ಜೈಲಿನಿಂದ ರಿಲೀಸ್ ಆದ ಮಡೆನೂರು ಮನು: ಶಿವಣ್ಣ-ದರ್ಶನ್ ಸಾವಿನ ಆಡಿಯೋ ಬಗ್ಗೆ ಹೇಳಿದ್ದೇನು?
ಕಿರುತೆರೆ ನಟಿ ಮೇಲೆ ಅತ್ಯಾ*ಚಾರ ಕೇಸ್ನಲ್ಲಿ ಜೈಲು ಸೇರಿದ್ದ ಕಾಮಿಡಿ ಕಿಲಾಡಿಗಳು ವಿನ್ನರ್ ಮಡೆನೂರು ಮನುಗೆ ಜಾಮೀನು ಸಿಕ್ಕ ಹಿನ್ನೆಲೆ ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಆಗಿದ್ದಾರೆ. ಹೊರ ಬಂದ ನಂತರ ಅವರು ತಮ್ಮ ಮೇಲಿನ ಆರೋಪಗಳು, ನಟರ ಸಾವಿನ ಕುರಿತಾದ ವೈರಲ್ ಆಡಿಯೋ ಬಗ್ಗೆ ಸ್ಫೋಟಕ ವಿಚಾರಗಳನ್ನು ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ. ನಿಜ ಹೇಳಬೇಕು ಅಂದ್ರೆ ಒಂದು ರೀತಿ ಸ್ಮಶಾನ, ಬೂದಿಲಿ ಮೂಳೆಯೂ ಸಿಗಬಾರದು ಅನ್ನೋ ಪರಿಸ್ಥಿತಿಯಲ್ಲಿದ್ದೇನೆ. ಈ ಪರಿಸ್ಥಿತಿ ಯಾವ ಶತ್ರುಗಳಿಗೂ ಬರಬಾರದು. ನನ್ನ ಮೇಲೆ ಯಾರೆಲ್ಲ ಈ ರೀತಿ ಮಾಡಿದ್ದಾರೋ ಅವರೆಲ್ಲರಿಗೂ ಒಳ್ಳೆಯದಾಗಲಿ ಎಂದಿದ್ದಾರೆ.
ನಾನು ಯಾರಿಗೂ ಕೇಡು ಬಯಸುವುದಿಲ್ಲ, ನಾನು ಯಾರ ಸಹವಾಸಕ್ಕೂ ಹೋದವನಲ್ಲ. ನಾನಾಯ್ತು, ನನ್ನ ಕೆಲಸ ಆಯ್ತು ಎಂದು ಇದ್ದೆ. ಆದರೆ, 32 ವರ್ಷಕ್ಕೆ ಒಂದೊಳ್ಳೆ ಬುದ್ಧಿ ಕಲಿಸಿದ್ದಾರೆ. ನೀನು ಹೀಗಲ್ಲ, ಹುಡುಗಾಟ ಆಡೋದಲ್ಲ, ನೀನು ಚೈಲ್ಡ್ ತರ ಆಡಬೇಡ, ನೀನು ಬೇರೆ ಲೆವೆಲ್ ಅಂತ ಬುದ್ದಿ ಕಲಿಸಿದ್ದಾರೆ ಅಷ್ಟೇ ಎಂದು ಮಡೆನೂರು ಮನು ಹೇಳಿದ್ದಾರೆ.

ನನ್ನ ಯಾರೆಲ್ಲ ಬೈದಿದ್ದಾರೋ ಅವರೆಲ್ಲರೂ ನಮ್ಮ ಕರ್ನಾಟಕದವರೇ, ತಂದೆ ತಾಯಿ ಸ್ಥಾನದಲ್ಲಿ ನಿಂತು ಬುದ್ಧಿ ಹೇಳಿದ್ದಾರೆ, ಅದನ್ನ ಕೇಳ್ಕೊಂಡು ಮುಂದೆ ಹೋಗಬೇಕಷ್ಟೇ ಎಂದಿದ್ದಾರೆ. ಇನ್ನು ನನ್ನ ಮೇಲೆ ಏನು ದೂರು ಕೊಟ್ಟರು? ಯಾರು ದೂರು ಕೊಡಿಸಿದರು? ಎನ್ನುವುದು ಗೊತ್ತಿಲ್ಲ. ಈಗ ಈ ಕೇಸ್ ವಿಚಾರಣೆ ನಡೆಯುತ್ತಿದೆ. ಇನ್ನೇನು ಚಾರ್ಜ್ಶೀಟ್ ಕೂಡ ಬರುತ್ತೆ. ಕೋರ್ಟ್ ಏನು ಹೇಳುತ್ತದೆಯೋ ಅದಕ್ಕೆ ನಾನು ತಲೆಬಾಗುತ್ತೇನೆ ಎಂದು ಮನು ಹೇಳಿದ್ದಾರೆ.
ಆಡಿಯೋ ಕೇಳಿ ಮೈಯೆಲ್ಲಾ ಉರೀತು
ಮಡೆನೂರು ಮನು ಜೈಲು ಸೇರಿದ ನಂತರ ಆಡಿಯೋವೊಂದು ವೈರಲ್ ಆಗಿತ್ತು. ಇದರಲ್ಲಿ ಸ್ಯಾಂಡಲ್ವುಡ್ ನಟರಾದ ಶಿವರಾಜ್ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಧ್ರುವ ಸರ್ಜಾ ಅವರ ಬಗ್ಗೆ ಕೆಟ್ಟದಾಗಿ, ಅವರ ಸಾವಿನ ಬಗ್ಗೆ ಮನು ಮಾತನಾಡಿರುವ ಆಡಿಯೋ ಎಂಬ ಆರೋಪ ಕೇಳಿಬಂದಿತ್ತು. ಜೈಲಿನಿಂದ ಹೊರಬಂದ ಬಳಿಕ ಮನು ಇದರ ಬಗ್ಗೆಯೂ ಮಾತನಾಡಿದ್ದಾರೆ. ಆಡಿಯೋ ಕೇಳಿ ನನ್ನ ಮೈಯೆಲ್ಲ ಉರೀತು, ಈ ತರ ಎಲ್ಲ ಜನ ಇದ್ದಾರಾ ಅನಿಸಿತು. ಆದರೆ ಆ ಆಡಿಯೋ ನಂದಲ್ಲ, ನಂದಲ್ಲ, ನಂದಲ್ಲ ಎಂದು ಮನು ಸ್ಪಷ್ಟನೆ ನೀಡಿದ್ದಾರೆ.
ಶಿವಣ್ಣ, ದರ್ಶನ್ ಮತ್ತು ಧ್ರುವ ಸರ್ಜಾ ಬಗ್ಗೆ ಹರಿದಾಡಿ ಆಡಿಯೋ ನನ್ನದಲ್ಲ. ನಾನು ಶಿವಣ್ಣ, ದರ್ಶನ್ ಮತ್ತು ಧ್ರುವ ಅವರ ಬಗ್ಗೆ ಮಾತನಾಡಿಲ್ಲ. ಮೊದಲು ನಾನು ಶಿವಣ್ಣನ ಭೇಟಿಯಾಗಿ ಸತ್ಯವನ್ನ ವಿವರಿಸಿ ಕ್ಷಮೆ ಕೇಳುತ್ತೇನೆ. ನನ್ನ ಮೂರು ವರ್ಷಗಳ ಶ್ರಮವನ್ನು ಹಾಳು ಮಾಡಲು ಐದಾರು ಮಂದಿ ಪಕ್ಕಾ ಪ್ಲಾನ್ ಮಾಡಿ, ನನ್ನ ಈ ರೀತಿ ಮುಗಿಸಿದ್ದಾರೆ ಎಂದೂ ಮನು ಹೇಳಿದ್ದಾರೆ.
ಈಗ ನಾನೇನೆ ಹೇಳಿದ್ರು ಪ್ರೂವ್ ಮಾಡಿಕೊಳ್ಳೋಕೆ ಹೇಳ್ತಾನೆ ಅಂದುಕೊಳ್ಳಬಹುದು. ನನ್ನ ಮೇಲೆ ಒಂದು ಕಲ್ಲಲ್ಲ, ಒಂದು ಇಪ್ಪತ್ತು ಲಾರಿ ಸೈಜಿನಲ್ಲಿ ಕಲ್ಲುಗಳನ್ನ ತುಂಬಿಬಿಟ್ಟಿದ್ದಾರೆ. ಇದರಿಂದ ಯಾವಾಗ ಮೇಲಕ್ಕೆ ಏಳುತ್ತೇನೋ ಗೊತ್ತಿಲ್ಲ, ತುಂಬಾ ಕಷ್ಟವಾಗುತ್ತೆ ಎಂದಿದ್ದಾರೆ. ಸಿನಿಮಾ ಅನ್ನೋದು ನನ್ನ ಕನಸು, ಅದನ್ನು ಹಾಳು ಮಾಡಿದ್ದಾರೆ. ಸಿನಿಮಾ ಅನ್ನೋ ಹೊಸ ಬೈಕ್, ನಾಳೆ ಡೆಲಿವರಿ ಎನ್ನುವಷ್ಟರಲ್ಲಿ ದೊಡ್ಡ ಕಾರಿನಿಂದ ಹತ್ತಿಸಿದ್ದಾರೆ. ಅದರಿಂದ ಮೇಲಕ್ಕೆ ಏಳೋಣ ಎನ್ನುವಷ್ಟರಲ್ಲಿ ಆ ಆಡಿಯೋ ಎನ್ನುವ ಲಾರಿ ತಂದು ಮಟಾಶ್ ಮಾಡಿದ್ದಾರೆ ಎಂದು ಮನು ಹೇಳಿದ್ದಾರೆ.
ಈಗ ಕರ್ನಾಟಕದ ಜನರು ನನ್ನನ್ನ ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ, ಏನೇ ಅಂದ್ರೂ ಅನಿಸಿಕೊಳ್ಳಬೇಕು. ಅರ್ಧ ಜನ ನನಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನಬಹುದು. ಮಿಕ್ಕವರು ಇವನಿಗೆ ಇಷ್ಟೊಂದು ದುರಹಂಕಾರನಾ? ಎಂದು ಬೈದುಕೊಂಡಿರಬಹುದು. ಕೆಲವರು ಈ ನನ್ಮಗನಿಗೆ ಇದು ಆಗಬೇಕಿತ್ತು ಅನ್ನೋರೂ ಇದ್ದಾರೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದಿದ್ದಾರೆ.












Click it and Unblock the Notifications