ದರ್ಶನ್ 'ಕಾಟೇರ' ನೋಡಿ 5 ಸ್ಟಾರ್ ರೇಟಿಂಗ್ ಕೊಟ್ಟ ಎಂಪಿ!
ಬೆಂಗಳೂರು, ಜನವರಿ 03: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಚಿತ್ರ ಯಶಸ್ಸುಗಳಿಸಿದೆ. ಚಿತ್ರವನ್ನು ನೋಡಿದ ದರ್ಶನ್ ಅಭಿಮಾನಿಗಳು ಸಂತಸಗೊಂಡಿದ್ದು, ಡಿಸೆಂಬರ್ 29ರಂದು ಬಿಡುಗಡೆಯಾದ ಚಿತ್ರ ಬಾಕ್ಸ್ ಆಫೀಸ್ನಲ್ಲಿಯೂ ಸದ್ದು ಮಾಡುವ ಮೂಲಕ ನಿರ್ಮಾಪಕರ ಮೊಗದಲ್ಲಿಯೂ ನಗು ಮೂಡಿಸಿದೆ.
'ಕಾಟೇರ' ಯಾವುದೇ ಪ್ಯಾನ್ ಇಂಡಿಯಾ ಚಿತ್ರವಲ್ಲ. ತೆರೆ ಕಂಡಿರುವುದು ಕನ್ನಡದಲ್ಲಿ ಮಾತ್ರ. ಚಿತ್ರದ ಕಥೆ, ನಟ ದರ್ಶನ್ ಅಭಿನಯವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಮೂರನೇ ದಿನದ ಕಲೆಕ್ಷನ್ನಲ್ಲಿಯೂ 'ಕಾಟೇರ' ದಾಖಲೆಗಳನ್ನು ಮಾಡುತ್ತಾ ಸಾಗುತ್ತಿದೆ.

ಚಿತ್ರತಂಡ 'ಕಾಟೇರ' ಯಶಸ್ಸಿನ ಬಗ್ಗೆ ಈಗಾಗಲೇ ಪ್ರತಿಕಾಗೋಷ್ಠಿಯನ್ನು ನಡೆಸಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರವನ್ನು ಗೆಲ್ಲಿಸಿದ ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳಿದ್ದು, ತಮ್ಮದೇ ಶೈಲಿಯಲ್ಲಿ ಎಲ್ಲರಿಗೂ 2024ನೇ ಕ್ಯಾಲೆಂಡರ್ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ.
5 ಸ್ಟಾರ್ ರೇಟಿಂಗ್ ನೀಡಿದ ಎಂಪಿ; ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು, ಕನ್ನಡ ಸಿನಿಮಾ ಬಗ್ಗೆ ಆಸಕ್ತಿ ಹೊಂದಿರುವವರು 'ಕಾಟೇರ' ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯ ಜಿ. ಸಿ. ಚಂದ್ರಶೇಖರ್ ಸಹ ಸಿನಿಮಾ ನೋಡಿ ಬಂದಿದ್ದಾರೆ. ಕಥೆ ಮತ್ತು ನಟನೆ ಮೆಚ್ಚಿಕೊಂಡಿದ್ದು, 5 ಸ್ಟಾರ್ ರೇಟಿಂಗ್ ಕೊಟ್ಟಿದ್ದಾರೆ.
ಜಿ. ಸಿ. ಚಂದ್ರಶೇಖರ್ ತಮ್ಮ ಫೇಸ್ಬುಕ್ ಪೇಜ್ನಲ್ಲಿ ಈ ಕುರಿತ ಪೋಸ್ಟ್ ಹಾಕಿದ್ದಾರೆ. 'ಈಗಷ್ಟೇ ಕಾಟೇರ ಸಿನಿಮಾ ನೋಡಿ ಬಂದೆ, ಇತ್ತೀಚಿನ ದಿನಗಳಲ್ಲಿ ಮೂಡಿ ಬಂದ ನೊಂದವರ,ಶೋಷಿತರ ಪರ ಸಾಮಾಜಿಕ ಕಳಕಳಿಯಿರುವ ಅತ್ಯುತ್ತಮ ಚಿತ್ರ' ಎಂದು 'ಕಾಟೇರ' ಕಥೆಯ ವಿಮರ್ಶೆ ಮಾಡಿದ್ದಾರೆ.
'ನಾಯಕ ನಟ ದರ್ಶನ್ ನಟನೆ ಅಮೋಘ ಇವರಿಗೆ ಮತ್ತಷ್ಟು ಯಶಸ್ಸು ಸಿಗಲಿ, ಚಿತ್ರದ ಪ್ರತಿಯೊಂದು ಪಾತ್ರಗಳು ಜೀವಿಸಿವೆ,ಒಟ್ಟಿನಲ್ಲಿ ನೀವು ಯಾವುದೇ ನಟನ ಫ್ಯಾನ್ ಆದ್ರೂ ನೋಡಲೇ ಬೇಕಾದ ಸಿನೆಮಾ, ನನ್ನ ಕಡೆಯಿಂದ' ಎಂದು ಚಿತ್ರಕ್ಕೆ 5 ಸ್ಟಾರ್ ರೇಟಿಂಗ್ ನೀಡಿದ್ದಾರೆ.
ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಜಿ. ಸಿ. ಚಂದ್ರಶೇಖರ್ ಕನ್ನಡ ನಾಡು, ನುಡಿ, ನೆಲ, ಜಲ ಭಾಷೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಅವರು ಕರುನಾಡಿನ ಇತಿಹಾಸದ ಬಗ್ಗೆ ಹಲವಾರು ಪೋಸ್ಟ್ಗಳನ್ನು ಹಾಕುತ್ತಿರುತ್ತಾರೆ. ರಾಜಕೀಯ ಜಂಜಾಟಗಳ ನಡುವೆಯೇ ಅವರು ಬಿಡುವು ಮಾಡಿಕೊಂಡು 'ಕಾಟೇರ' ಸಿನಿಮಾ ವೀಕ್ಷಣೆ ಮಾಡಿ, ಎಲ್ಲರೂ ಸಿನಿಮಾ ನೋಡುವಂತೆ ಪೋಸ್ಟ್ ಹಾಕಿ ಕನ್ನಡ ಚಿತ್ರವನ್ನು ಪ್ರೋತ್ಸಾಹಿಸಿದ್ದಾರೆ.
ದರ್ಶನ್ ನಟನೆಯ 'ಕಾಟೇರ' ಚಿತ್ರವನ್ನು ರಾಕ್ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ತರುಣ್ ಕಿಶೋರ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ವಿ. ಹರಿಕೃಷ್ಣ ಸಂಗೀತ ನಿರ್ದೇಶಕರು. ಡಿಸೆಂಬರ್ 29ರಂದು ತೆರೆ ಕಂಡ ಚಿತ್ರ ಕನ್ನಡ ಸಿನಿಮಾ ಅಭಿಮಾನಿಗಳನ್ನು ಮತ್ತೆ ಥಿಯೇಟರ್ಗೆ ಕರೆದುಕೊಂಡು ಬಂದಿದೆ.
'ಕಾಟೇರ' ಚಿತ್ರದಲ್ಲಿ ನಟ ದರ್ಶನ್ಗೆ ನಟಿ ಮಾಲಶ್ರೀ ಪುತ್ರಿ ಆರಾಧನಾ ರಾಮ್ ನಾಯಕಿ. ಇದು ಅವರ ಮೊದಲ ಸಿನಿಮಾ. ಶೃತಿ, ಕುಮಾರ್ ಗೋವಿಂದ್, ಬಿರಾದಾರ್, ಅವಿನಾಶ್, ಪದ್ಮಾ ವಾಸಂತಿ ಸೇರಿದಂತೆ ಹಲವಾರು ಹಿರಿಯ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.
ಸಾಮಾಜಿಕ ಸಂದೇಶದ ಜೊತೆಗೆ ಕಮರ್ಷಿಯಲ್ ಅಂಶಗಳು ತುಂಬಿರುವ 'ಕಾಟೇರ' ದರ್ಶನ್ ಅಭಿಮಾನಿಗಳು ಸೇರಿದಂತೆ ಎಲ್ಲರಿಗೂ ಇಷ್ಟವಾಗಿದೆ. ಜಾತಿ ಪದ್ಧತಿ, ರೈತರ ಸಮಸ್ಯೆಗಳ ಬಗ್ಗೆ ಚಿತ್ರದಲ್ಲಿ ಪ್ರಸ್ತಾಪಿಸಲಾಗಿದೆ. ಎರಡು ಶೇಡ್ಗಳಲ್ಲಿ ದರ್ಶನ್ ನಟನೆ ಎಲ್ಲರಿಗೂ ಇಷ್ಟವಾಗಿದೆ.
ದರ್ಶನ್ ನಟನೆಯ 'ಕಾಟೇರ' ಯಾವುದೇ ಪ್ಯಾನ್ ಇಂಡಿಯಾ ಚಿತ್ರವಲ್ಲ. ಆದರೆ ತೆರೆ ಕಂಡ ಮೂರು ದಿನಗಳಲ್ಲಿಯೇ 50 ಕೋಟಿಗೂ ಅಧಿಕ ಕೆಲೆಕ್ಷನ್ ಮಾಡಿದೆ ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ. ಚಿತ್ರದ ಯಶಸ್ಸಿನ ಬಳಿಕ ಬುಧವಾರ ಸೆಲೆಬ್ರಿಟಿ ಶೋ ಆಯೋಜನೆ ಮಾಡಲಾಗಿದೆ.
ನಟರಾದ ಶ್ರೀಮುರಳಿ, ಡಾಲಿ ಧನಂಜಯ್, ಅಭಿಷೇಕ್ ಅಂಬರೀಶ್, ವಿನೋದ್ ಪ್ರಭಾಕರ್, ನಟಿ ಸಪ್ತಮಿ ಗೌಡ ಸೇರಿದಂತೆ ಸ್ಯಾಂಡಲ್ವುಡ್ನ ಹಲವು ಕಲಾವಿದರನ್ನು ಆಹ್ವಾನಿಸಲಾಗಿದೆ. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ಗೆ ಸಹ ಆಹ್ವಾನ ಕೊಡಲಾಗಿದೆ. ಆದರೆ ಅವರು ಚೆನ್ನೈನಲ್ಲಿ ಕ್ಯಾಪ್ಟನ್ ಮಿಲ್ಲರ್ ಚಿತ್ರದ ಇವೆಂಟ್ನಲ್ಲಿ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಇದೆ. ಯುವರಾಜ್ ಕುಮಾರ್, ವಿನಯ್ ರಾಜ್ಕುಮಾರ್ ಆಗಮಿಸುವ ನಿರೀಕ್ಷೆ ಇದೆ.












Click it and Unblock the Notifications