‘ಡಿ-ಬಾಸ್’ ದರ್ಶನ್ ವಿರುದ್ಧ ಬೆಂಕಿ ಉಗುಳಿದ ಒಕ್ಕಲಿಗರು!
ನಿರ್ಮಾಪಕ ಉಮಾಪತಿ & ನಟ ದರ್ಶನ್ ನಡುವೆ ಶುರುವಾಗಿರುವ ಕಿತ್ತಾಟವು ಕರ್ನಾಟಕದ ಮೂಲೆ ಮೂಲೆಯಲ್ಲೂ ಇದೀಗ ಸಂಚಲನ ಸೃಷ್ಟಿ ಮಾಡಿದೆ. ನಟ ದರ್ಶನ್ ಅವರು ನಿನ್ನೆ ನಿರ್ಮಾಪಕ ಉಮಾಪತಿ ಅವರ ವಿರುದ್ಧ ಮಾತನಾಡುತ್ತಾ, 'ತಗಡು' ಎಂಬ ಪದವನ್ನೂ ಬಳಕೆ ಮಾಡಿದ್ದರು. ಇದೀಗ ಈ ಬಗ್ಗೆ ಕರ್ನಾಟಕ ಒಕ್ಕಲಿಗರ ಸಂಘ ಆಕ್ರೋಶ ಹೊರಹಾಕಿ ಸುದ್ದಿಗೋಷ್ಠಿ ನಡೆಸಲು ಮುಂದಾಗಿದೆ.
ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಇದೀಗ ಕರ್ನಾಟಕ ಒಕ್ಕಲಿಗರ ಸಂಘದ ಪ್ರಮುಖ ಹುದ್ದೆಯಲ್ಲಿ ಇದ್ದಾರೆ. ಉಮಾಪತಿ ಅವರು ಕರ್ನಾಟಕ ಒಕ್ಕಲಿಗರ ಸಂಘದ ನಿರ್ದೇಶಕರೂ ಹೌದು. ಹೀಗಿದ್ದಾಗಲೇ ಉಮಾಪತಿ ಶ್ರೀನಿವಾಸ್ ಗೌಡ ವಿರುದ್ಧ ನಟ ದರ್ಶನ್ ಏಕವಚನದ ಮಾತುಗಳನ್ನ ಆಡಿ, 'ತಗಡು' ಅಂತಾ ಬೈದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಕರ್ನಾಟಕ ಒಕ್ಕಲಿಗರು ಇದೀಗ ರೊಚ್ಚಿಗೆದ್ದಿದ್ದಾರೆ. ಅದರಲ್ಲೂ ನಟ ದರ್ಶನ್ ವಿರುದ್ಧ ಇದೀಗ ಸುದ್ದಿಗೋಷ್ಠಿ ಕೂಡ ಕರೆಯಲಾಗಿದೆ.

'ತಗಡು' ಎಂದ ದರ್ಶನ್ಗೆ ಸಂಕಷ್ಟ?
ಹೌದು ನಟ ದರ್ಶನ್ ತಮ್ಮ 'ಕಾಟೇರ' ಚಿತ್ರ, 50ನೇ ದಿನ ಸಂಭ್ರಮಾಚರಣೆ ವೇಳೆ 'ರಾಬರ್ಟ್' ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಬಗ್ಗೆ ಗರಂ ಆಗಿ ಮಾತನಾಡಿದ್ದರು. ಇದೇ ವೇಳೆ, ನಟ ದರ್ಶನ್ ಅವರು ಆಕ್ಷೇಪಾರ್ಹ ಮಾತುಗಳನ್ನೂ ಆಡಿದ್ದಾರೆ ಅನ್ನೋ ಆರೋಪ ಕೂಡ ಕೇಳಿಬಂದಿದೆ. ನಿರ್ಮಾಪಕ ಉಮಾಪತಿ ವಿರುದ್ಧ ನಟ ದರ್ಶನ್ 'ತಗಡು' ಎಂಬ ಪದ ಬಳಕೆ ಮಾಡಿದ್ದಕ್ಕೆ ಆಕ್ರೋಶ ಮೊಳಗಿದೆ. ಉಮಾಪತಿ ಶ್ರೀನಿವಾಸ್ ಗೌಡ ಅವರ ಬೆಂಬಲಿಗರು ದರ್ಶನ್ ಅವರ ಹೇಳಿಕೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದೇ ವಿಚಾರವಾಗಿ ಸುದ್ದಿಗೋಷ್ಠಿಯ ನಡೆಸಲು ರಾಜ್ಯ ಒಕ್ಕಲಿಗರ ಸಂಘ ಮುಂದಾಗಿದೆ.
ಒಕ್ಕಲಿಗರ ಸಂಘ VS ನಟ ದರ್ಶನ್?
ಇಂದು ದರ್ಶನ್ ಅವರ ಹೇಳಿಕೆ ಬಗ್ಗೆ ಒಕ್ಕಲಿಗರ ಸಂಘದ ಪ್ರಮುಖರು ಮಾತನಾಡಲಿದ್ದು, ಈಗ ಭಾರಿ ಕುತೂಹಲ ಕೆರಳಿಸಿದೆ. ರಾಜ್ಯ ಒಕ್ಕಲಿಗರ ಸಂಘ ಕೆಂಪೇಗೌಡ ಭವನದ 2ನೇ ಮಹಡಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಯಲಿದೆ. ಇನ್ನು ಒಕ್ಕಲಿಗರ ಸಂಘದ ಪ್ರಕಟಣೆಯಲ್ಲಿ ಈಗ ನಟ ದರ್ಶನ್ ಅವರ ಹೇಳಿಕೆ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಒಕ್ಕಲಿಗರ ಸಂಘದ ನಿರ್ದೇಶಕರು ಮತ್ತು ಸಿನಿಮಾ ನಿರ್ಮಾಪಕರೂ ಆದ ಉಮಾಪತಿ ಶ್ರೀನಿವಾಸ್ ಗೌಡ ಅವರ ಬಗ್ಗೆ ಖ್ಯಾತ ನಟ ಮಾತನಾಡಿದ ರೀತಿ ಸರಿಯಿಲ್ಲ. ಹಲವು ಚಿತ್ರಕ್ಕೆ ಬಂಡವಾಳ ಹೂಡಿ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಬಂದ ಉಮಾಪತಿ ಅವರಿಗೆ ತಗಡು ಎಂದು ಅವಹೇಳನಕಾರಿ ಮಾತನ್ನು ಮಾಧ್ಯಮದ ಮುಂದೆ ಹೇಳಿದ್ದು ಸರಿಯಲ್ಲ ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
'ಅಯ್ಯೋ ತಗಡೇ, ರಾಬರ್ಟ್ ಕಥೆ..'
ನಿರ್ಮಾಪಕ ಉಮಾಪತಿ ವಿರುದ್ಧ ಗರಂ ಆಗಿದ್ದ ದರ್ಶನ್ ನೇರ ವಾಗ್ದಾಳಿ ನಡೆಸುತ್ತಾ 'ಅಯ್ಯೋ ತಗಡೇ ರಾಬರ್ಟ್ ಕಥೆ ನಿನಗೆ ಕೊಟ್ಟಿದ್ದು ನಾವು. ಹಾಗಾದರೆ ಇಂತಹ ಒಳ್ಳೆ ಕಥೆ ಮತ್ತೆ ಯಾಕ್ ಬಿಟ್ಟೆ ನೀನು?' ಅಂತ ದರ್ಶನ್ ಕೇಳಿದ್ರು ಹೀಗೆ ಕಾಟೇರ ಕಥೆ ಬಿಟ್ಟುಕೊಟ್ಟಿದ್ದು ಯಾಕೆ? ಅಂತಾ ನಿರ್ಮಾಪಕ ಉಮಾಪತಿಗೆ ಪ್ರಶ್ನೆ ಮಾಡಿದ್ದರು ದರ್ಶನ್. ಈ ಮಾತಿನ ಜೊತೆ ಮತ್ತಷ್ಟು ವಾಗ್ದಾಳಿ ಕೂಡ ನಡೆಸಿದ್ದರು ನಟ ದರ್ಶನ್. 'ಕೊಟ್ಟಿದ್ದು, ಮಾಡಿದ್ದನ್ನ ಹೇಳಬಾರದು. ಯಾಕೆ ಪದೇ ಪದೇ ನಮ್ಮ ಹತ್ರಾನೆ..' ಹಿಂಗೆಲ್ಲ ಮಾತು ಆಡಿದ್ದರು ಚಾಲೆಂಜಿಂಗ್ ಸ್ಟಾರ್. ದರ್ಶನ್ ಅವರ ಈ ಹೇಳಿಕೆ ಈಗ ಕಿಚ್ಚು ಹೊತ್ತಿಸಿದೆ.

ಒಟ್ನಲ್ಲಿ ಇನ್ನೇನು ಒಕ್ಕಲಿಗರ ಸಂಘದ ಸುದ್ದಿಗೋಷ್ಠಿ ನಡೆಯಲಿದ್ದು, ಮುಂದೆ ಇದೆಲ್ಲವೂ ಯಾವ ಹಂತಕ್ಕೆ ಬಂದು ತಲುಪುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ. ಯಾಕಂದ್ರೆ ಈ ವಿಚಾರ ಈಗಾಗಲೇ ಕಿಚ್ಚು ಹೊತ್ತಿಸಿದೆ. ಕರ್ನಾಟಕದ ಸಿನಿಮಾ ಇಂಡಸ್ಟ್ರಿಯಲ್ಲಿ ಈ ಬಗ್ಗೆ, ಸಿಕ್ಕಾಪಟ್ಟೆ ದೊಡ್ಡ ಚರ್ಚೆ ಕೂಡ ನಡೆಯುತ್ತಿದೆ.












Click it and Unblock the Notifications