ದರ್ಶನ್ ಸಿನಿಮಾ ಹಾಡಿನ ರೀಲ್ಸ್ ಹಂಚಿಕೊಂಡ ಜಮೀರ್ ಖಾನ್; ಬಾಸ್ನ ಬಿಡಿಸಿ ಎಂದ ಫ್ಯಾನ್ಸ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪೊಲೀಸರ ಅತಿಥಿಯಾಗಿದ್ದಾರೆ. ಎ2 ಆರೋಪಿಯಾಗಿರುವ ದರ್ಶನ್ ಸದ್ಯದಲ್ಲೇ ಜೈಲಿನಿಂದ ಹೊರಬರುವುದು ಅಸಾಧ್ಯವಾಗಿದೆ.
ದರ್ಶನ್ಗೆ ಅಭಿಮಾನಿಗಳು ಮಾತ್ರವಲ್ಲ ಹಲವು ರಾಜಕೀಯ ನಾಯಕರ ನಂಟು ಇದೆ. ಜಮೀರ್ ಅಹ್ಮದ್ ಖಾನ್ ದರ್ಶನ್ರ ತೀರಾ ಆಪ್ತ ವಲಯದಲ್ಲಿರುವ ರಾಜಕಾರಣಿ. ದರ್ಶನ್ ಬಂಧಿಸದಂತೆ ಹಲವು ರಾಜಕಾರಣಿಗಳು ಪೊಲೀಸರ ಮೇಲೆ ಒತ್ತಡ ಹಾಕಿದ್ದರು ಎನ್ನಲಾಗಿದ್ದರೂ, ಯಾವ ರಾಜಕಾರಣಿ ಎಂದು ಬಹಿರಂಗವಾಗಿಲ್ಲ.

ದರ್ಶನ್ ಬಂಧನದ ಬಗ್ಗೆ ಯಾವ ಪ್ರತಿಕ್ರಿಯೆಯನ್ನು ನೀಡದ ಜಮೀರ್ ಅಹ್ಮದ್ ಖಾನ್ ಸೋಮವಾರ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ದರ್ಶನ್ ಅಭಿನಯಿಸಿದ್ದ ಸಿನಿಮಾ ಹಾಡಿನ ರೀಲ್ಸ್ ಹಂಚಿಕೊಂಡಿದ್ದಾರೆ.
ಲಾಲಿಹಾಡು ಸಿನಿಮಾ ರೀಲ್
ದರ್ಶನ್ ಅಭಿನಯದ ಲಾಲಿ ಹಾಡು ಸಿನಿಮಾದ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಬೆಕ್ಕಿಗೆ ಆಹಾರ ನೀಡುತ್ತಿರುವ ತಮ್ಮ ವಿಡಿಯೋಗೆ ದರ್ಶನ್ ಸಿನಿಮಾ ಹಾಡನ್ನು ಸೇರಿಸಿದ್ದಾರೆ. ಈ ಮೂಲಕ ಪರೋಕ್ಷವಾಗಿ ತಾವು ದರ್ಶನ್ರನ್ನು ಮರೆತಿಲ್ಲ ಎನ್ನುವ ಸಂದೇಶ ನೀಡಿದ್ದಾರೆ.
ಬಕ್ರೀದ್ ಹಬ್ಬದ ದಿನ ಜಮೀರ್ ಅಹ್ಮದ್ ಖಾನ್ ಈ ವಿಡಿಯೋ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ರಂಜಾನ್ ಮತ್ತು ಬಕ್ರೀದ್ ಹಬ್ಬದಂದು ದರ್ಶನ್ ತಪ್ಪದೇ ಜಮೀರ್ ಖಾನ್ ಮನೆಗೆ ಊಟಕ್ಕೆ ಹೋಗುತ್ತಿದ್ದರು. ಜಮೀರ್ ಪುತ್ರ ಝೈದ್ ಖಾನ್ ಮೊದಲ ಸಿನಿಮಾ ಬನಾರಸ್ ಬಿಡುಗಡೆಯಾದಾಗ ದರ್ಶನ್ ಪ್ರಚಾರ ಮಾಡಿದ್ದರು. ಇಬ್ಬರ ನಡುವೆ ಉತ್ತಮ ಸ್ನೇಹವಿದೆ.
ಜಮೀರ್ ಅಹ್ಮದ್ ಈ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ ದರ್ಶನ್ ಅಭಿಮಾನಿಗಳು ಸಚಿವರಿಗೆ ವಿಶೇಷ ಮನವಿ ಮಾಡಿದ್ದಾರೆ. ನಮ್ಮ ಬಾಸ್ ಬಿಟ್ಟು ಹಬ್ಬ ಮಾಡುತ್ತಿದ್ದೀರಾ, ದಯವಿಟ್ಟು ಸಹಾಯ ಮಾಡಿ ಅವರನ್ನು ಹೊರಗೆ ಕರೆತನ್ನಿ ಎಂದು ಮನವಿ ಮಾಡಿಕೊಂಡಿದ್ದಾರೆ.
"ದಯವಿಟ್ಟು ನಮ್ಮ ಡಿ ಬಾಸ್ಗೆ ಸಹಾಯ ಮಾಡಿ" ಎಂದು ಒಬ್ಬ ಅಭಿಮಾನಿ ಮನವಿ ಮಾಡಿದ್ದರೆ. ಹಲವು ಮಂದಿ ನಿಮ್ಮ ಸಹಾಯ ಈಗ ನಮ್ಮ ಬಾಸ್ಗೆ ಬೇಕಿದೆ ಎಂದು ಕೇಳಿಕೊಂಡಿದ್ದಾರೆ.
ರಾಜಕಾರಣಿಗಳ ಒತ್ತಡಕ್ಕೆ ವಿರೋಧ
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಹಾಗೂ ಹಲವು ಸಹಚರರು ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ತನಿಖೆ ತೀವ್ರಗೊಳ್ಳುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ ಸೇರಿದಂತೆ ಪ್ರಮುಖ ರಾಜಕೀಯ ವ್ಯಕ್ತಿಗಳು ನಡೆಯುತ್ತಿರುವ ಪ್ರಕರಣವನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿದ್ದಾರೆ.
ರಾಜಕಾರಣಿಗಳ ಒತ್ತಡದ ಬಗ್ಗೆ ಸುದ್ದಿ ಹರಿದಾಡುತ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಒತ್ತಡದ ನಡುವೆಯೂ ದಿಟ್ಟತನ ತೋರಿ ದರ್ಶನ್ ಮತ್ತು ಗ್ಯಾಂಗ್ನ ಹೆಡೆಮುರಿ ಕಟ್ಟಿದ್ದ ಕರ್ನಾಟಕ ದಕ್ಷ ಪೊಲೀಸರ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದರ್ಶನ್ ವಿರುದ್ಧ ಪೊಲೀಸರು ಪ್ರಬಲ ಸಾಕ್ಷಿಗಳನ್ನು ಕಲೆಹಾಕಿದ್ದಾರೆ ಎನ್ನಲಾಗಿದೆ. ಪ್ರಕರಣದಿಂದ ದರ್ಶನ್ ಹೊರಬರುವುದು ತುಂಬಾ ಕಷ್ಟ ಎನ್ನಲಾಗಿದ್ದು, ಜಾಮೀನು ಸಿಗಲು ಕನಿಷ್ಠ 6 ತಿಂಗಳು ಬೇಕಾಗುತ್ತದೆ ಎಂದು ಕಾನೂನು ತಜ್ಞರು ಹೇಳಿದ್ದಾರೆ.












Click it and Unblock the Notifications