ಕನ್ನಡದ ಖ್ಯಾತ ಕಿರುತೆರೆ ನಟ ಬಂಧನ, ಕಾರಣವೇನು?
ಕನ್ನಡ ಕಿರುತೆರೆ ನಟ ಚರಿತ್ ಬಾಳಪ್ಪ (Charith Balappa) ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಲೈಂಗಿಕ ದೌರ್ಜನ್ಯ ಆರೋಪದ ಮೇರೆಗೆ ಸೀರಿಯಲ್ ನಟ ಚರಿತ್ ಅವರನ್ನು ಬಂಧಿಲಾಗಿದೆ ಎಂದು ತಿಳಿದುಬಂದಿದೆ. ಯುವತಿಯೊಬ್ಬರು ಚರಿತ್ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಹಲ್ಲೆ ಆರೋಪ ಮಾಡಿದ್ದಾರೆ.
ಈ ಸಂಬಂಧ ಬೆಂಗಳೂರಿನ ರಾಜರಾಜೇಶ್ವರಿ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಯುವತಿ ನೀಡಿರುವ ದೂರಿನ ಮೇರೆಗೆ ಚರಿತ್ ಬಾಳಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಚರಿತ್ ಅವರು ಆ ಯುವತಿಯನ್ನು ಪ್ರೀತಿಸುವುದಾಗಿ ಹೇಳಿ, ತನ್ನೊಂದಿಗೆ ದೈಹಿಕ ಸಂಪರ್ಕ ಹೊಂದುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಯುವತಿ ಚರಿತ್ ಅವರಿಗೆ ಮೊದಲಿನಿಂದಲೂ ಪರಿಚಯವಿದ್ದು, ಆಕೆ ಚರಿತ್ ಅವರ ಸ್ನೇಹಿತೆ ಎನ್ನಲಾಗಿದೆ. ಇನ್ನು ಚರಿತ್ ತನ್ನೊಂದಿಗೆ ಕೆಲವರನ್ನು ಗುಂಪು ಸೇರಿಸಿಕೊಂಡು, ಯುವತಿ ವಾಸವಿದ್ದ ಮನೆಗೆ ನುಗ್ಗಿದ್ದರು ಎನ್ನುವ ಆರೋಪವೂ ಇದೆ. ಅಲ್ಲದೆ, ಯುವತಿಯ ಬಳಿ ಚರಿತ್ ಭಾರಿ ಹಣಕ್ಕೆ ಡಿಮ್ಯಾಂಡ್ ಕೂಡ ಮಾಡಿದ್ದಾರೆ. ಒಂದು ವೇಳೆ ಹಣ ಕೊಡದಿದ್ದರೆ ಯುವತಿಯ ಖಾಸಗಿ ಫೋಟೋ, ವಿಡಿಯೋ ವೈರಲ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.
ಚರಿತ್ ಬಾಳಪ್ಪ ಅವರು ಕನ್ನಡ ಕಿರುತೆರೆಯ ಮುದ್ದುಲಕ್ಷ್ಮಿ ಧಾರಾವಾಹಿ ಮೂಲಕ ಫೇಮಸ್ ಆಗಿದ್ದರು. ಕನ್ನಡ ಮಾತ್ರವಲ್ಲದೆ ತೆಲುಗು ಕಿರುತೆರೆಯಲ್ಲೂ ಚರಿತ್ ಒಳ್ಳೆಯ ಹೆಸರು ಮಾಡಿದ್ದಾರೆ. ಅಲ್ಲಿಯೂ ಹಲವು ಸೀರಿಯಲ್ಗಳಲ್ಲಿ ಚರಿತ್ ನಟಿಸಿದ್ದಾರೆ. ಇದೀಗ ಅವರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದ ಹಿನ್ನೆಲೆ ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

ಈ ಹಿಂದೆಯೂ ಚರಿತ್ ಅವರ ವಿರುದ್ಧ ಹಲವು ಆರೋಪಗಳು ಕೇಳಿಬಂದಿತ್ತು. ಅಲ್ಲದೆ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಚರಿತ್ ಬಾಳಪ್ಪ ಅವರು ನಟಿಯೊಬ್ಬರನ್ನು ವಿವಾಹವಾಗಿದ್ದರು. ಆದರೆ ಕೆಲವೇ ವರ್ಷಕ್ಕೆ ಅವರು ಸಂಸಾರದಲ್ಲಿ ಬಿರುಕು ಮೂಡಿ ಡಿವೋರ್ಸ್ ಕೂಡ ಪಡೆದುಕೊಂಡಿದ್ದರು. ಆದರೆ, ಕೋರ್ಟ್ ನಿರ್ದೇಶನಕ್ಕೆ ಪತ್ನಿ ಹಾಕಿದ್ದ ಜೀವನಾಂಶದ ನೋಟಿಸ್ಗೆ ಚರಿತ್ ಅವರು ಬೆದರಿಕೆ ಹಾಕಿದ್ದರು ಎಂಬ ಆರೋಪವೂ ಇದೆ. ಈ ಸಂಬಂಧ ಕಳೆದ ವರ್ಷ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು.
ಎಂ.ಬಿ.ಎ ಪದವಿ ಶಿಕ್ಷಣ ಪಡೆದಿದ್ದ ಚರಿತ್, ಮೊದಲಿಗೆ ಬೆಂಗಳೂರಿನ ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿಕೊಂಡರು. ಬಳಿಕ ವಿಮಾನದಲ್ಲಿ ಕ್ಯಾಬಿನ್ ಕ್ರೂ ಆಗಿಯೂ ಕೆಲಸ ಮಾಡಿದ್ದರು. ನಂತರ ಅವರು ನಟನೆ ಮತ್ತು ಮಾಡೆಲಿಂಗ್ ಕಡೆಗೆ ಆಸಕ್ತಿ ಹುಟ್ಟಿದ್ದರಿಂದ ಉದ್ಯೋಗ ತೊರೆದು ನಟನೆಯ ಕಡೆಗೆ ಮುಖ ಮಾಡಿದ್ದರು.












Click it and Unblock the Notifications