್ರಾ ಗೌಡ ಎ1 ಆರೋಪಿಯಾದರೆ, ನಟ ದರ್ಶನ್ ತೂಗುದೀಪ ಎ2 ಆರೋಪಿಯಾಗಿದ್ದಾರೆ. ಒಂದು ಕಡೆ ದರ್ಶನ್ರ ಜೈಲು ಐಷಾರಾಮಿ ಜೀವನದ ಫೋಟೊ, ವಿಡಿಯೋ ವೈರಲ್ ಆಗಿದ್ದು, ಬಳ್ಳಾರಿ ಅಥವಾ ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲು ಅಧಿಕಾರಿಗಳು ಸಜ್ಜಾಗಿದ್ದರೆ, ಮತ್ತೊಂದು ಕಡೆ ಎ1 ಆರೋಪಿ ಪವಿತ್ರಾಗೌಡ ಜಾಮೀನು ಪಡೆಯಲು ಕಸರತ್ತು ಮಾಡುತ್ತಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಜಾಮೀನು ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಆಗಸ್ಟ್ 27, ಮಂಗಳವಾರ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ನಲ್ಲಿ ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಿಚಾರಣೆ ಮಾಡಬೇಕಿತ್ತು, ಆದರೆ ಕೋರ್ಟ್ ವಿಚಾರಣೆಯನ್ನು ಆಗಸ್ಟ್ 28ಕ್ಕೆ ಮುಂದೂಡಿದೆ.

ಈಗಾಗಲೇ ಪವಿತ್ರಾ ಗೌಡ ಜಾಮೀನು ಪಡೆಯಲು ಮೊದಲು ಅರ್ಜಿ ಸಲ್ಲಿಸಿದ್ದರು, ಆದರೆ ಅವರ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಇದೀಗ ಮತ್ತೆ ಜಾಮೀನು ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಲಾಗಿದೆ. ಬುಧವಾರ ಮಧ್ಯಾಹ್ನ 2.45ಕ್ಕೆ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ.
ಜಾಮೀನು ಪಡೆಯಲು ಮಾಸ್ಟರ್ ಪ್ಲಾನ್!
ಇನ್ನು ಜಾಮಿನು ಪಡೆಯಲು ಪವಿತ್ರಾ ಗೌಡ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಮಹಿಳೆ ಎನ್ನುವುದನ್ನು ಮುಂದಿಟ್ಟುಕೊಂಡು, ಅವರು ಪ್ರಕರಣದಿಂದ ಪಾರಾಗಲು ಪ್ರಯತ್ನ ಮಾಡುತ್ತಿದ್ದಾರೆ. ಪವಿತ್ರಾ ಗೌಡ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸುತ್ತಿದ್ದಾರೆ. ಮಹಿಳೆ ಆಗಿರುವ ಕಾರಣ ಪವಿತ್ರಾ ಗೌಡರಿಗೆ ಜಾಮೀನು ಕೊಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಉಲ್ಲಂಘಿಸಿ ವಾದ ಮಾಡಿದ್ದು, ರೇಣುಕಾಸ್ವಾಮಿ ಕಪಾಳಕ್ಕೆ ಪವಿತ್ರಾ ಗೌಡ ಹೊಡೆದಿದ್ದಾರೆ ಎಂದು ಆರೋಪ ಮಾಡಲಾಗಿದೆ. ಕಪಾಳಕ್ಕೆ ಹೊಡೆದ ಮಾತ್ರಕ್ಕೆ ಕೊಲೆಯ ಸಂಚಿನ ಭಾಗವಾಗುವುದಿಲ್ಲ ಎಂದು ವಕೀಲರು ಹೇಳಿದ್ದಾರೆ.
ಸಂಚು ಮಾಡಿ ಕೊಲೆ ಮಾಡಿದ್ದಾರಾ ಅಥವಾ ಆಕಸ್ಮಿಕವಾಗಿ ಮೃತಪಟ್ಟಿದ್ದಾರ ಎನ್ನುವುದು ಇನ್ನೂ ತಿಳಿಯಬೇಕಿದೆ. ತನಿಖೆ ಸಂಫೂರ್ಣವಾಗಿ ಮುಕ್ತಾಯವಾಗಿದ್ದು, ಮಹಿಳೆ ಎನ್ನುವುದನ್ನು ಪರಿಗಣಿಸಿ ಪವಿತ್ರಾ ಗೌಡ ಅವರಿಗೆ ಜಾಮೀನು ಕೊಡಬೇಕು ಎಂದು ಕೇಳಿದ್ದಾರೆ. ಬುಧವಾರ ಮತ್ತೆ ವಿಚಾರಣೆ ನಡೆಯಲಿದ್ದು ವಕೀಲರು ಮತ್ತೊಮ್ಮೆ ವಾದ ಮಂಡಿಸಲಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಬಹುತೇಕ ತನಿಖೆಯನ್ನು ಮುಗಿಸಿದ್ದು, ಚಾರ್ಜ್ಶೀಟ್ ಸಲ್ಲಿಸಲು ಸಿದ್ಧತೆ ಮಾಡುತ್ತಿದ್ದಾರೆ. ಸೆಪ್ಟೆಂಬರ್ 2ನೇ ವಾರದಲ್ಲಿ ಚಾರ್ಜ್ಶೀಟ್ ಸಲ್ಲಿಕೆ ಮಾಡುವ ಸಾಧ್ಯತೆ ಇದೆ.












Click it and Unblock the Notifications