Varun Aradya: ಬೃಂದಾವನ ಧಾರಾವಾಹಿ ನಿಲ್ಲಿಸಲು ಯಾರು ಕಾರಣ? ತೆರೆ ಹಿಂದೆ ಏನಾಯ್ತು?
ಕನ್ನಡ ಕಿರುತೆರೆಗೆ ಹಲವು ಸೂಪರ್ ಹಿಟ್ ಸೀರಿಯಲ್ಗಳನ್ನ ನೀಡಿರುವ ನಿರ್ದೇಶಕ ರಾಮ್ಜಿ ತಮ್ಮ ಬೃಂದಾವನ ಧಾರಾವಾಹಿಯನ್ನು ಅತಿ ಬೇಗ ಮುಗಿಸಿದ್ದಾರೆ.
ಪುಟ್ಟಗೌರಿ ಮದುವೆ, ಮಂಗಳಗೌರಿ ಮದುವೆ ಹಾಗೂ ರಾಮಾಚಾರಿ ಸೇರಿದಂತೆ ಇತರ ಹಿಟ್ ಮೆಗಾ ಸೀರಿಯಲ್ಗಳನ್ನು ನೀಡಿರುವ ರಾಮ್ಜಿ ಧಾರಾವಾಹಿಗಳ ಮೇಲೆ ಪ್ರೇಕ್ಷಕರಿಗೆ ಸಹಜವಾಗಿಯೇ ಅತಿಯಾದ ನಿರೀಕ್ಷೆ ಇರುತ್ತದೆ. ಅದೇ ನಿರೀಕ್ಷೆ ಬೃಂದಾವನ ಧಾರಾವಾಹಿ ಮೇಲೂ ಇತ್ತು. ಆದರೆ ಏಕಾಏಕಿ ಸೀರಿಯಲ್ ಅಂತ್ಯಗೊಂಡಿದೆ.

ಕಳೆದ ವರ್ಷ ಅಕ್ಟೋಬರ್ 23, 2023 ರಂದು ಪ್ರಸಾರ ಆರಂಭಿಸಿದ ಬೃಂದಾವನ ಧಾರಾವಾಹಿ ಮೇ 24, 2024 ರಂದು ಕೊನೆ ಸಂಚಿಕೆ ಪ್ರಸಾರವಾಯಿತು. ಒಟ್ಟು 167 ಸಂಚಿಕೆಗಳಷ್ಟೇ ಪ್ರಸಾರ ಕಂಡಿದೆ.
ದೊಡ್ಡ ತಾರಾಗಣ, ಹಲವು ಕಲಾವಿದರು, ಯಾವುದೇ ನೆಗೆಟಿವಿಟಿ ಇಲ್ಲದ ದೊಡ್ಡ ಕುಟುಂಬದ ಧಾರಾವಾಹಿ ಇಷ್ಟು ಬೇಗೆ ಮುಗಿದಿದ್ಯಾಕೆ? ಎನ್ನುವ ಬಗ್ಗೆ ನಿರ್ದೇಶಕ ರಾಮ್ಜಿ ಮಾತನಾಡಿದ್ದಾರೆ. ಅದರಲ್ಲೂ ಬೃಂದಾವನ ಧಾರಾವಾಹಿ ನಾಯಕ ವರುಣ್ ಆರಾಧ್ಯ ಕಾರಣದಿಂದಲೇ ಧಾರಾವಾಹಿ ಬೇಗ ಮುಗಿಸಲಾಗಿದೆ ಎನ್ನುವ ಆರೋಪವಿದ್ದು, ರಾಮ್ಜಿ ಈ ಬಗ್ಗೆ ಕೂಡ ಸ್ಪಷ್ಟನೆ ನೀಡಿದ್ದಾರೆ.
ಫಿಲ್ಮೀಬೀಟ್ ಕನ್ನಡದ ಜೊತೆ ಮಾತನಾಡಿರುವ ನಿರ್ದೇಶಕ ರಾಮ್ಜಿ , 'ಬೃಂದಾವನ ಧಾರಾವಾಹಿಯನ್ನು ಕೆಲವು ಟೆಕ್ನಿಕಲ್ ವಿಚಾರಗಳಿಂದ ಅಂತ್ಯಗೊಳಿಸಬೇಕಾಗಿ ಬಂತು. ಅದಿನ್ನು ಸಾವಿರ ಸಂಚಿಕೆಯ ಕಥೆ ಇತ್ತು. ಅದು ಬರೆದಾಗಲೇ ಸಾವಿರ ಸಂಚಿಕೆಯ ಕಥೆಯಾಗಿಯೇ ಬರೆದಿದ್ದು. ಅಷ್ಟು ಅದ್ಭುತವಾದ ಕಥೆ ಅದು. ನಾನು ಬರೆದಿರುವ ಟಾಪ್ ಐದು ಕಥೆಗಳಲ್ಲಿ ಅದು ಕೂಡ ಒಂದು. ಆದರೆ ಅನಿವಾರ್ಯ ಕಾರಣಗಳಿಂದ ಆ ಕಥೆ ನಿಲ್ಲಿಸಬೇಕಾಗಿ ಬಂತು.

ಕಥೆ ಇಲ್ಲದೇ ನಿಲ್ಲಿಸಿಲ್ಲ. ನಿಲ್ಲಿಸುವಾಗಲೂ ನನಗೆ ಬೇಸರವಾಯ್ತು. ನೂರು ಸಂಚಿಕೆ ಇದ್ದಾಗಲೇ ನಿಲ್ಲಿಸಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದೆ. ಆದರೆ ಬೇರೆ ಶೋ ಇಲ್ಲದ ಕಾರಣ 167 ಸಂಚಿಕೆಗಳು ಪ್ರಸಾರಗೊಂಡವು ಎಂದು ಸ್ಪಷ್ಟನೆ ನೀಡಿದ್ದಾರೆ.
ಧಾರಾವಾಹಿಯಲ್ಲಿ ವರುಣ್ ಆರಾಧ್ಯ ಆಯ್ಕೆ ಬಗ್ಗೆ ಮಾತನಾಡಿದ ಅವರು, ನಾನು ಕಮೆಂಟ್ಗಳನ್ನು ನೋಡಿದೆ. ಹೀರೋ ಚೇಂಜ್ ಆಗಿ ಈಗಿರುವವನಿರುವುದಕ್ಕೆ ಧಾರಾವಾಹಿ ಹೀಗಾಯ್ತು ಅಂತ. ಆದರೆ ಹಾಗೆನಿಲ್ಲ. ಫಸ್ಟ್ ಇದ್ದ ವಿಶ್ವ ತುಂಬಾ ಒಳ್ಳೆ ಹುಡುಗ. ಆದರೆ ಹುಷಾರಿಲ್ಲದೇ ಸಣ್ಣ ಆದ. ಹಗಲು ರಾತ್ರಿ ಶೂಟಿಂಗ್ ಇತ್ತು. ಹೀಗಾಗಿ ಮಧ್ಯ ರಾತ್ರಿ ಹುಡುಕುವಾಗ ವರುಣ್ ಸಿಕ್ಕ ಅವನನ್ನೇ ಮುಂದುವರಿಸಲಾಯ್ತು.
ಆತನ ವೈಯಕ್ತಿಕ ಬದುಕು ಏನೇ ಆಗಿದ್ದರೂ ನಾನು ಮೂಗು ತೂರಿಸಲ್ಲ. ತುಂಬಾ ಜನ ಕೇಳಿದರು ಯಾಕೆ ಹಾಕಿದ್ರಿ ಅಂತಾ. ನಾನು ಯಾರನ್ನು ದೂರಲ್ಲ. ಧಾರಾವಾಹಿ ನಿಲ್ಲಲು ಅದು ಕಾರಣ ಅಲ್ಲ. ಜನ ಹೇಗೆ ತೆಗೆದುಕೊಂಡಿದ್ದಾರೋ ನನಗೆ ಗೊತ್ತಿಲ್ಲ. ಯಾಕೆಂದರೆ ನಾನು ಸೋಶಿಯಲ್ ಮೀಡಿಯಾದಲ್ಲಿ ಇಲ್ಲ' ಎಂದಿದ್ದಾರೆ.












Click it and Unblock the Notifications