ಕಲಾವಿದರ ಸಂಘದಲ್ಲಿ ಬೆಳ್ಳಂಬೆಳಗ್ಗೆ ಹೋಮ-ಹವನ: ಯಾರಿಗಾಗಿ ಈ ವಿಶೇಷ ಪೂಜೆ..?
ಬೆಂಗಳೂರು, ಆಗಸ್ಟ್ 14: ಇತ್ತೀಚಿನ ಕೆಲ ದಿನಗಳಿಂದ ಕನ್ನಡ ಚಿತ್ರರಂಗ ಬಹಳ ಸಂಕಷ್ಟಕ್ಕೆ ಸಿಲುಕುತ್ತಿದೆ. ಹತ್ತಾರು ಸಿನಿಮಾಗಳು ತೆರೆಕಂಡರೂ ಸಹ ಚಿತ್ರತಂಡ ಸಹ ನಿರೀಕ್ಷಿಸಿದ ಮಟ್ಟದಲ್ಲಿ ಯಶಸ್ಸು ಯಾವ ಚಿತ್ರಕ್ಕೂ ಸಿಗುತ್ತಿಲ್ಲ. ಕೋವಿಡ್ ನಂತರ ಜನ ಚಿತ್ರಮಂದಿರಗಳಿಗೆ ಬರುವುದನ್ನು ಕಡಿಮೆ ಮಾಡುತ್ತಿದ್ದು, ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರರಂಗವನ್ನು ಕಾಪಾಡುವಂತೆ ಕಲಾವಿದರ ಸಂಘ ದೇವರ ಮೊರೆ ಹೋಗಿದ್ದು, ಇಂದು ಆಗಸ್ಟ್ 14 ಬುಧವಾರದಂದು ಬೃಹತ್ ಹೋಮ-ಹವನ ನಡೆಸಲಾಗುತ್ತಿದೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಕಟ್ಟಡದಲ್ಲಿ ಸುಬ್ರಮಣ್ಯ ಸರ್ಪ ಶಾಂತಿ ಹೋಮದ ಪೂಜಾ ಕೈಕಾರ್ಯಗಳು ಬೆಳಗ್ಗೆ 8 ಗಂಟೆಯಿಂದ ಆರಂಭ ಆಗಿದೆ. ಎಂಟು ಜನರ ವಿಶೇಷ ಪುರೋಹಿತರ ತಂಡದಿಂದ ಈ ಪೂಜೆ ನಡೆಯುತ್ತಿದ್ದು, ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಹಾಗೂ ಅವರ ಪತ್ನಿ ಪೂಜೆ ನಡೆಸಿಕೊಡಲಿದ್ದಾರೆ.

ಮೊದಲು ಗಣಪತಿ ಹೋಮ ಈಗಾಗಲೇ ಆರಂಭವಾಗಿದ್ದು, ಹಿರಿಯ ನಟಿ ಶಾಂತಲಾ, ಮಾಲತಿ ಶ್ರೀ ಮೈಸೂರು, ಪದ್ಮಜಾ ರಾವ್ ಮೊದಲಾದವರು ದೀಪ ಬೆಳಗಿ ಪೂಜೆಗೆ ಚಾಲನೆ ನೀಡಿದ್ದಾರೆ. ಬಳಿಕ ಮೃತ್ಯುಂಜಯ ಹೋಮ ಹಾಗೂ ಸರ್ಪ ಶಾಂತಿ ಹೋಮ ನಡೆಯಲಿದೆ. ಕನ್ನಡ ಚಿತ್ರರಂಗದ ತಂತ್ರಜ್ಞರು, ಕಲಾವಿದರು ಸೇರಿದಂತೆ ಒಟ್ಟು 600 ಜನರಿಗೆ ಈ ಪೂಜೆಗೆ ಆಹ್ವಾನ ನೀಡಲಾಗಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಸೇರಿದಂತೆ ಎಲ್ಲಾ ಮೇರು ನಟರು ಕೂಡ ಭಾಗಿಯಾಗಲಿದ್ದಾರೆ.
ಇನ್ನು ಈ ವಿಶೇಷ ಪೂಜೆಯ ಬಗ್ಗೆ ಪ್ರಧಾನ ಪುರೋಹಿತರು ಮಾಹಿತಿ ನೀಡಿದ್ದು, 'ರಾಹು ಹಾಗೂ ಕೇತುವಿನ ದೃಷ್ಟಿಯಿಂದ ಪಾರಾಗಲು ಈ ಪೂಜೆ ಮಾಡಲಾಗುತ್ತಿದೆ. ಕನ್ನಡ ಚಿತ್ರರಂಗದ ಒಳಿತಿಗಾಗಿ ವಿಶೇಷ ಹೋಮಗಳನ್ನು ನಡೆಸಲಾಗುತ್ತಿದೆ. ಇಂದು ಉತ್ತಮವಾದ ದಿನವಾದ ಕಾರಣ ಈ ಪೂಜೆ ನಡೆಸಲಾಗುತ್ತಿದೆ. ಸುಮಾರು ಎಂಟು ಜನರ ಪುರೋಹಿತರಿಂದ ಗಣ ಹೋಮ, ಮೃತ್ಯುಂಜಯ ಹೋಮ, ಆಶ್ಲೇಷ ಬಲಿ ಹಾಗೂ ಸರ್ಪಶಾಂತಿ ನಡೆಯಲಿದೆ' ಎಂದು ತಿಳಿಸಿದ್ದಾರೆ.












Click it and Unblock the Notifications